ರಾಜಕೀಯ ಭಾವನೆಗಳಿಂದ ಕೂಡಿದಂತಹ ವಾತವಾರಣದಲ್ಲಿ ಬಿಜೆಪಿ ಸರ್ಕಾರ ಹಿಜಾಬ್ ಮೇಲೆ ನಿಷೇಧ ಹೇರಿರುವುದನ್ನು ಎತ್ತಿ ಹಿಡಿಯುವ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ತಲುಪಿಸಲಾಗಿದೆ. ಹೈಕೋರ್ಟ್ ನೀಡಿರುವ 129 ಪುಟಗಳ ತೀರ್ಪಿನಲ್ಲಿ ವಾದವಿವಾದ ನಡೆಯುತ್ತಿರುವ ಸಂಧರ್ಭದಲ್ಲಿ ಹೊರಗಡೆ ಸೃಷ್ಟಿಯಾಗಿದ್ದ ಉದ್ವಿಗ್ನ ಪರಿಸ್ಥಿತಿಯನ್ನು ಕಡೆಗಣಿಸಲಾಗಿದೆ.
ಸಾರ್ವಜನಿಕ ಹಿತಾಸಕ್ತಿಯಾಗಬೇಕಿದ್ದ ವಿದ್ಯಾರ್ಥಿಯರ ಅರ್ಜಿಗಳನ್ನು ವಜಾಗೊಳಿಸಿದ ಮೂರು ಸದಸ್ಯರ ಪೀಠವು, ಈ ಅರ್ಜಿಯನ್ನು ಹಿಜಾಬ್ ಧರಿಸಲು ಬೇಡಿಕೆ ಇಟ್ಟ ವಿದ್ಯಾರ್ಥಿನಿಯರ ಹಾಗೂ ಆಡಳಿತದ ನಡುವಿನ ಪ್ರಕರಣವಾಗಿ ಸೀಮಿತಗೊಳಿಸಿಬಿಟ್ಟಿತು. ಪ್ರಮುಖ ನಾಲ್ಕು ವಿಷಯಗಳು ಪೀಠದ ಕಾಳಜಿಯಾಗಿತ್ತು.
ಮೊದಲನೆಯದು, ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವೇ? ಎರಡನೆಯದ್ದು, ಶಿಕ್ಷಣ ಸಂಸ್ಥೆಗಳು ಸಮವಸ್ತ್ರ ಹೇರಿ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದೆಯೇ? ಮೂರನೆಯದ್ದು, ಸರ್ಕಾರವು ಹಿಜಾಬ್ ಅನ್ನು ಕಾನೂನುಬದ್ಧವಾಗಿ ನಿಷೇಧಿಸುವ ಆದೇಶವು ನಿರಂಕುಶವಾಗಿದೆಯೇ? ಹಾಗೂ ನಾಲ್ಕನೆಯದ್ದು, ಉಡುಪಿಯ ಕಾಲೇಜು ಆಡಳಿತ ಮಂಡಳಿ ಕಾನೂನು ಬಾಹಿರವಾಗಿ ವರ್ತಿಸುತ್ತಿದ್ದಾರೆಯೇ?
ಕಣ್ಣಿಗೆ ಪಟ್ಟಿ ಕಟ್ಟಿರುವ ನ್ಯಾಯದೇವತೆಯನ್ನು ಆಧರಿಸಿ ನ್ಯಾಯಾಲಯವು ನಿಷ್ಪಕ್ಷಪಾತ ಘಟಕವಾಗಿದೆ ಎಂದು ವಾದಿಸಬಹುದು. ಆದರೆ ಹಿಜಾಬ್ ಪ್ರಕರಣದಲ್ಲಿ, ತೀರ್ಪು ಬರುವುದಕ್ಕಿಂತಲೂ ಮೊದಲು ಕರ್ನಾಟಕದ ಬೀದಿಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸುಲಿಗೆ ಮಾಡಲು ಹೊರಟವರ ಕ್ರೂರತನವನ್ನು ನ್ಯಾಯಾಂಗವು ಕಂಡೂ ಕಾಣದಂತೆ ಇರುವುದಿಲ್ಲ ಎಂಬ ಭರವಸೆ ಇತ್ತು.
