ಯುವ ನಾಯಕರಾದ ಜ್ಯೊತಿರಾಧಿತ್ಯ ಸಿಂಧ್ಯ ಮತ್ತು ಸಚಿನ್ ಪೈಲಟ್ ಅವರನ್ನು ದುರಂತ ನಾಯಕರು ಎಂದು ಕರೆಯಬಹುದು. ಅದು ಈಗಲ್ಲದಿದ್ದರು ಮುಂದೊಂದು ದಿನವಾದರೂ ಯಾರಾದರೂ ಹೀಗೆ ಬರೆಯಬಹುದೇನೋ. ಏಕೆಂದರೆ ಇವರಿಬ್ಬರೂ ಬಹಳ ಒಳ್ಳೆಯ ಅವಕಾಶಗಳನ್ನು ಕೈಚೆಲ್ಲಿ ಕೂತಿದ್ದಾರೆ. ಎರಡು ರೀತಿಯ ಅವಕಾಶಗಳು ಜಾರಿಹೋಗಿವೆ. ಮೊದಲನೆಯದಾಗಿ ಸದ್ಯದ ಪರಿಸ್ಥಿತಿಯನ್ನು ಸಹಿಸಿಕೊಂಡು, ಈಗಾಗಲೇ ಹೈಕಮಾಂಡ್ ಜೊತೆಗಿದ್ದ ಸಂಬಂಧವನ್ನು ಇನ್ನಷ್ಟು ಗಟ್ಟಿಗಳಿಸಿಕೊಂಡು ಕಾಂಗ್ರೆಸ್ ಪಕ್ಷದಲ್ಲೇ ಉಳಿದ್ದಿದ್ದರೆ ಒಂದಲ್ಲ ಒಂದು ದಿನ ಕಾಂಗ್ರೆಸಿನಿಂದಲೇ ಮುಖ್ಯಮಂತ್ರಿ ಆಗುತ್ತಿದ್ದರು. ಎರಡನೇಯದಾಗಿ ಬಂಡೆದ್ದು ಹೊರಬಂದ ಬಳಿಕ ಸ್ವಂತ ಪಕ್ಷ ಕಟ್ಟಿ ಕೆಲ ವರ್ಷ ದುಡಿದಿದ್ದರೂ ಅವರುಗಳು ಮುಖ್ಯಮಂತ್ರಿ ಆಗಬಹುದಿತ್ತು. ಬದಲಾದ ಪರಿಸ್ಥಿತಿಯಲ್ಲಿ ಇದೇ ಕಾಂಗ್ರೆಸ್ ಮತ್ತು ಬಿಜೆಪಿಗಳ ಜೊತೆ ಸೇರಿಯೂ ಮುಖ್ಯಮಂತ್ರಿ ಪಟ್ಟ ಅಲಂಕರಿಸಬಹುದಿತ್ತು.
ಸಚಿನ್ ಪೈಲಟ್ ಸ್ವಂತ ಪಕ್ಷ ಹುಟ್ಟು ಹಾಕುವ ಬಗ್ಗೆ ಡೋಲಾಯಮಾನದಲ್ಲಿದ್ದಾರೆ. ಆ ಗೊಂದಲವೇ ಅವರ ಮತ್ತು ಬಿಜೆಪಿಯ ಸಖ್ಯವನ್ನು ಸಾರಿ ಹೇಳುತ್ತದೆ. ಜ್ಯೊತಿರಾಧಿತ್ಯ ಸಿಂಧ್ಯ ಬಿಜೆಪಿ ಸೇರುವ ಮೂಲಕ ಮಹತ್ತರವಾದುದನ್ನು ಸಾಧಿಸುವ ಸಾಧ್ಯತೆಯನ್ನು ಕಳೆದುಕೊಂಡಿದ್ದಾರೆ. ಅವರವರ ರಾಜ್ಯಗಳಲ್ಲಿ ಪಕ್ಷಾತೀತವಾಗಿ ಯುವ ನಾಯಕರಾಗಿ ಹೊರಹೊಮ್ಮಿದ್ದವರು ಈ ಜೋಡೆತ್ತುಗಳು. ಹಾಗಾಗಿ ಜಾತಿ, ಮತ ಮೀರಿ ಯುವ ಮತದಾರರ ಮನ ಸೆಳೆಯಬಹುದಿತ್ತು. ಕಾಂಗ್ರೆಸ್-ಬಿಜೆಪಿಗೆ ಪರ್ಯಾಯವಾಗಿ ನಿಲ್ಲುತ್ತೇವೆ ಎಂಬುದೇ ಟ್ರಂಪ್ ಕಾರ್ಡ್ ಆಗಿರುತ್ತಿತ್ತು. ರಾಜಸ್ಥಾನ ಮತ್ತು ಮಧ್ಯಪ್ರದೇಶಗಳಲ್ಲಿ ಕಾಂಗ್ರೆಸ್-ಬಿಜೆಪಿ ಬಿಟ್ಟು ಮತ್ತೊಂದು ಪ್ರಬಲ ಪಕ್ಷ ಇಲ್ಲದಿರುವುದು ವರದಾನ ಆಗಿರುತ್ತಿತ್ತು.
ಸದ್ಯ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಬೆಳೆದಿರುವ ಪರಿಗೆ ಮೈತ್ರಿ ಸರ್ಕಾರಗಳ ಯುಗ ಮುಗಿಯಿತು, ಪ್ರಾದೇಶಿಕ ಪಕ್ಷಗಳ ಕತೆ ಅಷ್ಟಕ್ಕಷ್ಟೇ ಎಂದು ಅನಿಸಬಹುದು. ಆದರೆ ಆರೇಳು ವರ್ಷಗಳ ಹಿಂದೆ ‘ಇದು ಮೈತ್ರಿ ಯುಗ, ಪ್ರಾದೇಶಿಕ ಪಕ್ಷಗಳ ಪರ್ವ’ ಎಂದೆಲ್ಲಾ ವ್ಯಾಖ್ಯಾನಿಸುತ್ತಿದ್ದುದನ್ನು ನೆನಪು ಮಾಡಿಕೊಳ್ಳಬೇಕು. ಹೀಗೆ ಇನೈದತ್ತು ವರ್ಷಕ್ಕೆ ರಾಜಕಾರಣದ ಸ್ವರೂಪ ಬದಲಾಗಿರುತ್ತದೆ. ಬದಲಾದ ಪರಿಸ್ಥಿತಿ ಸಚಿನ್ ಪೈಲಟ್ ಮತ್ತು ಜ್ಯೊತಿರಾಧಿತ್ಯ ಸಿಂಧ್ಯಗೆ ಮುಖ್ಯಮಂತ್ರಿಗಾದಿಯನ್ನಷ್ಟೇ ಅಲ್ಲ, ಕೇಂದ್ರ ಮಂತ್ರಿ ಸ್ಥಾನಗಳನ್ನೂ ದಯಪಾಲಿಸಬಹುದು. ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅವಕಾಶವೂ ಒದಗಿಬರಬಹುದು. ಇವರಿಬ್ಬರು ತಮ್ಮ ತಮ್ಮ ರಾಜ್ಯಗಳಲ್ಲಿ ಬೇರು ಬೆಟ್ಟಿದ್ದರೂ ಆಗಾಗ ದೆಹಲಿಯಲ್ಲಿ ರೆಕ್ಕೆ ಬಿಚ್ಚುತ್ತಿರುವುದು ಇದಕ್ಕೆ ಪೂರಕವಾಗಿ ಇರುತ್ತಿತ್ತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸದ್ಯ ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ಅನರ್ಹಗೊಳಿಸುತ್ತದೆ. ಅಥವಾ ಅವರೇ ರಾಜೀನಾಮೆ ನೀಡುತ್ತಾರೆ. ಎರಡರಲ್ಲಿ ಯಾವುದೇ ಆದರೂ ಅವರು ಉಪ ಚುನಾವಣೆ ಎದುರಿಸಿಯೇ ಮತ್ತೆ ಮುನ್ನಲೆಗೆ ಬರಬೇಕು. ವೈಯಕ್ತಿಕವಾಗಿ ಸಚಿನ್ ಪೈಲಟ್ ಗೆದ್ದು ಬರುವುದರಿಂದ ಮಾತ್ರ ಅವರ ಉದ್ದೇಶ ಸಿದ್ಧಿಸುವುದಿಲ್ಲ. ಬೆಂಬಲಿಗರನ್ನೂ ಗೆಲ್ಲಿಸಿಕೊಂಡು ಬರಬೇಕು. ಈಗಿನ ಪರಿಸ್ಥಿತಿಯಲ್ಲಿ ಅಶೋಕ್ ಗೆಹ್ಲೋಟ್ ಅವರ ಸರ್ಕಾರ ಪತನವಾಗಿಯೇ ಬಿಡುತ್ತದೆ ಎನ್ನುವುದನ್ನು ಖಡಾಖಂಡಿತವಾಗಿ ಹೇಳಲು ಸಾಧ್ಯವಿಲ್ಲ. ಒಂದೊಮ್ಮೆ ಕಾಂಗ್ರೆಸ್ ಸರ್ಕಾರವೇ ಇದ್ದು, ಉಪ ಚುನಾವಣೆ ನಡೆದರಂತೂ ಸಚಿನ್ ಪೈಲಟ್ ಬಣದ ಅಷ್ಟೂ ಮಂದಿ ಶಾಸಕರು ಗೆಲ್ಲುವುದು ಅತ್ಯಂತ ಕಷ್ಟಕರವಾದ ವಿಷಯ.
