ಇಂದಿನ ವಿಧಾನ ಮಂಡಲ ಬಜೆಟ್ ಅಧಿವೇಶನವು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಕೀಳುಮಟ್ಟದ ಪದ ಪ್ರಯೋಗಕ್ಕೆ ಮೀಸಲಾಯಿತು. ಕಲಾಪದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ವಾಗ್ವಾದ ನಡೆದು ಕ್ಷಣ ಕಾಲ ಇಬ್ಬರು ಪರಸ್ಪರ ಕಿತ್ತಾಡಿಕೊಂಡರು.
ಬಿಜೆಪಿಯ ಫೈರ್ ಬ್ರ್ಯಾಂಡ್ ಖ್ಯಾತಿಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ಮುಂದಿನ ದಿನಗಳಲ್ಲಿ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲು ಕೇಸರಿ ಧ್ವಜ ಹಾರಿಸಲಾಗುವುದು ಎಂದು ಹೇಳಿ ವಿವಾದ ಹುಟ್ಟುಹಾಕಿದ್ದಾರೆ. ಈ ವಿಚಾರವಾಗಿ ಇಂದಿನ ಅಧಿವೇಶನದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿ, ʻಕೆಂಪು ಕೋಟೆಯ ಮೇಲೆ ರಾಷ್ಟ್ರಧ್ವಜ ಬಿಟ್ಟು ಬೇರೆ ಧ್ವಜ ಹಾರಿಸಲು ಸಾಧ್ಯವೇ? ಅದು ನಮ್ಮ ಹೆಮ್ಮೆಯ ಪ್ರತೀಕ ಎಂದರು.
ಮುಂದುವರೆದು, ರಾಷ್ಟ್ರಧ್ವಜದ ಬಗ್ಗೆ ತಪ್ಪಾಗಿ ಮಾತನಾಡಿದವರ ವಿರುದ್ಧ ಕಾನೂನು ಪ್ರಕಾರ ದೇಶದ್ರೋಹ ಪ್ರಕರಣವನ್ನು ದಾಖಲಿಸಬೇಕು ಎಂದು ಸದನದಲ್ಲಿ ಆಗ್ರಹಿಸಿದರು.
ಸಿದ್ದರಾಮಯ್ಯಗೆ ದನಿಗೂಡಿಸಲು ಬಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ರನ್ನು ತಡೆದ ಸ್ಪೀಕರ್ ಕಾಗೇರಿ ಅವರ ಮಾತನ್ನು ಮೊದಲು ಕೇಳೋಣ, ಆ ನಂತರ ನಿಮಗೆ ಅವಕಾಶ ಕೊಡುತ್ತೇನೆ ಎಂದರು. ಇದಕ್ಕೆ ಕೋಪಗೊಂಡ ಶಿವಕುಮಾರ್ ದೇಶದ್ರೋಹದ ಬಗ್ಗೆ ಮಾತನಾಡಿರುವವರ ಮಾತನ್ನು ಕೇಳುವ ಅವಶ್ಯಕತೆಯಿಲ್ಲ. ಲೇ ಈಶ್ವರಪ್ಪ ನೀನೊಬ್ಬ ದೇಶದ್ರೋಹಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಇದಕ್ಕೆ ಕೆಂಡಮಂಡಲರಾದ ಈಶ್ವರಪ್ಪ ನೀನು, ನಿಮ್ಮಪ್ಪ, ಎಲ್ಲರೂ ದೇಶದ್ರೋಹಿಗಳು. ನೀನಿನ್ನೂ ಬೇಲ್ ಮೇಲೆ ಇದ್ದೀಯಾ, ಅದನ್ನು ನೆನಪಿನಲ್ಲಿ ಇಟ್ಟುಕೊಂಡು ಮಾತನಾಡು. ಅವನಿನ್ನು ಜಾಮೀನಿನ ಮೇಲೆ ಇದ್ದಾನೆ ಜೈಲಿಗೆ ಹೋಗಿ ಬಂದವ ನನಗೆ ದೇಶದ್ರೋಹಿ ಎಂದು ಹೇಳುತ್ತಾನೆ. ದೇಶದ ಅತಿ ದೊಡ್ಡ ಲೂಟಿಕೋರ ಯಾವ ಕ್ಷಣದಲ್ಲಿ ಜೈಲಿಗೆ ಹೋಗುತ್ತಾನೆ ಎಂಬ ವಿಷಯ ಅವನಿಗೆ ಗೊತ್ತಿಲ್ಲಾ ಎಂದು ತಿರುಗೇಟು ನೀಡಿ ಎಚ್ಚರಿಸಿದರು.
ಈಶ್ವರಪ್ಪನವರ ಮಾತು ಮುಗಿಯುವಷ್ಟರಲ್ಲಿ ರೊಚ್ಚಿಗೆದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ವಾಗ್ವಾದವೇ ನಡೆದು ಹೋಯಿತು. ಅದು ಎಷ್ಟರ ಮಟ್ಟಿಗೆ ಎಂದರೆ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದ ಹಾಗೇ ಕೂಗಾಡಿಕೊಂಡರು.
ಈ ವೇಳೆ ಸದನದ ಬಾವಿಗಿಳಿದು ಪ್ರತಿಭಟಿಸಲು ಮುಂದಾದ ಕಾಂಗ್ರೆಸ್ ಸದಸ್ಯರ ವಿರುದ್ದ ಸಿಟ್ಟಾದ ಸಭಾಧ್ಯಕ್ಷರು, ಹಿರಿಯ ಸದಸ್ಯರಾಗಿ ನೀವುಗಳೇ ಹೀಗೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿ ಸದನವನ್ನು ಕೆಲಕಾಲ ಮುಂದೂಡಿದರು.