ಭಾರತದಲ್ಲಿ ಲಾಕ್ಡೌನ್ ಹೇರಿದ್ದರಿಂದ ದೇಶದಲ್ಲಿ ಸೋಂಕು ಹರಡುವ ವೇಗ ಕಡಿಮೆಯಾಗಿ ಜುಲೈನಲ್ಲಿ ತಲುಪಬೇಕಿದ್ದ ಕರೋನಾ ಪ್ರಕರಣದ ಗರಿಷ್ಟ ಮಟ್ಟ ನವೆಂಬರ್ ತಿಂಗಳ ಮಧ್ಯದವರೆಗೂ ವಿಸ್ತರಣೆಯಾಗಿದೆ. ಇದರಿಂದ ನಮಗೆ ವೈದ್ಯಕೀಯ ಕ್ಷೇತ್ರದ ಮೇಲಿರುವ ಒತ್ತಡವನ್ನು ಕಡಿಮೆಗೊಳಿಸಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ರಚಿಸಿದ ಆಪರೇಸಶನ್ಸ್ ರಿಸರ್ಚ್ ತಂಡ ಮಾಡಿರುವ ಅಧ್ಯಯನ ಹೇಳಿದೆಯೆಂದು ಕಳೆದ ದಿನಗಳಲ್ಲಿ ಮಾಧ್ಯಮಗಳು ವರದಿ ಮಾಡಿತ್ತು.
Also Read: ಲಾಕ್ಡೌನ್ ವಿಚಾರದಲ್ಲಿ ನೆರೆ ರಾಷ್ಟ್ರವನ್ನು ಅನುಸರಿಸಿದ್ದು ತಪ್ಪು: ಡಾ. ಶ್ರೀನಿವಾಸ ಕಕ್ಕಿಲ್ಲಾಯ
ನಾಟಕೀಯ ಬೆಳವಣಿಗೆಯಲ್ಲಿ ಈ ವರದಿಯನ್ನು ICMR ತಿರಸ್ಕರಿಸಿದೆ. ಪತ್ರಿಕೆಯೊಂದರಲ್ಲಿ ವರದಿಯಾದ ತುಣುಕನ್ನು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಹಾಕಿರುವ ICMR, ನಮ್ಮ ಅಧ್ಯಯನವೆಂದು ಹೇಳುವ ಈ ವರದಿಗೂ ನಮ್ಮ ಅಧ್ಯಯನದೊಂದಿಗೂ ಯಾವ ಸಂಬಂಧವೂ ಹೊಂದಿಲ್ಲ. ಇದು ನಾವು ಮಾಡಿರುವ ಅಧ್ಯಯನವಲ್ಲ. ಇದು ನಮ್ಮ ಸಂಸ್ಥೆಯ ಅಧ್ಯಯನವನ್ನು ಪ್ರತಿನಿಧಿಸುವುದಿಲ್ಲ ಎಂದು ವರದಿಯನ್ನು ತಳ್ಳಿ ಹಾಕಿದೆ.
ಅದಾಗ್ಯೂ ICMR ತಪ್ಪು ಮಾಹಿತಿ ನೀಡುತ್ತಿದೆ ಎಂದು ICMR ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ. ನಿಮ್ಮ ತಂಡ ಮಾಡಿರುವ ಅಧ್ಯಯನವಲ್ಲವಾಗಿದ್ದರೆ, ಈ ಸುದ್ದಿಯನ್ನು ಹರಡಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ. ನೀವು ಈ ವಿಷಯದಲ್ಲಿ ಸಂಪೂರ್ಣ ಸ್ವತಂತ್ರರು ಎಂದು ಟ್ವೀಟ್ ಬಳಕೆದಾದರರೊಬ್ಬರು ICMR ನನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.
ಲಾಕ್ಡೌನ್ ಒಂದು ವಿಫಲ ಪ್ರಯತ್ನ, ಲಾಕ್ಡೌನ್ನ್ನು ಶೀಘ್ರವೇ ಜಾರಿಗೊಳಿಸಿದ್ದರಿಂದ ಭಾರತದ ಮಟ್ಟಿಗೆ ಅದರಿಂದ ಹಾನಿಯೇ ಹೆಚ್ಚು, ಕರೋನಾ ನಿಯಂತ್ರಣಕ್ಕೆ ಅದರಿಂದ ಪ್ರಯೋಜನವೇನು ಆಗಿಲ್ಲವೆಂದು ವಿಷಯ ತಜ್ಞರು ಕೇಂದ್ರದ ಅವೈಜ್ಞಾನಿಕ ಲಾಕ್ಡೌನ್ ನಿರ್ಧಾರವನ್ನು ವಿಮರ್ಷಿಸಿದ್ದರು. ತಜ್ಞರ ಅಭಿಪ್ರಾಯಕ್ಕೆ ಬಲ ಬರುತ್ತಿದ್ದಂತೆ ICMR ರಚಿಸಿರುವ ಸಂಶೋಧನಾ ತಂಡದ ಅಧ್ಯಯನವೆಂದು ಮಾಧ್ಯಮಗಳು ಲಾಕ್ಡೌನ್ ಪರವಾದ ವರದಿಯನ್ನು ಬಿತ್ತರಿಸಿತ್ತು. ICMR ಆ ವರದಿಯನ್ನು ತಿರಸ್ಕರಿಸಿ ಸರ್ಕಾರದ ಲಾಕ್ಡೌನ್ ಸರಿಯಾದ ಕ್ರಮವೆಂದು ತಾನು ನಂಬುವುದಿಲ್ಲ ಎಂದು ಪರೋಕ್ಷವಾಗಿ ವ್ಯಕ್ತಪಡಿಸಿದೆ.
