ಕೋವಿಡ್-19ರ ಅಟ್ಟಹಾಸ ಮುಂದುವರಿದಿದೆ. ಜಾಗತಿಕವಾಗಿ ಈ ಮಹಾಮಾರಿಗೆ ಬಲಿಯಾದವರ ಸಂಖ್ಯೆ ಇದೀಗ ಸುಮಾರು ಒಂಭತ್ತೂವರೆ ಲಕ್ಷದ ಗಡಿ ಮುಟ್ಟಿದ್ದರೆ, ಒಟ್ಟು ಸೋಂಕಿತರ ಪ್ರಮಾಣ ಎರಡು ಕೋಟಿ ತೊಂಭತ್ತು ಲಕ್ಷದ ಗಡಿ ದಾಟಿದೆ. ಆ ಪೈಕಿ ಸುಮಾರು ಎಂಭತ್ತು ಸಾವಿರ ಸಾವು ಮತ್ತು ನಲವತ್ತೆಂಟೂವರೆ ಲಕ್ಷ ಪ್ರಕರಣಗಳನ್ನು ಕಂಡಿರುವ ಭಾರತ ಜಾಗತಿಕವಾಗಿ ಕರೋನಾದ ಭೀಕರ ದಾಳಿಗೊಳಗಾಗಿರುವ ದೇಶಗಳ ಪೈಕಿ ಅತ್ಯಂತ ಹಾನಿಗೊಳಗಾಗಿರುವ ಎರಡನೇ ದೇಶವಾಗಿ ಹೊರಹೊಮ್ಮಿದೆ.
![](https://pratidhvani.in/wp-content/uploads/2021/02/Support_us_Banner_New_3-379.png)
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇಷ್ಟಾಗಿಯೂ ದೇಶದಲ್ಲಿ ಕರೋನಾ ಇನ್ನೂ ಸಮುದಾಯದ ಮಟ್ಟದಲ್ಲಿ ಹರಡಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಬಿಜೆಪಿ ಸರ್ಕಾರ, ಅಪಾಯ ಎದುರಾದಾಗ ಉಸುಕಿನಲ್ಲಿ ಮುಖ ಮುಚ್ಚಿಕೊಳ್ಳುವ ಆಸ್ಟ್ರಿಚ್ ಹಕ್ಕಿಯ ವರಸೆಗೆ ಮಾರುಹೋಗಿದೆ. ಭಾರತಕ್ಕಿಂತ ಅಧಿಕ 20 ಲಕ್ಷ ಪ್ರಕರಣ ಮತ್ತು ಸುಮಾರು ಒಂದು ಲಕ್ಷ ಸಾವಿನ ಪ್ರಕರಣ ಹೊಂದಿರುವ ಪ್ರತಿ ಹತ್ತು ಲಕ್ಷ ನಾಗರಿಕರ ಪೈಕಿ ಬರೋಬ್ಬರಿ 2,78,828 ಮಂದಿಗೆ ಕರೋನಾ ಪರೀಕ್ಷೆ ನಡೆಸುತ್ತಿದ್ದರೆ, ಭಾರತದಲ್ಲಿ ಆ ಪ್ರಮಾಣ ಕೇವಲ 41,395! ಅಂದರೆ; ಅಮೆರಿಕಕ್ಕಿಂತ ಸುಮಾರು ಆರು ಪಟ್ಟು ಕಡಿಮೆ ಪರೀಕ್ಷೆಯಲ್ಲೇ ನಮ್ಮಲ್ಲಿ ನಲವತ್ತೆಂಟೂವರೆ ಲಕ್ಷ ಪ್ರಕರಣಗಳು ಪತ್ತೆಯಾಗಿವೆ ಎಂದರೆ, ಅಲ್ಲಿನ ಜನಸಂಖ್ಯೆಯ ನಾಲ್ಕು ಪಟ್ಟು ಜನಸಂಖ್ಯೆ ಹೊಂದಿರುವ ನಮ್ಮಲ್ಲಿ ಅವರ ಪರೀಕ್ಷೆಯ ಪ್ರಮಾಣದಲ್ಲೇ ಪರೀಕ್ಷೆ ನಡೆಸಿದರೆ ನಮ್ಮ ಸೋಂಕಿನ ಪ್ರಕರಣಗಳು ಎಷ್ಟು ಪಟ್ಟು ಹೆಚ್ಚಬಹುದು ಊಹಿಸಿ!
