ಚಾಮರಾಜನಗರ ಜಿಲ್ಲೆಯ (Chamarajnagar) ಮಲೆ ಮಹದೇಶ್ವರ ಬೆಟ್ಟದ (MM Hills) ವನ್ಯಧಾಮದ ಕೊಪ್ಪ ವಲಯದಲ್ಲಿ ಒಟ್ಟು 5 ಹುಲಿಗಳು (Tigers) ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಕೇವಲ 50 ಅಡಿಗಳಷ್ಟು ಅಂತರಲ್ಲೇ ಐದು ಹುಲಿಗಳ ಶವಗಳು ಪತ್ತೆಯಾಗಿದೆ. ಈ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಹುಲಿಗಳ ಸಾವಿಗೆ ವಿಷ ಪ್ರಾಶನ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಒಂದು ತಾಯಿ ಹುಲಿ ಮತ್ತು 4 ಮರಿ ಸೇರಿ ಐದು ಹುಲಿಗಳು ಸಾವಿಗೀಡಾಗಿರುವ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮಾಹಿತಿ ನೀಡಲಾಗಿತ್ತು.

ಇನ್ನು ಹುಲಿಗಳ ಕಳೆಬರದ ಸಮೀಪದಲ್ಲೇ ಹಸುವಿನ ಕಳೆಬರ ಕೂಡ ಸಿಕ್ಕಿದ್ದು, ವಿಷ ಹಾಕಿ ಹುಲಿಗಳನ್ನು ಕೊಲ್ಲಲಾಗಿದೆ ಎಂದು ಶಂಕಿಸಲಾಗಿದೆ. ಹೀಗಾಗಿ ಇದನ್ನು ಪಿಸಿಸಿಎಫ್ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.