ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸುವುದು ಗ್ಯಾರಂಟಿ ಆಗಿತ್ತು. ಆ ಜಾಗಕ್ಕೆ ಸೂಕ್ತ ಅಭ್ಯರ್ಥಿ ಹುಡುಕುವ ಕೆಲಸವು ಬಿರುಸಾಗಿ ಸಾಗಿತ್ತು. ಇದೇ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ರಾಜ್ಯ ಸಚಿವ ಸಂಪುಟವನ್ನು ವಿಸ್ತರಣೆ ಮಾಡದಂತೆ ಅಥವಾ ಪುನರ್ರಚನೆ ಮಾಡದಂತೆ ಕೈ ಕಟ್ಟಿಹಾಕಲಾಗಿತ್ತು. ಯಡಿಯೂರಪ್ಪ ಅವರನ್ನು ಕುರ್ಚಿಯಿಂದ ಕದಲಿಸಿದ ಬಳಿಕ ಆಗುವ ಪರಿಣಾಮಗಳನ್ನು ಎದುರಿಸಲು ಏನೇನು ಮಾಡಬೇಕೆಂಬ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿತ್ತು. ಇವೆಲ್ಲದರ ನಡುವೆ ಯಾವುದೇ ಕ್ಷಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಿಬಿಡಬಹುದೆಂದು ರಾಜ್ಯದಲ್ಲಿನ ಯಡಿಯೂರಪ್ಪ ವಿರೋಧಿ ಬಣ ಅಥವಾ ಬಿ.ಎಲ್. ಸಂತೋಷ್ ಬಣ ಸಂಭ್ರಮಾಚರಣೆಗೂ ಸಿದ್ದಗೊಂಡಿತ್ತು. ಆದರೀಗ ಚಿತ್ರಣ ಬದಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಗ್ರಾಮ ಪಂಚಾಯತಿ ಚುನಾವಣೆಗೆ ದಿನಾಂಕ ನಿಗಧಿ ಆಗಿರುವುದರಿಂದ ಯಡಿಯೂರಪ್ಪ ಅವರಿಗೆ ಜೀವದಾನ ಸಿಕ್ಕಂತಾಗಿದೆ. ಮೊದಲಿಗೆ ಇದೇ ಯಡಿಯೂರಪ್ಪ ಸರ್ಕಾರ ಕರೋನಾ ಕಾರಣಕ್ಕೆ ಗ್ರಾಮ ಪಂಚಾಯತಿ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿತ್ತು. ಇದರ ಹಿಂದೆ ಗ್ರಾಮೀಣ ಭಾಗದಲ್ಲಿ ಬಿಜೆಪಿ ಪ್ರಬಲವಾಗಿಲ್ಲದಿರುವುದರಿಂದ ಚುನಾವಣೆ ನಡೆಸದೆ ನೇಮಕಾತಿಗಳ ಮೂಲಕ ತಮ್ಮ ನೆಲೆ ಹಿಗ್ಗಿಸಿಕೊಳ್ಳುವ ದುರಾಲೋಚನೆ ಇತ್ತು. ತಮ್ಮ ಅಜೆಂಡಾ ಈಡೇರಿಸಿಕೊಳ್ಳಲು ‘ಕರೋನಾ’ದ ಕಾರಣ ಕೊಡಲಾಗಿತ್ತು. ಇದು ಆರ್ ಎಸ್ ಎಸ್ ಚಿತಾವಣೆಯಾಗಿದ್ದರೂ ಸರ್ಕಾರದ ಮುಖ್ಯಸ್ಥರಾಗಿರುವ ಯಡಿಯೂರಪ್ಪ ಕೂಡ ಕೈಜೋಡಿಸಿದ್ದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲೂ ಸರ್ಕಾರ ಗ್ರಾಮ ಪಂಚಾಯತಿ ಚುನಾವಣೆ ಮುಂದುಡುವುದೇ ಸೂಕ್ತ ಎಂದು ವಾದಿಸಿತ್ತು. ಆದರೀಗ ಚುನಾವಣಾ ಆಯೋಗ ದಿನಾಂಕ ಪ್ರಕಟಗೊಂಡಿರುವುದು ಯಡಿಯೂರಪ್ಪ ಅವರಿಗೆ ವರವಾಗಿ ಪರಿಣಮಿಸಿದೆ.
