ಸರ್ಕಾರಿ ಅಧಿನದಲ್ಲಿ ಕಾರ್ಯಾಚರಿಸುವ ಮಥುರಾ ದಾಸ್ ಮಥುರಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರಿತ ಸ್ವಚ್ಛತಾ ಕಾರ್ಮಿಕೆಯಾಗಿರುವ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಪೂಜಾ ಲಖನ್ ಎಪ್ರಿಲ್ 11 ರಂದು ಮೃತದೇಹವೊಂದನ್ನು ಪ್ಯಾಕ್ ಮಾಡಿ ವಾರ್ಡಿನಿಂದ ಶವಾಗಾರಕ್ಕೆ ಸಾಗಿಸಿದ್ದರು. ತನ್ನ ಸಹೋದ್ಯೋಗಿಗಳು ತಿಳಿಸುವ ತನಕ ಅವರಿಗೆ ಅದು ಕೋವಿಡ್-19 ರೋಗಿಯ ಮೃತದೇಹವಾಗಿತ್ತೆಂದು ಗೊತ್ತಿರಲಿಲ್ಲ.
ಕೋವಿಡ್-19 ರೋಗಿಗಳ ಮೃತದೇಹವನ್ನು ನಿಭಾಯಿಸುವವರು ಮುಂಜಾಗೃತಾ ಕ್ರಮವಾಗಿ ವೈಯಕ್ತಿಕ ರಕ್ಷಣಾ ಸಲಕರಣೆಯನ್ನು (PPE) ಬಳಸಬೇಕೆಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ನಿರ್ದೇಶಿಸಿತ್ತು. ಆದರೆ ಮೃತದೇಹ ಯಾರದ್ದೆಂದು ತಿಳಿಸಿಲ್ಲವಾದ್ದರಿಂದ ಲಖನ್ PPE ಬಳಸದೆ ಮೃತದೇಹವನ್ನು ಕೈಗಾರ ಮಾಡಿದ್ದರು. ಇದರಿಂದ ಆತಂಕಗೊಂಡ ಲಖನ್ ತನ್ನ ಸಹೋದ್ಯೋಗಿಗಳ ಸಲಹೆಯಂತೆ ಮನೆಗೆ ತೆರಳದೆ, ಪರೀಕ್ಷೆಗೊಳಗಾಗಲು ತೀರ್ಮಾನಿಸಿ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ನಡೆದ ಘಟನೆಯನ್ನು ವಿವರಿಸಿದಳು, ಆದರೆ ಯಾರೂ ಆಕೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.
ಅಸಹಾಯಕಳಾದ ಲಖನ್, ಪರೀಕ್ಷೆ ನಡೆಸಲು ಅಥವಾ ಕ್ವಾರಂಟೈನ್ನಲ್ಲಿರಿಸಲು ಕಾದು ಆಸ್ಪತ್ರೆಯ ವರಾಂಡದಲ್ಲಿಯೇ ರಾತ್ರಿಯಿನ್ನಿಡೀ ಕಳೆದಿದ್ದಾರೆ. ಮಾರನೆ ದಿನ ಬೆಳಿಗ್ಗೆ, ಆಸ್ಪತ್ರೆ ಅಧಿಕಾರಿಗಳ ಬೇಜವಾಬ್ದಾರಿ ನಡೆ ಗೊತ್ತಾದ ಆಕೆಯ ಸಹೋದ್ಯೋಗಿಗಳು ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಿಯ ಮಾಧ್ಯಮಗಳಲ್ಲಿ ಇದು ಸುದ್ದಿಯಾದ ಬಳಿಕ ಲಖನ್ರನ್ನು ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ನಲ್ಲಿರಿಸಲಾಯಿತು.
ಈ ಕುರಿತು ಪ್ರತಿಕ್ರಯಿಸಿದ ರಾಷ್ಟ್ರೀಯ ವಂಚಿತ್ ಲೋಕ್ ಮಂಚ್ನ ಮುಖ್ಯಸ್ಥ ʼಸಚಿನ್ ಸರ್ವಾತೆʼ ಜಾತಿ ತಾರತಮ್ಯತೆಯ ಹಿನ್ನಲೆಯನ್ನು ಅರಿಯದೆ ಈ ಘಟನೆಯನ್ನು ನೋಡಲಾಗುವುದಿಲ್ಲ. ಹಿಂದಿನಿಂದಲೂ ಸ್ವಚ್ಛತಾ ಕಾರ್ಮಿಕರನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ, ಮುಖ್ಯವಾಗಿ ದಲಿತ ಕಾರ್ಮಿಕರನ್ನು ಹೇಗೆ ಬೇಕೆಂದು ಹಾಗೆ ನಡೆಸಿಕೊಳ್ಳಲಾಗುತ್ತಿದೆ, ಅವರನ್ನು ಘನತೆಯಿಂದ ಪರಿಗಣಿಸಲಾಗುತ್ತಿಲ್ಲ. ಇಲ್ಲಿ ಜಾತಿ ತಾರತಮ್ಯ ತುಂಬಾ ಆಳವಾಗಿ ಬೇರೂರಿದೆ. ಸಾಂಕ್ರಾಮಿಕ ರೋಗದ ಸಂಧರ್ಭದಲ್ಲಿಯೂ ಸಹ ಅವರ ರಕ್ಷಣೆಗೆ ಒತ್ತು ಕೊಡಲಾಗುತ್ತಿಲ್ಲ ಎಂದಿದ್ದಾರೆ.