![](https://pratidhvani.in/wp-content/uploads/2021/02/AP_Nutrition_Malnutrition_1574365182.gif)
ಆದರೆ, ಇಂತಹ ವಾಸ್ತವಿಕ ಮಾಹಿತಿ, ಅಂದಾಜುಗಳ ಕಡೆ ಜಾಣಕುರುಡು ಪ್ರದರ್ಶಿಸುವ ನಮ್ಮ ಸರ್ಕಾರಗಳು ಕೇವಲ ಸಾವಿನ ಪ್ರಮಾಣ ಕಡಿಮೆ ಇದೆ ಎಂಬುದನ್ನು ಬಿಂಬಿಸಿ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿವೆ.
ಈ ನಡುವೆ, ಕೋವಿಡ್ ವೈರಾಣು ಸಾವಿನ ಜೊತೆಗೆ ಅದರ ತಡೆಗಾಗಿ ಭಾರತ ಸರ್ಕಾರ ನಡೆಸಿದ ಲಾಕ್ ಡೌನ್ ಎಂಬ ಶತಮಾನದ ಕಡು ಅಮಾನವೀಯ ಪ್ರಯೋಗಕ್ಕೆ ಬಲಿಯಾದವರ ಸಂಖ್ಯೆ ಕೂಡ ಕಡಿಮೆ ಏನಲ್ಲ. ಯಾವ ಪೂರ್ವಾಲೋಚನೆ ಇಲ್ಲದೆ, ತಯಾರಿಗಳಿಲ್ಲದೆ, ಕೇವಲ ಪ್ರಚಾರ ಮತ್ತು ವರ್ಚಸ್ಸಿನ ಹಪಾಹಪಿಯ ಫಲವಾಗಿ ಜಾರಿಗೆ ಬಂದ ಈ ಲಾಕ್ ಡೌನ್ ತತಕ್ಷಣಕ್ಕೆ ನಾಲ್ಕು ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರ ಜೀವ ಬಲಿತೆಗೆದುಕೊಂಡಿತು. ಆ ಬಳಿಕ ವಿವಿಧ ಹಂತದ ಲಾಕ್ ಡೌನ್ ಗಳು ಕೋಟ್ಯಂತರ ಬಡವರು, ಕಾರ್ಮಿಕರು, ದಿನಗೂಲಿಗಳ ಉದ್ಯೋಗ ಕಿತ್ತುಕೊಂಡಿತು ಮತ್ತು ಅದರ ಪರಿಣಾಮವಾಗಿ ಸಾವಿರಾರು ಮಂದಿಯ ಆತ್ಮಹತ್ಯೆ, ಮಾನಸಿಕ ಒತ್ತಡ, ಹೃದಯಾಘಾತಗಳಿಗೂ ಕಾರಣವಾದವು ಎಂಬುದು ಸ್ವತಂತ್ರ ಭಾರತದ ಕರಾಳ ಇತಿಹಾಸವಾಗಿ ದಾಖಲಾಗಿದೆ.
