ಸೇನಾ ಸಿಬ್ಬಂದಿಗಳ ಸಾಮಾಜಿಕ ಜಾಲತಾಣ ಬಳಕೆಯನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿ ಹಿರಿಯ ಸೇನಾಧಿಕಾರಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ರಾಜೀವ್ ಸಹಾಯ್ ಹಾಗೂ ಆಶಾ ಮೆನನ್ ಅವರನ್ನೊಳಗೊಂಡ ನ್ಯಾಯಪೀಠವು, ಹಲವಾರು ಸೈನಿಕರು ಯಾವುದೇ ಸಂದೇಹವಿಲ್ಲದೆ ತಮ್ಮ ಮಾಹಿತಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ. ಹೀಗೆ ಹಲವಾರು ಮಾಹಿತಿಗಳು ಒಟ್ಟು ಸಂಗ್ರಹವಾದಾಗ ಒಬ್ಬ ಸಮರ್ಥ ಬೇಹುಗಾರನಿಗೆ ಸಂಪೂರ್ಣ ಚಿತ್ರಣಗಳನ್ನು ನೀಡುತ್ತವೆ ಎಂದು ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಜೂನ್ 6ರಂದು ವಿಧಿಸಿರುವ ನೀತಿಯನ್ನು ಹಿಂಪಡೆಯುವಂತೆ ಮಿಲಿಟರಿ ಗುಪ್ತಚರ ನಿರ್ದೇಶಕರಿಗೆ ಆದೇಶಿಸಬೇಕೆಂಬ ಮಾಜಿ ಲೆಫ್ಟಿನೆಂಟ್ ಕರ್ನಲ್ ಪಿಕೆ ಚೌಧರಿ ನ್ಯಾಯಾಲಯದ ಮೊರೆ ಹೋಗಿದ್ದರು. ಜೂನ್ 6 ರಂದು ಭಾರತೀಯ ಸೈನಿಕರು ಇನ್ಸಟಗ್ರಾಮ್, ಫೇಸ್ಬುಕ್ ಸೇರಿದಂತೆ ಒಟ್ಟು 89 ಅಪ್ಲಿಕೇಶನ್ಗಳನ್ನು ಬಳಸಬಾರದೆಂದು ಆದೇಶಿಸಲಾಗಿತ್ತು.
ಮಾಜಿ ಲೆಫ್ಟಿನೆಂಟ್ ಕರ್ನಲ್ ಪಿಕೆ ಚೌಧರಿ ಅವರ ಮಗಳು ಸೇರಿದಂತೆ ಕುಟುಂಬಿಕರು ವಿದೇಶದಲ್ಲಿ ನೆಲೆಸಿದ್ದಾರೆ. ಅವರೊಂದಿಗೆ ಸಂಪರ್ಕ ಬೆಳೆಸಲು ಸಾಮಾಜಿಕ ಜಾಲತಾಣದ ಅಗತ್ಯತೆ ಇದೆ. ಈ ಆಧಾರದ ಮೇಲೆ ಅವರು ಮಿಲಿಟರಿ ಗುಪ್ತಚರದ ಹೊಸ ನೀತಿಯನ್ನು ಹಿಂಪಡೆಯಬೇಕೆಂದು ಕೋರಿ ನ್ಯಾಯಲಯದ ಮೊರೆ ಹೋಗಿದ್ದಾರೆ.
ಆದರೆ, ದೆಹಲಿ ನ್ಯಾಯಾಲಯ ಅವರ ಅರ್ಜಿಯನ್ನು ವಜಾಗೊಳಿಸಿದೆ. ಕುಟುಂಬಿಕರೊಂದಿಗೆ ಸಂಪರ್ಕ ಸಾಧಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುವಂತೆ ಕೋರ್ಟ್ ಅರ್ಜಿದಾರರಿಗೆ ಹೇಳಿದೆ. ಅದಲ್ಲದೆ, ಸೇನೆ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಲಯ ನಿರಾಕರಿಸಿದೆ.