ಹಿಮಾಚಲ ಪ್ರದೇಶವನ್ನು ದೇವರ ನಾಡು ಎಂದು ಕರೆಯಲಾಹಗುತ್ತದೆ. ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಜೈರಾಮ್ ಠಾಕೂರ್ ಮುಖ್ಯಮಂತ್ರಿ ಆಗಿ ಅಧಿಕಾರ ನಡೆಸಿದ್ದರು. 68 ಕ್ಷೇತ್ರಗಳ ಪೈಕಿ ಬಿಜೆಪಿ ಗೆಲ್ಲಲು ಸಾಧ್ಯವಾಗಿದ್ದು, ಕೇವಲ 25 ಸ್ಥಾನಗಳಲ್ಲಿ ಮಾತ್ರ. ಪಕ್ಷೇತರ ಅಭ್ಯರ್ಥಿಗಳು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದರೆ ಇನ್ನುಳಿದ 40 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರದ ಗದ್ದುಗೆ ಹಿಡಿಯಲು ಮುಂದಾಗಿದೆ. ಆದರೆ ಆ 40 ಶಾಸಕರನ್ನು ಬಿಜೆಪಿ ಖರೀದಿ ಮಾಡುವ ಭಯ ಶುರುವಾಗಿದ್ದು, ಎಲ್ಲಾ ಶಾಸಕರನ್ನು ರೆಸಾರ್ಟ್ಗೆ ಶಿಫ್ಟ್ ಮಾಡುವ ಪರಿಸ್ಥಿತಿ ಎದುರಾಗಿದೆ. ಇದು ನಿಜವಾಗಲೂ ಪ್ರಜಾಪ್ರಭುತ್ವವನ್ನು ಅಣಕಿಸುವಂತಾಗಿದೆ ಎನ್ನುವುದು ದೇಶವೇ ತಲೆತಗ್ಗಿಸುವ ವಿಚಾರ. ಕಾಂಗ್ರೆಸ್ ಬಹುಮತದ ಗೆರೆ ದಾಟುತ್ತಿದ್ದ ಹಾಗೆ ಹಿಮಾಚಲ ಪ್ರದೇಶಕ್ಕೆ ಹಿರಿಯ ನಾಯಕರನ್ನು ಕಳುಹಿಸಿದ ಕಾಂಗ್ರೆಸ್ ಹೈಕಮಾಂಡ್ ಎಲ್ಲಾ ಶಾಸಕರನ್ನು ರಾಜಸ್ಥಾನಕ್ಕೆ ಶಿಫ್ಟ್ ಮಾಡುವುದಕ್ಕೆ ಸೂಚನೆ ನೀಡಿದೆ. ಚಂಡಿಗಡ ಮೂಲಕ ಎಲ್ಲಾ ಕಾಂಗ್ರೆಸ್ ಶಾಸಕರು ರಾಜಸ್ಥಾನ ತಲುಪಿದ್ದಾರೆ. ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದರೂ ಅಧಿಕಾರ ಮಾಡಲು ಬಿಡುವುದಿಲ್ಲ ಅನ್ನೋ ಭಯ ಇಡೀ ದೇಶದಲ್ಲೇ ಸೃಷ್ಟಿಯಾಗಿದೆ.
ಹಿಮಾಚಲ ಪ್ರದೇಶದಲ್ಲಿ ಸೋತಿದ್ದು ಕರ್ನಾಟಕದ ಅಳಿಯ..!
