ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಪಕ್ಷದ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿ ದಂಡಯಾತ್ರೆ ಹಮ್ಮಿಕೊಂಡಿದ್ದಾರೆ. ದೆಹಲಿ ಯಾತ್ರೆಗೆ ಅವರು ಅಧಿಕೃತವಾಗಿ ತಿಳಿಸಿರುವುದು ‘ಕೇಂದ್ರ ಸಚಿವರ ಭೇಟಿಗಾಗಿ’ ಅಂತಾ. ಇದನ್ನು ಅವರ ಪ್ರವಾಸ ಕಾರ್ಯಕ್ರಮಗಳ ಪಟ್ಟಿಯಲ್ಲಿ ಉಲ್ಲೇಖ ಮಾಡಲಾಗಿದೆ. ಇದಲ್ಲದೆ ಮಾಧ್ಯಮಗಳಿಗೆ ‘ಸಚಿವ ಸಂಪುಟ ಪುನರ್ ರಚನೆಗೆ ಅನುಮತಿ ಪಡೆಯಲು’ ಎಂದು ಹೇಳಿದ್ದಾರೆ. ಎರಡೂ ನೂರಕ್ಕೆ ನೂರರಷ್ಟು ಸತ್ಯವಲ್ಲ. ಯಡಿಯೂರಪ್ಪ ಅವರ ಉದ್ದೇಶವೇ ಬೇರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಗೆ ಬಂದ ಕಾರಣಕ್ಕೆ ಕೇಂದ್ರ ಸಚಿವರನ್ನು ಭೇಟಿಯಾಗಬಹುದು. ರಾಜ್ಯದ ವಿಷಯಗಳ ಬಗ್ಗೆ ಚರ್ಚಿಸಲೂ ಬಹುದು. ಅದೇ ರೀತಿ ಬಿಜೆಪಿ ಹೈಕಮಾಂಡ್ ನಾಯಕರನ್ನು ಭೇಟಿಯಾದಾಗ ಸಚಿವ ಸಂಪುಟ ಪುನರ್ ರಚನೆಗೆ, ಕಡೆಪಕ್ಷ ವಿಸ್ತರಣೆಗೆ ಅವಕಾಶವನ್ನೂ ಕೇಳಬಹುದು. ಆದರೆ ಇವೆರಡು ಅವರು ನಾಮಕಾವಸ್ತೆಗೆ ಮಾಡುವ ಕೆಲಸಗಳಷ್ಟೇ. ‘ಮೀಡಿಯಾ ಕನ್ಸಂಷನ್’ಗೋಸ್ಕರ ನಡೆಸುವ ಕಸರತ್ತುಗಳಷ್ಟೇ. ಅಸಲಿ ವಿಷಯ ಬೇರೆಯದೇ ಇದೆ.
Also Read: ಮರಮಕಲ್ ನೇಮಕ ರದ್ದು: ವಿಜಯೇಂದ್ರ ದಿಗ್ವಿಜಯಕ್ಕೆ ಮತ್ತೊಂದು ಗರಿ!
ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ಬಿಹಾರದಲ್ಲಿ ಎನ್ ಡಿಎ ಸೋಲುತ್ತದೆ ಎಂದು ಹೇಳಿದ್ದವು. ಅಂತಿಮವಾಗಿ ಸಾಕಷ್ಟು ತಿಣುಕಾಡಿ ಬಿಹಾರದಲ್ಲಿ ಅಧಿಕಾರ ಹಿಡಿದಿದೆ. ಸಹಜವಾಗಿ ಬಿಜೆಪಿಯ ನಾಯಕರು ಆ ಖುಷಿಯಲ್ಲಿದ್ದಾರೆ. ಇದೇ ವೇಳೆ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಎರಡಕ್ಕೆ ಎರಡೂ ಕ್ಷೇತ್ರವನ್ನು ತನ್ನದಾಗಿಸಿಕೊಂಡಿದೆ. ಹಿಂದೆಂದೂ ಬಿಜೆಪಿ ಗೆಲ್ಲದೇ ಇದ್ದಂತಹ ಶಿರಾ ವಿಧಾನಸಭಾ ಕ್ಷೇತ್ರದಲ್ಲೂ ಗೆಲುವು ದಾಖಲಿಸಿದೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಬಂದಿದ್ದ ಮುನಿರತ್ನ ನಾಯ್ಡು ಸ್ವಸಾಮರ್ಥ್ಯದಿಂದ ಗೆದ್ದಿದ್ದರೂ ಶಿರಾ ಕ್ಷೇತ್ರದ ಗೆಲುವಿಗೆ ತಮ್ಮ ಪುತ್ರ ಬಿ.ವೈ. ವಿಜಯೇಂದ್ರನ ತಂತ್ರಗಾರಿಕೆಯೇ ಕಾರಣ. ಹಿಂದೆ ಕೂಡ ಎಂದೂ ಗೆದ್ದಿಲ್ಲದ ಕೆ.ಆರ್. ಪೇಟೆಯಲ್ಲಿ ವಿಜಯೇಂದ್ರ ತಂತ್ರಗಾರಿಕೆಯಿಂದ ಗೆಲುವು ಸಿಕ್ಕಿತ್ತು. ವಿಜಯೇಂದ್ರ ಮುಟ್ಟಿದ್ದೆಲ್ಲವೂ ಚಿನ್ನವಾಗುತ್ತಿದೆ ಎಂಬುದನ್ನು ಹೈಕಮಾಂಡ್ ನಾಯಕರಿಗೆ ಮನವರಿಕೆ ಮಾಡಿಕೊಡುವುದು ಯಡಿಯೂರಪ್ಪ ಅವರ ಪ್ರಮುಖ ಉದ್ದೇಶ.
