ಭಾರತ ಅಭಿವೃದ್ಧಿಯ ವಿಚಾರದಲ್ಲಿ ಇತರೆ ರಾಷ್ಟ್ರಗಳಿಗೆ ಪೈಪೋಟಿ ಕೊಡಲು ಮುಂದಾಗಿದೆ. ಅದರಲ್ಲಿಯೂ ಡಿಜಿಟಲ್ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರಲಾಗುತ್ತಿದ್ದು, ತಂತ್ರಜ್ಞಾನ, ವಿಜ್ಞಾನದ, ವಾಣಿಜ್ಯ ಕ್ಷೇತ್ರದ ಕಡೆ ಹೆಚ್ಚು ಗಮನ ಹರಿಸಿದ ದೇಶದ ಆಡಳಿತ ವ್ಯವಸ್ಥೆ ರೈತರನ್ನು ಕಡೆಗಣಿಸಿರುವುದು ದುರಂತ. ಬಾಯಲ್ಲಿ ಮಾತ್ರ ರೈತನನ್ನು ಹೊಗಳಿ ರೈತರ ಇಚ್ಚೆಗೆ ವಿರುದ್ದವಾಗಿರುವ ಕಾನೂನುಗಳನ್ನು ಜಾರಿಗೆ ತಂದು ನಾವು ಮಾಡಿದ್ದೇ ಸರಿ ಎನ್ನುವ ಸರ್ವಾಧಿಕಾರದ ಕಾಲ ಮರುಕಳಿಸಿದಂತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅತಿ ಹೆಚ್ಚು ಯುವಜನತೆಯನ್ನು ಹೊಂದಿದ ಭಾರತದಲ್ಲಿ ಅವರಿಗೆ ನಾಯಕತ್ವದ ಅವಕಾಶ ಸಿಗುವುದು ಮರೀಚಿಕೆಯಾಗಿದೆ. ಹೀಗಾಗಿ ರೈತರೊಂದಿಗೆ ಯುವಕರೂ ರಾಜಕೀಯ ನಾಯಕರ ತಪ್ಪುಗಳ ವಿರುದ್ಧ ಸಿಡಿದೆದ್ದಿದ್ದಾರೆ. ಅದರಲ್ಲಿಯೂ ನಿರಂತರವಾಗಿ ಶೋಷಣೆಗೆ ಒಳಗಾಗುತ್ತಿರುವ “ರೈತ” ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ವಿರೋಧಿ ಕಾಯ್ದೆಗಳ ವಿರುದ್ಧ ಸಿಡಿದ್ದೆದ್ದಿದ್ದಾನೆ. ಇತ್ತ ಸರ್ಕಾರ ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಉಳ್ಳವರ ಮತ್ತು ಬಂಡವಾಳಶಾಹಿಗಳ ಕೈಗೊಂಬೆಯಾಗಿದೆ. ಆರ್ಥಿಕ ಸ್ಥಿತಿಗತಿ ಹದಗೆಟ್ಟು, ದೇಶದ ಹಲವು ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಹಂತಕ್ಕೆ ತಲುಪಿದರು ಇನ್ನೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ.
