ನಾಯಿ ವಾಕಿಂಗ್ ಮಾಡಿಸಲು ಅಥ್ಲೀಟ್ ಗಳನ್ನು ನಿರ್ಬಂಧಿಸಿ ಖಾಲಿ ಕ್ರೀಡಾಂಗಣದಲ್ಲಿ ವಾಕಿಂಗ್ ಮಾಡಿಸುತ್ತಿದ್ದ ಐಎಎಸ್ ಅಧಿಕಾರಿಯನ್ನು ಕೇಂದ್ರ ಸರಕಾರ ಜಮ್ಮು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶ ಲಡಾಖ್ ಗೆ ಮತ್ತು ಪತ್ನಿಯನ್ನು ಅರುಣಾಚಲ ಪ್ರದೇಶಕ್ಕೆ ವರ್ಗಾಯಿಸಿದೆ.
ಐಎಎಸ್ ಅಧಿಕಾರಿಯಾದ ಸಂಜೀವ್ ಕುಮಾರ್ ನನ್ನು ಲಡಾಖ್ ಗೆ ಹಾಗೂ ಪತ್ನಿ ರಿಂಕು ಡುಗ್ಗಾ ಅವರನ್ನು ಅರುಣಾಚನ ಪ್ರದೇಶಕ್ಕೆ ವರ್ಗಾವಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ದೆಹಲಿಯ ತ್ಯಾಗರಾಜ ಕ್ರೀಡಾಂಗಣದಲ್ಲಿ ಅಧಿಕಾರಿ ದಂಪತಿ ತಮ್ಮ ನಾಯಿಯನ್ನು ವಾಕಿಂಗ್ ಮಾಡಿಸಬೇಕಾದರೆ ಅಥ್ಲೀಟ್ ಗಳನ್ನು ಹೊರಗೆ ಹಾಕಿ ಖಾಲಿ ಮೈದಾನದಲ್ಲಿ ವಾಕಿಂಗ್ ಮಾಡಿಸುತ್ತಿದ್ದರು. ಈ ವಿಷಯ ಮಾಧ್ಯಮದಲ್ಲಿ ಹೊರಗೆ ಬರುತ್ತಿದ್ದಂತೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಸರಕಾರದ ಸೂಚನೆ ಮೇರೆಗೆ ತನಿಖೆ ನಡೆಸಿದ ಮುಖ್ಯ ಕಾರ್ಯದರ್ಶಿ ಗುರುವಾರ ಸಂಜೆ ವರದಿ ನೀಡಿದ್ದು, ಶುಕ್ರವಾರ ಬೆಳಿಗ್ಗೆ ಇಬ್ಬರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು.