ನಮ್ಮ ಬಜೆಟ್ ಗಾತ್ರ ರೂ. 2.02 ಲಕ್ಷ ಕೋಟಿ. ಈ ವರ್ಷದ ಬಜೆಟ್ ಗಾತ್ರ ರೂ. 2.65 ಲಕ್ಷ ಕೋಟಿಗೆ ಹೆಚ್ಚಾಗಿದ್ದರೂ ಈ ಯೋಜನೆಗೆ ಇಟ್ಟಿರುವ ಹಣ ಸುಮಾರು ರೂ. 28,000 ಮಾತ್ರ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ಮೀಸಲಿಡುವ ಅನುದಾನ ಕೂಡ ಹೆಚ್ಚಾಗಬೇಕಿತ್ತು, ಆ ಪ್ರಕಾರ ಪ್ರಸ್ತುತ ಬಜೆಟ್ನಲ್ಲಿ ಕನಿಷ್ಠ ರೂ. 42,000 ಕೋಟಿಯನ್ನಾದರೂ ಸರ್ಕಾರ ಇಡಬೇಕಿತ್ತು. ದುರ್ಬಲ ವರ್ಗದವರ ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿಗೆ ಶೋಷಿತರ ಬಗ್ಗೆ ಇರುವ ಇಚ್ಛಾ ಶಕ್ತಿ ಏನೆಂದು ಇದರಲ್ಲೇ ಗೊತ್ತಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡುತ್ತಾ, ರಾಜ್ಯ ಸರ್ಕಾರ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಖಾಯಂ ಅಲ್ಲದ ನೌಕರರ ಗೌರವಧನವನ್ನು ಏರಿಸಿದೆ ಎಂಬುದು ನನ್ನ ಅನಿಸಿಕೆ. ಬಡ ಶ್ರಮಿಕ ವರ್ಗದ ಜನರ ಗೌರವಧನ ಏರಿಸಿರುವ ಸರ್ಕಾರದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಅಂಗನವಾಡಿ ಕಾರ್ಯಕರ್ತೆಯರಿಗೆ 2013 ರವರೆಗೆ ಗೌರವಧನ ಹೆಚ್ಚಾದದ್ದು ಒಟ್ಟು 750 ರೂಪಾಯಿ ಮಾತ್ರ, ನಾನು ಮುಖ್ಯಮಂತ್ರಿ ಆದಮೇಲೆ ಅವರ ಗೌರವಧನವನ್ನು ರೂ. 5,000 ದಿಂದ 8,000 ಕ್ಕೆ ಹೆಚ್ಚಿಸಿದೆ. ಅಂಗನವಾಡಿ ಸಹಾಯಕರಿಯರಿಗೆ 2013 ರವರೆಗೆ ಗೌರವಧನ ಹೆಚ್ಚಾದದ್ದು ರೂ. 375 ಮಾತ್ರ, ನಾನು ಮುಖ್ಯಮಂತ್ರಿ ಆದ ಮೇಲೆ ಅವರ ಗೌರವ ಧನವನ್ನು ರೂ. 2,500 ರಿಂದ 4,000 ಕ್ಕೆ ಏರಿಸಿದೆ. ಆಶಾ ಕಾರ್ಯಕರ್ತೆಯರಿಗೆ ಮತ್ತು ಅಕ್ಷರ ದಾಸೋಹ ಕಾರ್ಯಕರ್ತೆಯರ ಗೌರವ ಧನವನ್ನು ಸರ್ಕಾರ ರೂ. 1,000 ಹೆಚ್ಚು ಮಾಡಿದೆ. ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆಗೆ ಸರ್ಕಾರ ನಿಬಂಧನೆ ವಿಧಿಸಿದ್ದು 20 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದವರಿಗೆ ರೂ. 1,500 ಹಾಗೂ 10 ವರ್ಷ ಮೇಲ್ಪಟ್ಟು 20 ವರ್ಷಗಳ ಒಳಗೆ ಸೇವೆ ಸಲ್ಲಿಸಿರುವವರಿಗೆ ರೂ. 1,250 ಮತ್ತು ಹತ್ತು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ ಒಂದು ಸಾವಿರ ರೂಪಾಯಿ ಹೆಚ್ಚು ಮಾಡಲಾಗಿದೆ.
ಗ್ರಾಮ ಸಹಾಯಕರಿಗೆ ನಮ್ಮ ಸರ್ಕಾರದ ಅವಧಿಯಲ್ಲಿ ಗೌರವ ಧನವನ್ನು ರೂ. 7,000 ದಿಂದ 10,000 ಕ್ಕೆ ಏರಿಸಿದ್ದೆವು. ಪೌರ ಕಾರ್ಮಿಕರ ಕೂಲಿಯನ್ನು ಸರ್ಕಾರ ಒಂದು ಸಾವಿರ ರೂಪಾಯಿ ಹೆಚ್ಚಿಸಿದೆ, ನಮ್ಮ ಸರ್ಕಾರ ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನಿಷ್ಠ ಕೂಲಿ ಕಾಯ್ದೆ ಪ್ರಕಾರ ಅವರ ಕೂಲಿಯನ್ನು ರೂ. 7,700 ರಿಂದ 17,000 ಕ್ಕೆ ಹೆಚ್ಚಿಸಿತ್ತು ಮತ್ತು 11,000 ಪೌರ ಕಾರ್ಮಿಕರನ್ನು ಖಾಯಂಗೊಳಿಸಿ ಅವರಿಗೆ ರೂ. 25,000 ವೇತನ ಸಿಗುವಂತೆ ಮಾಡಿತ್ತು.
2013 ರ ಡಿಸೆಂಬರ್ ನ ಅಧಿವೇಶನದಲ್ಲಿ ಎಸ್.ಸಿ.ಪಿ/ಟಿ.ಎಸ್.ಪಿ ಕಾಯ್ದೆಯನ್ನು ಅನುಮೋದಿಸಿ, ಜಾರಿ ಮಾಡಿದ್ದು ನಮ್ಮ ಸರ್ಕಾರ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಳಕೆ ಮಾಡಬೇಕೆಂಬ ಕಾನೂನು ಜಾರಿಗೊಳಿಸಿದ ಎರಡನೇ ರಾಜ್ಯ ಕರ್ನಾಟಕ. ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಜನರು 17.15% ಇದ್ದಾರೆ, ಪರಿಶಿಷ್ಟ ವರ್ಗದವರು 6.95% ಇದ್ದಾರೆ. ಒಟ್ಟು ಸೇರಿ 24.1% ಜನರಿದ್ದಾರೆ. ಈ ಕಾನೂನು ಬರುವ ಪೂರ್ವದಲ್ಲಿದ್ದ ಬಿಜೆಪಿ ಸರ್ಕಾರ 2008 ರಿಂದ 13 ರ ವರೆಗೆ ಪರಿಶಿಷ್ಟ ಜಾತಿ, ವರ್ಗದ ಜನರ ಕಲ್ಯಾಣಕ್ಕಾಗಿ ಖರ್ಚು ಮಾಡಿದ್ದು ಕೇವಲ ರೂ. 22,000 ಕೋಟಿ ರೂಪಾಯಿ. ನಂತರ ಕಾಯ್ದೆ ಜಾರಿ ಮಾಡಿ, ನಮ್ಮ ಸರ್ಕಾರ ಐದು ವರ್ಷಗಳಲ್ಲಿ ಖರ್ಚು ಮಾಡಿದ ಹಣ ರೂ. 88,000 ಕೋಟಿ. ನಮ್ಮ ಸರ್ಕಾರದ ಕೊನೆ ಬಜೆಟ್ನಲ್ಲಿ ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಗೆ ಮೀಸಲಿಟ್ಟಿದ್ದ ಹಣ ರೂ. 29,695 ಕೋಟಿ. ನಮ್ಮ ಬಜೆಟ್ ಗಾತ್ರ ರೂ. 