Also Read: ವಿಜಯೇಂದ್ರರನ್ನು ಅನಗತ್ಯ ವೈಭವೀಕರಿಸಲಾಗುತ್ತಿದೆ- ಅಸಮಾಧಾನ ಹೊರ ಹಾಕಿದ ಈಶ್ವರಪ್ಪ
ಈ ಮೂಲಕ ವಿಜಯೇಂದ್ರ ವಿರುದ್ಧ ಹೈಕಮಾಂಡಿಗೆ ಸಲ್ಲಿಕೆಯಾಗಿರುವ ದೂರಿನಲ್ಲಿ ಅಸಲಿಯತ್ತಿಲ್ಲ ಎಂದು ಸಾಬೀತುಪಡಿಸುವುದು ಯಡಿಯೂರಪ್ಪ ಅವರ ಲೆಕ್ಕಾಚಾರ. ಸರ್ಕಾರದಲ್ಲಿ ವಿಜಯೇಂದ್ರನ ಹಸ್ತಕ್ಷೇಪ ಹೆಚ್ಚಾಗಿದೆ ಎಂಬ ದೂರುಗಳು ಕೇಳಿಬರುತ್ತಿರುವುದರಿಂದ ಅವೆಲ್ಲವೂ ಸುಳ್ಳು, ಸರ್ಕಾರದಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಸಚಿವರು, ನಾಯಕರು ಮತ್ತು ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಇಲ್ಲ. ವಿಜಯೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿರುವುದಕ್ಕೆ ಶಿರಾ ಫಲಿತಾಂಶವೇ ಉದಾಹರಣೆ ಎಂದು ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಿದ್ದಾರೆ ಎನ್ನಲಾಗಿದೆ.
ಕುರ್ಚಿ ಉಳಿಸಿಕೊಳ್ಳುವ ಕಸರತ್ತು
ಯಾರಿಗೆ ಮಂತ್ರಿ ಸ್ಥಾನ ಸಿಗುತ್ತೋ ಬಿಡುತ್ತೋ… ಯಡಿಯೂರಪ್ಪ ಮೊದಲಿಗೆ ತಮ್ಮ ಕುರ್ಚಿಯನ್ನು ಉಳಿಸಿಕೊಂಡರೆ ಸಾಕು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ. ಈಗ ಉಪ ಚುನಾವಣೆ ಮೂಲಕ ಬೀಸುವ ದೊಣ್ಣೆಯಿಂದ ಪಾರಾಗಿದ್ದರು. ಮುಂದೆ ಬಸವಕಲ್ಯಾಣ, ಮಸ್ಕಿ ವಿಧಾನಸಭೆ ಮತ್ತು ಬೆಳಗಾವಿ ಲೋಕಸಭೆ ಉಪಚುನಾವಣೆ ಹಾಗೂ ಗ್ರಾಮ ಪಂಚಾಯತಿ ಚುನಾವಣೆಗಳನ್ನು ಎದುರು ನೋಡುತ್ತಿದ್ದಾರೆ. ಅಲ್ಲಿಯವರೆಗೆ ಕಾಲ ತಳ್ಳಬೇಕು. ಸಚಿವಾಕಾಂಕ್ಷಿಗಳ ಮೂಗಿಗೆ ತುಪ್ಪ ಸವರಬೇಕು. ಅದನ್ನು ಅವರು ಮಾಡುತ್ತಿದ್ದಾರೆ. ಇನ್ನೊಂದೆಡೆ ಸರ್ಕಾರದಲ್ಲಿ ವಿಜಯೇಂದ್ರನ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರ ದಿನೇ ದಿನೇ ಹೆಚ್ಚಾಗುತ್ತಿದೆ ಎನ್ನುವ ಕಾರಣದಿಂದಲೇ ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ.
