ಬೆಂಗಳೂರಿನಲ್ಲಿ ಮೂಲಭೂತಸೌಕರ್ಯ ತುರ್ತು ಪರಿಸ್ಥಿತಿ ಎದುರಾಗಿದೆ. ಮೂಲಭೂತ ಸೌಕರ್ಯ ಸರಿ ಇಲ್ಲ ಎಂದು ಐಟಿ ಕಂಪನಿಗಳು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಈ ವಿಚಾರವಾಗಿ ನಾನು ಕೂಡ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೆ. ಪಕ್ಕದ ರಾಜ್ಯ ತಮಿಳುನಾಡು ತೆಲಂಗಾಣದವರು ಇಲ್ಲಿರುವ ಕಂಪನಿಗಳಿಗೆ ತಮ್ಮ ರಾಜ್ಯಕ್ಕೆ ಬರುವಂತೆ ಬಹಿರಂಗ ಆಹ್ವಾನ ನೀಡಿದ್ದಾರೆ. ಕರ್ನಾಟಕಕ್ಕಿಂತ ಉತ್ತಮವಾದ ಸಾಮಾಜಿಕ ಹಾಗೂ ಮೂಲ ಸೌಕರ್ಯವಿದೆ ಎಂದು ಆಹ್ವಾನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ರಸ್ತೆ ಗುಂಡಿ ನಗರವಾಗಿದೆ. ರಸ್ತೆ ಗುಂಡಿಗೆ 31 ಪ್ರಾಣಬಲಿಯಾಗಿದೆ. ಸರ್ಕಾರ ಆಗಲೂ ಎಚ್ಛೆತ್ತುಕೊಳ್ಳಲಿಲ್ಲ. ಅವರಿಗೆ 40% ಕಮಿಷನ್ ಮೇಲೆ ಆಸಕ್ತಿ ಹೆಚ್ಚು. ಕಳೆದ ಮೂರು ವರ್ಷಗಳಿಂದ ಈ ಸರ್ಕಾರ ಒಂದು ಯೋಜನೆ ಮಾಡಿದ್ಯಾ? ನಾವು ಮಾಡಿದ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲ. ಬೆಳಗ್ಗೆ ಉದ್ಘಾಟನೆಯಾದ ಮೇಲ್ಸೆತುವೆ ರಾತ್ರಿ ಬಂದ್ ಆಗಿವೆ. ಯಾಕೆ ಎಂದು ಕೇಳಿದರೆ ತಾಂತ್ರಿಕ ದೋಷ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.

ಪ್ರಧಾನಮಂತ್ರಿಗಳು ಬಂದಾಗಲೂ ರಸ್ತೆ ಕಳಪೆ ಕಾಮಗಾರಿ ಮಾಡಿದೆ. ಆಮೂಲಕ 23 ಕೋಟಿ ಹಗರಣ ಮಾಡಿದ್ದು, ಪ್ರಧಾನಮಂತ್ರಿ ಕಾರ್ಯಾಲಯ ಈ ಬಗ್ಗೆ ವರದಿ ಕೇಳಿದೆ.
40% ಸರ್ಕಾರ ಮತ್ತೊಂದು ಲೂಟಿ ಕಾರ್ಯಕ್ರಮಕ್ಕೆ ಮುಂದಾಗಿದೆ. ಇವರು ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿಲ್ಲ. ಕೇವಲ 40% ಕಮಿಷನ್ ಹೊಡೆಯುವ ಸಂಕಲ್ಪ ಜಾತ್ರೆಯಾಗಿದೆ. ಅವೈಜ್ಞಾನಿಕ ಮೂಲಸೌಕರ್ಯ ಯೋಜನೆ ತರಲು ಮುಂದಾಗಿದ್ದಾರೆ. ಇವರು ಕೇವಲ ಚುನಾವಣಾ ರಸ್ತೆ ಮಾಡುತ್ತಿದ್ದಾರೆ. ಅಂದರೆ ಕೇವಲ ಹೆಸರಿಗಷ್ಟೇ ರಸ್ತೆಗಳು. ಕೆಲಸ ಸರಿಯಾಗಿ ಆಗದಿದ್ದರೂ ಬಿಲ್ ಮಾತ್ರ ಬಿಡುಗಡೆಯಾಗುತ್ತದೆ.