2.02 ಲಕ್ಷ ಕೋಟಿ. ಈ ವರ್ಷದ ಬಜೆಟ್ ಗಾತ್ರ ರೂ. 2.65 ಲಕ್ಷ ಕೋಟಿಗೆ ಹೆಚ್ಚಾಗಿದ್ದರೂ ಈ ಯೋಜನೆಗೆ ಇಟ್ಟಿರುವ ಹಣ ಸುಮಾರು ರೂ. 28,000 ಮಾತ್ರ. ಬಜೆಟ್ ಗಾತ್ರ ಹೆಚ್ಚಾದಂತೆ ಈ ಯೋಜನೆಗೆ ಮೀಸಲಿಡುವ ಅನುದಾನ ಕೂಡ ಹೆಚ್ಚಾಗಬೇಕಿತ್ತು, ಆ ಪ್ರಕಾರ ಪ್ರಸ್ತುತ ಬಜೆಟ್ನಲ್ಲಿ ಕನಿಷ್ಠ ರೂ. 42,000 ಕೋಟಿಯನ್ನಾದರೂ ಸರ್ಕಾರ ಇಡಬೇಕಿತ್ತು. ದುರ್ಬಲ ವರ್ಗದವರ ಅಭಿವೃದ್ಧಿ ಬಗ್ಗೆ ಮಾತನಾಡುವ ಬಿಜೆಪಿಗೆ ಶೋಷಿತರ ಬಗ್ಗೆ ಇರುವ ಇಚ್ಛಾ ಶಕ್ತಿ ಏನೆಂದು ಇದರಲ್ಲೇ ಗೊತ್ತಾಗುತ್ತಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗದ ಜನರಿಗೆ ಸರ್ಕಾರದ ಗುತ್ತಿಗೆ ಕಾಮಗಾರಿಗಳಲ್ಲಿ 50 ಲಕ್ಷ ರೂಪಾಯಿ ವರೆಗೆ ಮೀಸಲಾತಿ ನೀಡುವಂತೆ 2017 ರಲ್ಲಿ ನಿಯಮ ರೂಪಿಸಿದ್ದೆವು. ನಂತರ 2018 ರ ಬಜೆಟ್ನಲ್ಲಿ ಅದನ್ನು ರೂ. 1 ಕೋಟಿಗೆ ಹೆಚ್ಚಿಸುವ ಘೋಷಣೆ ಮಾಡಿದ್ದೆವು, ಆದರೆ ಇವತ್ತಿನ ವರೆಗೆ ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿಲ್ಲ.
ತಾಂಡಗಳು, ಹಟ್ಟಿಗಳು, ಮಜರೆಗಳಲ್ಲಿ ವಾಸ ಮಾಡುವ ಜನರಿಗೆ ವಾಸಿಸುವವನೆ ಮನೆಯೊಡೆಯ ಎಂಬ ಕಾಯ್ದೆ ಜಾರಿಗೆ ತಂದು ಅವುಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಆರಂಭಿಸಿತ್ತು, ಇಂದು ಅವೆಲ್ಲಾ ನಿಂತುಹೋಗಿವೆ.

ಅಲ್ಪಸಂಖ್ಯಾತ ಕಲ್ಯಾಣ ಕಾರ್ಯಕ್ರಮಗಳಿಗಾಗಿ ನಮ್ಮ ಸರ್ಕಾರದ ಕಡೆಯ ಬಜೆಟ್ನಲ್ಲಿ ರೂ. 3,000 ಕೋಟಿಗೂ ಹೆಚ್ಚು ಅನುದಾನ ನೀಡಿದ್ದೆ, ಈ ಬಾರಿಯ ಬಜೆಟ್ನಲ್ಲಿ ಅದು ರೂ. 1,400 ಕೋಟಿಗೆ ಇಳಿದಿದೆ. ಕಳೆದ ಬಾರಿ ಬಿಡುಗಡೆಯಾದದ್ದು ಕೇವಲ ರೂ. 900 ಕೋಟಿ.
