ಉತ್ತರ ಪ್ರದೇಶದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆಯ ಎನ್ಕೌಂಟರ್ ಅನ್ನು ಅಸಲಿಯೆಂದು ವಾದಿಸಿ ಸುಪ್ರಿಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಇಷ್ಟು ದಿನ ಮಾಧ್ಯಮಗಳ ಎದುರು ಹೇಳಿದ ವಿಚಾರಗಳನ್ನೇ ಉತ್ತರ ಪ್ರದೇಶ ಡಿಜಿಪಿ ಹೆಚ್ ಸಿ ಅವಸ್ಥಿ ಅವರು ಅಫಿಡವಿಟ್ ಮೂಲಕ ಸುಪ್ರಿಂ ಕೋರ್ಟ್ಗೆ ನೀಡಿದ್ದಾರೆ. ಈ ಹಂತದಲ್ಲಿ ಅಫಿಡವಿಟ್ ಅನ್ನು ಸ್ವೀಕರಿಸುವುದು ಅಥವಾ ನಿರಾಕರಿಸುವುದು ಸುಪ್ರಿಂ ಕೋರ್ಟ್ನ ವಿವೇಚನೆಗೆ ಸಂಬಂಧಿಸಿದ ವಿಚಾರವಾಗಿದೆ.
ಒಂದು ವೇಳೆ ಈ ಅಫಿಡವಿಟ್ ಅನ್ನು ಸುಪ್ರಿಂ ಒಪ್ಪದಿದ್ದಲ್ಲಿ ಸುಳ್ಳು ಹೇಳಿದ ಆರೋಪದ ಮೇಲೆ ಡಿಜಿಪಿ ಅವರು ಜೈಲು ವಾಸ ಅನುಭವಿಸಬೇಕಾದಿತು. ಒಂದು ವೇಳೆ ಪೊಲೀಸರ ಕಟ್ಟು ಕತೆಗಳನ್ನು ಸುಪ್ರಿಂಕೋರ್ಟ್ ಒಪ್ಪಿಕೊಂಡಲ್ಲಿ ಭಾರತೀಯ ನ್ಯಾಯಾಂಗ ವ್ಯವಸ್ಥೆಯ ಮೇಲೆಯೇ ಸಂಶಯ ಹುಟ್ಟುವಂತಹ ಸಂದರ್ಭ ಎದುರಾದೀತು. ಇಂತಹ ಒಂದು ಧರ್ಮ ಸಂಕಟಕ್ಕೆ ಇದೀಗ ಸುಪ್ರಿಂಕೋರ್ಟ್ ಸಿಲುಕಿದೆ.

ವಿಕಾಸ್ ದುಬೆ ಎನ್ಕೌಂಟರ್ ನಕಲಿ ಎಂದು ಆರೋಪಿಸಿ ಸುಪ್ರಿಂಕೋರ್ಟ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ನೀಡಿರುವ ಅಫಿಡವಿಟ್ ತಾರ್ಕಿಕವಾಗಿ ಸಾಕಷ್ಟು ಚರ್ಚೆಗೆ ಒಳಪಟ್ಟಿದೆ. ಕೆಲವೊಂದು ವಿಚಾರಗಳು ಅನುಮಾನಕ್ಕೆ ಎಡೆಮಾಡಿಕೊಡುತ್ತಿವೆ. ನಿಜಕ್ಕೂ ಹೀಗೆ ನಡೆಯಿತೇ ಇಲ್ಲ ಈ ರೀತಿಯ ಘಟನೆಗಳು ನಡೆಯುವಂತಹ ಸನ್ನಿವೇಷಗಳನ್ನು ಸೃಷ್ಟಿಸಲಾಯಿತೇ ಎಂಬ ಪ್ರಶ್ನೆಗಳು ಎದುರಾಗಿವೆ.
ಅಫಿಡವಿಟ್ನಲ್ಲಿ ಹೈದರಾಬಾದ್ ಎನ್ಕೌಂಟರ್ ಉಲ್ಲೇಖ:
ಹೈದರಾಬಾದ್ನಲ್ಲಿ ಕಳೆದ ವರ್ಷ ಡಿಸೆಂಬರ್ನಲ್ಲಿ ನಡೆದಂತಹ ಪ್ರಿಯಾಂಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಹೈದರಾಬಾದ್ ಎನ್ಕೌಂಟರ್ಗೂ ಈ ಎನ್ಕೌಂಟರ್ಗೂ ಸಾಕಷ್ಟು ವ್ಯತ್ಯಾಸವಿದೆ, ಹಾಗಾಗಿ ಎರಡನ್ನೂ ಒಂದೇ ದೃಷ್ಟಿಯಿಂದ ನೋಡಬಾರದೆಂದು ಕೋರಿಕೊಂಡಿದ್ದಾರೆ.