ಹೌದು, ಸಚಿನ್ ಪೈಲಟ್ ಸುಮ್ಮನಿದ್ದರೂ ಬಿಜೆಪಿಯ ದೆಹಲಿ ದೊರೆಗಳು ವಿರಮಿಸುವುದಿಲ್ಲ. ಈಗ ಬಚಾವಾದರೂ ಮುಂದಿನ ತಿಂಗಳೋ ಅಥವಾ ಮೂರು ತಿಂಗಳಿಗೋ ರಾಜಸ್ಥಾನದ ಕಾಂಗ್ರೆಸ್ ಸರ್ಕಾರವನ್ನು ಕೆಡವೇ ತೀರುತ್ತಾರೆ. ಆದರೆ ತಡವಾದಷ್ಟು ತೊಂದರೆಯಾಗುವುದು ಸಚಿನ್ ಪೈಲಟ್ ಅವರಿಗೆ ಮಾತ್ರ. ನಾಳೆ ಬಿಜೆಪಿ ನೆರವಿನಿಂದ ಗೆದ್ದು ಬಂದರೆಂದರೆ ಬಿಜೆಪಿ ಕಡೆಯಿಂದ ಈಗಿರುವ ಕಿಮ್ಮತ್ತು ಸಿಗುವುದಿಲ್ಲ. ಇದೂ ಅಲ್ಲದೆ ಹೊಸ ಪಕ್ಷದ ಘೋಷಣೆ ತಡ ಮಾಡಿದಷ್ಟೂ ಬಿಸಿ ಆರಿಹೋಗುತ್ತದೆ. ಹೊಸ ಪಕ್ಷದ ಮೂಲಕ ಉಪ ಚುನಾವಣೆ ಎದುರಿಸಿದರೆ, ಆಗಿರಬಹುದಾದ ಬಿಜೆಪಿ ಸರ್ಕಾರದಿಂದ ಎಂತಹ ನೆರವು ಸಿಗುತ್ತದೆ ಎಂಬುದು ಕೂಡ ಬಹಳ ಮಹತ್ವದ ಸಂಗತಿಯಾಗಲಿದೆ.

ಜ್ಯೋತಿರಾಧಿತ್ಯ ಸಿಂಧ್ಯ ಈಗಾಗಲೇ ಬಿಜೆಪಿ ಸೇರಿರುವುದರಿಂದ ಬಿಜೆಪಿಯಲ್ಲಿ ಇದ್ದುಕೊಂಡೇ ಏನಾದರೂ ಮಾಡಬೇಕಿದೆ. ಹೆಚ್ಚೆಂದರೆ ಅವರೀಗ ಕೇಂದ್ರ ಸಚಿವರಾಗಬಹುದು. ಅದರಾಚೆಗೆ ಆರ್ ಎಸ್ ಎಸ್ ಸಂಪರ್ಕ ಇಲ್ಲದ ಅನಾನುಭವಿ ಜ್ಯೊತಿರಾಧಿತ್ಯ ಸಿಂಧ್ಯ ಅನುಭವಿ ಶಿವರಾಜಸಿಂಗ್ ಚೌಹಾಣ್ ಎದುರು ಸೆಣಸಿ ಬಿಜೆಪಿಯಲ್ಲಿ ಮೊದಲ ಸ್ತರಕ್ಕೆ ಏರುವುದು ಬಹಳ ಕಷ್ಟವಾಗಲಿದೆ. ಇದಕ್ಕೆ ಬಹಳ ಒಳ್ಳೆಯ ಉದಾಹರಣೆ ಅಸ್ಸಾಂನ ಹೇಮಂತ್ ಬಿಸ್ವಾಸ್. ಅಸ್ಸಾಂ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ (ಅಂದಿನ) ತರುಣ್ ಗೋಗಾಯ್ ನಂತರದ ಸ್ಥಾನದಲ್ಲಿದ್ದವರು ಹೇಮಂತ್ ಬಿಸ್ವಾಸ್. