ಹಿಂದಿನಿಂದಲೂ ಕೇಂದ್ರ ಸರ್ಕಾರ ಆಯಾ ರಾಜ್ಯದ ಸ್ಥಳೀಯ ಸರ್ಕಾರಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಲೇ ಬಂದಿದೆ. ಇನ್ನು ಅಧಿಕಾರದಲ್ಲಿರುವ ಉತ್ತರ ಭಾರತದವರಂತೂ ತಮ್ಮ ಭಾಷೆಯನ್ನು ದಕ್ಷಿಣ ಭಾರತದ ಮೇಲೆ ಹೇರಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಕೇಂದ್ರ ಹಿಂದಿ ಪರ ನೀತಿಯಿಂದ ಸ್ಥಳೀಯ ಭಾಷೆಗಳು ಬಡವಾಗುತ್ತಿವೆ ಎಂಬ ವಾದ ಪದೇ ಪದೇ ಮುನ್ನೆಲೆಗೆ ಬರುತ್ತಿದೆ. ಈಗಲೂ ಇದು ಪುನರಾವರ್ತಿತವಾಗಿದೆ.
ಬ್ಯಾಂಕ್, ಶಿಕ್ಷಣ, ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿಯೂ ಹಿಂದಿಯದ್ದೇ ಕಾರುಬಾರು ಕಳೆದೈದು ವರ್ಷಗಳಿಂದ ಆರಂಭವಾಗಿದೆ. ಹಾಗಾಗಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಸ್ಥಳೀಯ ರಾಜ್ಯ ಸರ್ಕಾರಗಳು ಹೋರಾಟ ಮಾಡುತ್ತಲೇ ಇವೆ. ದಕ್ಷಿಣ ಭಾರತದ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳದಲ್ಲಿ ಎಷ್ಟೇ ಹಿಂದಿ ಹೇರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದರೂ ಕೇಂದ್ರ ಕ್ಯಾರೇ ಎನ್ನುತ್ತಿಲ್ಲ ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ. ನಾವು ಎಷ್ಟೇ ಕೂಗಾಡಿದರೂ ಕೇಂದ್ರ ತನ್ನ ಪಾಡಿಗೆ ಸ್ಥಳೀಯರ ಮೇಲೆ ಹಿಂದಿ ಹೇರಿಕೆ ಬಾಣ ಬಿಡುತ್ತಲೇ ಬಂದಿದೆ ಎಂದರೆ ಅತಿಶಯೋಕ್ತಿ ಆಗಲಾರದು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹೀಗಿರುವಾಗಲೇ ಆಡಳಿತದಲ್ಲಿ ಸಂಪೂರ್ಣ ಕನ್ನಡ ಅನುಷ್ಠಾನ ಕುರಿತಂತೆ ಬುಧವಾರ ವಿಧಾನಸೌಧದಲ್ಲಿ ಕೇಂದ್ರೀಯ ವಿದ್ಯಾಲಯ ಸಂಘಟನೆಯೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಅವರು ವರ್ಚುವಲ್ ಸಭೆ ನಡೆಸಿದರು. ಈ ವೇಳೆ ರಾಜ್ಯದ ಕೇಂದ್ರೀಯ ವಿದ್ಯಾಲಯಗಳಲ್ಲಿ ಕನ್ನಡವನ್ನು ಕಡೆಗಣಿಸುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿರುವ ಎಲ್ಲ ಶೈಕ್ಷಣಿಕ ಸಂಸ್ಥೆಗಳು 2015ರ ಕನ್ನಡ ಭಾಷಾ ಕಲಿಕಾ ಅಧಿ ನಿಯಮ ಅಳವಡಿಸಿಕೊಳ್ಳಬೇಕು. ಇದರ ಅನ್ವಯ ಕನ್ನಡವನ್ನು ದ್ವಿತೀಯ ಭಾಷೆಯಾಗಿ ಬೋಧಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ತಾಕೀತು ಮಾಡಿದರು.
ಕೇಂದ್ರೀಯ ವಿದ್ಯಾಲಯಕ್ಕೆ ಸೇರುವ ಮಕ್ಕಳಲ್ಲಿ ಕನ್ನಡ ಕಲಿಯುವ ಆಸಕ್ತಿಯಿದೆ. ಹೀಗಿದ್ದರೂ ಬಲವಂತವಾಗಿ ಹಿಂದಿ, ಸಂಸ್ಕೃತವನ್ನು ಕಲಿಯುವಂತೆ ಹೇರಿಕೆ ಮಾಡಲಾಗುತ್ತಿದೆ. ಹೀಗೆ ಹಿಂದಿ ಹೇರಿಕೆ ಮಾಡುವುದು ಒಳ್ಳೆಯದಲ್ಲ ಎಂದರು.
ಇನ್ನು ಸಭೆಯಲ್ಲಿ ಶಿಕ್ಷಣ ತಜ್ಞ ಡಾ. ವಿ. ಪಿ ನಿರಂಜನಾ ಆರಾಧ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ ಮುರಳೀಧರ, ಕೇಂದ್ರೀಯ ವಿದ್ಯಾಲಯ ಸಂಘಟನೆಯ ಉಪ ಆಯುಕ್ತರಾದ ಡಾ. ಎನ್ ವಸಂತ್, ಅಧ್ಯಕ್ಷರ ಅಪ್ತ ಕಾರ್ಯದರ್ಶಿ ಡಾ. ವೀರಶೆಟ್ಟಿ ಮತ್ತಿತರರು ಇದ್ದರು