ವಾಂಟೆಡ್ ಕ್ರಿಮಿನಲ್ vs ಪರೋಲ್ ಗೊಂದಲ
ಅಫಿಡವಿಟ್ನಲ್ಲಿ ವಿಕಾಸ್ ದುಬೆ ವಾಂಟೆಡ್ ಕ್ರಿಮಿನಲೋ ಅಥವಾ ಪರೋಲ್ನಲ್ಲಿ ಇದ್ದಂತಹ ಖೈದಿಯೋ ಎಂಬುದರ ಕುರಿತು ಗೊಂದಲಮಯ ಮಾಹಿತಿಯನ್ನು ನೀಡಲಾಗಿದೆ. ಒಂದೆಡೆ 64 ಕೇಸುಗಳಲ್ಲಿ ಆರೋಪಿಯಾಗಿದ್ದ ವಿಕಾಸ್ ದುಬೆಗೆ ಒಂದು ಕೇಸಿನಲ್ಲಿ ಜೀವಾವಧಿ ಶಿಕ್ಷೆಯಾಗಿತ್ತು. ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಪರೋಲ್ನಲ್ಲಿ ದುಬೆ ಹೊರಬಂದಿದ್ದ ಎಂದು ಹೇಳಲಾಗಿದೆ.
ಅದೇ ಅಫಿಡವಿಟ್ನಲ್ಲಿ ಇನ್ನೊಂದೆಡೆ ಕಾನ್ಪುರದ 25 ಮೋಸ್ಟ್ ವಾಂಟೆಡ್ ಕ್ರಿಮಿನಲ್ಗಳ ಪಟ್ಟಿಯಲ್ಲಿ ವಿಕಾಸ್ ದುಬೆ ಕೂಡಾ ಓರ್ವ. ಅವನ ಮೇಲೆ ಹಿಸ್ಟರಿ ಶೀಟ್ ಇದ್ದುದರಿಂದ, ಅವನನ್ನು ನಾವು ನಿರಂತರವಾಗಿ ಗಮನಿಸುತ್ತಾ ಇದ್ದೆವು ಎಂದು ಹೇಳಿದ್ದಾರೆ.
Also Read: ವಿಕಾಸ್ ದುಭೆ ಬಂಧನದ ಸುತ್ತ ಅನುಮಾನಗಳೇಕೆ?
ಒಂದು ವೇಳೆ ಪರೋಲ್ ಮೇಲೆ ಬಿಡುಗಡೆಗೊಂಡಿದ್ದರೆ, ಅವರ ಪರೋಲ್ ಅವಧಿ ಎಲ್ಲಿಂದ ಎಲ್ಲಿಯವರೆಗಿತ್ತು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಅಫಿಡವಿಟ್ನಲ್ಲಿ ನೀಡಲಿಲ್ಲ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ, ಒಂದು ವೇಳೆ ವಿಕಾಸ್ ದುಬೆಯನ್ನು ನಿರಂತರವಾಗಿ ಗಮನಿಸುತ್ತಾ ಇದ್ದರಾದಲ್ಲಿ ಅವನ ಕುರಿತಾದ ಎಲ್ಲಾ ಮಾಹಿತಿಗಳು ಪೊಲೀಸರಿಗೆ ಸ್ಪಷ್ಟವಾಗಿ ಲಭ್ಯವಿರಬೇಕಾಗಿತ್ತು.
ಇನ್ನು ಹಿಸ್ಟರಿ ಶೀಟರ್ ವಿಕಾಸ್ ದುಬೆಯ ಮೇಲೆ 5 ಲಕ್ಷ ಬಹುಮಾನದ ಮೊತ್ತವನ್ನೂ ಘೋಷಿಸಲಾಗಿತ್ತು ಎಂದು ಹೇಳಲಾಗಿದೆ. ಪೊಲೀಸರು ನಿರಂತರವಾಗಿ ಗಮನಿಸುತ್ತಾ ಇದ್ದಿದ್ದರೆ 5 ಲಕ್ಷ ರೂ.ಗಳ ಬಹುಮಾನವನ್ನು ನೀಡುವ ಅಗತ್ಯವೇನಿತ್ತು?
Also Read: ವಿಕಾಸ್ ದುಬೆ ಎನ್ಕೌಂಟರ್ ನಕಲಿಯಲ್ಲ: ಸುಪ್ರೀಂಗೆ ವರದಿ ಸಲ್ಲಿಸಿದ ಯುಪಿ ಪೋಲಿಸ್
ವಿಕಾಸ್ ದುಬೆ ಮನೆ ಕೆಡವಿದ್ದು ಏಕೆ?