ಹಿಜಾಬ್ ಧರಿಸುವುದು ಇಸ್ಲಾಮಿನಲ್ಲಿ ಅನಿವಾರ್ಯವಲ್ಲ ಎಂದು ಕೋರ್ಟ್ ಆದೇಶವು ಹೇಳುತ್ತದೆ. 1,400 ವರ್ಷಗಳಷ್ಟು ಹಳೆಯ ಧರ್ಮದ ಅಗತ್ಯ ಆಚರಣೆಗಳ ಬಗ್ಗೆ ತೀರ್ಪು ನೀಡುವ ಮೂಲಕ ಮತ್ತು ಹಿಜಾಬ್ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುತ್ತದೆಯೇ ಎಂದಷ್ಟೇ ಕೋರ್ಟ್ ಪರಿಶೀಲಿಸಿದೆ. ಆ ಮೂಲಕ, ಸರ್ಕಾರವು ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ, ಮಹಿಳೆಯರಿಗೆ ಸಾರ್ವಜನಿಕವಾಗಿ ಕಿರುಕುಳ ನೀಡಿದ ಕೇಸರಿ ಪಡೆಯನ್ನು ಸಹಾನುಭೂತಿಯಿಂದ ನೋಡುತ್ತಿದೆ ಎಂಬ ಅಂಶವನ್ನು ನ್ಯಾಯಾಲಯವು ಸಂಪೂರ್ಣವಾಗಿ ಕಡೆಗಣಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಹಿಜಾಬ್ ಧರಿಸುವವರ ನಂಬಿಕೆಯನ್ನು ವಿಚಾರಣೆ ಮಾಡುವುದು ಸೂಕ್ತವೆಂದುಕೊಂಡ ಅದೇ ನ್ಯಾಯಾಧೀಶರು, ಹಿಜಾಬ್ ಅನ್ನು ವಿರೋಧಿಸುವವರ ಧಾರ್ಮಿಕ ಮತ್ತು ರಾಜಕೀಯ ಉದ್ದೇಶಗಳನ್ನು ಪರಿಶೀಲಿಸುವುದು ಅನಿವಾರ್ಯವೆಂದು ಭಾವಿಸಿಲಿಲ್ಲ. ಹಿಜಾಬ್ ಪ್ರಕರಣದ ಸುತ್ತಲಿರುವ ಸಾಮಾಜಿಕ ಮತ್ತು ರಾಜಕೀಯ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳದೆ ನ್ಯಾಯಾಲಯವು ವಾಸ್ತವಗಳಿಂದ ದೂರ ಸರಿದಿದೆ.
ನ್ಯಾಯಾಧೀಶರು ಹಿಜಾಬ್ ಪ್ರಕರಣವನ್ನು ವಿಶಾಲ ದೃಷ್ಟಿಕೋನದಿಂದ ನೋಡಿದ್ದರೆ, ಚುನಾಯಿತ ಪ್ರತಿನಿಧಿಗಳು, ಮಂತ್ರಿಗಳು ಮತ್ತು ಪೊಲೀಸರು ಉದ್ವಿಗ್ನ ಪರಿಸ್ಥಿತಿಯಲ್ಲಿ ಬೆಂಕಿಯಿಡುತ್ತಿರುವ ಬಗೆಯನ್ನು ಕಾಣಲು ಸಾಧ್ಯವಾಗುತ್ತಿತ್ತು.

ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಮೇಲೆ ನಿರ್ಬಂಧಗಳನ್ನು ಹೇರುವುದು ಸರಿಯಾಗಿದೆ ಎಂಬ ತೀರ್ಮಾನಕ್ಕೆ ಬರಲು ನ್ಯಾಯಾಲಯವು ʼಕಾನೂನು ಸುವ್ಯವಸ್ಥೆʼ ಕಾಪಾಡುವುದನ್ನು ಹಲವು ಬಾರಿ ಉಲ್ಲೇಖಿಸಿದೆ. ಆದೇಶದ ಪ್ರಕಾರ, ಹಿಜಾಬ್ ಕಳಚುವಂತೆ ಸಾರ್ವಜನಿಕವಾಗಿ ಬೆದರಿಸುವ ಜನಸಮೂಹಕ್ಕಿಂತಲೂ, ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಕಾನೂನು ಮತ್ತು ಸುವ್ಯವಸ್ಥೆಗೆ ದೊಡ್ಡ ಬೆದರಿಕೆ ಎಂದು ನಾವು ಅಂದುಕೊಳ್ಳಬೇಕೆ?
ಹಾಗೂ, ಈ ಪ್ರಕರಣವನ್ನು ಮುಸ್ಲಿಂ ವಿದ್ಯಾರ್ಥಿನಿಯರ ಗುಂಪು ಮತ್ತು ಸರ್ಕಾರದ ನಡುವಿಗಷ್ಟೇ ಸೀಮಿತಗೊಳಿಸುವ ಮೂಲಕ, ಅರ್ಜಿದಾರ ವಿದ್ಯಾರ್ಥಿನಿಯರು ತಮ್ಮೊಂದಿಗೆ ಇಡೀ ಸಮುದಾಯದ ನಿರೀಕ್ಷೆಗಳನ್ನು ಹೊತ್ತಿದ್ದಾರೆ ಎಂಬ ವಿಷಯವನ್ನು ನ್ಯಾಯಾಲಯ ಗುರುತಿಸಿಲ್ಲ. ಮಾತ್ರವಲ್ಲ, ಕಾಲೇಜು ಆಡಳಿತ ಮತ್ತು ಸರ್ಕಾರವು ಈ ಪ್ರಕರಣದಲ್ಲಿ ಸಂವಿಧಾನ ವಿರೋಧಿ ಮತ್ತು ಮುಸ್ಲಿಂ ವಿರೋಧಿ ಸಿದ್ಧಾಂತಕ್ಕೆ ಬದ್ಧವಾಗಿದೆ ಎಂಬ ಅಂಶವನ್ನೂ ಹೈಕೋರ್ಟ್ ನಿರ್ಲಕ್ಷಿಸಿದೆ.
ಇಂತಹ ವಿಷಯಗಳನ್ನು ಗುರುತಿಸಲು ವಸ್ತುನಿಷ್ಠತೆಯ ಅಗತ್ಯವಿದೆ, ಬಹುಶಃ ನ್ಯಾಯಾಂಗದ ಕಡೆಯಿಂದ ವಿಶಾಲ ಮನಸ್ಸಿನ ಕ್ರಿಯಾಶೀಲತೆಯೂ ಬೇಕಾಗುತ್ತದೆ. ಆದರೆ, ನ್ಯಾಯಾಲಯವು ಸಂಬಂಧಪಟ್ಟ ವಿಷಯಕ್ಕಿಂತ ಹೆಚ್ಚಿನ ಉತ್ಸಾಹವನ್ನು ಮುಸ್ಲಿಂ ಮಹಿಳೆಯರನ್ನು ವಿಮೋಚನೆಗೊಳಿಸುವ ಹಾಗೂ ಇಸ್ಲಾಂ ಆಚರಣೆಯಿಂದ ಹಿಜಾಬ್ ಅನ್ನು ಬೇರ್ಪಡಿಸಲು ಕಾರಣ ಹುಡುಕುವಲ್ಲಿ ತೋರಿದೆ.