ಸರ್ಕಾರದ ನೀತಿಯ ವಿರುದ್ದ ರೈತರ ಅಸಹನೆ
ಮೋದಿ ಸರ್ಕಾರ ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಗೆ ಸಂಬಂಧಿಸಿದಂತೆ ತಿದ್ದುಪಡಿ ಹಿಂಪಡೆಯುವಂತೆ ಎಐಕೆಎಸ್ಸಿಸಿ, ರಾಷ್ಟ್ರೀಯ ಕಿಸಾನ್ ಮಹಾಸಂಗ್, ಭಾರತೀಯ ಕಿಸಾನ್ ಯೂನಿಯನ್ ಸೇರಿದಂತೆ ದೇಶದಲ್ಲಿ 500ಕ್ಕೂ ಹೆಚ್ಚಿನ ಸಂಘಟನೆಗಳು ಒಂದುಗೂಡಿ ಲಕ್ಷಾಂತರ ರೈತರು ಬೀದಿಗಿಳಿದು ಧರಣಿ ಮಾಡಲು ಮುಂದಾದರು. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾಗಿ ಪೋಲೀಸರನ್ನು ರೈತರ ವಿರುದ್ಧ ಚೂ ಬಿಟ್ಟಿತ್ತು. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೋಡಿ ಮಾಡಿ ರೈತರ ಮನವೊಲಿಸಲು ಮುಂದಾಗಿತ್ತು ಕೂಡಾ. ಆದರೆ, ನೊಂದ ಅನ್ನದಾತ ಮಾತ್ರಾ ಸಿಡಿದೆದ್ದು ಚಳುವಳಿಯನ್ನು ಆರಂಭಿಸಲು ದೆಹಲಿ ಪ್ರವೇಶಿಸಲೂ ಅನುಮತಿಯನ್ನು ನೀಡಲಿಲ್ಲ. ಪ್ರತಿಭಟನೆ ಹತ್ತಿಕ್ಕಲು ಕರೋನಾ ಕಾರಣ ಹೇಳಿ ಅನುಮತಿಯನ್ನು ಹಿಂಪಡೆಯಲಾಗಿತ್ತು. ದೆಹಲಿಯ ಗಡಿಭಾಗಗಳಲ್ಲಿ ಮತ್ತು ರಸ್ತೆಯ ಇಕ್ಕೆಲಗಳಲ್ಲಿ ಪ್ರತಿಭಟನಾ ನಿರತ ರೈತರು ಝಂಡಾ ಹೂಡುವ ಮೂಲಕ ನ್ಯಾಯ ಸಿಗುವವರೆಗೂ ನಿರಂತರ ಪ್ರತಿಭಟನೆಗೆ ಮುಂದಾಗಿದ್ದಾರೆ.

ಕಾಯ್ದೆಯಲ್ಲಿರುವ ರೈತ ವಿರೋಧಿ ಅಂಶಗಳು
ರೈತರು ಯಾವ ಕಾರಣಕ್ಕೆ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ ಎಂಬ ಕುರಿತು ಪ್ರತಿಧ್ವನಿಯು ವಿಸ್ತೃತವಾದ ಲೇಖವನ್ನು ಪ್ರಕಟಿಸಿತ್ತು. ರೈತ ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ, ಸೌಕರ್ಯ ಕಲ್ಪಿಸಿ ಕೊಡುವ ಕಾನೂನು ಎಪಿಎಂಸಿಯನ್ನೇ ಬಲಿ ಪಡೆದುಕೊಳ್ಳುವ ದುರುದ್ದೇಶ ಹೊಂದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿಯವರೆಗೂ ಕೃಷಿ ಉತ್ಪನ್ನ ಮಾರಾಟ ಸಮಿತಿ ಮೇಲಿನ ಎಲ್ಲಾ ಕಾರ್ಯಗಳನ್ನು ನಿರ್ವಹಿಸುತ್ತಿತ್ತು. ಆದರೀಗ ಕಾರ್ಪೋರೇಟ್ ಸಂಸ್ಥೆಗಳೂ ಭಾಗಿಯಾಗಿರುವುದರಿಂದ ಎಪಿಎಂಸಿ ಮುಚ್ಚುವ ಸಂಭವವಿದೆ. ನಂತರ ರೈತರು ಕಾರ್ಪೋರೇಟ್ ಸಂಸ್ಥೆಗಳೂ ನಿಗದಿ ಪಡಿಸಿದ ಕನಿಷ್ಠ ಬೆಂಬಲ ಬೆಲೆಗೆ ತಲೆಬಾಗುವ ಸ್ಥಿತಿ ಎದುರಾಗುತ್ತದೆ. ಇತ್ತ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯೇ ಕಡಿಮೆಯಿದೆ. ನಂತರದ ದಿನದಲ್ಲಿ ಕಾರ್ಪೋರೇಟ್ ಸಂಸ್ಥೆಗಳು ಇದಕ್ಕೂ ಕಡಿಮೆ ಬೆಲೆ ತಂದು ರೈತರನ್ನು ಬೀದಿಗೆ ತಳ್ಳುವ ಹುನ್ನಾರ ಇದಾಗಿದೆ.
