ಮಹಾತ್ಮಾ ಗಾಂಧೀಜಿ ಜೀವನಗಾಥೆ ಹೇಳಿದ ಮೊದಲ ಸಿನಿಮಾ ‘ಗಾಂಧಿ’. ರಿಚರ್ಡ್ ಅಟಿನ್ಬರೊ ನಿರ್ದೇಶನದಲ್ಲಿ ತಯಾರಾದ ಚಿತ್ರಕ್ಕೆ ದೊಡ್ಡ ಮನ್ನಣೆ ಸಿಕ್ಕಿತು. ಪಾತ್ರ, ವಸ್ತು ಮತ್ತು ಮೇಕಿಂಗ್ನಲ್ಲೂ ಅಪಾರ ಮೆಚ್ಚುಗೆ ಗಳಿಸಿದ ಚಿತ್ರವಿದು. ಮಹಾತ್ಮನ ಪಾತ್ರಕ್ಕೆ ಜೀವ ತುಂಬಿದ್ದ ಬ್ರಿಟಿಷ್ ನಟ ಬೆನ್ ಕಿಂಗ್ಸ್ಲೇ ಪ್ರತಿಷ್ಠಿತ ಆಸ್ಕರ್ ಪುರಸ್ಕಾರಕ್ಕೆ ಭಾಜನರಾದರು. ಭಾರತದ ಸ್ವಾತಂತ್ರ್ಯ ಸಂಗ್ರಾಮ ಮತ್ತು ಗಾಂಧೀಜಿ ಹೋರಾಟ ಇಲ್ಲಿ ಅತ್ಯಂತ ಸಮರ್ಪಕವಾಗಿ ತೆರೆಗೆ ಬಂದಿತ್ತು. ನಮ್ಮ ಸ್ವರಾಜ್ಯದ ಕಥೆಯನ್ನು ತೆರೆಗೆ ತಂದದ್ದು ಬ್ರಿಟಿಷ್ ನಿರ್ದೇಶಕ ರಿಚರ್ಡ್ ಅಟಿನ್ಬರೋ ಎನ್ನುವುದೇ ಸೋಜಿಗ. ಇಂಗ್ಲಿಷ್ ಭಾಷೆಯಲ್ಲಿ ತಯಾರಾದ ಪ್ರಯೋಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ಹಿಂದಿ ಚಿತ್ರರಂಗದ ಖ್ಯಾತ ತಾರೆಯರಾದ ಅಮರೀಶ್ ಪುರಿ, ಓಂ ಪುರಿ, ಸಯೀದ್ ಜಾಫ್ರಿ ಇತರರು ನಟಿಸಿದ್ದರು. ಗಾಂಧೀಜಿ ಪತ್ನಿ ಕಸ್ತೂರಿ ಪಾತ್ರದಲ್ಲಿ ನಟಿ ರೋಹಿಣಿ ಹತ್ತಂಗಡಿ ಅಭಿನಯಿಸಿದ್ದರು. ಮಹಾತ್ಮನ ಪಾತ್ರಗಳಲ್ಲಿ ಕಾಣಿಸಿಕೊಂಡ ನಟರ ಪೈಕಿ ಬೆನ್ ಅಭಿನಯಕ್ಕೆ ಹೆಚ್ಚಿನ ಅಂಕ ಕೊಡಲಾಗುತ್ತದೆ.