ವಿಕಾಸ್ ದುಬೆಯ ಮನೆಯನ್ನು ಕೆಡವಿದ್ದರ ಕುರಿತಾಗಿಯೂ ವಿವರಣೆ ನೀಡಿರುವ ಡಿಐಜಿ, ಮನೆಯ ಗೋಡೆ ಹಾಗೂ ಮಹಡಿಗಳಲ್ಲಿ ಸಾಕಷ್ಟು ಆಯುಧಗಳನ್ನು ಇಡಲಾಗಿತ್ತು. ಗೋಡೆಗಳನ್ನು ಕೊರೆದು ಅಲ್ಲಿ ಆಯುಧ ಹಾಗೂ ಗುಂಡುಗಳನ್ನು ದಾಸ್ತಾನಿಡಲಾಗಿತ್ತು. ಹಾಗಾಗಿ ಗೋಡೆಗಳು ಶಿಥಿಲಗೊಂಡಿದ್ದವು. ಪೊಲೀಸರು ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲು ಗೋಎಡಗಳನ್ನು ಅಗೆದಾಗ ಶಿಥಿಲಗೊಂಡ ಭಾಗ ಕುಸಿಯಲು ಆರಂಭಿಸಿತು. ಹೀಗಾಗಿ ಜೆಸಿಬಿ ಸಹಾಯದಿಂದ ಮನೆಯನ್ನು ಕೆಡವಲಾಯಿತು. ವಶಕ್ಕೆ ಪಡೆದುಕೊಂಡ ಆಯುಧಗಳಲ್ಲಿ AK-47, ಸುಧಾರಿತ ಬಾಂಬುಗಳಿದ್ದವು ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ.
ಆದರೆ, ಮನೆ ಕೆಡವಿದ ದಿನದಂದು ಅಲ್ಲಿ ರಾಷ್ಟ್ರೀಯ ಮಟ್ಟದ ಸಾಕಷ್ಟು ಮಾಧ್ಯಮ ಪ್ರತಿನಿಧಿಗಳು ಹಾಜರಿದ್ದು ಆಯುಧಗಳನ್ನು ವಶಕ್ಕೆ ಪಡೆದ ಕುರಿತು ಯಾರಿಗೂ ಮಾಹಿತಿ ಇರಲಿಲ್ಲ. ಇದಕ್ಕೂ ಮಿಗಿಲಾಗಿ ಆಯುಧಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಮಾಹಿತಿಯನ್ನು ಪೊಲೀಸರೂ ನೀಡಲಿಲ್ಲ.
Also Read: ವಿಕಾಸ್ ದುಬೆ ಎನ್ಕೌಂಟರ್: ಚರ್ಚೆಗೆ ಗ್ರಾಸವಾದ ಯೋಗಿ ರಾಮರಾಜ್ಯದ ವರಸೆ
ಎನ್ಕೌಂಟರ್ ನಡೆದ ಘಟನಾವಳಿಗಳಲ್ಲಿನ ಗೊಂದಲ
ವಿಕಾಸ್ ದುಬೆ ಕುಳಿತಿದ್ದ ವಾಹನ ಪಲ್ಟಿಯಾಗಿ ಬಿದ್ದಿದ್ದರಿಂದ ನಾಲ್ವರು ಪೊಲೀಸರು ಗಾಯಗೊಂಡಿದ್ದರು. ಈ ಸಂದರ್ಭದಲ್ಲಿ ಗಾಯಾಳು ಪೊಲೀಸರೊಬ್ಬರ ಪಿಸ್ತೂಲ್ಅನ್ನು ಕಸಿದು ದುಬೆ ಪರಾರಿಯಾಗಲು ಯತ್ನಿಸಿದರು. ಅವರ ಹಿಂದೆ ಇದ್ದಂತಹ ಬೆಂಗಾವಲು ವಾಹನದವರು ಧಾವಿಸಿ ಬಂದಾಗ ವಿಕಾಸ್ ದುಬೆ ಪರಾರಿಯಾಗಿದ್ದು ತಿಳಿಯಿತು.
ಅವನನ್ನು ಅಟ್ಟಿಸಿಕೊಂಡು ಹೋದಾಗ ತನ್ನಲ್ಲಿದ್ದ ಪಿಸ್ತೂಲ್ನಿಂದ ವಿಶೇಷ ತನಿಖಾ ದಳದವರ ಮೇಲೆ ಗುಂಡಿನ ದಾಳಿ ನಡೆಸಿದ್ದ. ಆತ್ಮರಕ್ಷಣೆಗಾಗಿ ಅವನತ್ತ ಆರು ಸುತ್ತು ಗುಂಡು ಹಾರಿಸಲಾಯಿತು. ಅದರಲ್ಲಿ ಮೂರು ಗುಂಡುಗಳು ಅವನ ದೇಹವನ್ನು ಹೊಕ್ಕವು. ಇದರಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ವಿಕಾಸ್ ದುಬೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಅವನು ಸತ್ತಿದ್ದಾನೆಂದು ವೈದ್ಯರು ಘೋಷಿಸಿದರು, ಎಂದು ಡಿಜಿಪಿ ಅಫಿಡವಿಟ್ನಲ್ಲಿ ಹೇಳಿದ್ದಾರೆ.
