ಉತ್ತರಪ್ರದೇಶದಲ್ಲಿ ಎರಡನೇ ಅವಧಿಗೆ ಯೋಗಿ ಆದಿತ್ಯನಾಥ್ ನೇತೃತ್ವದ BJP ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಇದರ ಮಧ್ಯೆ ಬಿಜೆಪಿಗೆ ಮತ ಹಾಕಿರುವುದಕ್ಕಾಗಿ ಮುಸ್ಲಿಂ ಮಹಿಳೆಯೋರ್ವಳಿಗೆ ಗಂಡನ ಮನೆಯವರು ಥಳಿಸಿ, ಬೆದರಿಕೆ ಹಾಕಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರಪ್ರದೇಶದ ಬರೇಲಿಯ ಪೊಲೀಸ್ ಠಾಣಾ ವ್ಯಾಪ್ತಿಯ ಎಜಾಜ್ ನಗರದಲ್ಲಿ ಈ ಘಟನೆ ನಡೆದಿದ್ದು, ಉಜ್ಮಾ ಎಂಬ ಮಹಿಳೆ ಬಿಜೆಪಿಗೆ ಮತ ಹಾಕಿದ್ದಾಳೆಂಬ ಕಾರಣಕ್ಕಾಗಿ ಆಕ್ರೋಶಗೊಂಡಿರುವ ಗಂಡನ ಮನೆಯವರು ಮಹಿಳೆಯನ್ನ ಥಳಿಸಿ ಹೊರ ಹಾಕಿದ್ದಾಳೆ. ಇದರ ಜೊತೆಗೆ ವಿಚ್ಛೇದನ (ತ್ರಿವಳಿ ತಲಾಖ್) ನೀಡುವ ಬೆದರಿಕೆ ಹಾಕಿದ್ದಾರೆ. ಉತ್ತರಪ್ರದೇಶದಲ್ಲಿ ತ್ರಿವಳಿ ತಲಾಖ್ ವಿರುದ್ಧದ ಕಾನೂನು ಜಾರಿಯಲ್ಲಿದೆ.
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದರ ಬೆನ್ನಲ್ಲೇ ಸಂತ್ರಸ್ತೆ, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರ ಸಹೋದರಿ ಫರ್ಹತ್ ನಖ್ವಿ ಅವರನ್ನ ಭೇಟಿ ಮಾಡಿ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.

ಉತ್ತರಪ್ರದೇಶದ ಮಹಿಳೆ 2021ರ ಜನವರಿ ತಿಂಗಳಲ್ಲಿ ತಸ್ಲಿಮ್ ಅನ್ಸಾರಿ ಜೊತೆ ಮದುವೆ ಮಾಡಿಕೊಂಡಿದ್ದಳು. ಈ ಜೋಡಿ ಪರಸ್ಪರ ಪ್ರೀತಿಸಿ ಮದುವೆಯಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉಜ್ಮಾ ಬಿಜೆಪಿಗೆ ಮತ ಹಾಕಿದ್ದಾಗಿ ಹೇಳಿಕೊಂಡಿದ್ದಳು. ಈ ವಿಷಯ ಗಂಡನ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಸೋದರ ಮಾವ ಆರೀಫ್, ಅತ್ತೆ ಸೇರಿದಂತೆ ಅನೇಕರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಮನೆಯಿಂದ ಹೊರ ಹಾಕಿ, ತಲಾಖ್ ನೀಡುವ ಬೆದರಿಕೆ ಹಾಕಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಸಾಮಾಜಿಕ ಕಾರ್ಯಕರ್ತೆ ಫರ್ಹತ್ ನಖ್ವಿ ದೂರು ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.