“ಮಹಿಳೆಯರ ಸ್ವಾತಂತ್ರ್ಯವನ್ನು ನಿರ್ಬಂಧಿಸುವುದಕ್ಕಲ್ಲ, ಮದೀನಾದಲ್ಲಿ ಇದ್ದ ಪರಿಸ್ಥಿತಿಗಳಲ್ಲಿ ಮಹಿಳೆಯರನ್ನು ಅಪಾಯದಿಂದ ಮತ್ತು ಕಿರುಕುಳದಿಂದ ರಕ್ಷಿಸಲು” ಎಂದು ಮುಸ್ಲಿಂ ನ್ಯಾಯಶಾಸ್ತ್ರಜ್ಞ ಅಬ್ದುಲ್ಲಾ ಯೂಸುಫ್ ಅಲಿ ನೀಡಿದ್ದ ಹೇಳಿಕೆಯನ್ನು ನ್ಯಾಯಾಲಯವು ಉಲ್ಲೇಖಿಸುತ್ತದೆ.
ಇವತ್ತು ಭಾರತದಲ್ಲಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಯ ಬಗ್ಗೆ ಕೋರ್ಟ್ ಗಂಭೀರ ತಿಳುವಳಿಕೆ ಹೊಂದಬೇಕೆಂದು ನಿರೀಕ್ಷಿಸುವುದು ತಪ್ಪೇ? ಹಿಂದುತ್ವ ಸಿದ್ಧಾಂತದೊಳಗೆ ಇರುವ ಹಿಜಾಬ್ ಧಾರಿ ಮಹಿಳೆಯರ ಮೇಲಿನ ಈ ದ್ವೇಷದ ಮೂಲವನ್ನು ನ್ಯಾಯಾಧೀಶರು ನೋಡಬಹುದೇ? ಮುಸ್ಲಿಂ ವಿದ್ಯಾರ್ಥಿನಿಯರು ತಮ್ಮ ತಲೆಯನ್ನು ಮುಚ್ಚುವುದರಿಂದ ಹಿಂದೂ ಧರ್ಮಾಚರಣೆಗೆ ಧಕ್ಕೆ ಬರುವಂತಹದ್ದು ಏನಾದರೂ ಇದೆಯೇ? ಹಿಂದುತ್ವವಾದಿಗಳು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಮುಸ್ಲಿಂ ಮಹಿಳೆಯರು, ಹಿಜಾಬ್ ಮತ್ತು ಇಸ್ಲಾಂ ಧರ್ಮದ ಬಗ್ಗೆ ನೀಡುತ್ತಿರುವ ಧ್ವೇಷದ ಹೇಳಿಕೆಗಳನ್ನು ಗಮನಿಸುತ್ತದೆಯೇ?
ನ್ಯಾಯಾಲಯವು ಇಂತಹ ಪರಿಶೋಧನೆಗೆ ಇಳಿದರೆ, ಹಿಜಾಬ್ ಮಾತ್ರವಲ್ಲ, ಮುಸ್ಲಿಮ್ ಬದುಕಿನ ಪ್ರತಿಯೊಂದು ಅಂಶದ ಮೇಲೆಯೂ ದ್ವೇಷ ನಿರ್ಮಿಸಿದ ದಾರುಣ ಪ್ರಪಂಚಕ್ಕೆ ಅದು ಕರೆದೊಯ್ಯುತ್ತದೆ. ಮುಸ್ಲಿಮರ ವಿರುದ್ಧ ಜನಾಂಗೀಯ ನಿರ್ಮೂಲನೆಗಳನ್ನು ಪ್ರಚೋದಿಸುವ, ಮುಸ್ಲಿಂ ಮಹಿಳೆಯರ ಮೇಲೆ ಲೈಂಗಿಕ ದಾಳಿಯನ್ನು ಉತ್ತೇಜಿಸುವ ಸೋಶಿಯಲ್ ಮೀಡಿಯ ಖಾತೆಗಳಿವೆ. ಸುಲ್ಲಿ ಡೀಲ್ಸ್, ಬುಲ್ಲೀ ಬಾಯ್ ಅಪ್ಲಿಕೇಶನ್ಗಳು ಮುಸ್ಲಿಂ ಸ್ತ್ರೀಯರನ್ನು ಲೈಂಗಿಕ ಗುಲಾಮರನ್ನಾಗಿಸುವ ಸಿದ್ಧಾಂತದ ಅಭಿವ್ಯಕ್ತಿಗಳಾಗಿವೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ, ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ನೋಡಿ ಚಿತ್ರಮಂದಿರದಲ್ಲೇ ಮುಸ್ಲಿಂ ಸ್ತ್ರೀಯರಿಂದ ಹಿಂದೂ ಪುರುಷರು ಮಕ್ಕಳು ಹೆರುವಂತೆ ಸಾರ್ವಜನಿಕ ಕರೆ ನೀಡುತ್ತಿರುವ ಯುವಕನ ಮನಸ್ಥಿತಿ ಕೂಡಾ ಇದುವೇ.
