ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಸರ್ಕಾರವೊಂದರ ಮಹತ್ತರ ಜವಾಬ್ದಾರಿ. ಈ ಕೆಲಸದಲ್ಲಿ ನುರಿತ ಸರ್ಕಾರೀ ನೌಕರರನ್ನು ಮಾತ್ರವೇ ಬಳಸಿಕೊಳ್ಳಲಾಗುತ್ತದೆ. ಏಕೆಂದರೆ ಇದು ಖಾಸಗಿಯವರಾಗಲಿ ಅಥವಾ ಇನ್ನಾವುದೇ ಸಂಘ ಸಂಸ್ಥೆಗಳವರಾಗಲೀ ನಿಭಾಯಿಸಲು ಸಾದ್ಯವೇ ಇಲ್ಲ. ಆದರೆ ಕಳೆದ ವಾರ ತೆಲಂಗಾಣ ರಾಜ್ಯದ ಚೆಕ್ ಪೋಸ್ಟ್ ಒಂದರಲ್ಲಿ RSS ಕಾರ್ಯಕರ್ತರು ವಾಹನಗಳನ್ನು ತಡೆದು ಪರಿಶೀಲಿಸುತ್ತಿರುವ ಫೋಟೋಗಳು ವಾಟ್ಸಾಪ್, ಟ್ವಿಟ್ಟರ್ ಮತ್ತು ಫೇಸ್ ಬುಕ್ನಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕೂಡಲೇ ಅಲ್ಲಿನ ಉಸ್ತುವಾರಿಯಾಗಿದ್ದ ಪೋಲೀಸ್ ಇನ್ಸ್ಪೆಕ್ಟರ್ ನ್ನು ಪ್ರಧಾನ ಕಚೇರಿಗೆ ವರ್ಗಾಯಿಸಿ ನಂತರ ಅಮಾನತ್ತು ಮಾಡಿದೆ.
ಅಲ್ಲಿನ ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ್ ಭಾಗವತ್ ಅವರು ಮಾದ್ಯಮದವರೊಂದಿಗೆ ಇದು ಸಂಪೂರ್ಣವಾಗಿ ಪೊಲೀಸರ ಕೆಲಸ ಮತ್ತು ನಾವೇ ಇದನ್ನು ಮಾಡಬೇಕಿದೆಯೇ ಹೊರತು ಬೇರೆಯವರಿಗೆ ವರ್ಗಾಯಿಸಲು ಸಾಧ್ಯವಿಲ್ಲ ಅಷ್ಟೇ ಅಲ್ಲ RSS ಕಾರ್ಯಕರ್ತರಿಗೆ ಇಂತಹ ಕೆಲಸದಲ್ಲಿ ತೊಡಗಲು ಯಾವುದೇ ಅನುಮತಿ ನೀಡಿಲ್ಲ. ಎಂದೂ ಸ್ಪಷ್ಟಪಡಿಸಿದರು. ಅಲ್ಲದೆ RSS, ಅದರ ಸದಸ್ಯರು ಚೆಕ್ಪೋಸ್ಟ್ಗಳಲ್ಲಿ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂಬ ವರದಿಗಳನ್ನು ಶುದ್ದ ‘ಸುಳ್ಳು’ ಎಂದು ಹೇಳಿದ್ದು ಮತ್ತು ಇಂತಹ ಸುದ್ದಿಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಪ್ರೇರೇಪಿಸುತ್ತಿವೆ ಎಂದೂ ಆರೋಪಿಸಿದರು. ಆದರೆ ಟ್ವಿಟರ್ ನಲ್ಲಿ RSS ಸ್ನೇಹಿತರು ಎಂಬ ಅಕೌಂಟ್ ನಲ್ಲಿ ಒಟ್ಟು 5 ಚಿತ್ರಗಳನ್ನು ಶೇರ್ ಮಾಡಲಾಗಿದ್ದು ಇದು ಕೆಲವೇ ಘಂಟೆಗಳಲ್ಲಿ 5ಸಾವಿರಕ್ಕೂ ಮಿಕ್ಕು ಲೈಕ್ ಗಳನ್ನೂ ಪಡೆದಿತ್ತು. ಇಲ್ಲಿ ಹಂಚಿಕೊಳ್ಳಲಾದ ಚಿತ್ರಗಳು RSS ಸ್ವಯಂ ಸೇವಕರು ಯಾದಾದ್ರಿ ಭೋಂಗೀರ್ ಜಿಲ್ಲೆಯ ಹೆದ್ದಾರಿಯಲ್ಲಿ ಪೊಲೀಸ್ ಚೆಕ್ ಪೋಸ್ಟ್ ಅನ್ನು ನಿರ್ವಹಿಸುತ್ತಿರುವುದನ್ನು ಸ್ಪಷ್ಟವಾಗಿಯೇ ತೋರಿಸಿದೆ.