ಪರಿಶಿಷ್ಟ ಜಾತಿಯಡಿಯಲ್ಲಿ ಬರುವ ವಾಲ್ಮೀಕಿ ಸಮುದಾಯವು ಶತಮಾನಗಳಿಂದಲೂ ಘನತೆ ಮತ್ತು ಶಿಕ್ಷಣದಿಂದ ವಂಚಿತಗೊಂಡಿದ್ದಾರೆ. ಹಾಗಾಗಿ ಅವರು ನೈರ್ಮಲ್ಯ ಕಾರ್ಮಿಕರಾಗಿ ಕೆಲಸ ನಿರ್ವಹಿಸಬೇಕಾದಂತಹ ಅನಿವಾರ್ಯ ಒತ್ತಡದಲ್ಲಿದೆ.
ಶೌಚಾಲಯ ತೊಳೆಯುವುದು, ಮೃತ ದೇಹವನ್ನು ಪ್ಯಾಕ್ ಮಾಡಿ ಸಾಗಿಸುವುದಕ್ಕಾಗಿ ತಿಂಜಳಿಗೆ ಬರೀ 5,000 ರುಪಾಯಿಗಳನ್ನು ಸಂಬಳವಾಗಿ ಸ್ವೀಕರಿಸುವ ಪೂಜಾ ಲಖನ್ ಕಳೆದ 15 ವರ್ಷಗಳಿಂದ ಸ್ವಚ್ಛತಾ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಲಖನ್ರ ಗಂಡ ಲಿವರ್ ಸೋಂಕಿನಿಂದ ಬಳಲುತ್ತಿರುವುದರಿಂದ ಲಖನ್ರ ಆದಾಯವೇ ಕುಟುಂಬದ ಮುಖ್ಯ ಆಧಾರವಾಗಿದೆ. ವಿದ್ಯಾಭ್ಯಾಸವಿಲ್ಲದರಿಂದ ಅವರಿಗೆ ಹೆಚ್ಚಾಗಿ ಜಾತಿ ಆಧಾರಿತ ಕೆಲಸವಾಗಿರುವ ಸ್ವಚ್ಛತಾ ಕೆಲಸವನ್ನೇ ಆಯ್ದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿತ್ತು. ನಮಗೆ ಈ ಕೆಲಸ ಬಿಟ್ಟರೆ ಬೇರೆ ಯಾವ ಕೆಲಸವೂ ಸಿಗುವುದಿಲ್ಲ ಎಂದು ಪೂಜಾ ಲಖನ್ ನೋವಿನಿಂದ ಹೇಳಿಕೊಂಡಿದ್ದಾರೆ.