`ಗಾಂಧಿ’ ಪಾತ್ರದಲ್ಲಿ ಗಮನ ಸೆಳೆದ ಮತ್ತೊಬ್ಬ ಕಲಾವಿದ ಸುರೇಂದ್ರ ರಾಜನ್. ವೀರ್ ಸಾವರ್ಕರ್ (2001), ಲೆಜೆಂಡ್ ಆಪ್ ಭಗತ್ ಸಿಂಗ್ (2002), ನೇತಾಜಿ ಸುಭಾಷ್ ಚಂದ್ರ ಭೋಸ್ (2005) ಚಿತ್ರಗಳಲ್ಲಿ ಅವರು ಗಾಂಧೀಜಿಯಾಗಿ ಕಾಣಿಸಿಕೊಂಡಿದ್ದರು. ರಂಗಭೂಮಿ ಹಿನ್ನೆಲೆಯ ಕಲಾವಿದ ಪಾತ್ರದ ಔಚಿತ್ಯ ಅರಿತು ನಟಿಸಿದ್ದರು. ಆದರೆ ಇವರು ನಟಿಸಿದ ಚಿತ್ರಗಳಲ್ಲಿ ಮಹಾತ್ಮನ ಚಿತ್ರಣಕ್ಕೆ ಹೆಚ್ಚು ಅವಕಾಶ ಇರಲಿಲ್ಲ. ಸಾವರ್ಕರ್, ಭಗತ್ ಸಿಂಗ್ ಮತ್ತು ಭೋಸ್ ಆತ್ಮಕಥೆಗಳಿದ್ದವು. ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂದಿಸಿದಂತೆ ಇವರೆಲ್ಲರಿಗೆ ಗಾಂಧೀಜಿ ಅವರೊಂದಿಗೆ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವು. ಸಹಜವಾಗಿಯೇ ಈ ಸಿನಿಮಾಗಳಲ್ಲಿ ಮಹಾತ್ಮನ ಪಾತ್ರಕ್ಕೆ ಹಿನ್ನಡೆಯಾಗಿತ್ತು. ಮೂರೂ ಚಿತ್ರಗಳಲ್ಲೂ ಗಾಂಧೀಜಿ ಪಾತ್ರ ಕೊಂಚ ಕಳೆಗುಂದಿತ್ತು ಎಂದೇ ಹೇಳಬಹುದು.

ಮೇಕಿಂಗ್ ಆಫ್ ಮಹಾತ್ಮಾ (1996) ಚಿತ್ರದಲ್ಲಿ ರಜಿತ್ ಕಪೂರ್ ಶೀರ್ಷಿಕೆ ಪಾತ್ರ ನಿರ್ವಹಿಸಿದ್ದರು. ಹಿಂದಿ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ತಯಾರಾದ ಸಿನಿಮಾ `ಮೇಕಿಂಗ್ ಆಫ್ ಮಹಾತ್ಮಾ’. ಶ್ಯಾಂ ಬೆನಗಲ್ ಚಿತ್ರ ನಿರ್ದೇಶಿಸಿದ್ದರು. ಹಿಂದಿ ಅವತರಣಿಕೆಯ ಶೀರ್ಷಿಕೆ `ಗಾಂಧಿ ಸೆ ಮಹಾತ್ಮಾ ತಕ್’. ಬೆನಗಲ್ರ ಅಚ್ಚುಮೆಚ್ಚಿನ ನಟ ರಜಿತ್ ಕಪೂರ್ ಶೀರ್ಷಿಕೆ ಪಾತ್ರದಲ್ಲಿ ನಟಿಸಿದ್ದರು. ಗಾಂಧೀಜಿ ಕುರಿತು ಭಿನ್ನ ನೆಲೆಯಲ್ಲಿ ಚಿತ್ರಿತವಾದ ಪ್ರಯೋಗವಿದು. ದಕ್ಷಿಣ ಆಫ್ರಿಕಾದಲ್ಲಿ ಅವರು ಬ್ಯಾರಿಸ್ಟರ್ ಆಗಿ ಕಾರ್ಯನಿರ್ವಹಿಸಿದ್ದ ಸಂದರ್ಭದ ಮೇಲೆ ಬೆಳಕು ಚೆಲ್ಲಲಾಗಿತ್ತು. ವಿಶೇಷವೆಂದರೆ ಭಾರತ ಮತ್ತು ದಕ್ಷಿಣ ಆಫ್ರಿಕಾದ ಸಿನಿಮಾ ಸಂಸ್ಥೆ ಜಂಟಿಯಾಗಿ ಚಿತ್ರ ನಿರ್ಮಿಸಿದ್ದವು. ಫಾತಿಮಾ ಮೀರ್ ಅವರ `ದಿ ಅಪ್ರೆಂಟಿಸ್ಶಿಪ್ ಆಫ್ ಎ ಮಹಾತ್ಮಾ’ ಕೃತಿ ಸಿನಿಮಾಗೆ ಸೂರ್ತಿ. ಗಾಂಧೀಜಿಯಾಗಿ ರಜಿತ್ ಕಪೂರ್ ಪ್ರಭಾವಶಾಲಿ ಅಭಿನಯ ನೀಡಿದ್ದರು.

