ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಜನತಾದಳದ (RJD) ನಾಯಕ ತೇಜಸ್ವಿ ಯಾದವ್ ಬಹಳ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಿರುವ ಪಕ್ಷಗಳ ಬಲಾಬಲದಲ್ಲಿ ಆರ್ ಜೆಡಿ ಅತಿಹೆಚ್ಚು ಸ್ನಾನ ಗಳಿಸಿರುವ (75) ದೊಡ್ಡ ಪಕ್ಷ. ಆದರೆ ಅವರ ಮಹಾಘಟಬಂಧನ ಗಳಿಸಿರುವುದು ಕೇವಲ 110 ಮತ್ತು ಎದುರಾಳಿ ಎನ್ ಡಿಎ ಗಳಿಸಿರುವುದು 125, ಆದರೂ ತೇಜಸ್ವಿ ಯಾದವ್ ತಾವೇ ಸರ್ಕಾರ ರಚಿಸುತ್ತೇವೆ ಎಂದು ಹೇಳಿದ್ದಾರೆ.
ಪಾಟ್ನಾದ ತಮ್ಮ ನಿವಾಸದಲ್ಲಿ ಆರ್ ಜೆಡಿಯ ನೂತನ ಶಾಸಕರು ಹಾಗೂ ನಾಯಕರ ಸಭೆ ಕರೆದಿದ್ದ ಅವರು ‘ಸರ್ಕಾರ ರಚನೆಯ’ ಭರವಸೆ ನೀಡಿದ್ದಾರೆ. ಹೇಗೆ ಎಂಬುದನ್ನು ವಿವರಿಸಿದ್ದಾರೆ. ಬಿಹಾರದ ಜನತೆ ಬಿಜೆಪಿ ವಿರುದ್ಧ ಹಾಗೂ ಎನ್ ಡಿಎ ವಿರುದ್ಧ ಮತ ನೀಡಿದ್ದಾರೆ. ಆದರೆ ಚುನಾವಣಾ ಆಯೋಗ ಎನ್ ಡಿಎ ಪರ ಬಹುಮತ ಘೋಷಿಸಿದೆ. ಚುನಾವಣಾ ಅಕ್ರಮದ ಬಗ್ಗೆ ಈಗಾಗಲೇ ಮಹಾಘಟಬಂಧನದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಚುನಾವಣಾ ಆಯೋಗ ಏನು ಕ್ರಮ ತೆಗೆದುಕೊಳ್ಳುತ್ತದೆ ಎಂಬುದನ್ನು ಎದುರು ನೋಡುತ್ತಿದ್ದೇವೆ. ಈ ಹೋರಾಟದಲ್ಲಿ ನಮಗೇ ಗೆಲುವಾಗಲಿದೆ ಎಂದಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದಲ್ಲದೆ ಕೇವಲ 40 ಶಾಸಕರನ್ನು ಗೆದ್ದಿರುವ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು 74 ಸ್ಥಾನಗಳಲ್ಲಿ ಗೆದ್ದಿರುವ ಬಿಜೆಪಿ ನಾಯಕರಿಗೆ ಮನಸ್ಸಿಲ್ಲ. ಬಿಜೆಪಿ ನಾಯಕರು ಪರ್ಯಾಯ ಮಾರ್ಗವನ್ನು ಹುಡುಕುತ್ತಿದ್ದಾರೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗುವುದು ಸುಲಭವಾಗಿ ಉಳಿದಿಲ್ಲ ಎಂದು ಎನ್ ಡಿಎ ಪಾಳೆಯದ ತಲ್ಲಣಗಳನ್ನು ಸಭೆಗೆ ತಿಳಿಸಿದ್ದಾರೆ.
ಬಳಿಕ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಹಾಗೂ ರಾಜ್ಯದಲ್ಲಿ ಆಡಳಿತ ನಡೆಸುತ್ತಿದ್ದ ಜೆಡಿಯು ಪಕ್ಷದ ನಾಯಕರು ‘ಸರ್ಕಾರಿ ಯಂತ್ರ’ವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ‘ಚೋರ್ ದರ್ವಾಜಾ’ (ಕಳ್ಳ ಬಾಗಿಲು) ಮೂಲಕ ಅಧಿಕಾರ ಹಿಡಿದ್ದಾರೆ ಎಂದು ನೇರವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಆರೋಪ ಮಾಡಿದ್ದಾರೆ.
ಬಿಹಾರದ ಜನತೆ ಬದಲಾವಣೆ ಬಯಸಿದ್ದಾರೆ ಎಂಬುದಕ್ಕೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮುನ್ನಡೆಸಿದ ಪಕ್ಷ ಜೆಡಿಯು ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವುದೇ ಉದಾಹರಣೆ. ನಿತೀಶ್ ಕುಮಾರ್ ಇದನ್ನು ಅರ್ಥ ಮಾಡಿಕೊಂಡು ಸ್ವತಃ ಮುಖ್ಯಮಂತ್ರಿ ಸ್ಥಾನದಿಂದ ದೂರ ಇರಬೇಕೆಂದು ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ.
Also Read: ಬಿಹಾರ: ಗೆದ್ದ 68% ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನೆಲೆ
ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ನನ್ನ ವಿರುದ್ಧ ಹಣ ಬಲ, ತೋಳ್ಬಲಗಳನ್ನು ಬಳಸುವುದೂ ಸೇರಿದಂತೆ ನಾನಾ ನಮೂನೆಯ ತಂತ್ರ-ಕುತಂತ್ರ ಮಾಡಿದ್ದಾರೆ. ಆದರೂ ಅವರಿಂದ ನಾನು ಗೆಲ್ಲುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಆರ್ಜೆಡಿ ಅತಿದೊಡ್ಡ ಪಕ್ಷವಾಗುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತರೂ ಜನರ ಹೃದಯದಲ್ಲಿರುವವರು ನಾವೇ ಎಂದು ಹೇಳಿದ್ದಾರೆ.
Also Read: ಬಿಹಾರ ಚುನಾವಣೆ ನೆನಪಿಸಿದ ಪ್ರಾದೇಶಿಕ ಪಕ್ಷಗಳ ಮಹತ್ವ
ಆರ್ ಜೆಡಿ ಮತ್ತು ಕಾಂಗ್ರೆಸ್ ಚುನಾವಣಾ ಫಲಿತಾಂಶದ ಬಗ್ಗೆ ಈಗಾಗಲೇ ಕಾನೂನು ಹೋರಾಟ ಆರಂಭಿಸಿರುವುದರ ನಡುವೆಯೇ ತೇಜಸ್ವಿ ಯಾದವ್ ‘ನಾವೇ ಸರ್ಕಾರ ರಚಿಸುತ್ತೇವೆ’ ಎಂದು ಬಹಿರಂಗವಾಗಿ ಹೇಳಿರುವುದು ಅಚ್ಚರಿ ಮೂಡಿಸಿದೆ. ಅಲ್ಲದೆ ಫಲಿತಾಂಶ ಬಂದು ಎರಡು ದಿನವಾದರೂ ಬಿಜೆಪಿ ಅಧಿಕೃತವಾಗಿ ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ರಾಜಭವನಕ್ಕೆ ಪತ್ರ ಕಳಿಸದೇ ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.