ಇಂದು ರಾಜ್ಯದಲ್ಲಿ 875 ವಸತಿ ಶಾಲೆಗಳಿವೆ, ಅವುಗಳಲ್ಲಿ 250 ಕ್ಕೂ ಅಧಿಕ ವಸತಿ ಶಾಲೆಗಳನ್ನು ಆರಂಭಿಸಿದ್ದು ನಮ್ಮ ಸರ್ಕಾರ. ಡಿಎಸ್ಎಸ್ ನವರು ನಮಗೆ ಹೆಂಡದಂಗಡಿಗಳು ಬೇಡ, ವಸತಿ ಶಾಲೆಗಳು ಬೇಕು ಎಂದು ಘೋಷಣೆ ಹಾಕುತ್ತಿದ್ದರು. ಅವರ ಘೋಷಣೆಯಿಂದಾಗಿ 1993 ರಿಂದ ವಸತಿ ಶಾಲೆಗಳು ಆರಂಭಗೊಂಡವು.
ವಿದ್ಯಾಸಿರಿ ಯೋಜನೆಯಡಿ ಹಾಸ್ಟೆಲ್ ಸೀಟು ವಂಚಿತ ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಿಗೆ ತಿಂಗಳಿಗೆ ರೂ. 1,500 ದಂತೆ ವಾರ್ಷಿಕ 15,000 ರೂಪಾಯಿ ನೀಡುವ ಕಾರ್ಯಕ್ರಮ ಜಾರಿಮಾಡಿದ್ದು ನಮ್ಮ ಸರ್ಕಾರ. ಈಗ ವಿದ್ಯಾಸಿರಿ ಇಲ್ಲ, ವಿದ್ಯಾರ್ಥಿ ವೇತನ ಇಲ್ಲ, ಹೀಗಾದರೆ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ವಿದ್ಯಾವಂತರಾಗುವುದು ಹೇಗೆ?
ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯದ ಒಟ್ಟು 4 ಕೋಟಿ 34 ಲಕ್ಷ ಜನರಿಗೆ ತಿಂಗಳಿಗೆ ತಲಾ ಏಳು ಕೆ.ಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ನೀಡುತ್ತಿದ್ದೆವು. ಅದನ್ನು ಬಿಜೆಪಿ ಸರ್ಕಾರ ಐದು ಕೆ.ಜಿ ಇಳಿಸಿತು, ರಾಜ್ಯಪಾಲರ ಭಾಷಣದಲ್ಲಿ ಒಂದು ಕೆ.ಜಿ ಜಾಸ್ತಿ ಮಾಡುವುದಾಗಿ ಹೇಳಿಸಿದ್ದರು, ಬಜೆಟ್ ಪುಸ್ತಕದಲ್ಲಿ ಒಂದು ಕೆ.ಜಿ ಜೋಳ ಅಥವಾ ರಾಗಿ ಕೊಡುವುದಾಗಿ ಹೇಳಿದ್ದಾರೆ. ಬಜೆಟ್ನಲ್ಲಿ ಅಲಂಕಾರಿಕ ಪದಗಳನ್ನು ಬಳಸಿ ಬಡವರ ಬಗ್ಗೆ ಮಾತನಾಡಿದ್ದು ಬಿಟ್ಟರೆ ಬಡವರಿಗಾಗಿ ಸರ್ಕಾರ ಮಾಡಿರುವುದು ಏನಿಲ್ಲ.
ಈ ಬಾರಿಯ ಬಜೆಟ್ನಲ್ಲಿ ಕೃಷ್ಣ ಮೇಲ್ದಂಡೆ 3ನೇ ಹಂತದ ಕಾಮಗಾರಿಗೆ ರೂ. 5,000 ಕೋಟಿ, ಮೇಕೆದಾಟು ಯೋಜನೆಗೆ ರೂ. 1,000 ಕೋಟಿ, ಮಹದಾಯಿ ಯೋಜನೆಗೆ ರೂ. 1,000 ಕೋಟಿ, ತುಂಗ ಭದ್ರಾ ಕಾಲುವೆಗೆ ರೂ. 1,000 ಕೋಟಿ ಇಟ್ಟಿದ್ದಾರೆ.