ಸ್ಯಾಂಕಿಟ್ಯಾಂಕ್ ಬಳಿ ಅವೈಜ್ಞಾನಿಕ ಯೋಜನೆ ಮಾಡುತ್ತಿದ್ದಾರೆ. ಅವರ ಪ್ರಕಾರ ಮಲ್ಲೇಶ್ವರಂ ಹಾಗೂ ಸದಾಶಿವನಗರ ನಡುವೆ ಸಂಪರ್ಕ ಸುಗಮ ಮಾಡಲು ಬಾಷಂ ವೃತ್ತದಿಂದ ಮಲ್ಲೆಶ್ವರಂ 18ನೇ ಅಡ್ಡರಸ್ತೆ ವರೆಗೂ ರಸ್ತೆ ಅಗಲೀಕರಣ, ಇದರ ಜತೆಗೆ 50 ಮೀ. ನಾಲ್ಕು ಪಥ ಮೇಲ್ಸೆತುವೆ ಮಾಡುತ್ತಿದ್ದಾರೆ. ಇದನ್ನು ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ? ಇದು ಉತ್ತಮ ಯೋಜನೆಯಾಗಿದ್ದರೆ ಜನರ ಅಭಿಪ್ರಾಯ ಸಂಗ್ರಹಿಸಬೇಕಿತ್ತು. ಈ ಯೋಜನೆಯಿಂದ 2 ಲಕ್ಷ ಜನರಿಗೆ ಪರಿಣಾಮ ಬೀರಲಿದೆ. ಈ ಯೋಜನೆ ಬೇಡ ಎಂದು 22 ಸಾವಿರ ನಿವಾಸಿಗಳು ಸಹಿ ಅರ್ಜಿ ಸಲ್ಲಿಸಿದ್ದಾರೆ. 2 ಸಾವಿರ ಮಕ್ಕಳು ಬಿಬಿಎಂಪಿಗೆ ಮನವಿ ಮಾಡಿದ್ದಾರೆ. ಮಕ್ಕಳನಿನಾಚಾರಣೆ ದಿನ ಸಿಎಂ ಅವರು ಬೊಮ್ಮಾಯಿ ಅಂಕಲ್ ಎಂದು ಮಕ್ಕಳಿಂದ ಪತ್ರ ಬರೆಸಿ ಅಭಿಯಾನ ಮಾಡಿದರು. ಆಗ ಮಕ್ಕಳ ಪತ್ರಕ್ಕಿದ್ದ ಆದ್ಯತೆ ಈಗ ಯೋಜನೆ ಬೇಡ ಎಂದು ಪತ್ರ ಬರೆದಿದ್ದಾರೆ. ಈಗ ಇವರ ಪತ್ರಕ್ಕೆ ಪ್ರಾಮುಖ್ಯತೆ ಇಲ್ಲವೇ? ಮುಂದಿನ ಪೀಳಿಗೆಗಾಗಿ ಈ ಯೋಜನೆ ಎನ್ನುತ್ತೀರಿ. ಮುಂದಿನ ಪೀಳಿಗೆ ಮಕ್ಕಳೇ ಬೇಡ ಎನ್ನುತ್ತಿದ್ದಾರೆ.
ಇವರ ಮನವಿ ತಿರಸ್ಕರಿಸಿ ಈ ಯೋಜನೆ ಮಾಡಲು ಮುಂದಾಗಿರುವುದೇಕೆ? ಈ ಪ್ರಜ್ಞಾವಂತ ಜನ ಅಭಿವೃದ್ಧಿಗೆ ವಿರೋಧ ಮಾಡುತ್ತಿಲ್ಲ? ಇವರು ವೈಜ್ಞಾನಿಕ ರೀತಿ ಅಭಿವವೃದ್ಧಿಗೆ ಆಗ್ರಹಿಸುತ್ತಿದ್ದಾರೆ.