ಹಿಮಾಚಲ ಪ್ರದೇಶದ ಸಿಎಂ ಜೈರಾಮ್ ಠಾಕೂರ್ ಬಿಜೆಪಿ ಹೀನಾಯವಾಗಿ ಸೋಲುಂಡ ಜನತೆ ತೀರ್ಮಾನ ಒಪ್ಪಿಕೊಳ್ತೇವೆ. ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದಿದ್ದಾರೆ. ಜೈರಾಮ್ ಠಾಕೂರ್ ಕರ್ನಾಟಕದ ಅಳಿಯ ಅನ್ನೋದು ವಿಶೇಷ. ಶಿವಮೊಗ್ಗ ಮೂಲದ ಸಾಧನಾ ರಾವ್ ಎಂಬುವರನ್ನು ವಿವಾಹ ಆಗಿದ್ದಾರೆ. ಸಾಧನಾ ರಾವ್ ಅವರ ತಂದೆ ಆರ್ಎಸ್ಎಸ್ನಲ್ಲಿದ್ದು, ಬಾಲ್ಯದಲ್ಲಿಯೇ ಜೈಪುರಕ್ಕೆ ಶಿಫ್ಟ್ ಆಗಿದ್ದರು. ಎಂಬಿಬಿಎಸ್ ಓದಿರುವ ಸಾಧನಾ ರಾವ್, ಪೂರ್ಣ ಪ್ರಮಾಣದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರಾಗಿ ಗುರ್ತಿಸಿಕೊಂಡಿದ್ದರು. ಜಮ್ಮು ಕಾಶ್ಮೀರದಲ್ಲಿ ಎಬಿವಿಪಿ ಕಾರ್ಯಕರ್ತೆಯಾಗಿ ಜೈರಾಮ್ ಠಾಕೂರ್ ಅವರನ್ನು ಭೇಟಿಯಾದ ಬಳಿಕ ಸ್ನೇಹ ಪ್ರೇಮಕ್ಕೆ ತಿರುವು ಪಡೆದು ಕುಟುಂಬದ ಅನುಮತಿ ಪಡೆದು ವಿವಾಹ ಆಗಿದ್ದರು. ಇದೀಗ ಇಬ್ಬರು ಹೆಣ್ಣು ಮಕ್ಕಳಿದ್ದು, ಚಂದ್ರಿಕಾ ಠಾಕೂರ್, ಪ್ರಿಯಾಂಕಾ ಠಾಕೂರ್. ಇಬ್ಬರೂ ಎಂಬಿಬಿಎಸ್ ಮಾಡುತ್ತಿದ್ದಾರೆ. ಹಿರಿಯ ಪುತ್ರಿ ಡಾ ರಾಜೇಂದ್ರ ಪ್ರಸಾದ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಿರಿಯ ಪುತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾರೆ.

ಹಿಮಾಚಲ ಪ್ರದೇಶದ ಸ್ಥಿತಿಯಲ್ಲೇ ಇದೆ ರಾಜ್ಯ ಬಿಜೆಪಿ..!
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸೋಲುವುದಕ್ಕೆ ಬಹುಮುಖ್ಯ ಕಾರಣ ಅಂದರೆ ಬಿಜೆಪಿಯಲ್ಲೇ ಸೃಷ್ಟಿಯಾಗಿದ್ದ ಮೂರ್ನಾಲ್ಕು ಪಂಗಡಗಳು ಎನ್ನಲಾಗ್ತಿದೆ. ಇದೇ ಕಾರಣದಿಂದ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಗೆಲ್ಲುವುದಕ್ಕೆ ಸಾಧ್ಯ ಆಗಲಿಲ್ಲ ಎನ್ನುವುದು ಬಿಜೆಪಿ ಮೂಲಗಳ ಮಾಹಿತಿ. ಸದ್ಯದ ಪರಿಸ್ಥಿತಿಯನ್ನು ನೋಡಿದಾಗ ರಾಜ್ಯದಲ್ಲೂ ಇದೇ ಪರಿಸ್ಥಿತಿ ಇದೆ. ರಾಜ್ಯದಲ್ಲಿ ನಾಲ್ಕಾರು ಗುಂಪುಗಳು ಇದ್ದರೂ ಮೇಲ್ನೋಟಕ್ಕೆ ಎಲ್ಲವೂ ಸರಿಯಿದೆ ಎನ್ನುವ ಹಾಗೆ ಬಿಂಬಿಸಿಕೊಂಡು ಓಡಾಡುತ್ತಿದ್ದಾರೆ. ಒಂದು ವೇಳೆ ಟಿಕೆಟ್ ಹಂಚಿಕೆ ವೇಳೆ ಏನಾದರೂ ಹೆಚ್ಚು ಕಡಿಮೆ ಆದರೆ ಅಸಮಾಧಾನ ಸ್ಫೋಟ ಆಗುವ ಸಾಧ್ಯತೆ ಇದೆ. ಆ ರೀತಿ ಅಸಮಾಧಾನ ಭುಗಿಲೆದ್ದರೆ ಹಿಮಾಚಲ ಪ್ರದೇಶದಂತೆ ರಾಜ್ಯದಲ್ಲೂ ಹೀನಾಯ ಸೋಲು ಕಾಣಬೇಕಾಗುತ್ತದೆ ಎನ್ನುವ ಭೀತಿ ಸೃಷ್ಟಿಯಾಗಿದೆ. ಯಾರೆಲ್ಲಾ ಗೆಲ್ಲುತ್ತಾರೆ ಅವರಿಗೆ ಟಿಕೆಟ್ ಕೊಟ್ಟು ಮತ್ತೆ ಅಧಿಕಾರ ಹಿಡಿಯಬೇಕು ಎನ್ನುವ ಹಂಬದಲ್ಲಿ ಇರುವ ರಾಜ್ಯ ಬಿಜೆಪಿಗೆ ಹಿಮಾಚಲದ ಸ್ಥಿತಿ ಪಾಠದಂತಿದೆ. ಕಾಂಗ್ರೆಸ್ ಸ್ಥಿತಿಯೂ ಬಿಜೆಪಿಗಿಂತಾ ಭಿನ್ನವಾಗಿ ಏನಿಲ್ಲ. ಕಾಂಗ್ರೆಸ್ನಲ್ಲೂ ಒಳ ಏಟಿನ ಲೆಕ್ಕಾಚಾರಗಳು ನಡೆಯುತ್ತಿವೆ.
