ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ನಡುವೆ ಕೆಲವು ದಿನಗಳ ಹಿಂದೆ ನಡೆದ ವಾಕ್ ಸಮರಕ್ಕೆ ಇದೀಗ ದೇವೇಗೌಡ ಪ್ರತಿಕ್ರಿಯಿದ್ದಾರೆ. ಸಮಿಶ್ರ ಸರ್ಕಾರ ಬೀಳಲು ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ಪಕ್ಷವೇ ಕಾರಣ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಕಾರ್ಯಕ್ರಮವೊಂದರಲ್ಲಿ ಕಿಡಿಕಾರಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿಯೂ ಪ್ರತಿಕ್ರಿಯೆ ನೀಡಿದರು. ಇದೀಗ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರು ಡಿ26 ಮಾಧ್ಯಮ ಗೋಷ್ಠಿ ನಡೆಸಿ ಪರೋಕ್ಷವಾಗಿ ಸಿದ್ದರಾಮಯ್ಯರಿಗೆ ತಿರುಗೇಟು ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಾದೇಶಿಕ ಪಕ್ಷ ಕಟ್ಟಿ ಬೆಳೆಸುವುದು ಕಷ್ಟಸಾಧ್ಯ, ನಮ್ಮ ಪಕ್ಷದ ಬಗ್ಗೆ ಮಾತಾಡಲು ನಿಮಗೆ ಇರುವ ಸ್ವಾತಂತ್ರ್ಯವೇನು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದ್ದಾರೆ. ಯಾವ ಸರ್ಕಾರದ ಬಗ್ಗೆ ನಾನು ಟೀಕೆ ಮಾಡಲ್ಲ, ಎಲ್ಲಾ ಪಕ್ಷದ ಬಗ್ಗೆ ನನಗೆ ತಿಳಿದಿದೆ. ತೆಗೆಳಿದವರಿಗೆ ಕಾಲಬಂದಾಗ ಪ್ರತಿಕ್ರಿಯೆ ನೀಡುತ್ತೇನೆ. ಜನವರಿ 7 ರಂದು ಪಕ್ಷ ಸಂಘಟಿಸುವ ಉದ್ದೇಶದಿಂದ ಅರಮನೆ ಮೈದಾನದಲ್ಲಿ ಸಭೆ ಕರೆಯಲಾಗಿದೆ ಎಂದಿದ್ದಾರೆ.
ಮತ್ತೊಮ್ಮೆ ಅಧಿಕಾರಕ್ಕೆ ಬರಲು ಹೋರಾಡುತ್ತೇವೆ. ಪ್ರಾದೇಶಿಕ ಪಕ್ಷ ಕರ್ನಾಟಕಕ್ಕೆ ಮಾತ್ರವಲ್ಲ ದೇಶಕ್ಕೆ ಅಗತ್ಯವಿದೆ. ಇತರೆ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ಮುನ್ನಡೆ ಸಾಧಿಸಿ ಅಧಿಕಾರ ಪಡೆದುಕೊಂಡ ಉದಾಹರಣೆಗಳಿವೆ. ನಾನು ಪ್ರಧಾನ ಮಂತ್ರಿಯಾದಾಗ ರೈತರ ಬಗ್ಗೆ ಹೆಚ್ಚು ನಿಲುವು ಹೊಂದಿದ್ದೆ. ಆದರೆ ಈಗಿನ ಪರಿಸ್ಥಿತಿ ನೋಡಿದ್ರೆ ಬೇಸರವಾಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಸರ್ಕಾರ ಬಂದಾಗಲೇ ನಾವು ಅಂದುಕೊಂಡಿದ್ದೆವು 3 ವರ್ಷ ಬಿಜೆಪಿ ಅಧಿಕಾರ ನಡೆಸಲಿ, ಈ ವೇಳೆ ಜೆಡಿಎಸ್ ಪಕ್ಷ ಸಂಘಟಿಸಿ ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ಸಭೆ ಕರೆದು ತೀರ್ಮಾನಿಸಲಾಗಿತ್ತು. ಈ ನಿಟ್ಟಿನಲ್ಲಿ ಕಾರ್ಯವೈಖರಿ ಸಾಗುತ್ತಿದೆ. ನಮ್ಮ ಪಕ್ಷದ ಬಗ್ಗೆ ಆಡಳಿತ ವಿರೋಧ ಪಕ್ಷದ ಮುಖಂಡರು ಲಘುವಾಗಿ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಅಧಿಕಾರದ ಆಸೆಗೆ ಯಾರು-ಯಾರು ನಮ್ಮ ಮನೆಬಾಗಿಲಿಗೆ ಬಂದಿದ್ದರು ಎಂಬುವುದು ನೆನಪಿದೆ ಎಂದು ದೇವೇಗೌಡರು ಕಿಡಿಕಾರಿದ್ದಾರೆ.