ಬಹುನಿರೀಕ್ಷಿತ ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಕರೋನಾ ಸಂಕಷ್ಟ ಮತ್ತು ನಿರುದ್ಯೋಗದ ಬಿಕ್ಕಟ್ಟಿನ ವಿಷಯದಲ್ಲಿ ದೇಶದ ಜನಸಾಮಾನ್ಯರ ಜನಾದೇಶವಾಗಲಿದೆ ಎಂಬ ಲೆಕ್ಕಾಚಾರಗಳು ಕೇಳಿಬಂದಿದ್ದವು. ಆದರೆ, ಇದೀಗ ಬಹುತೇಕ ಶೇ.50ರಷ್ಟು ಮತ ಎಣಿಕೆ ಮುಗಿಯುವ ಹೊತ್ತಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಹೆಚ್ಚಿನ ಮುನ್ನಡೆ ಸಾಧಿಸಿದ್ದು, ಬಹುತೇಕ ಮುಂದಿನ ಸುತ್ತುಗಳಲ್ಲಿಯೂ ಇದೇ ಮುನ್ನಡೆ ಕಾಯ್ದುಕೊಂಡಲ್ಲಿ ಬಿಜೆಪಿ ಮೈತ್ರಿ ಮತ್ತೊಮ್ಮೆ ಬಿಹಾರದ ಅಧಿಕಾರದ ಗದ್ದುಗೆಗೇರುವುದು ನಿಶ್ಚಿತವಾಗಿದೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಈ ಸಮರದಲ್ಲಿ ಸದ್ಯದ ಸ್ಥಿತಿಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮತ್ತು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ನೇತೃತ್ವದ ಮಹಾ ಘಟಬಂಧನ್ ಮೈತ್ರಿ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ. 133 ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಯುನ ಮೈತ್ರಿಕೂಟದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದರೆ, 99 ಕ್ಷೇತ್ರಗಳಲ್ಲಿ ಮಹಾಘಟಬಂಧನದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡಿದ್ದಾರೆ. ಎರಡು ಕಡೆ ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಹುತೇಕ ಚುನಾವಣಾ ಮತಗಟ್ಟೆ ಸಮೀಕ್ಷೆಗಳ ಲೆಕ್ಕಾಚಾರವನ್ನು ಈ ಆರಂಭಿಕ ಫಲಿತಾಂಶಗಳು ತಲೆಕೆಳಗು ಮಾಡಿದ್ದು, ಯಾವೊಂದು ಸಮೀಕ್ಷೆಯೂ ನಿರೀಕ್ಷೆ ಮಾಡದ ರೀತಿಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವತ್ತ ದಾಪುಗಾಲಿಟ್ಟಿದೆ. ಅದೇ ಹೊತ್ತಿಗೆ ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ಸಾಕಷ್ಟು ಸ್ಥಾನಗಳನ್ನು ಕಳೆದುಕೊಳ್ಳುವ ದಿಕ್ಕಿನಲ್ಲಿದ್ದು, ಬಹುತೇಕ ಅದರ ಅಭ್ಯರ್ಥಿಗಳಿಗೆ ಪಾಸ್ವಾನ್ ಅವರ ಎಲ್ ಜೆಪಿ ದೊಡ್ಡ ಪೆಟ್ಟು ಕೊಟ್ಟಿದೆ. ಆ ಮೂಲಕ ಬಿಜೆಪಿಯ ತಂತ್ರಗಾರಿಕೆ ಫಲಿಸಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಸದ್ಯದ ಫಲಿತಾಂಶದ ಚಿತ್ರಣದ ಪ್ರಕಾರ ಬಿಜೆಪಿ ಬಿಹಾರದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆ ಇದ್ದು ,ಸಿಎಂ ನಿತೀಶ್ ಕುಮಾರ್ ಅವರ ಜೆಡಿಯು ತೀರಾ ಹೀನಾಯ ರೀತಿಯಲ್ಲಿ ಸೋಲು ಕಾಣುವ ಮೂಲಕ ಎನ್ ಡಿಎ ಮೈತ್ರಿಯಲ್ಲಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುವ ಹಾದಿಯಲ್ಲಿದೆ.
Also Read: ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ನಿರ್ಣಾಯಕವಾಗಿರುವ ಬಿಹಾರ ಗೆಲುವು!