Also Read: ರೌಡಿ ವಿಕಾಸ್ ದುಬೆ ಎನ್ಕೌಂಟರ್ ಅಸಲಿಯೆಂದು ನಿರೂಪಿಸಲು ಪೊಲೀಸರ ಹರಸಾಹಸ
ವಾಹನ ಪಲ್ಟಿಯಾಗಲು ನೀಡಿದ ಕಾರಣವೇನೆಂದರೆ, ಜೋರಾಗಿ ಮಳೆ ಸುರಿಯುತ್ತಿದ್ದರಿಂದ ರಸ್ತೆ ಮಂಜಾಗಿ ಕಾಣಿಸುತ್ತಿತ್ತು. ಬೆಳಿಗ್ಗೆ ಹತ್ತು ಗಂಟೆಗೂ ಮುಂಚಿತವಾಗಿ ಮ್ಯಾಜಿಸ್ಟ್ರೇಟ್ ಮುಂದೆ ದುಬೆಯನ್ನು ತಲುಪಿಸಬೇಕಿತ್ತು. ಹಾಗಾಗಿ ವೇಗವಾಗಿ ವಾಹನ ಚಲಾಯಿಸುವ ಅಗತ್ಯವಿತ್ತು. ವಾಹನ ವೇಗವಾಗಿದ್ದರಿಂದ ಹಾಗೂ ಮಳೆಯಿಂದ ಸರಿಯಾಗಿ ರಸ್ತೆಯೂ ಕಾಣುತ್ತಿರಲಿಲ್ಲವಾದ್ದರಿಂದ ಮುಂದೆ ಇದ್ದಂತಹ ದನಗಳ ಹಿಂಡು ಚಾಲಕನಿಗೆ ಕಾಣಿಸಲಿಲ್ಲ. ಕೊಣೆಯ ಕ್ಷಣದಲ್ಲಿ ದನಗಳ ಹಿಂಡು ಕಂಡು ಬಂದಾಗ ವಾಹನವನ್ನು ಹಠಾತ್ತಾಗಿ ಎಡಕ್ಕೆ ತಿರುವಿದರು. ಆ ಸಂದರ್ಭದಲ್ಲಿ ಡಿವೈಡರ್ಗೆ ಡಿಕ್ಕಿಯಾಗಿ ವಾಹನ ಪಲ್ಟಿಯಾಯಿತು ಎಂದು ಹೇಳಲಾಗಿದೆ.
ಇಲ್ಲಿರುವ ಗೊಂದಲವೇನೆಂದರೆ, ಮಳೆ ಬಿದ್ದಿದ್ದರಿಂದ ಮಣ್ಣು ಒದ್ದೆಯಾಗಿದ್ದರೂ, ದನಗಳ ಹಿಂಡು ಅಲ್ಲಿ ನಡೆದುಕೊಂಡು ಹೋದ ಯಾವುದೇ ಕುರುಹುಳು ಪತ್ತೆಯಾಗಿಲ್ಲ. ಒದ್ದೆ ನೆಲದ ಮೇಲೆ ದನಗಳ ಗೊರಸಿನ ಗುರುತುಗಳೂ ಇಲ್ಲ. ಇನ್ನು ಸಾಮಾನ್ಯವಾಗಿ ಭಾರತದಲ್ಲಿ ರಸ್ತೆಯ ಎಡಗಡೆಗೆ ಯಾವುದೇ ಡಿವೈಡರ್ ಇರುವುದಿಲ್ಲ. ಆದರೆ, ಅಪಘಾತ ನಡೆದ ಸ್ಥಳದಲ್ಲಿ ಇದ್ದಿದ್ದು ಸುಮಾರು ಒಂದು ಅಡಿಯಷ್ಟು ಎತ್ತರವಿದ್ದ ಕಾಂಕ್ರಿಟ್ ಲೈನ್ ಹಾಗೂ ಅವುಗಳ ಮೇಲೆ ಅಳವಡಿಸಲಾಗಿದ್ದ ತಂತಿ ಹಾಗೂ ಕಂಬಿಗಳು. ಇದನ್ನೇ ಡಿವೈಡರ್ ಎಂದು ಅಂದುಕೊಳ್ಳೋಣ ಬಿಡಿ. ಆದರೆ, ಪೊಲೀಸರೇ ಹೇಳುವಂತೆ ಅತಿಯಾದ ವೇಗದಲ್ಲಿ ಕಾಂಕ್ರಿಟ್ನ ಮೇಲೆ ಕಾರು ಹತ್ತಿದ್ದರೆ ಸ್ವಲ್ಪವಾದರೂ ಕುರುಹುಗಳು ಇರುತ್ತಿತ್ತಲ್ಲವೇ?