ಬೆಲೆ ಭರವಸೆ ಮತ್ತು ಕೃಷಿ ಸೇವೆ ಸಬಲೀಕರಣ ಒಪ್ಪಂದದಿಂದ ಸಣ್ಣ ಹಿಡುವಳಿದಾರರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಇಲ್ಲೂ ಕೂಡ ಕಾರ್ಪೋರೇಟ್ ಸಂಸ್ಥೆಗಳ ಉದ್ಧಾರಕ್ಕೆ ಹೊರಟಂತಿದೆ ಸರ್ಕಾರ. ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ಬಹುರಾಷ್ಟೀಯ ಕಂಪನಿಗಳಿಗೆ ಗುತ್ತಿಗೆ ಕೊಡಲು ಅವಕಾಶ ಕೊಡುತ್ತದೆ. ಇಲ್ಲಿ ಕಾರ್ಪೋರೇಟ್ ಕಂಪನಿಗಳು ರೈತನಿಗೆ ವಂಚಿಸಿ ಅಧಿಕ ಲಾಭ ಪಡೆಯಲು ಹೊರಡುತ್ತವೆ.
ಕೃಷಿ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡುವುದೆಂದು ಕಾಯ್ದೆಯಲ್ಲಿ ತಿಳಿಸಲಾಗಿದೆ. ಅಂದರೆ ಆಹಾರ ಸಾಮಾಗ್ರಿಗಳ ಸಂಗ್ರಹ ಸಾಗಾಟದ ಮೇಲಿದ್ದ ಕೆಲವೊಂದು ಇತಿ ಮಿತಿಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ದೊಡ್ಡ ದೊಡ್ಡ ಕಂಪನಿಗಳು ಅಧಿಕ ಮಟ್ಟದಲ್ಲಿ ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸಿಕೊಂಡು ಕಡಿಮೆ ಬೆಲೆಯಲ್ಲಿ ಸಾಮಾಗ್ರಿಗಳನ್ನು ಕೊಂಡು ಅಧಿಕ ಬೆಲೆಯಲ್ಲಿ ಮಾರಾಟ ಮಾಡುವ ಸಾಧ್ಯತೆಯೇ ಹೆಚ್ಚಿದೆ. ಇದು ಕೂಡ ಖಾಸಗಿ ಕಂಪನೆಗಳ ಲಾಭಕ್ಕೆ ಸಾಕ್ಷಿಯಾಗುತ್ತದೆ ಎಂದು ಎಲ್ಲಾ ಅಂಶಗಳನ್ನು ವಿರೋಧಿಸಿ ಕಾಯ್ದೆ ಹಿಂಪಡೆಯುವಂತೆ ರೈತರು ಪಟ್ಟು ಹಿಡಿದಿದ್ದಾರೆ.
ರೈತರಿಗೆ ದೇಶ ವಿರೋಧಿ ಪಟ್ಟ ಕೊಟ್ಟ ಬಿಜೆಪಿ ಬೆಂಬಲಿಗರು
ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ಪಕ್ಷದ ನಾಯಕರು ಬೆಂಬಲಿಗರು ಕೇಂದ್ರ ಸರ್ಕಾರ ಮಾಡಿದ್ದೇ ಸರಿ ಎಂದು ವಾದಿಸಿದಲ್ಲದೆ. ದೇಶ ವಿರೋಧಿಗಳಲು ರೈತರ ಹೋರಾಟಕ್ಕೆ ಸಾತ್ ನೀಡಿ ಇಲ್ಲದ ಸಲ್ಲದ ಹೇಳಿಕೆ ನೀಡಿ ರೈತರನ್ನು ಹೋರಾಟ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ ನಾವು ತಂದ ಕಾಯ್ದೆಗಳನ್ನು ವಾಪಾಸ್ ಪಡೆಯುವುದಿಲ್ಲ ಎಂಬ ಹೇಳಿಕೆಗಳು ಅಧಿಕಾರಶಾಹಿ ವರ್ಗದ ಅಹಂ ನ ಸಂಕೇತ.