ಕ್ಷಣ ಕಾಲ ಮೈಮರೆತರೂ ಕಾಂಗ್ರೆಸ್ಗೆ ಕಾದಿದೆ ಅಪಾಯ..!
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ಮರ್ಯಾದೆ ಕಾಪಾಡಿಕೊಳ್ಳುವ ಕೆಲಸ ಮಾಡಿದೆ. ಆದರೆ ಇದೀಗ ಬಿಜೆಪಿ ಹೈಕಮಾಂಡ್ ರಾಜ್ಯದ ಕಡೆಗೆ ಕಣ್ಣು ಹೊರಳಿಸಿದ್ದು, ರಾಜ್ಯ ಕಾಂಗ್ರೆಸ್ ಕಾಂಗ್ರೆಸ್ ನಾಯಕರು ಕ್ಷಣ ಕಾಲ ಮೈಮರೆತರೂ ಬಿಜೆಪಿ ಅಲೆ ರಾಜ್ಯದಲ್ಲೂ ಶುರುವಾಗುವ ಸಾಧ್ಯತೆ ಇದೆ. ನಾವು ಯಾವುದೇ ತಂತ್ರಗಾರಿಕೆ ಮಾಡದಿದ್ದರೂ ರಾಜ್ಯದಲ್ಲಿ ನಾವೇ ಗೆಲ್ಲೋದು ಎಂದು ಸಿದ್ದರಾಮಯ್ಯ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಆತ್ಮವಿಶ್ವಾಸ ಕೂಡ ಅತಿಯಾದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಬಹುದು. ಇನ್ನು ಬಿಜೆಪಿ ಒಳ ಪಂಗಡಗಳ ಗಲಾಟೆಗಿಂತಲೂ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಪಂಗಡಗಳ ನಡುವೆ ಫೈಟಿಂಗ್ ಶುರುವಾದರೆ ಕಾಂಗ್ರೆಸ್ ತನ್ನಷ್ಟಕ್ಕೆ ತಾನೇ ಅಧಿಕಾರಕ್ಕೆ ಬರುವುದು ಅಸಾಧ್ಯ. ಆದರೆ ತನ್ನಷ್ಟಕ್ಕೆ ತಾನೇ ಧೂಳಿಪಟ ಆಗುತ್ತದೆ. ಬಿಜೆಪಿ ಹಾಗೂ ಕಾಂಗ್ರಸ್ ಪಂಗಡಗಳ ಕಿತ್ತಾಟದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದರೂ ಅಚ್ಚರಿಯೇನಿಲ್ಲ. ಈಗಾಗಲೇ ಪಂಚರತ್ನ ಯಾತ್ರೆಯಲ್ಲಿ ಜನಸಾಗರೇ ಹರಿದು ಬರುತ್ತಿರುವುದು ನೋಡಿದರೆ ರಾಜ್ಯದ ಜನರ ತೀರ್ಮಾನ ಜೆಡಿಎಸ್ ಕಡೆಗೆ ಹೊರಳುಯತ್ತಿದೆಯಾ..? ಅನ್ನೋ ಶಂಕೆ ಶುರುವಾಗುತ್ತದೆ.