ತಮಾಷೆಯೆಂದರೆ ಎಪ್ರಿಲ್ 7 ರಂದು ಈ ತಂಡವನ್ನು ICMR ರಚಿಸಿರುವುದೆಂದು ಸ್ವತಂತ್ರ ಸುದ್ದಿ ಸಂಸ್ಥೆ ಪಿಟಿಐ ಎಪ್ರಿಲ್ 7 ರಂದೇ ಸುದ್ದಿ ಮಾಡಿತ್ತು. ಆ ಸುದ್ದಿಯನ್ನು ಆಧರಿಸಿ ಹಲವು ಮಾಧ್ಯಮಗಳು ವರದಿ ಮಾಡಿತ್ತು. ಅಲ್ಲದೆ ಸ್ವತಃ ICMR ತನ್ನ ಬುಲೆಟಿನ್ನಲ್ಲಿಯೂ ಈ ಮಾಹಿತಿ ಪ್ರಕಟವಾಗಿತ್ತು. ಆದರೆ ಈಗ ICMR ಅಧಿಕೃತ ಜಾಲತಾಣದಿಂದ ಈ ಕುರಿತಂತೆ ಮಾಹಿತಿ ಇರುವ ಸುದ್ದಿ ಬುಲೆಟಿನ್ನ್ನು ತೆಗೆದು ಹಾಕಲಾಗಿದೆ.
ಭಾರತದ ಸರ್ಕಾರಿ ಸ್ವಾಮ್ಯದ ಅಧಿಕೃತ ಸಂಸ್ಥೆಯಾಗಿರುವ ICMR ನ ಈ ಗೊಂದಲಕಾರಿ ನಡವಳಿಕೆ ಸಾಮಾಜಿಕ ಜಾಲತಾಣಿಗರಿಂದ ಭಾರೀ ಟೀಕೆಗೆ ಗುರಿಯಾಗಿದೆ. ನಿಮಗೆ ವೇತನ ನೀಡುತ್ತಿರುವುದು ನಾವು (ಪ್ರಜೆಗಳು) ದಯವಿಟ್ಟು ಬಿಜೆಪಿಗೆ ಕೆಲಸ ಮಾಡುವುದು ಬಿಟ್ಟು, ಒಂದಿಷ್ಟು ನಮಗಾಗಿಯೂ ಕೆಲಸ ಮಾಡಿ ಎಂದು ಟ್ವೀಟ್ದಾರರೊಬ್ಬರು ಜವಾಬ್ದಾರಿಯುತ ICMRನ ಬೇಜವಾಬ್ದಾರಿ ನಡೆಯನ್ನು ಖಂಡಿಸಿದ್ದಾರೆ. ಡಾ. ಪ್ರಶಾಂತ್ ಜಿ ಎಂಬವರು ಇದು ನಿಮ್ಮ ತಪ್ಪು ICMR, ನೀವು ಯಾಕೆ ಇದುವರೆಗೂ ಧೃಡವಾದ ಯೋಜನೆಯನ್ನು ದೇಶದ ಜನರೆದುರು ಇಟ್ಟಿಲ್ಲ, ಯಾಕೆ ಬೇರೆ ಮೂಲಗಳಿಗೆ ಕಾಯುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಒಟ್ಟಿನಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ICMR ಸದ್ಯ ತನ್ನ ಸುತ್ತಲೂ ಜರುಗುತ್ತಿರುವ ವಿವಾದಗಳನ್ನು ತಿಳಿಗೊಳಿಸಬೇಕು. ತನ್ನ ಹೆಸರಿನಲ್ಲಿ ತನ್ನದಲ್ಲದ ವರದಿಯನ್ನು ಪ್ರಸಾರ ಮಾಡಿರುವುದು ಯಾರು ಎಂದು ದೇಶದ ಜನರೆದುರು ಸ್ಪಷ್ಟಪಡಿಸಬೇಕು ಎಂದು ಟ್ವಿಟರಿನಲ್ಲಿ ಬಲವಾದ ಕೂಗು ಎದ್ದಿದೆ.