ಬಾಬಾಸಾಹೇಬ್ ಅಂಬೇಡ್ಕರ್ (2000) ಚಿತ್ರದಲ್ಲಿ ಮೋಹನ್ ಗೋಖಲೆ ಗಾಂಧೀಜಿಯಾಗಿ ಗಮನಸೆಳೆದಿದ್ದರು. 2000ರ ನಂತರ ಭಾರತೀಯ ಸಿನಿಮಾ ತಂತ್ರಜ್ಞರು ಇತಿಹಾಸದ ಕಥೆಗಳತ್ತ ಹೊರಳಿದರು. ಇತಿಹಾಸದ ಪುಸ್ತಕಗಳಲ್ಲಿ ದಾಖಲಾಗಿರುವುದಕ್ಕಿಂತ ಹೆಚ್ಚಿನದನ್ನು ತೆರೆ ಮೇಲೆ ತೋರಿಸುವ ಉದ್ದೇಶ ಅವರದಾಗಿತ್ತು. ಇದೇ ಅವಧಿಯಲ್ಲಿ ಚಿತ್ರಣಗೊಂಡ ಸಿನಿಮಾ `ಬಾಬಾಸಾಹೇಬ್ ಅಂಬೇಡ್ಕರ್’. ಜಬ್ಬಾರ್ ಪಟೇಲ್ ನಿರ್ದೇಶನದ ಸಿನಿಮಾ ಇಂಗ್ಲಿಷ್ ಭಾಷೆಯಲ್ಲಿ ತಯಾರಾಗಿತ್ತು. ಮಹಾತ್ಮಾ ಗಾಂಧೀಜಿ ಪಾತ್ರವನ್ನು ಮೊದಲ ಬಾರಿಗೆ ಇಲ್ಲಿ ನೇತ್ಯಾತ್ಮಕ ಛಾಯೆಯಲ್ಲಿ ಸೆರೆಹಿಡಿಯಲಾಗಿತ್ತು. ಉಪವಾಸ, ಸತ್ಯಾಗ್ರಹವೆನ್ನುವ ಆಯುಧಗಳೊಂದಿಗೆ ಗಾಂಧಿ ವ್ಯವಸ್ಥೆಯನ್ನು ಬ್ಲ್ಯಾಕ್ಮೇಲ್ ಮಾಡುತ್ತಾರೆ ಎನ್ನುವ ಚಿತ್ರಣ. ಅದ್ಧೂರಿ ವೆಚ್ಚದಲ್ಲಿ ತಯಾರಾದ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಯಶಸ್ಸು ಕಂಡಿತ್ತು. ದಕ್ಷಿಣದ ಖ್ಯಾತ ನಟ ಮುಮ್ಮೂಟಿ ಅಂಬೇಡ್ಕರ್ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಉತ್ತಮ ಅಭಿನಯಕ್ಕಾಗಿ ಅವರಿಗೆ ರಾಷ್ಟ್ರ ಪ್ರಶಸ್ತಿಯೂ (1999) ಸಂದಿತ್ತು.


