ಹಾಸನ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಈ ಎಲ್ಲದರ ನಡುವೆ ಮಾಜಿ ಸಚಿವ ಎ. ಮಂಜು ಹಾಸನ ಜಿಲ್ಲೆಯ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾನೇ ಎಂದು ಅಧಿಕೃತ ಘೋಷಣೆ ಮಾಡಿದ್ದಾರೆ. ಸ್ವಗ್ರಾಮ ಅರಕಲಗೂಡು ತಾಲೂಕಿನ ಹನ್ಯಾಳು ಗ್ರಾಮದಲ್ಲಿ ಬೆಂಬಲಿಗರು ಹಾಗೂ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ ಎ. ಮಂಜು ಎಲ್ಲರ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಈ ಘೋಷಣೆ ಮಾಡಿದ್ದಾರೆ.

ಬೆಂಬಲಿಗರು ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ನಾನು ಜೆಡಿಎಸ್ನಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ ಮಾಜಿ ಸಚಿವ ಎ. ಮಂಜು ಬಳಿಕ ಬೆಂಬಲಿಗರ ಬಳಿಯಲ್ಲಿ ಆಣೆ ಪ್ರಮಾಣ ಮಾಡಿಸಿಕೊಂಡಿದ್ದಾರೆ. ಇಂದಿನಿಂದ ನಾವೆಲ್ಲರೂ ಜೆಡಿಎಸ್ ಪರವಾಗಿ ಪಕ್ಷಕ್ಕೆ ಸೇರಿ ಎ.ಮಂಜುರನ್ನು ಗೆಲ್ಲಿಸುವ ಜವಾಬ್ದಾರಿ ನಮ್ಮದು. ಜೆಡಿಎಸ್ ಪಕ್ಷದಿಂದ ನಾವೆಲ್ಲರೂ ಮಂಜು ಅಣ್ಣನನ್ನು ಗೆಲ್ಲಿಸುತ್ತೇವೆ ಎಂದು ಕೈ ಮುಂದೆ ಚಾಚಿ ಎ.ಮಂಜು ಬೆಂಬಲಿಗರು ಆಣೆ ಪ್ರಮಾಣ ಮಾಡಿದ್ದಾರೆ .
ಕೆಲವು ದಿನಗಳ ಹಿಂದೆಯಷ್ಟೇ ಅರಕಲಗೂರು ವಿಧಾನಸಭಾ ಕ್ಷೇತ್ರದಿಂದ ಎ.ಮಂಜುಗೆ ಟಿಕೆಟ್ ಕೊಡುತ್ತೇವೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಮಾರ್ಚ್ 16ರಂದು ಅರಕಲಗೂಡಿನಲ್ಲಿ ನಡೆಯಲಿರುವ ಪಂಚರತ್ನ ಯಾತ್ರೆ ಯಶಸ್ವಿಗೊಳಿಸುವ ಮೂಲಕ ಎ. ಮಂಜು ಜೆಡಿಎಸ್ ಪಕ್ಷಕ್ಕೆ ಭರ್ಜರಿ ಎಂಟ್ರಿ ಕೊಡೋಕೆ ಸಜ್ಜಾಗ್ತಿದ್ದಾರೆ .