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಇದಾವುದೂ ಅಲ್ಲಿ ದೊರಕಲಿಲ್ಲ. ಮೊತ್ತ ಮೊದಲು ಅಲ್ಲಿ ದನಗಳ ಹಿಂಡು ಇತ್ತು ಎಂಬುದಕ್ಕೂ ಯಾವುದೇ ಕುರುಹುಗಳಿಲ್ಲ. ಇನ್ನೂ ಅಚ್ಚರಿಯ ವಿಚಾರವೇನೆಂದರೆ, ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು ಬಿದ್ದ ಸ್ಥಳದಲ್ಲಿ ವಿಕಾಸ್ ದುಬೆಗೆ ಓಡಿ ಹೋಗಲು ತೊಂದರೆಯಾಗುವಂತಹ ಯಾವುದೇ ಅಡೆತಡೆಗಳಿರಲಿಲ್ಲ. ಕನಿಷ್ಟ ಪಕ್ಷ ಒಂದು ಅಡಿ ಎತ್ತರದ ಕಾಂಕ್ರೀಟ್ ಲೈನ್ ಕೂಡಾ ಇರಲಿಲ್ಲ. ಹಾಗಾಗಿ, ಅನಾಯಸವಾಗಿ ʼಇಬ್ಬರು ಪೊಲೀಸ್ ಅಧಿಕಾರಿಗಳ ನಡುವೆʼ ಕೂತಿದ್ದಂತಹ ವಿಕಾಸ್ ದುಬೆ ಪಲ್ಟಿಯಾಗಿರುವ ವಾಹನದಿಂದ ಏನೂ ತೊಂದರೆಯಾಗದಂತೆ ಓಡಿ ಹೋಗಿದ್ದಾರೆ.
Also Read: ರಾಜಕಾರಣಿಗಳನ್ನು ರಕ್ಷಿಸಲು ನಡೆಯಿತೆ ನಕಲಿ ಎನ್ಕೌಂಟರ್? ನೆಟ್ಟಿಗರ ಪ್ರಶ್ನೆ
ಇನ್ನು ವಿಕಾಸ್ ದುಬೆ ಕುಳಿತಿದ್ದಂತಹ ವಾಹನದ ಕುರಿತು ಸಾಕಷ್ಟು ಅನುಮಾನಗಳು ಮೊದಲೇ ಎದ್ದಿದ್ದವು. ಅವನನ್ನು ಕರೆದುಕೊಂಡು ಬಂದ ವಾಹನ ಟಾಟಾ ಸಫಾರಿ ಆದರೆ, ಅಪಘಾತವಾದ ವಾಹನ ಮಹೀಂದ್ರಾ TUV 300. ಈ ಕುರಿತು ಅಫಿಡವಿಟ್ನಲ್ಲಿ ವಿವರಣೆ ನೀಡಿರುವ ಡಿಜಿಪಿ, ಸುರಕ್ಷತೆಯ ದೃಷ್ಟಿಯಿಂದ ಮಾರ್ಗ ಮಧ್ಯದಲ್ಲಿ ವಿಕಾಸ್ ದುಬೆಯನ್ನು ಮಹೀಂದ್ರಾ ಕಾರ್ಗೆ ಬದಲಾಯಿಸಲಾಯಿತು. ಇದರಿಂದಾಗಿ ಹೆಚ್ಚಿನ ಎಚ್ಚರಿಕೆಯಿಂದಿರಲು ಸಾಧ್ಯ ಎಂದು ಹೇಳಿದ್ದಾರೆ. ಅಷ್ಟು ಎಚ್ಚರಿಕೆಯಿಂದ ಇದ್ದಂತಹ ಬೆಂಗಾವಲು ಪಡೆಯ ವಾಹನಗಳು ತಡವಾಗಿ ಏಕೆ ಅಪಘಾತ ನಡೆದ ಸ್ಥಳಕ್ಕೆ ತಲುಪಿದವು? ಎನ್ನುವ ಕುರಿತು ಮತ್ರ ಯಾವುದೇ ವಿವರಣೆ ಲಭ್ಯವಾಗಿಲ್ಲ. ಅಂತಹ ಕುಖ್ಯಾತ ರೌಡಿಯನ್ನು ಕರೆದುಕೊಂಡು ಹೋಗುತ್ತಿದ್ದ ವಾಹವನ್ನು ಏಕಾಂಗಿಯಾಗಿ ಹೋಗಲು ಬಿಟ್ಟಿದ್ದಾದರೂ ಏಕೆ? ಎಂಬ ಪ್ರಶ್ನೆಗೆ ಇನ್ನೂ ವಿವರಣೆ ದೊರಕಿಲ್ಲ.

