ಹಳೇ ಹುಬ್ಬಳ್ಳಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ 103 ಗಲಭೆಕೋರರನ್ನು ಕಲಬುರಗಿ ಜೈಲಿಗೆ ರವಾನೆ ಮಾಡಲಾಗಿದೆ. ಗಲಭೆ ಮಾಡಿದ್ದವರಲ್ಲಿ ಮತ್ತೆ 15 ಜನರನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 104ಕ್ಕೆ ಏರಿಕೆಯಾಗಿದೆ. ಒಟ್ಟು 12 ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ದೇವಸ್ಥಾನ, ಮನೆ, ಆಸ್ಪತ್ರೆ ಹಾಗೂ ಪೋಸ್ಟ್ ಆಫೀಸ್ ಮೇಲೆ ಕಲ್ಲು ಎಸೆದಿರುವ ಪ್ರಕರಣ ಹಾಗೂ ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿ ಹಾನಿ ಕೇಸ್ಗಳು ದಾಖಲಾಗಿವೆ.
ಪೊಲೀಸ್ ವಾಹನದ ಮೇಲೆ ಮೌಲ್ವಿ ಸೇರಿದಂತೆ ಹಲವರು ಹತ್ತಿದ್ದ ಪ್ರಕರಣದ ಬಗ್ಗೆ ಪೊಲೀಸ್ ತನಿಖೆ ಆರಂಭವಾಗಿದೆ. ತನಿಖೆ ನಂತರ ಯಾರೆಲ್ಲಾ ಈ ವೇಳೆ ಭಾಗಿಯಾಗಿದ್ದರು ಎಂಬುದರ ಬಗ್ಗೆ ಗೊತ್ತಾಗಲಿದೆ.
ಹುಬ್ಬಳ್ಳಿ ಗಲಭೆ ಪ್ರಕರಣದ ಕುರಿತು ಗುಪ್ತಚರ ಮಾಹಿತಿಯಿಂದ ಪೊಲೀಸ್ ಇಲಾಖೆ ಅಲರ್ಟ್ ಆಗಿದೆ. ಬಂಧಿತರ ಬಿಡುಗಡೆಗೆ ಆಗ್ರಹಿಸಿ ಮತ್ತೊಂದು ಹೋರಾಟಕ್ಕೆ ಕೆಲವು ಸಂಘಟನೆಗಳು ಮುಂದಾಗಿರುವ ಮಾಹಿತಿ ಇದೆ. ಹೀಗಾಗಿ ಏಕಾಏಕಿ ಆರೋಪಿಗಳನ್ನು ಮತ್ತೊಂದು ಸ್ಥಳಕ್ಕೆ ಶಿಫ್ಟ್ ಮಾಡಲಾಗಿದೆ. ಬಂಧಿತ ಗಲಭೆಕೋರರನ್ನು ಕಲಬುರಗಿಯ ಕೇಂದ್ರಿಯ ಕಾರಾಗೃಹಕ್ಕೆ ರವಾನೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ನವಲಗುಂದ ಮಾರ್ಗವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳನ್ನು ಬೇರೆ ಕಡೆ ರವಾನಿಸಲಾಯಿತು. ಇಂದು ಮದ್ಯಾಹ್ನದಷ್ಟೊತ್ತಿಗೆ ಮತ್ತೆ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಲಭೆಯ ದಿನ ಸಾವಿರಾರು ಸಂಖ್ಯೆಯಲ್ಲಿ ಜನ ಠಾಣೆ ಎದುರು ಜಮಾಯಿಸಿದ್ದರು. ಇದೀಗ ಗಲಭೆಗೆ ಕಾರಣರಾದವರನ್ನು ಪೊಲೀಸರು ಪತ್ತೆ ಮಾಡಿ ಒಬ್ಬೊಬ್ಬರನ್ನೇ ಠಾಣೆಗೆ ಕರೆದುಕೊಂಡು ಬರುತ್ತಿದ್ದಾರೆ.
ಇಂದು ಓರ್ವ ಅಪ್ರಾಪ್ತ ಸೇರಿದಂತೆ ಆರು ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಡಿಸಿಪಿಗಳು ಬೀಡು ಬಿಟ್ಟಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.






