ಕರೋನಾ ಸೋಂಕು ತಂದಿಟ್ಟ ಆಪತ್ತು ನಿಜಕ್ಕೂ ಭಿಕರವಾದದು. ಈ ಕರೋನಾದಿಂದಾಗಿ ಯಾವಾಗ ಪ್ರಪಂಚದ ಬಹುತೇಕ ರಾಷ್ಟ್ರಗಳು ಲಾಕ್ಡೌನ್ ಮೊರೆಹೋದವೋ, ಆ ಹೊತ್ತಿನಲ್ಲಿ ನಡೆದ ಕಳ್ಳ ಬೇಟೆಯ ಸಂಖ್ಯೆಯೂ ಹೆಚ್ಚಿದೆ. ಕೇವಲ ಭಾರತವಷ್ಟೇ ಅಲ್ಲದೇ, ನೆರೆಹೊರೆಯ ದೇಶಗಳಲ್ಲಿ ಕೂಡಾ ಕಳ್ಳ ಬೇಟೆ ಎಂಬ ಭಯಾನಕ ಸೋಂಕು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿರುವುದು ನಿಜಕ್ಕೂ ಆತಂಕವನ್ನು ತಂದೊಡ್ಡಿದೆ.
ಭಾರತ, ನೇಪಾಳ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ದಕ್ಷಿಣ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಬೇಟೆ ಎನ್ನುವುದು ಸಾಮಾನ್ಯ ವಿಷಯವೆಂಬಂತೆ ಬಿಂಬಿತವಾಗಿದೆ. ಆದರೆ, ಅವನತಿಯ ಅಂಚಿನಲ್ಲಿರುವ ಅಪರೂಪದ ಪ್ರಾಣಿಗಳನ್ನು ತಮ್ಮ ತೆವಲಿಗಾಗಿ ಬೇಟೆಯಾಡಿ ಕೊಲ್ಲುವುದು ಯಾವುದೇ ಕಾರಣಕ್ಕೂ ಸಹಿಸಲು ಅಸಾಧ್ಯ. ಲಾಕ್ಡೌನ್ ಸಂದರ್ಭದಲ್ಲಿ ಕಳ್ಳ ಬೇಟೆಗೆ ಬಲಿಯಾದ ಬಹುತೇಕ ಪ್ರಾಣಿಗಳು ಅವನತಿಯ ಅಂಚಿನಲ್ಲಿದ್ದಂತವು ಎಂಬುದು ವಿಷಾದನೀಯ.
ಹಿರಿಯ ವನ್ಯಜೀವಿ ತಜ್ಞ ಜೋಸೆಫ್ ವಾಲ್ಸ್ಟನ್ ಅವರ ಪ್ರಕಾರ, ನಗರ ಪ್ರದೇಶದಿಂದ ಹಳ್ಳಿಗಳಿಗೆ ವಾಪಾಸ್ಸಾದ ಬಹುತೇಕ ಜನರಿಗೆ ಕೆಲಸವಿಲ್ಲದೇ ಹೋದ್ದರಿಂದ ಅವರು ಬೇಟೆಯಾಡುವ ಕಡೆಗೆ ತಮ್ಮ ಗಮನ ಕೇಂದ್ರೀಕರಿಸಿದ್ದಾರೆಂದು ಅಭಿಪ್ರಾಯಪಟ್ಟಿದ್ದಾರೆ.
Also Read: ಪರಿಸರ ಮಾರಕ ನಿರ್ಧಾರ ಕೈಗೊಳ್ಳುವುದಾದರೆ ವನ್ಯಜೀವಿ ಮಂಡಳಿ ಅಗತ್ಯವೇನು?

ಇನ್ನು ನಿರ್ದಿಷ್ಟವಾಗಿ ಭಾರತದಲ್ಲಿ ನೋಡುವುದಾದರೆ, ಪಂಜರದಲ್ಲಿ ಸಾಕಲು ಕಾಡು ಹಕ್ಕಿಗಳನ್ನು ಹಿಡಿಯುವುದಿರಬಹುದು, ಮಾಂಸಕ್ಕಾಗಿ ನಡೆದ ಬೇಟೆ ಇರಬಹುದು ಅಥವಾ ಕಾಳ ದಂಧೆಯಲ್ಲಿ ಮಾರಲು ಹಿಡಿದಿರುವ ಮೂಕ ಪ್ರಾಣಿಗಳಿರಬಹುದು ಇವುಗಳ ಕುರಿತ ಪ್ರಕರಣಗಳು ಹೆಚ್ಚಾಗಿ ಕಂಡುಬಂದಿವೆ.