Also Read: ಭವಿಷ್ಯದಲ್ಲಿ ಕೆ.ಆರ್.ಪೇಟೆ ಮೇಲೆ ಕಣ್ಣಿಟ್ಟೇ ಬಿಜೆಪಿ ಗೆಲ್ಲಿಸಿದ ವಿಜಯೇಂದ್ರ
ತಮ್ಮ ಕುರ್ಚಿ ಅಲುಗಾಡುತ್ತಿದೆ ಎಂಬ ಅರಿವಿರುವುದರಿಂದಲೇ ಪ್ರವಾಹ ಪರಿಹಾರಕ್ಕೆ ಕೊಡಲು ಹಣ ಇಲ್ಲದಿದ್ದರೂ ಅವಸವಸರವಾಗಿ ಮಠಗಳಿಗೆ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದ್ದಾರೆ. ಲಿಂಗಾಯತ ಕಾರ್ಡ್ ಬಳಸಲು ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮವನ್ನೂ ಸ್ಥಾಪಿಸಿದ್ದಾರೆ. ಇವು ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳಾದರೆ ಲಿಂಗಾಯತರು ಮತ್ತು ವಿವಿಧ ಜಾತಿಯ ಸ್ವಾಮೀಜಿಗಳು ದನಿ ಎತ್ತಲಿ ಎಂದು ಮಾಡಿರುವ ಕಸರತ್ತುಗಳು. ರಾಜ್ಯದಲ್ಲಿ ಈ ರೀತಿಯ ಭೂಮಿಕೆ ಸಿದ್ದಪಡಿಸಿರುವ ಯಡಿಯೂರಪ್ಪ ಈಗ ಹೈಕಮಾಂಡ್ ನಾಯಕರ ಮನಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.
Also Read: ಹಳೇ ಮೈಸೂರು ಭಾಗದ ಹಿಡಿತಕ್ಕೆ BY ವಿಜಯೇಂದ್ರ ತಯಾರಿ..!
ಮೊದಲಿಗೆ ಬಿಹಾರ ಗೆಲುವಿನ ಖುಷಿಯಲ್ಲಿರುವ ಹೈಕಮಾಂಡ್ ನಾಯಕರಲ್ಲಿ ವಿಜಯೇಂದ್ರನ ಬಗ್ಗೆ ಸದಾಭಿಪ್ರಾಯ ಬರುವಂತೆ ಮಾಡಬೇಕು. ಇದರಿಂದ ವಿಜಯೇಂದ್ರಗೆ ಸದ್ಯಕ್ಕೆ ಮತ್ತು ಭವಿಷ್ಯಕ್ಕೆ ಒಳ್ಳೆಯದಾಗುತ್ತೆ. ಅದಕ್ಕಿಂತ ಹೆಚ್ಚಾಗಿ ‘ವಿಜಯೇಂದ್ರ ಹಸ್ತಕ್ಷೇಪ ಮತ್ತು ಭ್ರಷ್ಟಾಚಾರ ಹೆಚ್ಚಾಯಿತು’ ಎಂಬ ಕಾರಣದಿಂದ ತಮ್ಮ ಕುರ್ಚಿಗೆ ಬಂದಿರುವ ಸಂಚಕಾರವನ್ನು ತಪ್ಪಿಸಿಕೊಳ್ಳಬೇಕೆಂದು ದೆಹಲಿ ದಂಡಯಾತ್ರೆ ಹಮ್ಮಿಕೊಂಡಿದ್ದಾರೆ. ಇದಕ್ಕೆ ಮುಖ್ಯವಾಗಿ ಸಂಪುಟ ಪುನರ್ ರಚನೆಯ ಕಾರಣಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ಎರಡನೇ ಆದ್ಯತೆಯಾಗಿರುವ ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆ ಆಗಬಹುದು ಅಥವಾ ಆಗದಿರಬಹುದು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಹೈಕಮಾಂಡ್ ನಾಯಕರನ್ನು ತಮ್ಮ ಕುರ್ಚಿ ಮತ್ತು ಪುತ್ರನ ಪಾತ್ರದ ಬಗ್ಗೆ ಮನವರಿಕೆ ಮಾಡಿಕೊಡುವರೇ ಎಂಬುದೇ ನಿಜವಾದ ಕುತೂಹಲ.
Also Read: ಬಿಜೆಪಿ ಗೆಲುವು: ವಿಜಯೇಂದ್ರರನ್ನು ಹೊತ್ತು ಸಂಭ್ರಮಾಚರಿಸಿದ ಕಾರ್ಯಕರ್ತರು











