ಕೋಲಾರ: ಜಾತಿ ಅಡ್ಡ ಇಟ್ಟು ರಾಜಕೀಯ ಮಾಡಬಾರದು. ಪ್ರಹ್ಲಾದ್ ಜೋಶಿಯವರಿಗೆ ಸಿಎಂ ಆಗುವ ಯೋಗ ಇದ್ದರೆ ಸಿಎಂ ಆಗ್ತಾರೆ. ಅವರು ಸಿಎಂ ಆಗಬಾರದು ಎಂದೇನಿಲ್ಲ, ಅವರು ಈ ದೇಶದ ಪ್ರಜೆ ಬ್ರಾಹ್ಮಣ ಸಿಎಂ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಇಂದು ಕೋಲಾರದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಪ್ರತಿಕ್ರಿಯೆ ನೀಡಿದರು.
ನಾವೆಲ್ಲಾ ಭೂಮಿ ಮೇಲೆ ಒಟ್ಟಿಗೆ ವಾಸ ಮಾಡ್ತಿದ್ದೇವೆ. ಬ್ರಾಹ್ಮಣ ಸಮುದಾಯ ಯಾರ ಮನಸ್ಸು ನೋಯಿಸಿಲ್ಲ. ಬ್ರಾಹ್ಮಣ ಸಮುದಾಯ ಅಂದು ವಿಧ್ಯಾಭ್ಯಾಸ ಮಾಡಿ, ನಮಗೆ ವಿದ್ಯೆ ಕಲಿಸಿಲ್ಲ ಎಂದಾದಲ್ಲಿ ನಾವೆಲ್ಲಾ ಇಂದು ಹೆಬ್ಬೆಟ್ಟುಗಳು. ವಿದ್ಯೆ ಕಲಿಸಿದ್ದಕ್ಕೆ ಅವರ ವಿರುದ್ಧ ಮಾತನಾಡುವಂತಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು.
ಬ್ರಾಹ್ಮಣರು ಸಿಎಂ ಆಗಬಾರದು ಎಂದೇನಿಲ್ಲ. ಎಚ್.ಡಿ.ಕುಮಾರಸ್ವಾಮಿ ಅವರು ಒಂದು ಸಮುದಾಯದ ಬಗ್ಗೆ ಮಾತನಾಡಬಾರದಿತ್ತು. ಬ್ರಾಹ್ಮಣ ಸಮುದಾಯದ ಬಗ್ಗೆ ಮಾತನಾಡಿದ್ದು ಇದೇ ಮೊದಲಲ್ಲ. 1994 ರಲ್ಲಿ ರಾಮಕೃಷ್ಣ ಹೆಗಡೆಯವರು ಇದನ್ನ ಪ್ರಸ್ತಾಪಿಸಿದ್ದರು. ಇವತ್ತು ಅದೇ ಮುಂದುವರೆಯುತ್ತಿದೆ. ಯಾರಾದರು ತಪ್ಪು ಮಾಡಿದರೆ ತಿದ್ದುವ ಪ್ರಯತ್ನ ಬ್ರಾಹ್ಮಣ ಸಮಾಜ ಮಾಡುತ್ತಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧಿಸಲಿ
ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರನ್ನು ಎಲ್ಲರೂ ಸೇರಿಕೊಂಡು ಹಳ್ಳಕ್ಕೆ ತಳ್ಳುತ್ತಿದ್ದಾರೆ. ಇಲ್ಲಿನ ಕಾಂಗ್ರೆಸ್ ಪಕ್ಷದವರು ಅಂಗವಿಕಲರು ಆಗಿದ್ದಾರೆ. ಅವರಿಗೆ ಊರುಗೋಲಾಗಿ ಸಿದ್ದರಾಮಯ್ಯರನ್ನು ಹಿಡಿದುಕೊಂಡಿದ್ದಾರೆ. ಸಿದ್ದರಾಮಯ್ಯರನ್ನು ಕೋಲಾರದಲ್ಲಿ ಅನ್ಯಾಯವಾಗಿ ಬಲಿಪಶು ಮಾಡ್ತಿದ್ದಾರೆ. ಸಿದ್ದರಾಮಯ್ಯ ನವರು ಚಾಮುಂಡೇಶ್ವರಿಯಲ್ಲಿ ಸ್ಪರ್ಧೆ ಮಾಡಲಿ. ಎಲ್ಲಿ ಸೋಲುತ್ತೇವೋ ಅಲ್ಲಿ ಸ್ಪರ್ದಿಸಿ ಗೆದ್ದು ತೋರಿಸಬೇಕು ಎಂದು ಹೇಳಿದರು.
ಹೈಕಮಾಂಡ್ ಸೂಚಿಸಿದರೆ ಕೋಲಾರದಲ್ಲಿ ಸ್ಪರ್ಧೆ
ಹೈಕಮಾಂಡ್ ಹೇಳಿದರೆ ಕೋಲಾರದಲ್ಲಿ ಸ್ಪರ್ಧೆ ಮಾಡುತ್ತೇನೆ. ಇಲ್ಲವಾದರೆ 224 ಕ್ಷೇತ್ರದಲ್ಲಿ ಹೈಕಮಾಂಡ್ ಎಲ್ಲಿ ಸೂಚಿಸುತ್ತದೆಯೋ ಅಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.