ಕೋರ್ಟ್ ತನ್ನ ತೀರ್ಪಿನಲ್ಲಿ ಮಾಡಿರುವ ʼಕಾನೂನು ಸುವ್ಯವಸ್ಥೆʼಯ ಪದೇ ಪದೇ ಉಲ್ಲೇಖವು ಕಾನೂನು ಸುವ್ಯವಸ್ಥೆ ಮತ್ತು ನಮ್ಮ ಸಾರ್ವಜನಿಕ ಸ್ಥಳಗಳ ಸ್ವರೂಪದ ಬಗ್ಗೆ ಮರುಪರಿಶೀಲಿಸಲು ಯೋಗ್ಯವಾಗಿದೆ. ಶಾಲೆಗಳು, ನ್ಯಾಯಾಲಯಗಳು, ವಾರ್ ರೂಮ್ಗಳು ಮತ್ತು ರಕ್ಷಣಾ ಶಿಬಿರಗಳಂತಹ ʼಅರ್ಹ ಸಾರ್ವಜನಿಕ ಸ್ಥಳʼಗಳಲ್ಲಿ ಶಿಸ್ತು ಮತ್ತು ಶಿಷ್ಟಾಚಾರ ಪಾಲಿಸುವ ಉದ್ದೇಶಕ್ಕಾಗಿ ವ್ಯಕ್ತಿಗಳ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲಾಗುತ್ತದೆ ಎಂದು ಕೋರ್ಟ್ ಹೇಳುತ್ತದೆ.
ಆದರೆ, ಪ್ರತಿ ವರ್ಷ ಕೋರ್ಟ್ ಕಛೇರಿ ಆವರಣಗಳಲ್ಲಿ ಹಿಂದೂ ವಕೀಲರಿಂದ ದಿನಗಟ್ಟಲೇ ಗಣೇಶ ಚೌತಿಗೆ ಶಾಮಿಯಾಣ ಹಾಕಲಾಗುತ್ತದೆ. ಅದೇ ವೇಳೆ, ಮುಸ್ಲಿಂ ವಕೀಲರು ಕೋರ್ಟ್ ಆವರಣದಲ್ಲಿ ನಮಾಝ್ ಮಾಡಿದರೆ ಕಾನೂನು ಸುವ್ಯವಸ್ಥೆ ಹದಗೆಡುತ್ತಲ್ಲವೇ? ವಿಧಾನಸೌಧದೊಳಗೆ ದೇವಾಲಯ ಇದೆ. ಅಲ್ಲಿಯೇ ಚರ್ಚ್ ಮತ್ತು ಮಸೀದಿಯನ್ನು ಕಟ್ಟಬಹುದೇ? ಅರ್ಹತೆಯ ಸಾರ್ವಜನಿಕ ಸ್ಥಳಗಳು ಎಂಬ ವ್ಯಾಖ್ಯಾನದ ಆಧಾರದಲ್ಲಿ, ಹಿಂದುತ್ವವಾದಿಗಳು ಇತರ ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಜಾಬ್ ಅನ್ನು ನಿಷೇಧಿಸಲು ಮುಂದಾಗಬಹುದೇ?
ಮೂಲ: ದಿ ನ್ಯೂಸ್ ಮಿನಿಟ್