ಈ ನಡುವೆ ಎಲ್ಲಾ ಮತಗಟ್ಟೆ ಸಮೀಕ್ಷೆ ಮತ್ರು ಚುನಾವಣಾ ವಿಶ್ಲೇಷಣೆಗಳನ್ನು ತಲೆ ಕೆಳಗು ಮಾಡುವಂತೆ ಮಹಾಘಟಬಂಧನದ ಪ್ರಮುಖ ಪಕ್ಷಗಳಾದ ತೇಜಸ್ವಿ ಯಾದವ್ ಅವರ ಜೆಡಿಯು ಮತ್ತು ಕಾಂಗ್ರೆಸ್ ಕಳೆದ ಬಾರಿಗಿಂತ ಕಳಪೆ ಸಾಧನೆಯ ಹಾದಿಯಲ್ಲಿದ್ದರೆ, ಸಿಪಿಐಎಂಎಲ್, ಸಿಪಿಐ, ಸಿಪಿಎಂ ಸೇರಿದಂತೆ ಮಹಾಘಟಬಂಧನದ ಸಣ್ಣಪಕ್ಣಗಳು ಅಚ್ಷರಿಯ ಮುನ್ನಡೆ ಪಡೆದಿವೆ.
ಈ ನಡುವೆ, ಬಿಜೆಪಿ ತನ್ನದೇ ಮೈತ್ರಿಯ ಜೆಡಿಯು ಮತ್ತು ಅದರ ನಾಯಕ ನಿತೀಶ್ ವಿರುದ್ಧದ ತಂತ್ರಗಾರಿಕೆಯ ಭಾಗವಾಗಿ ಎಲ್ ಜೆಪಿಗೆ ಪರೋಕ್ಷ ಬೆಂಬಲ ನೀಡುತ್ತಿದೆ ಮತ್ರು ಆ ಮೂಲಕ ಮೈತ್ರಿಯಲ್ಲಿ ನಿತೀಶ್ ಪ್ರಭಾವ ಕುಗ್ಗಿಸುವ ಲೆಕ್ಕಾಚಾರ ಇದೆ ಎಂಬ ಚುನಾವಣಾ ವಿಶ್ಲೇಷಣೆಗಳ ಊಹೆಯಂತೆ ಎಲ್ ಜೆಪಿ ಬಹುತೇಕ ಕಡೆ ಜೆಡಿಯುಗೆ ಕಡಿವಾಣ ಹಾಕಿದೆ. ಹಾಗಾಗಿ ಬಿಜೆಪಿ ನೇತೃತ್ವದ ಎನ್ ಡಿಎ ಈಗಿನ ಮುನ್ನಡೆಯನ್ನೇ ಕಾಯ್ದುಕೊಂಢು ಜಯಗಳಿಸಿದರೂ ಚುನಾವಣಾ ಘೋಷಣೆಯಂತೆ ನಿತಿಶ್ ಅವರೇ ಸಿಎಂ ಅಗುವರೆ ಅಥವಾ ಸ್ಚತಃ ನಿತೀಶ್ ಮೈತ್ರಿ ಮುರಿದುಕೊಂಡು ಎರಡನೇ ಅತಿಹೆಚ್ಚು ಸ್ಥಾನ ಗಳಿಸುವ ಸಾಧ್ಯತೆ ಇರುವ ತೇಜಸ್ವಿ ಯಾದವ್ ಜೊತೆ ಕೈಜೋಡಿಸುವರೇ ಎಂಬುದು ಕುತೂಹಲ ಮೂಡಿಸಿದೆ.
ಸದ್ಯದ ಮಾಹಿತಿಯ ಪ್ರಕಾರ, ಎನ್ ಡಿಎ 130 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆ ಪೈಕಿ ಬಿಜೆಪಿ 77, ಜೆಡಿಯು 45, ಇತರೆ 8 ,ಕ್ಷೇತ್ರಗಳಲ್ಲಿ ಮುಂದಿವೆ. ಮಹಾಘಟನಬಂಧನ 102 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದ್ದು, ಆ ಪೈಕಿ ಆರ್ ಜೆಡಿ 66, ಕಾಂಗ್ರೆಸ್ 18, ಸಿಪಿಐಎಂಎಲ್ 11, ಇತರೆ 7 ಕಡೆ ಮುನ್ನಡೆಯಲ್ಲಿವೆ. ಎಲ್ ಜೆಪಿ ಎರಡು ಕಡೆ ಮುನ್ನಡೆ ಪಡೆದಿದೆ.