ಮೇಕೆದಾಟು ಯೋಜನೆ ಜಾರಿಯಾಗಬೇಕೆಂದು ನಾವು ಪಾದಯಾತ್ರೆ ಮಾಡಿದೆವು, ಈಗ ಯೋಜನೆ ಜಾರಿ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. 16/02/2018 ರಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಿದೆ, ಅದರ ಪ್ರಕಾರ ತಮಿಳುನಾಡಿಗೆ 177.75 ಟಿ.ಎಂ.ಸಿ ನೀರನ್ನು ಒಂದು ಸಾಮಾನ್ಯ ವರ್ಷದಲ್ಲಿ ಬಿಡಬೇಕು. ಮೇಕೆದಾಟು ಯೋಜನೆ ಜಾರಿಯಾಗದಂತೆ ತಕರಾರು ಮಾಡಲು ತಮಿಳುನಾಡಿಗೆ ಯಾವುದೇ ಸಂವಿಧಾನಾತ್ಮಕ ಹಕ್ಕುಗಳಿಲ್ಲ.
ಒಂದು ಸಾಮಾನ್ಯ ವರ್ಷದಲ್ಲಿ ಬಿಡುವ ಅವರ ಪಾಲಿನ ನೀರನ್ನು ಹೊರತುಪಡಿಸಿ ಕಳೆದ ಏಳು ವರ್ಷಗಳಲ್ಲಿ 582 ಟಿ.ಎಂ.ಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಇದು ನಮಗಾದ ನಷ್ಟವಲ್ಲದೆ ಇನ್ನೇನು. ತಮಿಳುನಾಡಿನ ಸರ್ಕಾರ ರಾಜಕೀಯ ಕಾರಣಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಮೊಕದ್ದಮೆ ದಾಖಲಿಸಿದೆ, ಆದರೆ ಸುಪ್ರೀಂ ಕೋರ್ಟ್ ಈ ವರೆಗೆ ಯಾವುದೇ ರೀತಿಯ ತಡೆಯಾಜ್ಞೆ ನೀಡಿಲ್ಲ.
ಮೇಕೆದಾಟು ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವಿವಾದಾತ್ಮಕ ವಿಚಾರ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವರು ಹೇಳಿಕೆ ನೀಡಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾಗಲೀ ಅಥವಾ ನೀರಾವರಿ ಸಚಿವರಾಗಲೀ ತಕ್ಷಣ ಅವರ ಹೇಳಿಕೆಯನ್ನು ಖಂಡಿಸಬೇಕಿತ್ತು. ರಾಜ್ಯ ಸರ್ಕಾರ ಸುಮ್ಮನಿರುವುದರಿಂದ ಇದು ವಿವಾದಾತ್ಮಕ ವಿಷಯ ಎಂದು ಪರಿಗಣಿಸಿ ನಾಳೆ ಪರಿಸರ ಅನುಮತಿಯನ್ನು ಕೇಂದ್ರ ಸರ್ಕಾರ ನೀಡಲ್ಲ. ಆಗೇನು ಮಾಡಬೇಕು?