ಪೊಲೀಸರೇ ಹೇಳುವಂತೆ ಅಪಘಾತವಾದ ನಂತರ ಎಲ್ಲಾ ನಾಲ್ಕು ಪೊಲೀಸ್ ಅಧಿಕಾರಿಗಳು ಪ್ರಜ್ಞೆ ಕಳೆದುಕೊಂಡರು. ಆ ಸಂದರ್ಭದಲ್ಲಿ ಇನ್ಸ್ಪೆಕ್ಟರ್ರವರ ಪಿಸ್ತೂಲ್ ಅನ್ನು ಕಸಿದುಕೊಂಡು ವಿಕಾಸ್ ದುಬೆ ಪರಾರಿಯಾದ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಕಾರಿನ ಮಧ್ಯದ ಸೀಟಿನಲ್ಲಿ, ಇಬ್ಬರ ಪೊಲೀಸರ ಮಧ್ಯದಲ್ಲಿ ಕುಳಿತಿದ್ದಂತಹ ವಿಕಾಸ್ ದುಬೆ ಪರಾರಿಯಾಗಬೇಕೆಂದರೆ ತನ್ನ ಮೇಲೆ ಬಿದ್ದಿರುವಂತಹ ಪೊಲೀಸ್ ಅಧಿಕಾರಿಯನ್ನು ಬದಿಗೆ ಎಳೆದು ನಂತರ ಅವರ ಪಿಸ್ತೂಲ್ ಕಸಿದು ಪರಾರಿಯಾಗಬೇಕು. ಅಷ್ಟರಲ್ಲಿ ಬೆಂಗಾವಲು ವಾಹನಗಳು ಅಲ್ಲಿಗೆ ತಲುಪಿರಬೇಕಿತ್ತು. ಏಕೆಂದರೆ, ಇಷ್ಟೆಲ್ಲಾ ಕಷ್ಟಪಟ್ಟು ಹೊರಬರಬೇಕೆಂದರೆ ಕನಿಷ್ಟ ಪಕ್ಷ ಹತ್ತು ನಿಮಿಷಗಳಾದರೂ ಬೇಕು. ಅಷ್ಟು ಹೊತ್ತಾದರೂ ಬೆಂಗಾವಲು ಪಡೆಯ ವಾಹನಗಳು ಅಲ್ಲಿ ತಲುಪಿಲ್ಲ ಏಕೆ?
Also Read: ಉತ್ತರ ಪ್ರದೇಶ ಗುಂಡಿನ ದಾಳಿ; ಎಂಟು ಪೋಲಿಸರು ಹತ
ಇನ್ನು ಬೆಂಗಾವಲು ಪಡೆಯ ವಾಹನಗಳು ಹೆಚ್ಚೆಂದರೆ ನೂರೂ ಮೀಟರ್ ಅಂತರದಲ್ಲಿದ್ದವು. ಆದರೂ, ಅಪಘಾತವಾಗಿ ವಿಕಾಸ್ ದುಬೆ ಪರಾರಿಯಾಗಿದ್ದನ್ನು ಬೆಂಗಾವಲು ಪಡೆಯ ವಾಹನಗಳು ನೋಡಿರಲಿಲ್ಲ ಎಂದರೆ ಆಶ್ಚರ್ಯವಲ್ಲವೇ? ಅವರಿಗೆ ವಿಕಾಸ್ ದುಬೆ ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾನೆಂದು ಹೇಳಿದ್ದು ಅಪಘಾತವಾದ ವಾಹನದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು. ಅದೇ ಪೊಲೀಸ್ಸಿಬ್ಬಂದಿಗಳು ಅಪಘಾತವಾದಾಗ ಪ್ರಜ್ಞೆ ಕಳೆದುಕೊಂಡು ಬಿದ್ದದ್ದರು. ಬೆಂಗಾವಲು ಪಡೆಯ ವಾಹನಗಳು ಹತ್ತಿರ ಬಂದಾಗ ಪರಾರಿಯಾದ ದುಬೆ ಯಾವ ದಿಕ್ಕಿನಲ್ಲಿ ಓಡಿದ್ದಾನೆಂದು ನಿಖರವಾಗಿಯೂ ಹೇಳಿದ್ದಾರೆ. ಪ್ರಜ್ಞೆ ಕಳೆದುಕೊಂಡು ಬಿದ್ದವರಿಗೆ ಪರಾರಿಯಾದ ವಿಚಾರ ಹೇಗೆ ತಿಳಿಯಿತು? ಅದರಲ್ಲೂ ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾನೆಂದು ಹೇಗೆ ಹೇಳಿದರು? ಎನ್ನುವ ಪ್ರಶ್ನೆಗೆ ಉತ್ತರಗಳು ಇನ್ನೂ ಅಸ್ಪಷ್ಟವಾಗಿವೆ. ಈ ಕುರಿತು ಎಸ್ಟಿಎಫ್ ಅಧಿಕಾರಿಗಳು ನೀಡಿರುವ ಹೇಳಿಕೆ ಹಾಗೂ ಅಫಿಡವಿಟ್ ಗೊಂದಲವನ್ನು ಇನ್ನಷ್ಟು ಹೆಚ್ಚಿಸುತ್ತದೆ.