ಡಿಪಿಆರ್ ಸಾರ್ವಜನಿಕವಾಗಿ ಬಹಿರಂಗಪಡಿಸಿಲ್ಲ ಯಾಕೆ? ಬಿಎಂಎಲ್ ಟಿಎ ಜತೆ ಚರ್ಚೆ ಮಾಡಿದ್ದೀರಾ? ಈ ಯೋಜನೆ 80ಕ್ಕೂ ಹೆಚ್ಚು ತಳಿಯ ವಲಸೆ ಪಕ್ಷಿಗಳಿಗೆ ಪರಿಣಾಮ ಬೀರಲಿದೆ. ಪರಿಸರ ಇಲಾಖೆಯ ಅಭಿಪ್ರಾಯ ಪಡೆದಿದ್ದೀರಾ? ಈ ಯೋಜನೆ ಬಫರ್ ಜೋನ್ ನಲ್ಲಿದೆ. ಇದು ರಾಷ್ಟ್ರೀಯ ಹರಿಸು ನ್ಯಾಯಾಧಿಕರಣದ ವಿರುದ್ಧವಿದೆ. ನಮ್ಮ ಕಾಲದಲ್ಲಿ ನಾವು ಫ್ಲೈಓವರ್ ಮಾಡಲಲು ಮುಂದಾದಾಗ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದಾಗ ನಾವು ಯೋಜನೆ ಕೈಬಿಟ್ಟಿದ್ದೆವು.
ಈ ಸರ್ಕಾರ ಈಗ ನಮ್ಮ ಈ ಪ್ರಶ್ನೆಗಳಿಗೆ ಉತ್ತರ ನೀಡಲಿ.
ಈ ಡಿಪಿಆರ್ ಸಾರ್ವಜನಿಕವಾಗಿ ಬಹಿರಂಗಪಡಿಸುತ್ತಿಲ್ಲ ಯಾಕೆ?
ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿಲ್ಲ ಯಾಕೆ?
ಈ ಯೋಜನೆಗೆ ಪರಿಸರ ಮೇಲಿನ ಪರಿಣಾಮದ ಚರ್ಚೆ ಮಾಡದೇ ಯೋಜನೆ ಮಾಡುವಷ್ಟು ತರಾತುರಿ ಯಾಕೆ?
ಹಸಿರು ನ್ಯಾಯಾಧಿಕರಣದ ಮೇ.14 2016ರ ತೀರ್ಪು ಉಲ್ಲಂಘಿಸುತ್ತಿರುವುದೇಕೆ?
ಬಿಎಂಎಲ್ ಟಿಎ ಜತೆ ಚರ್ಚೆ ಯಾಕೆ ಮಾಡಿಲ್ಲ?
ಈ ಸರ್ಕಾರವೇ ಕಾಂಪ್ರಹೆನ್ಸಿವ್ ಮೊಬಿಲಿಟಿ ಪ್ಲಾನ್ 2020 ಅನ್ನು ಜಾರಿಗೆ ತಂದಿದ್ದು, ಈಗ ಈ ಸರ್ಕಾರವೇ ಅದರ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ.
ಇದೆಲ್ಲ ನೋಡಿದ ನಂತರ ಇದು ಲೂಟಿ ಹೊಡೆಯುವ ಯೋಜನೆ ಅಲ್ಲವೇ? ಬೆಂಗಳೂರಿನ ಉಸ್ತುವಾರಿ ಯಾರು? ಈ ಸರ್ಕಾರದಲ್ಲಿ ಬೆಂಗಳೂರು ಉಸ್ತುವಾರಿಗಳೇ ಇಲ್ಲ. ಬೆಂಗಳೂರು ಅಭಿವೃದ್ಧಿ ಬಗ್ಗೆ ಯಾರು ತಾರ್ಮಾನ ಮಾಡುತ್ತಿದ್ದಾರೆ. ಒಬ್ಬೊಬ್ಬರು ತಮಗೆ ಬೇಕಾದಂತೆ ಯೋಜನೆ ಮಾಡುತ್ತಿದ್ದಾರೆ. ಜನರ ಮೇಲೆ ಒತ್ತಾಯ ಪೂರ್ವಕವಾಗಿ ಹೇರುತ್ತಿದ್ದಾರೆ. ಈ ಸರ್ಕಾರ ನಮ್ಮ ಪ್ರಶ್ನೆಗೆ ಉತ್ತರ ನೀಡದಿದ್ದರೂ ಸಾರ್ವಜನಿಕರು ಕೇಳುತ್ತಿರುವ ಈ ಫ್ಲೈ ಓವರ್ ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಲಿ ಎಂದು ಅವರು ಸವಾಲು ಹಾಕಿದ್ದಾರೆ.