![](https://pratidhvani.com/wp-content/uploads/2024/07/WhatsApp-Image-2024-07-03-at-12.20.02-PM-1024x691.jpeg)
‘ತಾಲ್ಲೂಕಿನ ಹೆಡಗಾಪುರ ಸರ್ಕಾರಿ ಗೋಶಾಲೆ ಬಳಿ ₹ 34.49 ಕೋಟಿ ವೆಚ್ಚದಲ್ಲಿ ಜಾನುವಾರು ಸಂವರ್ಧನಾ ಮತ್ತು ರೈತರ ತರಬೇತಿ ಕೇಂದ್ರದ ಕಟ್ಟಡ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ’ ಎಂದು ಶಾಸಕ ಪ್ರಭು ಚವಾಣ್ ಹೇಳಿದರು.
![](https://pratidhvani.com/wp-content/uploads/2024/07/PrabhuTwitter_vb_69-1024x766.jpeg)
ಹೆಡಗಾಪುರ ಗೋಶಾಲೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಾನು ಪಶು ಸಂಗೋಪನೆ ಇಲಾಖೆ ಸಚಿವನಾಗಿದ್ದಾಗ ಇಲ್ಲಿ ಸರ್ಕಾರಿ ಜಮೀನು ಗುರುತಿಸಿ ಗೋಶಾಲೆ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಈಗ ಇದೇ ಸ್ಥಳದಲ್ಲಿ 33 ಎಕರೆ ವಿಶಾಲ ಪ್ರದೇಶದಲ್ಲಿ ಜಾನುವಾರು ಸಂವರ್ಧನಾ ಹಾಗೂ ರೈತರ ತರಬೇತಿ ಕೇಂದ್ರಕ್ಕೆ ಬೇಕಾಗುವ ಕಟ್ಟಡ ಕಾಮಗಾರಿ ಶುರುವಾಗಲಿದೆ. ಇದು ಕಳೆದ ಮಾರ್ಚ್ನಲ್ಲೇ ಆರಂಭವಾಗಬೇಕಿತ್ತು. ಆದರೆ ಚುನಾವಣೆ ಬಂದ ಕಾರಣ ವಿಳಂಬವಾಯಿತು’ ಎಂದು ತಿಳಿಸಿದರು.
![](https://pratidhvani.com/wp-content/uploads/2024/07/deccanherald_import_sites_dh_files_articleimages_2022_06_29_prabhu-chauhan-1122450-1656505900-1024x576.avif)
‘ಬೀದರ್ನಲ್ಲಿ ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕೇಂದ್ರ ಕಚೇರಿ ಇರುವ ಕಾರಣಕ್ಕೆ ಇಲ್ಲೊಂದು ಪಶು ಸಂವರ್ಧನಾ ಕೇಂದ್ರದ ಅಗತ್ಯದ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟ ಕಾರಣ ಇದೊಂದು ದೊಡ್ಡ ಕೆಲಸ ಆಗಿದೆ. ಈ ಕೇಂದ್ರವು ಜಾನುವಾರು, ಹಂದಿ ಸಾಕಾಣಿಕೆ, ಕೋಳಿ, ಕುರಿ, ಮೇಕೆ ಸಾಕಾಣಿಕೆ ಘಟಕದ ಜತೆಗೆ ತರಬೇತಿ ಕೇಂದ್ರವು ನಡೆಯಲಿದೆ. ಇದರಿಂದ ಈ ಪ್ರದೇಶದ ಸಾಕಷ್ಟು ರೈತರಿಗೆ ಅನುಕೂಲವಾಗಲಿದೆ’ ಎಂದು ಹೇಳಿದರು.
‘ಈ ಜಾನುವಾರು ಸಂವರ್ಧನ ಕೇಂದ್ರದ ಕಟ್ಟಡ ಕಾಮಗಾರಿ ಆಧುನಿಕ ವಿನ್ಯಾಸದಲ್ಲಿ ಇರಲಿದೆ. ಅಷ್ಟೇ ಗುಣಮಟ್ಟ ಹಾಗೂ ಕಾಲ ಮಿತಿಯಲ್ಲಿ ಪೂರ್ಣಗೊಂಡು ನಮ್ಮ ಜಿಲ್ಲೆಯ ರೈತ ಬಾಂಧವರಿಗೆ ಇದರ ಪೂರ್ಣ ಲಾಭ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಶು ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ವಸಂತ ವಕೀಲ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ನರಸಪ್ಪ, ಹೌಸಿಂಗ್ ಬೋರ್ಡ್ ಕಾರ್ಪೋರೇಷನ್ ಇಇ ಶಶಿಕಾಂತ, ಮುಖಂಡ ಸುರೇಶ ಭೋಸ್ಲೆ, ಶಿವಾಜಿರಾವ ಕಾಳೆ, ಗಿರೀಶ್ ವಡೆಯರ್, ರಾಮಶೆಟ್ಟಿ ಪನ್ನಾಳೆ ಮತ್ತಿತರರು ಹಾಜರಿದ್ದರು.