ವಿಚಿತ್ರ ಸೋಂಕಿನಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಬೆಂಗಾಲಿ ಹುಲಿಗಳು ಮೃತಪಟ್ಟಿರುವ ಆಘಾತಕಾರಿ ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸುಮಾರು 22ಕಿ.ಮೀ ದೂರದಲ್ಲಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರು ಹುಲಿಗಳು ಮೃತಪಟ್ಟಿವೆ.
ಮೂರು ವರ್ಷ ಕಿರಣ್, ಐದು ವರ್ಷದ ಶಿವು ಸೇರಿದಂತೆ ಒಟ್ಟು ಮೂರು ಹುಲಿಗಳು ಕಳೆದ ಮೂರು ತಿಂಗಳಲ್ಲಿ ಸಾವನ್ನಪ್ಪಿವೆ.
ಮೃಗಾಲಯದಲ್ಲಿನ ಬೆಂಗಾಲ್ ಹುಲಿಗಳಲ್ಲಿ ವಿಚಿತ್ರ ಸೋಂಕು ತಗುಲಿದ್ದು, ಬ್ಯಾರೆಕ್ ಒಳಗಡೆ ಹರಡಿರುವ ಶಂಕೆ ವ್ಯಕ್ತವಾಗಿದೆ. ಅಲ್ಲದೆ ಇತರ ಹುಲಿಗಳಿಗೂ ಸೋಂಕು ಹರಡುವ ಭೀತಿ ಎದುರಾಗಿದೆ.

ಮೃಗಾಲಯಗಳಲ್ಲಿ ಪ್ರಾಣಿಗಳ ಆರೋಗ್ಯವನ್ನು ನಿರ್ಲಕ್ಷ್ಯಿಸಲಾಗುತ್ತಿದೆ ಎಂಬ ಅನುಮಾನ ಕಾಡುತ್ತಿದ್ದು, ಇದಕ್ಕೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಾವುಗಳೇ ಸಾಕ್ಷಿಯಾಗಿದೆ.
ಹುಲಿಗಳ ಆರೋಗ್ಯಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಹಲವು ಗಣ್ಯ ವ್ಯಕ್ತಿಗಳು ಕೆಲವೊಂದು ಹುಲಿಗಳನ್ನು ದತ್ತು ತೆಗೆದುಕೊಂಡಿದ್ದಾರೆ. ಆದರೆ ಹುಲಿಗಳ ಸಾವುಗಳನ್ನು ನೋಡಿದಾಗ ಹುಲಿಗಳಿಗೆ ಮಾಡಬೇಕಾದ ವ್ಯವಸ್ಥೆ ಕುಂಠಿತವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಹೊಟ್ಟೆ ನೋವು, ಅಜೀರ್ಣ, ಮಲಬದ್ಧತೆಯಿಂದ ನರಳಿದ್ದ ಹುಲಿಗಳ ಆರೋಗ್ಯದ ಬಗ್ಗೆ ಪಾರ್ಕ್ ಆಡಳಿತ ಮಂಡಳಿ ಅಷ್ಟಾಗಿ ತಲೆ ಕೆಡಿಸಿಕೊಳ್ಳದಿರುವುದು ಬೇಸರದ ಸಂಗತಿಯಾಗಿದೆ.