ಕಮಲ ಹಾಸನ್ ನಟಿಸಿ ನಿರ್ಮಿಸಿ, ನಿರ್ದೇಶಿಸಿದ `ಹೇ ರಾಮ್’ (2000) ವಿವಾದಗಳಿಂದಲೇ ಸುದ್ದಿಯಾಗಿದ್ದ ಸಿನಿಮಾ. ಹಿಂದಿ ಚಿತ್ರರಂಗ ಕಂಡ ಪ್ರತಿಭಾವಂತ ನಟ ನಾಸಿರುದ್ದೀನ್ ಷಾ ಗಾಂಧಿಯಾಗಿ ನಟಿಸಿದ್ದರು. ಭಾರತ – ಪಾಕಿಸ್ತಾನ ವಿಭಜನೆ ಮತ್ತು ಗಾಂಧೀಜಿ ಹತ್ಯೆ ಹಿನ್ನೆಲೆಯಲ್ಲಿ ಹೆಣೆದ ಅರೆ ಕಾಲ್ಪನಿಕ ಕಥೆ. ಹಿಂದಿ ಮತ್ತು ತಮಿಳು ಎರಡೂ ಭಾಷೆಗಳಲ್ಲಿ ಚಿತ್ರ ತಯಾರಾಗಿತ್ತು. ನಿರ್ದೇಶಕ ಕಮಲ್ ಚಿತ್ರದ ಗಾಂಧೀಜಿ ಪಾತ್ರಕ್ಕೆ ನಾಸಿರುದ್ದೀನ್ ಶಾ ಅವರನ್ನು ಆಯ್ಕೆ ಮಾಡಿದ್ದರು. ಶ್ರೇಷ್ಠ ನಟ ನಾಸಿರ್ ಅಪ್ಪಟ ಗುಜರಾತಿ ಉಚ್ಛಾರಣೆಯೊಂದಿಗೆ ತೆರೆ ಮೇಲೆ ಗಾಂಧೀಜಿಯನ್ನು ಸಾಕಾರಗೊಳಿಸಿದ್ದರು. ಸಾಮಾನ್ಯ ವ್ಯಕ್ತಿಗಳ ಮೇಲೆ ಗಾಂಧಿ ಹೇಗೆಲ್ಲಾ ಪ್ರಭಾವ ಬೀರಿದ್ದರು ಎನ್ನುವ ವಸ್ತು. ಈ ಚಿತ್ರದಲ್ಲಿಯೂ ಗಾಂಧೀಜಿ ಚಿತ್ರಣ ನೇತ್ಯಾತ್ಮಕವಾಗಿತ್ತು. ಸಿನಿಮಾ ತೆರೆಕಂಡಾಗ ದೇಶದ ಕೆಲವೆಡೆ ಪ್ರತಿಭಟನೆಗಳಾಗಿದ್ದವು. ವಿದೇಶಗಳಲ್ಲಿ ಉತ್ತಮ ಪ್ರದರ್ಶನ ಕಂಡ `ಹೇ ರಾಮ್’ ಭಾರತದಲ್ಲಿ ಸೋತಿತ್ತು.

ಗಾಂಧಿ ತತ್ವಾದರ್ಶಗಳಿಗೆ ಸಮಕಾಲೀನ ಟಚ್ ನೀಡಿದ ಸಿನಿಮಾ `ಲಗೇ ರಹೋ ಮುನ್ನಾಭಾಯ್’ (2006). ಜನಪ್ರಿಯತೆ ಮತ್ತು ಮನರಂಜನೆ ಎರಡೂ ವಿಭಾಗದಲ್ಲಿ ಗಾಂಧೀಜಿ ಪಾತ್ರ ಗೆದ್ದಿತ್ತು. ಮರಾಠಿ ನಟ ದಿಲೀಪ್ ಪ್ರಭಾವಲ್ಕರ್ ಈ ಪಾತ್ರದಲ್ಲಿದ್ದರು. ಆಧುನಿಕ ಜಗತ್ತಿಗೆ ಹೊಂದಿಕೆಯಾಗುವ ಗಾಂಧಿ ಮಾದರಿಗೆ ನಿರ್ದೇಶಕರು `ಗಾಂಧಿಗಿರಿ’ ಎಂದು ಹೆಸರಿಟ್ಟಿದ್ದರು. ಜನಪ್ರಿಯ ಮುನ್ನಾಭಾಯ್ ಸರಣಿಯ ಆ ಚಿತ್ರದಲ್ಲಿ ನಾಯಕ ಅಂಡರ್ವರ್ಲ್ಡ್ ಡಾನ್. ಗಾಂಧಿ ಆತ್ಮದೊಂದಿಗೆ ಮಾತನಾಡುವ ಮುನ್ನಾ ಭಾಯ್ ಮಹಾತ್ಮನ ತತ್ವಗಳಿಗೆ ಮೊರೆ ಹೋಗುತ್ತಾನೆ. ಇವುಗಳ ಮೂಲಕ ಜನಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುತ್ತಾನೆ. ಚಿತ್ರಕ್ಕೆ ವಿಮರ್ಶಕರು ಮಾತ್ರವಲ್ಲದೆ ಪ್ರೇಕ್ಷಕರಿಂದೂ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮತ್ತೊಂದೆಡೆ ವಿಚಾರವಾದಿಗಳು, ಗಾಂಧಿ ತತ್ವಗಳನ್ನು ಹಾಸ್ಯ ಮಾಡಲಾಗಿದೆ ಎಂದು ಟೀಕಿಸಿದ್ದರು.

ಗಾಂಧೀಜಿ ಕುಟುಂಬದ ಬಗ್ಗೆ ಬೆಳಕು ಚೆಲ್ಲಿದ ಸಿನಿಮಾ `ಗಾಂಧಿ ಮೈ ಫಾದರ್’ (2007). ಅನಿಲ್ ಕಪೂರ್ ನಿರ್ಮಾಣದ ಚಿತ್ರದ ಗಾಂಧಿ ಪಾತ್ರದಲ್ಲಿ ದರ್ಶನ್ ಜರಿವಾಲಾ ನಟಿಸಿದ್ದರು. `ರಾಷ್ಟ್ರಪಿತ’ನೆಂದು ಪೂಜಿಸಲ್ಪಟ್ಟವರು ಗಾಂಧಿ. ಆದರೆ ತಮ್ಮ ಪುತ್ರ ಹರಿಲಾಲ್ ಗಾಂಗೆ ಅವರು ಒಳ್ಳೆಯ ತಂದೆಯಾಗಲಿಲ್ಲ ಎಂದು ಚಿತ್ರಿಸಲಾಗಿತ್ತು. ಹರಿಲಾಲ್ ಬದುಕಿನ ಕಥೆಯ `ಹರಿಲಾಲ್ ಗಾಂಧಿ : ಎ ಲೈಫ್’ ಸಿನಿಮಾಗೆ ಸೂರ್ತಿ. ಗಾಂಧೀಜಿಯಾಗಿ ಕಾಣಿಸಿಕೊಂಡಿದ್ದ ದರ್ಶನ್ ಜರಿವಾಲಾ ಅಭಿನಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕೂರ್ಮಾವತಾರ’ (2011) ಗಾಂಧಿ ಕುರಿತಾಗಿ ಒಂದೊಳ್ಳೆಯ ಚಿತ್ರಣ ಕೊಡುವ ಕನ್ನಡ ಸಿನಿಮಾ. ಶಿಕಾರಿಪುರ ಕೃಷ್ಣಮೂರ್ತಿ ಅವರು ಗಾಂಧೀಜಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಗಾಂಧಿ ತತ್ವಾದರ್ಶಗಳನ್ನು ಅನುಸರಿಸುವುದಕ್ಕಿಂತ ಅವರ ವೇಷ ಹಾಕಿ ನಟಿಸೋದು ಸುಲಭ ಎನ್ನುವ ಅಂಶವನ್ನು ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಮಾರ್ಮಿಕವಾಗಿ ನಿರೂಪಿಸಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಷಿಕ ಭಾಷಾ ಸಿನಿಮಾ ರಾಷ್ಟ್ರಪ್ರಶಸ್ತಿಯ ಗೌರವ ಲಭಿಸಿತ್ತು.