ಇದು ವೈರಲ್ ಆಗುತಿದ್ದಂತೆಯೇ ವಿರೋಧ ಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಲಾಠಿಗಳನ್ನು ಹಿಡಿದಿರುವ ಆರ್ಎಸ್ಎಸ್ ಕಾರ್ಯಕರ್ತರನ್ನು ಚೆಕ್ ಪೋಸ್ಟ್ ನಿರ್ವಹಿಸಲು ಹೇಗೆ ಅನುಮತಿ ನೀಡಲಾಗಿದೆ ಮತ್ತು ವಾಹನ ಚಾಲಕರ ದಾಖಲೆಗಳನ್ನು ಪರಿಶೀಲಿಸಲು ಹೇಗೆ ಅನುಮತಿ ನೀಡಲಾಗಿದೆ ಎಂದು ಪ್ರಶ್ನಿಸಿದ ಪಕ್ಷಗಳು ಕೂಡಲೇ ಸಂಬಂಧಪಟ್ಟವರ ವಿರುದ್ದ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುವಂತೆ ಒತ್ತಾಯಿಸಿವೆ.
ಮಜ್ಲಿಸ್ ಬಚಾವೊ ತೆಹ್ರೀಕ್ ಪಕ್ಷದ ವಕ್ತಾರ ಅಮ್ಜೇದ್ ಉಲ್ಲಾ ಖಾನ್ ಅವರು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಂದ ಸ್ಪಷ್ಟೀಕರಣವನ್ನು ಕೋರಿದ್ದಾರೆ ಮತ್ತು ಇದು ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರದ ಮೃದು-ಹಿಂದುತ್ವ ನೀತಿ ಅಥವಾ ತೆಲಂಗಾಣ ಸರ್ಕಾರದ ಕೆಲವು ಆರ್ಎಸ್ಎಸ್ ಪರ ಅಧಿಕಾರಿಗಳು ಸರ್ಕಾರದ ಕಾರ್ಯದಲ್ಲಿ ತೊಡಗಲು ಅನುಮತಿ ನೀಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಸ್ಥಳಿಯ ಪೋಲೀಸರ ಪ್ರಕಾರ ಆರ್ಎಸ್ಎಸ್ ಕಾರ್ಯಕರ್ತರನ್ನು ಚೆಕ್ ಪೋಸ್ಟ್ ನಲ್ಲಿ ವಾಹನ ದಾಖಲೆ ಪರಿಶೀಲಿಸಲು ಬಳಸಿಕೊಂಡಿಲ್ಲ, ಕೆಲವು ಕಾಲೇಜು ವಿದ್ಯಾರ್ಥಿಗಳು ಸ್ವಯಂಸೇವಕರಾಗಲು ಮುಂದಾದರು ಮತ್ತು ಕಳೆದ ವಾರ ಲಾರಿ ಚಾಲಕರಿಗೆ ಆಹಾರ ಮತ್ತು ನೀರಿನ ವಿತರಣೆಯಲ್ಲ ಕೆಲವು ಚೆಕ್ ಪೋಸ್ಟ್ಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಸಹಾಯ ಮಾಡಿದರು ಅಷ್ಟೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಇದ್ದಕ್ಕಿದ್ದಂತೆ ಅವರು ಏಪ್ರಿಲ್ 9 ರಂದು ಆ ಕಾಲೇಜು ವಿದ್ಯಾರ್ಥಿಗಳೇ ಆರ್ಎಸ್ಎಸ್ ಸಮವಸ್ತ್ರದಲ್ಲಿ ಬಂದು ಚೆಕ್ ಪೋಸ್ಟ್ ಬಳಿ ಕೆಲವು ಫೋಟೋಗಳನ್ನು ತೆಗೆದುಕೊಂಡರು ನಂತರ ಅವರಿಗೆ ಫೋಟೋ ತೆಗೆದುಕೊಳ್ಳಲು ಅವಕಾಶವಿಲ್ಲ ಮತ್ತು ಸ್ಥಳದಿಂದ ಹೊರಗೆ ಕಳಿಸಲಾಯಿತು ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
![](https://pratidhvani.in/wp-content/uploads/2021/02/pratidhvani_student_corner-20.jpeg)
