ಹಿಮಾಚಲ ಪ್ರದೇಶ ರಾಜ್ಯದ ಮಂಡಿ ಜಿಲ್ಲೆಯ ಕೋಲ್ ಅಣೆಕಟ್ಟು ಜಲವಿದ್ಯುತ್ ಯೋಜನಾ ಭಾನುವಾರ ಸಂಜೆ ಸ್ಥಳದಲ್ಲಿ ಸಿಲುಕಿದ್ದ ಹತ್ತು ಜನರನ್ನು ಸೋಮವಾರ (ಆಗಸ್ಟ್ 21) ಬೆಳಗಿನ ಜಾವ 3ರ ಹೊತ್ತಿಗೆ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಮಟ್ಟ ಹಠಾತ್ ಏರಿಕೆಯಾಗಿದೆ. ಪರಿಣಾಮ ಅಧಿಕಾರಿಗಳಿದ್ದ ದೋಣಿ ಅಣೆಕಟ್ಟಿನಲ್ಲಿ ಸಿಲುಕಿತ್ತು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಸ್ಥಳೀಯ ಆಡಳಿತ ತಂಡಗಳು ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿವೆ ಎಂದು ಮಂಡಿಯ ಉಪ ಆಯುಕ್ತ ಅರಿಂದಮ್ ಚೌಧರಿ ತಿಳಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಹಿಮಾಚಲ ಪ್ರದೇಶ ರಾಜ್ಯದಾದ್ಯಂತ ಎಡಬಿಡದೆ ಮಳೆ ಸುರಿಯುತ್ತಿದ್ದು ಮಳೆ ಸಂಬಂಧಿ ಅವಘಡಗಳು ಸಂಭವಿಸುತ್ತಲೇ ಇವೆ.
ಸೋಮವಾರವೂ ಮಳೆ ಮುಂದುವರೆಯುವ ಸಾಧ್ಯತೆ ಇರುವ ಕಾರಣ ಭಾರತೀಯ ಹವಾಮಾನ ಇಲಾಖೆ (IMD) ಯೆಲ್ಲೋ ಅಲರ್ಟ್ (Yellow Allert) ಘೋಷಣೆ ಮಾಡಿದೆ.
ಅಲ್ಲದೆ ಆಗಸ್ಟ್ 22 ರಿಂದ ಆಗಸ್ಟ್ 24 ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಜತೆಗೆ ಚಂಬಾ ಮತ್ತು ಮಂಡಿ ಜಿಲ್ಲೆಗಳ ಜಲಾನಯನ ಪ್ರದೇಶಗಳಲ್ಲಿ ಹಠಾತ್ ಪ್ರವಾಹ ಉಂಟಾಗುವ ಅಪಾಯದ ಬಗ್ಗೆ ಇಲಾಖೆ ಎಚ್ಚರಿಕೆ ನೀಡಿದೆ.