ಭೀಮ್ ಸಿಂಗ್ ಎಂಬ ಪ್ರತಿಭಟನಾಕಾರ ಮಾಧ್ಯಮದ ಮುಂದೆ ನೀಡಿದ ಹೇಳಿಕೆ ಹೆಚ್ಚು ಸದ್ದು ಮಾಡಿತ್ತು. ನನ್ನ ಮಗ ಗಡಿಯಲ್ಲಿ ದೇಶ ಸೇವೆ ಮಾಡುತ್ತಿದ್ದಾನೆ, ಯೋಧನ ತಂದೆಯಾದ ನನಗೆ ಕಾನೂನು ವಿರೋಧಿ ಭಯೋತ್ಪಾದಕನಂತೆ ಬಿಂಬಿಸಲಾಗುತ್ತಿದೆ.ಎಂಬ ಮಾತು ಸೋ಼ಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿತ್ತು. ಮೋದಿ ಬೇರೆ ಎಲ್ಲಾ ವಿಚಾರಗಳನ್ನು ಕುರಿತು ಸಂಬಂಧಿಸಿದ ತಜ್ಞರನ್ನು ಭೇಟಿಯಾಗಿ ಚರ್ಚೆ ನಡೆಸುತ್ತಿದ್ದಾರೆ ಆದರೆ ಚರ್ಚಿಸ ಬೇಕಾದ ಮುಖ್ಯ ವಿಷಯವನ್ನೇ ಕೈ ಬಿಟ್ಟಿದ್ದಾರೆಂಬುವುದು ರೈತರ ಬೆಂಬಲಿಗರು ತಜ್ಞರ ವಾದವಾಗಿದೆ.
ಕನಿಷ್ಠ ಮಾನವೀಯತೆಯೂ ತೋರದ ಸರ್ಕಾರ
ರೈತರ ಹೋರಾಟದ ಮಧ್ಯೆ ಹವಮಾನ ವೈಪರಿತ್ಯದಲ್ಲಿ ಬದಲಾವಣೆ ಉಂಟಾಗಿ ದೆಹಲಿ ಸೇರಿದಂತೆ ಸುತ್ತ ಮುತ್ತಲಿನ ವಾತಾವರಣದಲ್ಲಿ ಅಧಿಕ ಚಳಿಯಿಂದ ಸುಮಾರು 20 ಕ್ಕೂ ಹೆಚ್ಚು ಪ್ರತಿಭಟನಾ ನಿರತರ ಸಾವಾದರೂ ಸರ್ಕಾರ ರಾಜಕೀಯ ಪಕ್ಷದ ಮುಖಂಡರು ಮಾತ್ರಾ ಕ್ಯಾರೇ ಅನ್ನದೆ ಕನಿಷ್ಠ ಮಟ್ಟದ ಮಾನವೀಯತೆಯೂ ತೋರಲಿಲ್ಲ. ಕೆಲವು ಸ್ವಯಂ ಸೇವಾ ಸಂಸ್ಥೆಗಳು ರೈತರಿಗೆ ಬೇಕಾದ ಆಹಾರ ಸಾಮಾಗ್ರಿಗಳು ಮೂಲಭೂತ ಸೌಲಭ್ಯಗಳನ್ನು ನೀಡಿ ಕಷ್ಟಕ್ಕೆ ಭಾಗಿಯಾಗಿದ್ದಾರೆ. ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ನಾನು ಬಡತನದಿಂಧ ಬಂದವನು ಬಡವರ ಕಾರ್ಮಿಕರ ರೈತರ ಕಷ್ಟ ಅರಿತಿದ್ದೇವೆ ಎನ್ನುವವರು ಈಗ ರೈತನ ಕಷ್ಟಕ್ಕೆ ಭಾಗಿಯಾಗದೆ ಸಾವನ್ನು ಸಂಭ್ರಮಿಸುತ್ತಾ ಕೂತ್ತಿದ್ದಾರೆ.