![](https://pratidhvani.in/wp-content/uploads/2021/02/TPFI-326.jpg)
ಲಾರಿ ಚಾಲಕರು, ಆಟೋ ಚಾಲಕರು, ಟೈಲರು, ಧೋಬಿ, ಕಿರಾಣಿ ಅಂಗಡಿಯವರು, ಪಂಚರ್ ಅಂಗಡಿಯವರು, ಚಿಕ್ಕಪುಟ್ಟ ಗ್ಯಾರೇಜು, ರಿಪೇರಿ ಕೆಲಸದವರು, ಬಳೆ-ಪಾತ್ರೆ ಹೊತ್ತು ಮಾರುವವರು,.. ಹೀಗೆ ತೀರಾ ದುರ್ಬಲ ವರ್ಗದವರ ದುಡಿಮೆ ಕಿತ್ತುಕೊಂಡ ಲಾಕ್ ಡೌನ್, ಅವರ ದಿನದ ದುಡಿಮೆಯ ಮೇಲೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಕೋಟ್ಯಂತರ ಜನರನ್ನು ಹಸಿವಿಗೆ ನೂಕಿತ್ತು. ಸದ್ಯಕ್ಕೆ ಅದು ಇತಿಹಾಸ.
ಆದರೆ, ಅದೇ ಹೊತ್ತಿಗೆ ಸರಿಸುಮಾರು ಮೂರು ತಿಂಗಳ ಆ ಹಸಿವು, ಅರೆಬರೆ ಹೊಟ್ಟೆಯ ಆ ದಿನಗಳು ಆ ಕುಟುಂಬಗಳ ಎಳೆಯ ಮಕ್ಕಳು, ಮಹಿಳೆಯರ ಆರೋಗ್ಯದ ಮೇಲೆ ಬೀರಬಹುದಾದ ದೂರಗಾಮಿ ಪರಿಣಾಮಗಳು ಭೀಕರ. ದಶಕಗಳ ನಿರಂತರ ಪ್ರಯತ್ನದ ಫಲವಾಗಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ ಯೋಜನೆ, ಬಾಣಂತಿಯರು ಮತ್ತು ಗರ್ಭಿಣಿಯರ ಪೌಷ್ಟಿಕ ಆಹಾರ ಯೋಜನೆ(ಮಾತೃಪೂರ್ಣ ಯೋಜನೆ)ಯಂತಹ ಕ್ರಮಗಳ ಮೂಲಕ ಕಾಯ್ದುಕೊಂಡುಬಂದಿದ್ದ ದೇಶದ ಬಡವರು ಮತ್ತು ದುರ್ಬಲ ವರ್ಗಗಳ ಕನಿಷ್ಟ ಆರೋಗ್ಯಕ್ಕೂ ಈ ಲಾಕ್ ಡೌನ್ ಸಂಕಷ್ಟ ದೊಡ್ಡ ಪೆಟ್ಟು ನೀಡಿದೆ. ಮಕ್ಕಳ ಅಪೌಷ್ಟಿಕತೆಯ ವಿಷಯದಲ್ಲಿ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಮುಜುಗರಕ್ಕೀಡಾಗುತ್ತಲೇ ಇದ್ದ ಭಾರತ ದಶಕಗಳ ಹಿಂದೆ ಇಂತಹ ಮಹತ್ವದ ಬದಲಾವಣೆ ಕಾರ್ಯಕ್ರಮಗಳ ಮೂಲಕ ದೇಶದ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಸುಧಾರಣೆಗೆ ದಿಟ್ಟ ಪ್ರಯತ್ನ ನಡೆಸಿದೆ. ಆದರೆ, ಲಾಕ್ ಡೌನ್ ಸಂಕಷ್ಟ ಅಂತಹ ವ್ಯವಸ್ಥೆಗಳಲ್ಲಿಯೂ ಸಾಕಷ್ಟು ವ್ಯತ್ಯಯ ಉಂಟುಮಾಡಿದೆ. ಲಾಕ್ ಡೌನ್ ಅವಧಿಯಲ್ಲಿ ಮಕ್ಕಳು ಮತ್ತು ತಾಯಂದಿರಿಗೆ ಬಹುತೇಕ ಮನೆಗೇ ಆಹಾರ ಸಾಮಗ್ರಿ ಸರಬರಾಜು ನಡೆಯುತ್ತಿದ್ದರೂ, ಮಕ್ಕಳು ನೇರವಾಗಿ ಅಂಗನವಾಡಿಯಲ್ಲಿ ಪಡೆಯುತ್ತಿದ್ದ ಆಹಾರಕ್ಕೂ, ಮನೆಯಲ್ಲಿ ಆಹಾರ ಧಾನ್ಯ ಕುಟುಂಬದವರ ನಡುವೆ ಹಂಚಿಹೋದಾಗ ಪಡೆಯುವ ಪೌಷ್ಟಿಕತೆಗೂ ವ್ಯತ್ಯಾಸ ಇದ್ದೇ ಇರುತ್ತದೆ.