ಮೂರು ವಾರಗಳ ಕ್ವಾರಂಟೈನ್ ಬಳಿಕ ಅದೃಷ್ಟವಶಾತ್ ಲಖನ್ರಿಗೆ ಕೋವಿಡ್-19 ನೆಗೆಟೀವ್ ಇರುವುದಾಗಿ ವರದಿ ಬಂದಿದೆ. ಸದ್ಯ ಮನೆಯಲ್ಲಿರುವ ಲಖನ್, ತಾನು ಎದುರಿಸಿರುವ ಅಮಾನವೀಯ ಘಟನೆಯಿಂದ ಬೇಸತ್ತು ಕರೋನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬರುವವರೆಗೂ ತಾನು ಕೆಲಸಕ್ಕೆ ಹೋಗುವುದಿಲ್ಲವೆಂದು ತೀರ್ಮಾನಕ್ಕೆ ಬಂದಿದ್ದಾರೆ. ಈ ಕರಾಳ ಅನುಭವದಿಂದ ಇನ್ನೂ ಹೊರಬರದ ಲಖನ್ ರೋಗಿಯಾಗಿರುವ ತನ್ನ ಗಂಡನ ಸೇವೆಗೆ ತಾನು ಇರಬೇಕಾಗಿದೆ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಆಹಾರಕ್ಕಾಗಿ ಸ್ಥಳೀಯ NGO ಒಂದರನ್ನು ಆಶ್ರಯಿಸಿರುವ ಅವರ ಕುಟುಂಬಕ್ಕೆ ಎಲ್ಲಾ ಸಂಧರ್ಭಗಳಲ್ಲೂ ಆಹಾರ ಲಭಿಸುವುದಿಲ್ಲ. ಆದರೂ ತನ್ನ ನಿಲುವಿನಲ್ಲಿ ಗಟ್ಟಿಯಾಗಿ ನಿಂತಿರುವ ಅವರು ಹಸಿವು ನಮ್ಮನ್ನು ಕೊಲ್ಲದಿದ್ದರೂ ಈ ಮಾರಣಾಂತಿಕ ಖಾಯಿಲೆ ನಮ್ಮನ್ನು ಬಲಿತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಐಸೊಲೇಶನ್ ಕೊಠಡಿಯಿಂದ ಕೋವಿಡ್-19 ರೋಗಿಯ ಮೃತದೇಹವನ್ನು ಪ್ಯಾಕ್ ಮಾಡುವ, ಸಾಗಿಸುವ ಆರೋಗ್ಯ ಕಾರ್ಯಕರ್ತರಿಗೆ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(NCDS) ಹೊರಡಿಸಿದ ಮಾರ್ಗಸೂಚಿ ಪ್ರಕಾರ ಮುಂಜಾಗೃತಾ ಕ್ರಮವಾಗಿ ನೀರು ಒಳಬರದಂತೆ ತಡೆಯುವ ಅಪ್ರಾನ್, ರಕ್ಷಣಾ ಕನ್ನಡಕ, N-95 ಮುಖಗವಚ, ಕೈಗವಸುಗಳನ್ನು ಸೇರಿರುವ PPEಯನ್ನು ಬಳಸಬೇಕು. ಅಲ್ಲದೆ ಮೃತದೇಹವನ್ನು ಕೈಗಾರ ಮಾಡುವ ಸಿಬ್ಬಂದಿಗಳು ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣದಲ್ಲಿ ತರಬೇತಿ ಹೊಂದಿರಬೇಕೆಂದು ಮಾರ್ಗಸೂಚಿ ತಿಳಿಸುತ್ತದೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಮಥುರ ದಾಸ್ ಆಸ್ಪತ್ರೆ ಸಿಬ್ಬಂದಿಗಳಿಗೆ ಅಗತ್ಯವಾಗಿರುವ PPE ಯನ್ನು ನೀಡುವುದಾಗಲಿ ಇದರ ಗಂಭೀರತೆಯನ್ನು ತಿಳಿಸುವುದಾಗಿ ಮಾಡಿಲ್ಲ.
ಆದರೆ ಈ ಆರೋಪಗಳನ್ನೆಲ್ಲಾ ತಳ್ಳಿ ಹಾಕಿದ ಆಸ್ಪತ್ರೆಯ ಅಧಿಕಾರಿಗಳು ಆಕೆಯ ಬಳಿ ಮೃತದೇಹವನ್ನು ಸಾಗಿಸಲು ಯಾರೂ ಹೇಳಿರಲಿಲ್ಲ ಎಂದಿದ್ದಾರೆ. ಆದರೂ ಕೋವಿಡ್-19 ನಂತಹ ಗಂಭೀರ ಪ್ರಕರಣದ ಮೃತದೇಹವನ್ನು ಯಾವುದೇ ಮುಂಜಾಗ್ರತೆಯ ಸಾಮಾಗ್ರಿಯಿಲ್ಲದೆ ಪ್ಯಾಕ್ ಮಾಡಿ, ಸಾಗಿಸುವವರೆಗೆ ಮೇಲಾಧಿಕಾರಿಗಳ ಗಮನಕ್ಕೆ ಬರದೇ ಹೇಗೆ ಉಳಿಯಿತು ಎಂಬುದರ ಬಗ್ಗೆ ಅವರು ಏನೂ ಮಾತನಾಡಿಲ್ಲ. ಒಂದಿಡೀ ರಾತ್ರಿ ಪರೀಕ್ಷೆಗೊಳಪಡಿಸದೆ ವರಾಂಡದಲ್ಲಿ ಕೂರಿಸಿದ ಕುರಿತು ಕೇಳಿದಾಗ ಆಕೆಯನ್ನು ಕ್ವಾರಂಟೈನಲ್ಲಿರಿಸಲು ಉದ್ದೇಶಿಸಿದ ಕೊಠಡಿಯ ಬೀಗದ ಕೀ ಕಳೆದು ಹೋಗಿತ್ತೆಂದು ಬಾಲಿಶವಾದ ಉತ್ತರ ನೀಡಿದ್ದಾರೆ.
ಕೃಪೆ: ʼದಿ ವೈರ್ʼ