ಹಿಂದೆ ಯಡಿಯೂರಪ್ಪ ಅವರು ತಾವು ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಯೊಳಗೆ ಮಹದಾಯಿ ಯೋಜನೆ ಜಾರಿಗೆ ಪರಿಹಾರ ಹುಡುಕಿ ಕೊಡ್ತೇವೆ, ಈ ಮಾತನ್ನು ರಕ್ತದಲ್ಲಿ ಬೇಕಾದರೂ ಬರೆದು ಕೊಡುತ್ತೇನೆ ಎಂದು ಹೇಳಿದ್ದರು. ಇದೊಂದು ನಾಟಕ ಅಷ್ಟೆ. ಅಮಿತ್ ಶಾ ಮತ್ತು ಯಡಿಯೂರಪ್ಪ ಅವರು ಪತ್ರದ ಮೇಲೆ ಪತ್ರ ಬರೆದದ್ದು ಬಿಟ್ಟರೆ ಅಧಿಕಾರ ಸಿಕ್ಕಮೇಲೆ ಅದರ ಬಗ್ಗೆ ಮಾತನಾಡುತ್ತಿಲ್ಲ.
ಕಾವೇರಿ ನೀರು ಪ್ರಾಧಿಕಾರದಲ್ಲಿ ಮೇಕೆದಾಟು ವಿಚಾರ ಚರ್ಚೆಗೆ ಎತ್ತಿಕೊಳ್ಳದೆ ಮುಂದೂಡಲಾಗುತ್ತಿದೆ, ಕೇಂದ್ರ ಸರ್ಕಾರ ಪರಿಸರ ಅನುಮತಿ ನೀಡುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಡಬ್ಬಲ್ ಇಂಜಿನ್ ಸರ್ಕಾರವಿದೆ. ತಕ್ಷಣ ಈ ಎರಡೂ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಬರಲಿ. ಇದನ್ನು ಮಾಡದೆ ಯೋಜನೆಗೆ ಬಜೆಟ್ನಲ್ಲಿ ಹಣ ಇಟ್ಟರೆ ಅದು ಬರೀ ರಾಜಕೀಯ ಕಾರಣಕ್ಕಾಗಿ ಇಟ್ಟಂತಾಗುತ್ತೆ.
ಈ ಬಜೆಟ್ ಅತ್ಯಂತ ನಿರಾಶಾದಾಯಕ ಬಜೆಟ್. ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ, ಬಡವರಿಗೆ ನಮ್ಮ ಸರ್ಕಾರ 2018 ರ ಬಜೆಟ್ನಲ್ಲಿ ನೀಡಿದಷ್ಟೂ ಹಣವನ್ನು ನೀಡಿಲ್ಲ. ಈ ಕಾರಣಕ್ಕಾಗಿ ಸರ್ಕಾರಕ್ಕೆ ನಾನು ಕೆಲವು ಸಲಹೆಗಳನ್ನು ನೀಡುತ್ತಿದ್ದೇನೆ.
ಮುಂದಿನ ಐದು ವರ್ಷದವರೆಗೆ ರಾಜಸ್ವ ಕೊರತೆಯ ಬಜೆಟ್ ನ ಅಂದಾಜು ಮಾಡಿರುವುದರಿಂದ ತಕ್ಷಣದಿಂದಲೇ ವಿತ್ತೀಯ ಹೊಣೆಗಾರಿಕೆ ನೀತಿಯಲ್ಲಿರುವಂತೆ ಆರ್ಥಿಕ ಶಿಸ್ತಿನ ಮಾನದಂಡಗಳನ್ನು ಪಾಲನೆ ಮಾಡಬೇಕು.
ಸರ್ಕಾರ ತೆರಿಗೆಯೇತರ ಆದಾಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬೇಕು ಹಾಗೂ ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ಪ್ರಯತ್ನ ಮಾಡಬೇಕು.
ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ನಮ್ಮ ಪಾಲಿನ ತೆರಿಗೆ ಹಣ ಮತ್ತು ಅನುದಾನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನ ಮಾಡಬೇಕು.
ಅನಗತ್ಯ ಹುದ್ದೆ ಮತ್ತು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಬೇಕು.
ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಅನಗತ್ಯ ಖರ್ಚುಗಳನ್ನು ಮುಂದುವರೆಸಿದರೆ ರಾಜ್ಯ ಇನ್ನಷ್ಟು ಕಷ್ಟದ ದಿನಗಳನ್ನು ನೋಡಬೇಕಾಗುತ್ತದೆ.