ಈ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೆಲಂಗಾಣ ರಾಜ್ಯ ಕಾರ್ಯದರ್ಶಿ ಕಚಮ್ ರಮೇಶ್, ಆರ್ಎಸ್ಎಸ್ ಸಮವಸ್ತ್ರದಲ್ಲಿರುವ ಸ್ವಯಂ ಸೇವಕರು ಆಡಳಿತದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಸ್ವಯಂಸೇವಕರು ತೆಲಂಗಾಣದಲ್ಲಿ ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳುವ ಕೆಲವು ವಿಭಾಗಗಳ ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸ್ತುತ ಸುದ್ದಿ ಸುಳ್ಳು ಮತ್ತು ಸಂಕುಚಿತ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಂದ ಪ್ರೇರಿತವಾಗಿದೆ ”ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಬೇರೆಯ ಕಥೆಯನ್ನೇ ಹೇಳುತಿದ್ದಾರೆ. ಅವರ ಪ್ರಕಾರ ಕಳೆದ ಏಪ್ರಿಲ್ 1 ರಂದು ತಹಶೀಲ್ದಾರ್ ಉಲ್ಲಾ ಖಾನ್ ಅವರು ಕಾಮರೆಡ್ಡಿ ಜಿಲ್ಲೆಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿ ವಿತರಣೆಯನ್ನು ನಿರ್ವಹಿಸಲು ಆರ್ಎಸ್ಎಸ್ ಕಾರ್ಯಕರ್ತರಿಗೆ ಅಧಿಕೃತ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ಕಾಮರೆಡ್ಡಿ ಜಿಲ್ಲಾಧಿಕಾರಿ ಎ ಶರತ್ ಈ ಹೇಳೀಕೆಯನ್ನು ತಿರಸ್ಕರಿಸಿದ್ದು, ಸಾರ್ವಜನಿಕ ಆಹಾರ ವಿತರಣೆಯಲ್ಲಿ ಯಾವುದೇ ಸ್ವಯಂಸೇವಕರ ಪಾಲ್ಗೊಳ್ಳುವಿಕೆ ಇಲ್ಲ ಮತ್ತು ಸರ್ಕಾರಿ ನೌಕರರಿಗೆ ಮನೆ-ಮನೆಗೆ ವಿತರಣೆಯನ್ನು ಸ್ವತಃ ನಿರ್ವಹಿಸಲು ಸ್ಪಷ್ಟವಾಗಿ ತಿಳಿಸಲಾಗಿದೆ. ಮತ್ತು ನೌಕರರ ಕೊರತೆಯೂ ಇಲ್ಲ ಎಂದು ಹೇಳಿದ್ದಾರೆ.
ಸುಮಾರು 10 ದಿನಗಳ ಹಿಂದೆ, ಕಾಮರೆಡ್ಡಿಯ ತಹಶೀಲ್ದಾರ್ ನ್ಯಾಯಬೆಲೆ ಅಂಗಡಿಗಳಲ್ಲಿ ಕ್ಯೂ ನಿರ್ವಹಿಸಲು ಸ್ವಯಂಸೇವಕರನ್ನು ಬಳಸಿಕೊಳ್ಳಲು ಯೋಜಿಸಿದ್ದರು ಮತ್ತು ಈ ವಿಷಯ ನನಗೆ ತಿಳಿದಾಗ, ಅದನ್ನು ಕೈಬಿಡುವಂತೆ ನಾನು ತಹಶೀಲ್ದಾರ್ಗೆ ಎಚ್ಚರಿಕೆ ನೀಡಿದ್ದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಅಲ್ಲದೆ ಸ್ವಯಂಸೇವಕರಿಗೆ ವಿತರಿಸಲು ಸಿದ್ದಪಡಿಸಿದ್ದ ಗುರುತಿನ ಚೀಟಿಗಳನ್ನು ತಕ್ಷಣವೇ ರದ್ದುಪಡಿಸಲಾಯಿತು. ಆಹಾರ ವಿತರಣೆಯಲ್ಲಿ ಯಾವುದೇ ಸ್ವಯಂಸೇವಕರು ಭಾಗಿಯಾಗಿಲ್ಲ ಎಂದು ಕಲೆಕ್ಟರ್ ತಿಳಿಸಿದ್ದಾರೆ.
ಸರ್ಕಾರಿ ನೌಕರರನ್ನು ಹೊರತುಪಡಿಸಿ ಇತರ ಯಾವುದೇ ಸಂಘಟನೆಯವರನ್ನು ಸರ್ಕಾರೀ ಕೆಲಸದಲ್ಲಿ ಬಳಕೆ ಮಾಡಿಕೊಳ್ಳುವುದು ನಿಜಕ್ಕೂ ಅಪಾಯಕಾರಿ, ಯಾವುದೇ ಸರ್ಕಾರಗಳು ಇಂತಹ ಘೋರ ತಪ್ಪನ್ನು ಮಾಡಬಾರದು .