![](https://pratidhvani.in/wp-content/uploads/2021/02/primary_image.jpg)
ಇನ್ನು ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಂತೂ ಸಂಪೂರ್ಣ ನಿಂತುಹೋಗಿದೆ. ಶಾಲೆಗಳೇ ಮುಚ್ಚಿರುವ ಹಿನ್ನೆಲೆಯಲ್ಲಿ ಕಡುಬಡವರ ಮಕ್ಕಳು ಕನಿಷ್ಟ ಒಂದು ಹೊತ್ತಿನ ಪೌಷ್ಟಿಕ ಆಹಾರದಿಂದಲೂ ವಂಚಿತವಾಗಿವೆ. ಸುಮಾರು ಆರು ತಿಂಗಳಿಂದ ಅಂತಹ ಮಕ್ಕಳು ನಿರಂತರವಾಗಿ ಪೌಷ್ಟಿಕ ಆಹಾರದಿಂದ ವಂಚಿತರಾಗಿರುವುದರಿಂದ ಮತ್ತು ಅದೇ ಹೊತ್ತಿಗೆ ಮನೆಯಲ್ಲೂ ಲಾಕ್ ಡೌನ್ ಸಂಕಷ್ಟದಿಂದಾಗಿ ಆಗಿರುವ ಕಡುಬಡತನ ಮತ್ತು ಆರ್ಥಿಕ ಬಿಕ್ಕಟ್ಟಿನಿಂದಾಗಿ ಆ ಮಕ್ಕಳ ಒಟ್ಟಾರೆ ಬೆಳವಣಿಗೆ ಮತ್ತು ಪೌಷ್ಟಿಕತೆ ಮೇಲೆ ಆಗಿರುವ ಪರಿಣಾಮವೇನು? ಅವರಲ್ಲಿ ಈ ಪರಿಸ್ಥಿತಿ ಉಂಟುಮಾಡಿರುವ ಅಪೌಷ್ಟಿಕತೆಯ ಪ್ರಮಾಣವೇನು? ಎಂಬ ಬಗ್ಗೆ ನಮ್ಮಲ್ಲಿ ಯಾವುದೇ ನಿಖರ ಅಧ್ಯಯನಗಳಾದಂತಿಲ್ಲ.