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಬಿಜೆಪಿಯಲ್ಲೂ ಮುಖ್ಯಮಂತ್ರಿ ಸರಬಾನಂದ ಸೋನುವಾಲ್ ನಂತರದ ಸ್ಥಾನದಲ್ಲೇ ಇದ್ದಾರೆ. ಮುಂದಿನ ಬಾರಿಯಾದರೂ ಹೇಮಂತ್ ಬಿಸ್ವಾಸ್ ಅಸ್ಸಾಂ ಮುಖ್ಯಮಂತ್ರಿ ಆಗುತ್ತಾರೆನ್ನುವುದು ಅನುಮಾನದಿಂದ ಕೂಡಿದೆ. ಅದೂ ಸರಬಾನಂದ ಸೋನುವಾಲ್ ಅವರಿಗಿಂತ ಪರಿಣಾಮಕಾರಿಯಾಗಿ ಕೆಲಸ ಮಾಡುವ, ಜನಮನ್ನಣೆ ಇದ್ದೂ ಹೇಮಂತ್ ಬಿಸ್ವಾಸ್ ಸರದಿಯಲ್ಲಿದ್ದಾರೆ. ಹೇಮಂತ್ ಬಿಸ್ವಾಸ್ ಅವರಿಗೆ ಹೊಲಿಸಿಕೊಂಡರೆ ಜ್ಯೊತಿರಾಧಿತ್ಯ ಸಿಂಧ್ಯ ಕಷ್ಟಪಟ್ಟು ದುಡಿಯುವವರೇನಲ್ಲ. ಅದರಿಂದಾಗಿ ಹೇಮಂತ್ ಬಿಸ್ವಾಸ್ ಅವರಿಗಿಂತಲೂ ಹೆಚ್ಚು ಕಾಯಬೇಕಾಗಬಹುದು. ಕಾದರೂ ಖಾತರಿ ಇಲ್ಲ. ಈ ಸುಖಕ್ಕೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಬೇಕಿತ್ತಾ? ಎನ್ನುವ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.
ಇದೇ ರೀತಿ ಕಾಂಗ್ರೆಸ್ ಪಕ್ಷದಿಂದ ಹೊರಬಂದು ಯಶಸ್ವಿಯಾದವವರು ಇದ್ದಾರೆ. ಆದರವರು ಬಿಜೆಪಿ ಸೇರಿ ಉದ್ದಾರವಾಗಿಲ್ಲ. ಸ್ವಂತ ಪಕ್ಷ ಕಟ್ಟಿ ಬೆಳೆದಿದ್ದಾರೆ. ತಮ್ಮ ಗುರಿ ಸಾಧಿಸಿಕೊಂಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಸ್ಥಾನಕ್ಕೂ ಹೆಸರು ಕೇಳಿಬಂದಿದ್ದ ಶರದ್ ಪವಾರ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್ಮೊಹನ ರೆಡ್ಡಿ. ಈ ಮೂವರು ಕಾಂಗ್ರೆಸ್ ಪಕ್ಷದ ವಿರುದ್ಧ ಬಂಡೆದ್ದು ವರ್ಷಗಳ ಕಾಲ ಹೋರಾಟ ಮಾಡಿ ಕಡೆಗೆ ಮುಖ್ಯಮಂತ್ರಿ ಸ್ಥಾನವನ್ನು ಧಕ್ಕಿಸಿಕೊಂಡವರು. ಅಷ್ಟೇ ಅಲ್ಲದೆ ರಾಷ್ಟ್ರ ರಾಜಕಾರಣದಲ್ಲೂ ತಮ್ಮದೇ ಪಾತ್ರವನ್ನು ನಿರ್ವಹಿಸುತ್ತಿರುವವರು. ಈಗ ಈ ಅವಕಾಶ ಜ್ಯೊತಿರಾಧಿತ್ಯ ಸಿಂಧ್ಯ ಪಾಲಿಗೆ ಸಂಪೂರ್ಣವಾಗಿ ಮರಿಚಿಕೆಯಾಗಿದೆ. ಸಚಿನ್ ಪೈಲಟ್ ಅವರಿಗೆ ಇನ್ನೂ ಕಾಲಮಿಂಚಿಲ್ಲ.