STF issues press note in #VikasDubey encounter matter. “A herd of cattle had come in front of the vehicle due to which driver took sudden turn leading to accident…Police tried to go close to him to nab him alive but he continued to fire. Police retalitaed in self-defence…” pic.twitter.com/iOXaXv8vno
— ANI UP (@ANINewsUP) July 10, 2020
ವಿಕಾಸ್ ದುಬೆಗೆ ಕೈಕೋಳ ಏಕೆ ಹಾಕಿರಲಿಲ್ಲ?
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ನಿಯಮಾವಳಿಗಳ ಪ್ರಕಾರ ಈ ಹಿಂದೆ ಅಪರಾಧಿ ಕೃತ್ಯಗಳಲ್ಲಿ ಭಾಗವಹಿಸಿದವರನ್ನು, ಆತ್ಮಹತ್ಯೆ ಅಥವಾ ಪರಾರಿಯಾಗಲು ಯತ್ನಿಸುವ ಸಂಭವವಿದ್ದರೆ ಅಂತಹ ವ್ಯಕ್ತಿಗಳಿಗೆ ಕೈಕೋಳ ಹಾಕಬಹುದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೆ, ಇಲ್ಲಿ ಮಾತ್ರ ವಿಕಾಸ್ ದುಬೆಗೆ ಕೈಕೋಳ ಹಾಕಿರಲಿಲ್ಲ. ಇದಕ್ಕೆ ಡಿಜಿಪಿ ನೀಡಿದ ವಿವರಣೆ ಹೀಗಿದೆ, ಮೂರು ಬೆಂಗಾವಲು ವಾಹನಗಳಲ್ಲಿ 15 ಜನ ಪೊಲೀಸ್ ಅಧಿಕಾರಿಗಳು ಇದ್ದರು ಮತ್ತು ಹತ್ತು ಗಂಟೆಗಳ ಒಳಗಾಗಿ ಕಾನ್ಪುರ್ ಜಿಲ್ಲಾ ಮ್ಯಾಜಿಸ್ಟ್ರೇಟ್ರವರ ಮುಂದೆ ದುಬೆಯನ್ನು ಹಾಜರು ಪಡಿಸಬೇಕಾಗಿತ್ತು.
ಮ್ಯಾಜಿಸ್ಟ್ರೇಟ್ರವರ ಮುಂದೆ ಹಾಜರು ಪಡಿಸುವ ಸಮಯದ ಸ್ವಲ್ಪ ಹಿಂದೆಯೇ ಅವರ ಕೈಯಲ್ಲಿದ ಕೋಳವನ್ನು ತೆಗೆಯಬಹುದಿತ್ತಲ್ಲವೇ? ಅಲ್ಲಿಯವರೆಗೂ ಕೈಕೋಳ ಹಾಕಿದ್ದಲ್ಲಿ ವಿಕಾಸ್ ದುಬೆ ಪರಾರಿಯಾಗುವುದನ್ನೇ ತಡಿಯಬಹುದಿತ್ತು.
ಇನ್ನು ವಿಕಾಸ್ ದುಬೆ ಮೃತಪಟ್ಟ ಜಾಗದಲ್ಲಿ ಯಾವುದೇ ರಕ್ತದ ಕಲೆಗಳಿರಲಿಲ್ಲ. ಅವನ ದೇಹದೊಳಗೆ ನಾಲ್ಕು ಗುಂಡುಗಳು ಹೊಕ್ಕಿದ್ದರೂ ಸ್ವಲ್ಪವೂ ರಕ್ತ ಭೂಮಿಯ ಮೇಲೆ ಬೀಳಲಿಲ್ಲ ಎಂಬುದು ಕಾಕತಾಳೀಯ.