Also Read: ಕರ್ನಾಟಕ: ಗ್ರಾಮ ಪಂಚಾಯಿತಿ ಚುನಾವಣೆ ದಿನಾಂಕ ಘೋಷಣೆ
ಯಡಿಯೂರಪ್ಪ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಲು ಬಿಜೆಪಿ ಹೈಕಮಾಂಡ್ ಒಪ್ಪಿಗೆ ನೀಡಿದ್ದೇ ಒಲ್ಲದ ಮನಸ್ಸಿನಿಂದ. ಅಂದಿನಿಂದ ಈವರೆಗೆ ಯಡಿಯೂರಪ್ಪ ಅವರ ಪ್ರತಿ ನಡೆಗೂ ತಡೆಯೊಡ್ಡುವ ಕೆಲಸಗಳೇ ಆಗಿವೆ. ನಿರಂತರವಾಗಿ ಯಡಿಯೂರಪ್ಪ ಅವರನ್ನು ಮುಜುಗರಕ್ಕೊಳಪಡಿಸಲಾಗಿದೆ. ಯಡಿಯೂರಪ್ಪ ಅವರ ಮೇಲಿನ ಸಿಟ್ಟಿಗೆ ರಾಜ್ಯ ಸರ್ಕಾರಕ್ಕೆ ಬರಬೇಕಾದ ಅನುದಾನಗಳು ತಡವಾಗತೊಡಗಿವೆ. ಸಂಪುಟ ವಿಸ್ತರಣೆ ಮತ್ತು ಪುನರ್ರಚನೆಗೆ ಅವಕಾಶ ಕೋರಿ ದೆಹಲಿಗೆ ಹೋಗಿದ್ದ ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರ ಸಮಯಾವಕಾಶ ಪಡೆಯಲು ಕಾಡಿ ಬೇಡಬೇಕಾಯಿತು. ಕಡೆಗೂ ಅಮಿತ್ ಶಾ ಭೇಟಿಗೆ ಅವಕಾಶವನ್ನೇ ನೀಡಲಿಲ್ಲ. ಇವೆಲ್ಲವೂ ‘ಯಡಿಯೂರಪ್ಪ ಬೇಡ’ ಎಂಬ ಸಂದೇಶಗಳನ್ನು ರವಾನಿಸಲು ತೆಗೆದುಕೊಂಡ ಕ್ರಮಗಳು.
Also Read: ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪರಿಗಿಂತ ಹೆಚ್ಚಾಯಿತು ಬಿ ಎಲ್ ಸಂತೋಷ್ ಬಲ!
ಯಾರು ಸೂಕ್ತ ಅಭ್ಯರ್ಥಿ?
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದರೆ ಲಿಂಗಾಯತ ಮತಗಳು ಕೈಬಿಟ್ಟುಹೋಗುತ್ತವೆ ಎಂಬ ಭಯ ಬಿಜೆಪಿ ಹೈಕಮಾಂಡ್ ನಾಯಕರನ್ನು ಕಾಡುತ್ತಿದೆ. ಆದ್ದರಿಂದ ‘ಯಡಿಯೂರಪ್ಪ ಅವರನ್ನು ತೆರೆಯ ಹಿಂದೆಗೂ ಸರಿಸಲೂಬೇಕು, ಲಿಂಗಾಯತ ಮತಗಳನ್ನು ಉಳಿಸಿಕೊಳ್ಳಲೂಬೇಕು’ ಎಂಬ ಹೊಸ ಸೂತ್ರವನ್ನು ಎಣೆಯಲಾಗಿದೆ. ಆದ್ದರಿಂದ ಯಡಿಯೂರಪ್ಪ ಸ್ಥಾನಕ್ಕೆ ಲಿಂಗಾಯತ ನಾಯಕನನ್ನೇ ಪ್ರತಿಷ್ಠಾಪಿಸುವುದು ಕೂಡ ಬಹುತೇಕ ಗ್ಯಾರಂಟಿಯಾಗಿದೆ. ಆದರೆ ‘ಯಾರು’ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಅದು ಗೊತ್ತಾದ ದಿನವೇ ಯಡಿಯೂರಪ್ಪ ಕುರ್ಚಿಯ ಕಾಲು ಕಡಿಯುವ ಕೆಲಸ ಆಗುತ್ತಿತ್ತು. ಅಷ್ಟರೊಳಗೆ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗಿದೆ.
