
ರಾಯಲ್ ಚಾಲೆಂಜರ್ಸ್ (Royal challengers) ಗೆಲುವಿನ ಖುಷಿಯನ್ನು ಸಂಭ್ರಮಿಸಲು ವಿನ್ನಿಂಗ್ ಇವೆಂಟ್ ನಲ್ಲಿ ಭಾಗವಹಿಸುವ ಸಲುವಾಗಿ ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy stadium) ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದ ವೇಳೆ ಭೀಕರ ದುರಂತ ಸಂಭವಿಸಿ ಕಾಲ್ತುಳಿತದಲ್ಲಿ (Bengaluru stampede case) 11 ಮಂದಿ ಸಾವಿಗೀಡಾಗಿದ್ದರು. ಈ ಬಗ್ಗೆ ನಿನ್ನೆ ಪೋಸ್ಟ್ ಮಾಡಿದ್ದ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ದುಃಖ ವ್ಯಕ್ತಪಡಿಸಿತ್ತು.

ಇದೀಗ ಮೃತರ ಕುಟುಂಬಕ್ಕೆ ನೆರವಾಗಲು ಫ್ರಾಂಚೈಸಿ ತೀರ್ಮಾನ ಮಾಡಿದೆ.ನಿನ್ನೆ ಬೆಂಗಳೂರಿನಲ್ಲಿ ನಡೆದ ದುರದೃಷ್ಟಕರ ಘಟನೆ ಆರ್ಸಿಬಿ ಕುಟುಂಬಕ್ಕೆ ತೀವ್ರ ನೋವನ್ನುಂಟು ಮಾಡಿದೆ. ನಮ್ಮ ಅಭಿಮಾನಿಗಳ ಮೇಲಿನ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ, ಆರ್ಸಿಬಿ ಮೃತರ ಹನ್ನೊಂದು ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ಘೋಷಿಸಿದೆ ಎಂದು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ ಅಧಿಕೃತವಾಗಿ ಪೋಸ್ಟ್ ಮಾಡಿದೆ.

ಇದಲ್ಲದೆ, ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳನ್ನು ಬೆಂಬಲಿಸಲು ಆರ್ಸಿಬಿ ಕೇರ್ಸ್ ಎಂಬ ನಿಧಿಯನ್ನು ಸಹ ರಚಿಸಲಾಗುತ್ತಿದೆ ಎಂದು ರಾಯಲ್ ಚಾಲೆಂಜರ್ಸ್ ಮ್ಯಾನೇಜ್ಮೆಂಟ್ ಹೇಳಿಕೊಂಡಿದೆ.ನಮ್ಮ ಪ್ರತಿ ಕಾರ್ಯದಲ್ಲೂ ನಮ್ಮ ಅಭಿಮಾನಿಗಳು ಯಾವಾಗಲೂ ಹೃದಯಭಾಗದಲ್ಲಿ ನೆಲೆಸಿರುತ್ತಾರೆ.ಈ ದುಃಖದಲ್ಲಿ ನಾವು ಒಗ್ಗಟ್ಟಿನಿಂದ ಇರುತ್ತೇವೆ ಎಂದು ರಾಯಲ್ ಚಾಲೆಂಜರ್ಸ್ ಹೇಳಿದೆ.