ಇನ್ನು ವಿಕಾಸ್ ದುಬೆ ಪರಾರಿಯಾಗುವ ಗುಂಡು ಹಾರಿಸಿದ್ದರಿಂದ ಇಬ್ಬರು ಪೊಲೀಸರು ಗಾಯಗೊಂಡರು ಎಂದು ಅಫಿಡವಿಟ್ನಲ್ಲಿ ಹೇಳಲಾಗಿದೆ. ಓರ್ವರಿಗೆ ಎಡ ಅಂಗೈ ಅಂಗೈಯಲ್ಲಿ ಹಾಗೂ ತೊಡೆಯ ಭಾಗದಲ್ಲಿ, ಒಬ್ಬರ ಎಡ ಭುಜಕ್ಕೆ ಗಾಯವಾಗಿದೆ ಎಂದು ಹೇಳಲಾಗಿತ್ತು. ಈ ಕೆಳಗಿರುವ ಫೋಟೋ ಗಮನಿಸದರೆ, ಯಾವ ಪೊಲೀಸ್ ಸಿಬ್ಬಂದಿಗೂ ತೊಡೆಯ ಭಾಗದಲ್ಲಿ ಗಾಯವಾಗಿರುವ ಗುರುತುಗಳಿಲ್ಲ. ಅಲ್ಲಿ ರಕ್ತದ ಕಲೆಗಳೂ ಇಲ್ಲ.

ಇಷ್ಟೆಲ್ಲಾ ವಿಚಾರಗಳನ್ನು ಕೂಲಂಕುಷವಾಗಿ ಗಮನಿಸಿದ್ದಲ್ಲಿ ಪೊಲೀಸರು ಸಲ್ಲಿಸಿರುವ ಅಫಿಡವಿಟ್ ಎಷ್ಟರ ಮಟ್ಟಿಗೆ ಸತ್ಯವನ್ನು ಹೇಳುತ್ತಿದೆ ಎಂಬುದನ್ನು ಕಾಣಬಹುದಾಗಿದೆ. ಏಕೆಂದರೆ, ಡಿಜಿಪಿ ಸಹಿ ಮಾಡಿ ನೀಡಿರುವ ಅಫಿಡವಿಟ್ ಅನ್ನು ತಾರ್ಕಿಕ ನೆಲೆಯಲ್ಲಿ ನೋಡಿದರೆ ಯಾವುದೇ ವಿಚಾರಗಳು ಒಂದಕ್ಕೊಂದು ತಾಳೆಯಾಗುವುದಿಲ್ಲ. ಅದಕ್ಕೂ ಮಿಗಿಲಾಗಿ ಎನ್ಕೌಂಟರ್ ನಡೆದ ಸಮಯದಲ್ಲಿ ಯಾವುದೇ ಮಾಧ್ಯಮಗಳಿಗೆ ಅಲ್ಲಿ ಬರಲು ಅವಕಾಶ ನೀಡದೇ ಇದ್ದುದರಿಂದ ಅಲ್ಲಿ ನಿಜಕ್ಕೂ ಏನು ನಡೆಯಿತು ಎಂಬುದರ ಕುರಿತು ಸರಿಯಾದ ಮಾಹಿತಿಯನ್ನು ಪೊಲೀಸರು ನೀಡುತ್ತಿಲ್ಲ. ಈ ಹಿಂದೆಯೂ ಎನ್ಕೌಂಟರ್ ಅಸಲಿಯೆಂದು ಸಾಬೀತು ಪಡಿಸಲು ಹೋಗಿ ಮಧ್ಯಪ್ರದೇಶ ಪೊಲೀಸರ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನೂ ಉತ್ತರ ಪ್ರದೇಶದ ಪೊಲೀಸರು ಮಾಡಿದ್ದರು.
ಆಂಗ್ಲ ಮಾಧ್ಯಮ ʼದಿ ವೈರ್ʼಗೆ ಹೇಳಿಕೆ ನೀಡಿರುವ ಮಾಜಿ ನ್ಯಾಯಮೂರ್ತಿ ಜಸ್ಟೀಸ್ ದೀಪಕ್ ಗುಪ್ತಾ, “ಎಲ್ಲಾ ಆಯಾಮಗಳು ಇದೊಂದು ಎನ್ಕೌಂಟರ್ ಅಲ್ಲ ಎಂಬುದನ್ನು ಸಾಬೀತು ಪಡಿಸುತ್ತಿವೆ. ವಿಕಾಸ್ ದುಬೆ ಓಡಿರಲಿಲ್ಲ. ಅವನನ್ನು ಕೊಲೆ ಮಾಡಲಾಗಿದೆ. ಪೊಲೀಸರು ʼಕಳಪೆ ಕತೆʼಯನ್ನು ಹೇಳುತ್ತಿದ್ದಾರೆ,” ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಈ ಅಫಿಡವಿಟ್ ಅನ್ನು ಸುಪ್ರಿಂಕೋರ್ಟ್ ಒಪ್ಪುವುದೋ ಇಲ್ಲವೋ ಎಂಬುದು ನಿಜಕ್ಕೂ ಕುತೂಹಲಕಾರಿ ವಿಚಾರ.