Also Read: ವೀರಶೈವ ಲಿಂಗಾಯತರಿಗೆ ಒಬಿಸಿ ಮೀಸಲಾತಿ; BSY ಬ್ರಹ್ಮಾಸ್ತ್ರಕ್ಕೆ ಹೈಕಮಾಂಡ್ ಬ್ರೇಕ್
ಗ್ರಾಮ ಪಂಚಾಯತಿ ಚುನಾವಣೆ ಘೋಷಣೆಯಾಗಿರುವುದರಿಂದ ತಿಂಗಳ ಮಟ್ಟಿಗೆ ಯಡಿಯೂರಪ್ಪ ಮುಖ್ಯಮಂತ್ರಿ ಮುಂದುವರೆಯಲು ಯಾವ್ಯಾವ ಸಮಸ್ಯೆಗಳೂ ಇಲ್ಲ. ಅಷ್ಟೇಯಲ್ಲ, ಈ ಚುನಾವಣೆಯಲ್ಲಿ ಬಿಜೆಪಿ ಒಳ್ಳೆಯ ಸಾಧನೆ ಮಾಡಿದರೆ ಚುನಾವಣೆ ಆಗುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಬದಲಿಸುವುದು ಕಷ್ಟವಾಗಲಿದೆ. ಇದಾದ ಸ್ವಲ್ಪ ದಿನಕ್ಕೆ ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಬಳಿಕ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ಬರಲಿದೆ. ಹೀಗೆ ಸಾಲು ಸಾಲು ಚುನಾವಣೆಗಳು ಮಾತ್ರ ಸದ್ಯಕ್ಕೆ ಯಡಿಯೂರಪ್ಪ ಅವರಿಗೆ ರಕ್ಷಾ ಕವಚಗಳಾಗಿವೆ.
ಸಚಿವಾಕಾಂಕ್ಷಿಗಳಿಗೆ ಶಾಪ
ಕುರ್ಚಿ ಅನಿಶ್ಚಿತತೆಯಲ್ಲಿದ್ದ ಯಡಿಯೂರಪ್ಪ ಅವರಿಗೆ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ಆಗಿರುವುದು ವರವಾಗಿದ್ದರೆ, ಸಚಿವ ಸ್ಥಾನ ಪಡೆಯಲು ಹಲವು ರೀತಿಯ ಲಾಬಿ-ಕಸರತ್ತು ನಡೆಸುತ್ತಿರುವ ಡಜನ್ ಗೂ ಹೆಚ್ಚು ನಾಯಕರಿಗೆ ಶಾಪವಾಗಿ ಪರಿಣಮಿಸಿದೆ. ಇಷ್ಟು ದಿವಸ ಅವಕಾಶ ನೀಡದ ಹೈಕಮಾಂಡ್ ಈಗ ಸಚಿವ ಸಂಪುಟ ವಿಸ್ತರಣೆಗಾಗಲಿ ಅಥವಾ ಪುನರ್ರಚನೆಗಾಗಲಿ ಅವಕಾಶ ನೀಡುವ ಸಾಧ್ಯತೆಗಳಿಲ್ಲ. ಜೊತೆಗೆ ‘ಆಕಾಂಕ್ಷಿಗಳು ಹೆಚ್ಚಿರುವುದರಿಂದ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಯಾವುದಾದರೂ ಇನ್ನಷ್ಟು ಸಮಸ್ಯೆ ಉಂಟಾಗುತ್ತದೆ. ಈಗಾಗಲೇ ಅಲಗುತ್ತಿರುವ ತಮ್ಮ ಕುರ್ಚಿ ಇನ್ನಷ್ಟು ನಡುಗುತ್ತದೆ’ ಎಂಬುದನ್ನು ಚೆನ್ನಾಗಿ ಬಲ್ಲ ಯಡಿಯೂರಪ್ಪ ಅವರಿಗೂ ಬೇಕಾಗಿಲ್ಲ. ಆದರೂ ಸಚಿವಾಕಾಂಕ್ಷಿಗಳ ಕಣ್ಣೊರೆಸಲು ‘ಹೈಕಮಾಂಡ್ ಭೇಟಿ ಮಾಡುವ’ ಶಾಸ್ತ್ರ ಪೂರೈಸಿದ್ದಾರೆ. ಈಗ ‘ಹೈಕಮಾಂಡ್ ಕಡೆ ತೋರಿಸಿಕೊಂಡು’ ಕಾಲ ಕಳೆಯುತ್ತಿದ್ದಾರೆ. ವಾಸ್ತವದಲ್ಲಿ ಅವರಿಗೆ ಕುರ್ಚಿ ಉಳಿಸಿಕೊಳ್ಳುವುದು ಮುಖ್ಯವಾಗಿದೆ. ಅದಕ್ಕಾಗಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಅಷ್ಟೇ.