![](https://pratidhvani.in/wp-content/uploads/2021/02/pratidhvani_2020_09_241ac0be_84d3_4dde_b0cf_2909571b8619_pratidhvani_2020_08_07ce3fbe_1be6_41b2_8023-3.jpg)
ಆದರೆ, ನಮಗಿಂತ ಕಡಿಮೆ ಪ್ರಮಾಣದ, ಕಡಿಮೆ ಅನಾಹುತದ ಮತ್ತು ಅದೇ ಹೊತ್ತಿಗೆ ಹೆಚ್ಚು ವಿವೇಚನೆ ಮತ್ತು ವೈಚಾರಿಕ ಲಾಕ್ ಡೌನ್ ಕಂಡಿರುವ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಹಲವು ಬಡ ದೇಶಗಳಲ್ಲಿ ಅಂತಹ ಅಧ್ಯಯನಗಳು ಆಗಿವೆ. ಮಾರ್ಚ್ ಮಧ್ಯಂತರದ ಹೊತ್ತಿಗೆ ದಕ್ಷಿಣ ಆಫ್ರಿಕಾದಲ್ಲಿ ಕರೋನಾ ಮಹಾಮಾರಿಯ ಪ್ರವೇಶವಾಗುತ್ತಲೇ ಅಲ್ಲಿನ ಲಾಕ್ ಡೌನ್ ಜಾರಿಯಾಯಿತು. ಅದರ ಭಾಗವಾಗಿ ಒಂದೆಡೆ ಜನರ ದುಡಿಮೆಯ ಅವಕಾಶಗಳು ಬಾಗಿಲು ಮುಚ್ಚಿದರೆ, ಮತ್ತೊಂದು ಕಡೆ ಶಾಲೆಗಳ ಮುಚ್ಚುವಿಕೆಯೊಂದಿಗೆ ಮಕ್ಕಳ ಕನಿಷ್ಟ ಆಹಾರ ಖಾತ್ರಿ ಕೂಡ ಸ್ಥಗಿತವಾಯಿತು. ಏಪ್ರಿಲ್ ಅಂತ್ಯದ ಹೊತ್ತಿಗೆ ದಕ್ಷಿಣ ಆಫ್ರಿಕಾದ ಅರ್ಧದಷ್ಟು ಮನೆಗಳಲ್ಲಿ ಆಹಾರ ಪದಾರ್ಥ ಖರೀದಿಗೆ ಹಣವೇ ಇಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಅತ್ತ ಮಧ್ಯಾಹ್ನದ ಬಿಸಿಯೂಟವೂ ಇಲ್ಲದೆ ಮಕ್ಕಳು ಮಹಿಳೆಯರು ಉಪವಾಸದ ದಿನಗಳನ್ನು ಕಳೆಯುವ ದಾರುಣ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಶೈಕ್ಷಣಿಕ ಅಧ್ಯಯನವೊಂದು ದಾಖಲಿಸಿದೆ ಎಂದು ‘ದ ಎಕಾಮಿಕ್ ಟೈಮ್ಸ್’ ವರದಿ ಹೇಳಿದೆ.
ಒಂದು ಕಡೆ ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ, ಆದಾಯವಿಲ್ಲದೆ ಹೊತ್ತಿನ ಊಟಕ್ಕೆ ಸಂಕಷ್ಟಪಡುವ ಸ್ಥಿತಿ, ಮತ್ತೊಂದು ಕಡೆ ಅದೇ ಲಾಕ್ ಡೌನ್ ಬಿಕ್ಕಟ್ಟಿನ ಕಾರಣಕ್ಕೆ ದುಬಾರಿಯಾದ ಆಹಾರ ಪದಾರ್ಥಗಳು, ಚಿಕ್ಕಪುಟ್ಟ ಅಂಗಡಿಗಳು ಮುಚ್ಚಿದ ಕಾರಣ, ದೂರದ ಮಾಲ್ಗಳಲ್ಲಿ ದುಬಾರಿ ಬೆಲೆ ತೆತ್ತು ಆಹಾರ ಖರೀದಿಯ ಅನಿವಾರ್ಯತೆ, ಆಫ್ರಿಕಾದ ಬಡ ರಾಷ್ಟ್ರಗಳ ಜನರ ಪಾಲಿಗೆ ಬದುಕನ್ನು ಎರಡಲಗಿನ ಕತ್ತಿ ಮೇಲಿನ ನಡಿಗೆಯಾಗಿಸಿತು.
