ಮಂಗಳೂರು: ಕೆಎಸ್ಆರ್ಟಿಸಿಯ ಐರಾವತ ಬಸ್ ನಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವಾಗ ಭಾರೀ ಪ್ರಮಾಣದ ಚಿನ್ನಾಭರಣಗಳನ್ನು ಮಹಿಳೆಯೊಬ್ಬರು ಕಳೆದುಕೊಂಡಿದ್ದಾರೆ. ಮಂಗಳೂರು ನಗರದ ಮಹಿಳೆಯೊಬ್ಬರು ಸುಮಾರು 67.75 ಲ.ರೂ. ಮೌಲ್ಯದ ಚಿನ್ನಾಭರಣವಿದ್ದ ಹ್ಯಾಂಡ್ಬ್ಯಾಗ್ ಕಳ್ಳತನವಾಗಿರುವ ಬಗ್ಗೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯು ಬ್ಯಾಂಕ್ನ ಲಾಕರ್ನಲ್ಲಿ ಇರಿಸಿದ್ದ 110 ಗ್ರಾಂ ತೂಕದ ವಜ್ರದ ಹರಳುಗಳ ಜೊತೆ ನಾನಾ ನಮೂನೆಯ ಚಿನ್ನಾಭರಣಗಳನ್ನು ಕೌಟುಂಬಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮನೆಗೆ ತಂದಿದ್ದರು. ಇದನ್ನು ಹ್ಯಾಂಡ್ಬ್ಯಾಗ್ನಲ್ಲಿ ಹಾಕಿ ಜೂ.19ರಂದು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಕೆಎಸ್ಆರ್ಟಿಸಿ ಐರಾವತ ಬಸ್ನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದರು.
ಹಾಸನ ತಲುಪಿದಾಗ ಅವರ ಹ್ಯಾಂಡ್ ಬ್ಯಾಗ್ ಪರಿಶೀಲಿಸಿದ್ದರು. ಈ ವೇಳೆ ಬ್ಯಾಗ್ನಲ್ಲಿಟ್ಟಿದ್ದ ಚಿನ್ನಾಭರಣಗಳು ಮಾಯವಾಗಿದ್ದವು. ಮಂಗಳೂರು – ಹಾಸನ ನಡುವೆ ಅವರ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ನಡು ವಯಸ್ಸಿನ ಮಹಿಳೆ ಕಳ್ಳತನ ಮಾಡಿರುವ ಶಂಕೆ ಇದೆ ಎಂದು ಚಿನ್ನಾಭರಣ ಕಳೆದುಕೊಂಡ ಮಹಿಳೆ ಜುಲೈ 1ರಂದು ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.
ಇನ್ನು ವಜ್ರದ ಜೊತೆ ಬಂಗಾರ ಕಳೆದುಕೊಂಡಿರುವ ಮಹಿಳೆ ಸುಮಾರು 10-12 ದಿನಗಳ ಬಳಿಕ ದೂರು ಸಲ್ಲಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಮಹಿಳೆ ನೀಡಿರುವ ದೂರನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತಿದ್ದಾರೆ. ಹಾಸನದಲ್ಲಿಯೇ ಕಳ್ಳತನ ಆಗಿರುವುದು ಗೊತ್ತಾಗಿದ್ದರೂ ದೂರು ನೀಡಲು ತಡ ಮಾಡಿರುವ ಹಿನ್ನೆಲೆ ಅನುಮಾನಾಸ್ಪದವಾಗಿದೆ.