Also Read: ಬಿಜೆಪಿಯಲ್ಲಿ ಜಾರಕಿಹೊಳಿ ಪ್ರಾಬಲ್ಯ: ಯಡಿಯೂರಪ್ಪಗೆ ಸಕ್ಕರೆ ಲಾಬಿ ಸಂಕಷ್ಟ!
ಹೀಗೆ ತಮ್ಮ ಕೈಹಿಡಿಯಬೇಕಿದ್ದ ಯಡಿಯೂರಪ್ಪ ಅವರಿಗೇ ಸಂಪುಟ ವಿಸ್ತರಣೆ ಅಥವಾ ಪುನರ್ರಚನೆ ಬೇಕಾಗಿಲ್ಲದಿರುವುದರಿಂದ, ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವುದಕ್ಕೂ ಸಿದ್ದರಿಲ್ಲದಿರುವುದರಿಂದ ಹಾಗೂ ಗ್ರಾಮ ಪಂಚಾಯತಿ ಚುನಾವಣೆ ಬಂದಿರುವುದರಿಂದ ಸಚಿವಾಕಾಂಕ್ಷಿಗಳು ಕಡೆಯ ಪಕ್ಷ ತಿಂಗಳ ಮಟ್ಟಿಗಾದರೂ ಸಚಿವರಾಗುವ ತಮ್ಮ ಕನಸಿಗೆ ಕೊಳ್ಳಿ ಇಟ್ಟುಕೊಳ್ಳಲೇಬೇಕು. ಅದರಲ್ಲೂ ಹಿಂದಿನ ಸರ್ಕಾರದಲ್ಲಿ ಇದ್ದ ಮಂತ್ರಿ ಸ್ಥಾನವನ್ನು ತ್ಯಜಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ ಗೆ ಇದು ಸರಿಯಾದ ಹೊಡೆತವಾಗಿದೆ. ಅದೇ ರೀತಿ ಸರ್ಕಾರ ಬರಲು ಕಾರಣಕರ್ತರಾದ ಶಾಸಕ ಮುನಿರತ್ನ ನಾಯ್ಡು, ವಿಧಾನ ಪರಿಷತ್ ಸದಸ್ಯರಾದ ಎಚ್. ವಿಶ್ವನಾಥ್ ಮತ್ತು ಸಿ.ಪಿ. ಯೋಗೇಶ್ವರ್ ಅವರ ಕನಸುಗಳೂ ನುಚ್ಚು ನೂರಾಗಿವೆ. 9 ಬಾರಿ ಗೆದ್ದಿರುವ, ಪ್ರತಿ ಸಲವೂ ಹೆಸರು ಕೇಳಿಬರುವ ಉಮೇಶ್ ಕತ್ತಿ ಕೂಡ ಕಾಯಬೇಕಾಗಿದೆ. ಗ್ರಾಮ ಪಂಚಾಯತಿ ಚುನಾವಣೆ ಮುಖ್ಯಮಂತ್ರಿ ಅಳಿವು-ಉಳಿವನ್ನು ನಿರ್ಧರಿಸುವಂತಾಗಿದೆ.