ಮೇ 10ರಂದು ಒರಿಸ್ಸಾದಲ್ಲಿ ನಾಲ್ವರನ್ನು ಚಿರತೆ ಕೊಂದ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿತ್ತು. ಸಿಮ್ಲಿಪಾಲ್ ಹುಲಿ ಅಭಯಾರಣ್ಯದಲ್ಲಿ ಚಿರತೆಯನ್ನು ಬೇಟೆಯಾಡಿ ಅದರ ಚರ್ಮವನ್ನು ಮಾರಲು ಹೊರಟವರು ಪೊಲೀಸರ ಅತಿಥಿಯಾಗಿದ್ದರು. ಅದೇ ದಿನ ಅಸ್ಸಾಂನ ಕಾಜೀ಼ರಂಗ ಅಭಯಾರಣ್ಯದಲ್ಲಿ ಒಂದು ಘೇಂಡಾಮೃಗವನ್ನು ಧಾರುಣವಾಗಿ ಹೊಡೆದು ಸಾಯಿಸಲಾಗಿತ್ತು. ಘೇಂಡಾಗಳ ಮೇಲೆ ನಿಯಮಿತವಾಗಿ ಕಣ್ಗಾವಲು ಇರಿಸದಿದ್ದರೆ ಅವುಗಳ ಸಂತತಿ ನಾಶವಾಗುವ ಹಂತಕ್ಕೆ ಬಂದು ನಿಂತಿದೆ.
ಇನ್ನು, ರಾಜಸ್ಥಾನದಲ್ಲಿ ಕೂಡಾ ಕಳ್ಳ ಬೇಟೆ ಬಹಳಷ್ಟು ಸದ್ದು ಮಾಡುತ್ತಿದೆ. ಬಲು ಅಪರೂಪವಾಗಿರುವ ಚಿಂಕಾರ ಎಂಬ ಜಿಂಕೆ ಜಾತಿಯ ಪ್ರಾಣಿಯನ್ನು ಬೇಟೆಯಾಡಿದ ಹಲವು ಪ್ರಕರಣಗಳು ದಾಖಲಾಗಿವೆ. ಲಾಕ್ಡೌನ್ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಜಿಂಕೆಯ ಮಾಂಸವನ್ನು ಆಂಬುಲೆನ್ಸ್ನಲ್ಲಿ ಸಾಗಾಟ ಮಾಡಿದ ಕುರಿತಾಗಿ ʼಪ್ರತಿಧ್ವನಿʼಯು ವರದಿ ಮಾಡಿತ್ತು.
Also Read: ಲಾಕ್ಡೌನ್ ಮಧ್ಯೆಯೂ ವನ್ಯಜೀವಿ ಬೇಟೆಗಿಳಿದ ಸಮಯ ಸಾಧಕರು!
ಭಾರತದ ನೆರೆ ರಾಷ್ಟ್ರಗಳಲ್ಲಿ ನೋಡುವುದಾದರೆ, ಆಯಾ ದೇಶಗಳು ಲಾಕ್ಡೌನ್ ಘೋಷಿಸಿದ ನಂತರ ಅಲ್ಲಿ ದಾಖಲಾದ ಬೇಟೆ ಪ್ರಕರಣಗಳಲ್ಲಿ ಬಹಳಷ್ಟು ಏರಿಕೆ ಕಂಡುಬಂದಿದೆ. ಇದು ಹೀಗೇ ಮುಂದುವರಿದಲ್ಲಿ, ನಂತರದ ದಿನಗಳಲ್ಲಿ ಅಮೂಲ್ಯವಾದ ಪ್ರಾಣಿ ಸಂಕುಲವನ್ನು ನಾವು ಕಳೆದುಕೊಳ್ಳುವ ಸಾಧ್ಯತೆಯಿದೆ. ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಕಾಡಿನ ಜೊತೆಗೆ ಕಾಡಿನೊಂದಿಗೆ ಅವಿನಾಭಾವ ನಂಟನ್ನು ಹೊಂದಿರುವ ಕಾಡುಪ್ರಾಣಿಗಳ ಕುರಿತಾಗಿಯೂ ಚಿಂತಿಸಬೇಕಾದ ಅನಿವಾರ್ಯತೆ ಇದೆ.