ಮೈಸೂರು ಜಿಲ್ಲಾಡಳಿತ ವತಿಯಿಂದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಕನಕದಾಸರ ಜಯಂತಿ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ಅದ್ದೂರಿ ಮೆರವಣಿಗೆ ಆಯೋಜನೆ ಮಾಡಲಾಗಿತ್ತು. ಕನಕದಾಸರ ಮೂರ್ತಿಯನ್ನು ಅಲಂಕೃತ ವಾಹನದಲ್ಲಿರಿಸಿ ಮೆರವಣಿಗೆ ಮಾಡಲಾಯ್ತು . ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗ ನಡೆದ ಕಾರ್ಯಕ್ರಮದಲ್ಲಿ MLC ವಿಶ್ವನಾಥ್ ಹಾಗೂ ಮಾಜಿ ಶಾಸಕ ಎಂಕೆ ಸೋಮಶೇಖರ್ ಮೆರವಣಿಗೆಗೆ ಚಾಲನೆ ನೀಡಿದ್ದರು.
ಕಲಾತಂಡಗಳ ಮೆರಗು
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ತಮಟೆ, ನಗಾರಿ, ಗಾರುಡಿ ಗೊಂಬೆ, ಪೂಜಾ ಕುಣಿತ, ಕಂಸಾಳೆ ಸೇರಿದಂತೆ ಹತ್ತಾರು ಜನಪದ ಕಲಾಪ್ರಕಾರಗಳ ಮನಸೂರೆಗೊಂಡ್ವು. ಇದೆಲ್ಲದರ ಹಿಮ್ಮೇಳದೊಂದಿಗೆ ಸಾಗಿದ ಮೆರವಣಿಗೆ ಎಲ್ಲರ ಮನಸೂರೆಗೊಳ್ತು. ಅರಮನೆಯ ಕೋಟೆ ಆಂಜನೇಯಸ್ವಾಮಿ ದೇಗುಲದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ಸಯ್ಯಾಜಿರಾವ್ ರಸ್ತೆ, ಬಸವೇಶ್ವರ ವೃತ್ತ, ಚಾಮರಾಜಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮಾರ್ಗವಾಗಿ ಸಾಗಿ ಕಲಾಮಂದಿರದ ಬಳಿ ಅಂತ್ಯವಾಯಿತ್ತು.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ
ಕಳೆದ 2 ವರ್ಷದಿಂದ ಕೋವಿಡ್ ಹಿನ್ನೆಲೆ ಕನಕದಾಸರ ಜಯಂತಿಯನ್ನ ಅದ್ಧೂರಿಯಾಗಿ ಆಚರಿಸಲಾಗಿರಲಿಲ್ಲ. ಹೀಗಾಗಿ ಸರ್ಕಾರ ಈ ಬಾರಿ ಕನಕದಾಸರ ಜಯಂತಿಯನ್ನ ನಡೆಸುತ್ತಿದೆ. ಆದ್ರೆ ವ್ಯವಸ್ಥೆ ಸರಿಯಿಲ್ಲದ ಕಾರಣ ಸಮಾಜದ ಮುಖಂಡರಿಂದ ಅಸಮಾಧಾನ ವ್ಯಕ್ತವಾಯ್ತು.
ಕನಕ ಜಯಂತಿ ಮೆರವಣಿಗೆಯನ್ನು ವ್ಯವಸ್ಥಿತವಾಗಿ ಆಯೋಜನೆ ಮಾಡದ ಮೈಸೂರು ಜಿಲ್ಲಾಡಳಿತದ ವಿರುದ್ಧ ಮಾಜಿ ಸಚಿವ, ಹಾಲಿ ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್, ಮಾಜಿ ಶಾಸಕ ಎಂ ಕೆ ಸೋಮಶೇಖರ್ ಅಸಮಾಧಾನ ಹೊರಹಾಕಿದ್ರು. ಪೆಂಡಾಲ್ ವ್ಯವಸ್ಥೆ, ಕುರ್ಚಿ, ಕಲಾವಿದರಿಗೆ ಬೇಕಾದ ಅಗತ್ಯ ಪೂರೈಕೆಗಳ ಆಗದ ಕಾರಣ ಅಸಮಾಧಾನ ವ್ಯಕ್ತಪಡಿಸಿದ್ದರು.
ಜಿಟಿ ಜಿಟಿ ಮಳೆ
ಮೆರವಣಿಗೆ ಆರಂಭವಾದಾಗಿನಿಂದಲೂ ಜಿಟಿ ಜಿಟಿ ಮಳೆ ಸುರಿಯಿತು. ಮಳೆಯಲ್ಲಿ ಕಲಾವಿದರು ಮೆರವಣಿಗೆಯಲ್ಲಿ ಸಾಗಿದ್ರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಮೆರವಣಿಗೆಯನ್ನ ಮಳೆಯಲ್ಲೇ ಕಣ್ತುಂಬಿಕೊಂಡ್ರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನ ಪೊಲೀಸ್ ಇಲಾಖೆ ವಹಿಸಿತ್ತು.