![](https://pratidhvani.in/wp-content/uploads/2021/02/3fd093be4c1f1ffa88bae7fe9703fd5c917af39d-20210216-174826.jpg)
ಒಂದು ಕಡೆ ಕನಿಷ್ಟ ಹೊಟ್ಟೆ ತುಂಬಿಸುವ ಆಹಾರ, ಮಕ್ಕಳ ಪಾಲಿನ ದೈಹಿತ ಮತ್ತು ಮಾನಸಿಕ ಬೆಳವಣಿಗೆಗೆ ಬೇಕಾದ ಪೌಷ್ಟಿಕ ಆಹಾರದ ವಿಷಯದಲ್ಲಿ ದೀರ್ಘಾವಧಿಯ ದುಷ್ಪರಿಣಾಮಗಳಿಗೆ ಕಾರಣವಾದ ಕೋವಿಡ್ ಲಾಕ್ ಡೌನ್, ಮತ್ತೊಂದು ಕಡೆ ಮಕ್ಕಳು ಮತ್ತು ತಾಯಂದಿರ ಆರೋಗ್ಯ ದೃಢತೆಗೆ ನೀಡಲೇಬೇಕಿದ್ದ ಹಲವು ಚುಚ್ಚುಮುದ್ದು, ರೋಗ ನಿರೋಧಕ ಶಕ್ತಿ ವೃದ್ಧಿ ಇಮ್ಯುನೈಸೇಷನ್ ಕಾರ್ಯಕ್ರಮಗಳಿಗೂ ಅಡ್ಡಿಯಾಗಿದೆ. ಅದರಲ್ಲೂ ದಕ್ಷಿಣ ಆಫ್ರಿಕಾ, ಇಥಿಯೋಪಿಯಾ, ಸೂಡಾನ್, ಉಗಾಂಡ, ಕೀನ್ಯಾ, ತಾಂಜೇನಿಯಾ, ನೈಜೀರಿಯಾ, ಕಾಂಗೋ ಮುಂತಾದ ಆಫ್ರಿಕಾದ ಬಹುತೇಕ ರಾಷ್ಟ್ರಗಳಲ್ಲಿ ಮಕ್ಕಳ ಅಪೌಷ್ಟಿಕತೆಗೆ ದೊಡ್ಡ ಕಾರಣವಾಗಿರುವ ಜಂತುಹುಳು ಬಾಧೆಯ ವಿರುದ್ಧ ನಿಯಮಿತವಾಗಿ ನಡೆಯಬೇಕಿದ್ದ ಆರೋಗ್ಯ ಅಭಿಯಾನಗಳು ಸ್ಥಗಿತವಾಗಿರುವುದರಿಂದ, ಮತ್ತೊಂದು ಬದಿಯಿಂದ ಮಕ್ಕಳ ಅಪೌಷ್ಟಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. “ಆ ಹಿನ್ನೆಲೆಯಲ್ಲಿ ಆ ಭಾಗದ ಮಕ್ಕಳ ಪೌಷ್ಟಿಕತೆಯ ಮೇಲೆ ಮತ್ತು ಭವಿಷ್ಯದಲ್ಲಿ ಅವರ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯ ಮೇಲೆ ಈ ಮಹಾಮಾರಿ ಸೃಷ್ಟಿಸಿದ ಈ ಸಾಮಾಜಿಕ- ಆರ್ಥಿಕ ಬಿಕ್ಕಟು ಬೀರಬಹುದಾದ ಪರಿಣಾಮಗಳ ಬಗ್ಗೆ ಆತಂಕವಿದೆ” ಎಂದು ಯೂನಿಸೆಫ್ ಪೌಷ್ಟಿಕ ಆಹಾರ ಕಾರ್ಯಕ್ರಮದ ಮುಖ್ಯಸ್ಥ ವಿಕ್ಟರ್ ಅಗ್ಯುಯೊ ಹೇಳಿರುವುದಾಗಿ ಪತ್ರಿಕೆ ಉಲ್ಲೇಖಿಸಿದೆ. ಅದೇ ವೇಳೆ ಅವರು, “ಇಂತಹ ಹೊತ್ತಲ್ಲಿ ಸರ್ಕಾರಗಳು ಮಕ್ಕಳು ಮತ್ತು ತಾಯಂದಿರ ಅಪೌಷ್ಟಿಕತೆಗೆ ಈ ಲಾಕ್ ಡೌನ್ ಮತ್ತು ಕರೋನಾ ಒಡ್ಡಿರುವ ಸವಾಲುಗಳನ್ನು ಎದುರಿಸಲು ಪರ್ಯಾಯ ಮತ್ತು ತತಕ್ಷಣದ ಕ್ರಮಗಳನ್ನು ಕೈಗೊಳ್ಳದೇ ಹೋದಲ್ಲಿ; ಮುಂದಿನ ದಿನಗಳಲ್ಲಿ ಅಪೌಷ್ಟಿಕತೆ ದೇಶದ ಮಾನವ ಸಂಪನ್ಮೂಲ ಮತ್ತು ಒಟ್ಟಾರೆ ಪ್ರಗತಿಗೆ ಕೊಡುವ ಪೆಟ್ಟು ಊಹಿಸಲಸಾಧ್ಯ” ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
![](https://pratidhvani.in/wp-content/uploads/2021/02/malnutrition-1.jpg)
ಆದರೆ, ರಾಮಮಂದಿರ ನಿರ್ಮಾಣ, ಬಿಹಾರ ಚುನಾವಣೆ, ಪ್ರತಿಪಕ್ಷಗಳು ಮತ್ತು ಪ್ರಶ್ನಿಸುವವರನ್ನು ದೇಶದ್ರೋಹದ ಸುಳ್ಳು ಪ್ರಕರಣಗಳಡಿ ಜೈಲಿಗೆ ಅಟ್ಟುವುದು, ನಟ-ನಟಿಯರ ಅಕ್ರಮ ಚಟುವಟಿಕೆ (ಕಟ್ಟಡಗಳಿರಬಹುದು, ಸಂಬಂಧಗಳಿರಬಹುದು)ಗಳನ್ನು ರಾಜಕೀಕರಣಗೊಳಿಸಿ ಲಾಭ ಪಡೆಯುವುದು ಮತ್ತು ಆ ನಡುವಿನ ಬಿಡುವಲ್ಲಿ ನವಿಲು ಮೇಯಿಸುವ, ಬಾತುಗಳ ಫೋಟೋ ತೆಗೆಯುವುದರಲ್ಲಿ ನಿರತರಾಗಿರುವ ನಮ್ಮ ನಾಯಕರಿಗೆ, ಇಂತಹ ಕಿವಿಮಾತುಗಳನ್ನು ಕೇಳಿಸಿಕೊಳ್ಳಲು ಪುರುಸೊತ್ತಿದೆಯೇ ಎಂಬುದು ಪ್ರಶ್ನೆ. ಹಾಗೇ, ಈಗಾಗಲೇ ದೇಶದ ಪ್ರತಿ ಸಾರ್ವಜನಿಕ ಸೌಲಭ್ಯ, ಸೌಕರ್ಯಗಳನ್ನೂ ಖಾಸಗೀಯವರ ಕೈವಶ ಮಾಡುವ ಮೂಲಕ ದೇಶದ ಸಂಪತ್ತು ಬಡವರಿಗಲ್ಲ, ಶ್ರೀಮಂತರಿಗೆ ಎಂದು ಪರೋಕ್ಷವಾಗಿ ಸಾಬೀತು ಮಾಡುತ್ತಿರುವ ಒಂದು ಆಡಳಿತ ವ್ಯವಸ್ಥೆ, ಕಡುಬಡ ಮಕ್ಕಳ ಖಾಲಿ ಹೊಟ್ಟೆಯ ಬಗ್ಗೆ ಮತ್ತು ನಾಳೆಯ ಅವರ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳಬಲ್ಲದೆ? ಎಂಬುದು ಕೂಡ ಉತ್ತರ ಗೊತ್ತಿರುವ ಪ್ರಶ್ನೆಯೇ!