2019 ರ ಫೆಬ್ರವರಿ 14 ರಂದು CRPF ಯೋಧರಿದ್ದ ವಾಹನಗಳ ಮೇಲೆ ನಡೆದಿದ್ದ ದಾಳಿ ಮಾದರಿಯಲ್ಲಿಯೇ, ಉಗ್ರರು ಮತ್ತೊಮ್ಮೆ ಅದೇ ʼಪುಲ್ವಾಮಾʼದಲ್ಲಿ ದಾಳಿ ನಡೆಸಲು ಹೋಗಿ ವಿಫಲರಾಗಿದ್ದಾರೆ. ಭಾರತೀಯ ಸೇನೆಯ ಸಮಯ ಪ್ರಜ್ಞೆ ಹಾಗೂ ಗುಪ್ತಚರ ವರದಿಯಿಂದ ಅಲರ್ಟ್ ಆಗಿದ್ದ CRPF ಹಾಗೂ ಭಾರತೀಯ ಸೇನೆಯು ಮೇ 28 ರಂದು ಬೆಳಿಗ್ಗೆ ನಡೆಯಬಹುದಾಗಿದ್ದ ಭೀಕರ ದಾಳಿಯೊಂದು ತಪ್ಪಿ ಹೋಗಿದೆ. ಕಾರಿನಲ್ಲಿ ಬಂದಿದ್ದ ಉಗ್ರರು ಪುಲ್ವಾಮಾ ಮಾದರಿಯನ್ನೇ ಅನುಸರಿಸಲು ಮುಂದಾಗಿದ್ದರು. ಆದರೆ ಭಾರತೀಯ ಯೋಧರ ಮುಂದೆ ಮಂಡಿಯೂರಿದ ಭಯೋತ್ಪಾದಕರು ಕಾರನ್ನು ಬಿಟ್ಟು ಪರಾರಿಯಾಗಿದ್ದರು. ತಕ್ಷಣ ಎಚ್ಚೆತ್ತುಕೊಂಡಿದ್ದ ಯೋಧರು ಕಾರನ್ನು ಪರಿಶೀಲಿಸಿದಾಗ ಅದರಲ್ಲಿ 45 ಕೆಜಿ ಸ್ಫೋಟಕ ತುಂಬಿರುವುದು ಪತ್ತೆಯಾಗಿತ್ತು. ಬಳಿಕ ಯೋಧರು ಅದನ್ನ ನಿರ್ಜನ ಪ್ರದೇಶವೊಂದರಲ್ಲಿ ಸ್ಫೋಟಿಸಲಾಗಿತ್ತು.
ಈ ಕುರಿತು ಮಾಹಿತಿ ನೀಡಿದ್ದ ಕಾಶ್ಮೀರ ಐಜಿಪಿ ವಿಜಯ್ ಕುಮಾರ್, “ ಕೃತ್ಯದ ಹಿಂದೆ ಹಿಜ್ಬುಲ್ ಮುಜಾಹಿದೀನ್ ಹಾಗೂ ಜೈಷ್-ಇ-ಮೊಹಮ್ಮದ್ ಇದ್ದು, ಪಾಕಿಸ್ತಾನದ ಉಗ್ರರುಗಳಾದ ಫೌಜಿ ಭಾಯ್, ಆದಿಲ್ ಮತ್ತು ಜೆಇಎಂ ಕಮಾಂಡರ್ ಕೃತ್ಯದ ಸಂಚುಕೋರರು” ಎಂದಿದ್ದರು. ಇದೀಗ ʼದಿ ಕ್ವಿಂಟ್ʼ ಮಹತ್ವದ ಮಾಹಿತಿ ಕಲೆ ಹಾಕಿದ್ದು, ANI ವರದಿ ಮಾಡಿರುವಂತೆ ಸ್ಫೋಟಕ ಹೊತ್ತು ತಂದಿದ್ದವನ್ನ ಜಮ್ಮು ಕಾಶ್ಮೀರದ ಶೋಪಿಯಾನ್ ನ ಹಿದಾಯತುಲ್ಲ ಮಲಿಕ್ ಎಂದು ಜಮ್ಮು&ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇನ್ನು ಸಂಚು ರೂಪಿಸಿದ್ದವರಲ್ಲಿ ಪ್ರಮುಖನೆಂದು ಗುರುತಿಸಲಾದ ಹಿಜ್ಬುಲ್ ಮುಜಾಹಿದ್ದೀನ್ ಫೌಜಿ ಭಾಯ್ನನ್ನು ಲಂಬೂ, ಅದ್ನಾನ್ ಹಾಗೂ ಜಬ್ಬಾರ್ ಎಂದೂ ಕರೆಯುತ್ತಾರೆ. ಅಲ್ಲದೇ ಈತನೇ ಮೊಹಮ್ಮದ್ ಇಸ್ಮಾಯಿಲ್ ಆಲ್ವಿ ಎಂದೂ ಗುರುತಿಸಿಕೊಂಡಿದ್ದಾನೆ. 2019 ರ ಪುಲ್ವಾಮಾ ದಾಳಿಯಲ್ಲೂ ಈತನೇ ಪ್ರಮುಖ ಸಂಚುಕೋರನಾಗಿದ್ದನು. ಈತ ಜೈಶ್-ಇ-ಮೊಹಮ್ಮದ್ ನ ಪ್ರಸ್ತುತ ಕಮಾಂಡರ್ ಆಗಿದ್ದಾನೆ. ಪುಲ್ವಾಮಾ ಮಾದರಿ ದಾಳಿಗೆ ಸಂಚು ರೂಪಿಸಿದವರಲ್ಲಿ ಪ್ರಮುಖನಾಗಿದ್ದಾನೆ. ಈತ ಭಯೋತ್ಪಾದನಾ ಸಂಘಟನೆಗಳ ಕಾರ್ಯಾಚರಣೆಯ ಮುಖ್ಯಸ್ಥನಾಗಿರುವ ಅಬ್ದುಲ್ ರವೂಫ್ ಅಸ್ಗರ್ ನ ಸಹಚರನಾಗಿದ್ದಾನೆ. ಈ ಅಬ್ದುಲ್ ರವೂಫ್ ಅಸ್ಗರ್ ಬೇರಾರೂ ಅಲ್ಲ, ಜೈಶ್-ಇ-ಮೊಹಮ್ಮದ್ ಸಂಘಟನೆಯ ಭಯೋತ್ಪಾದನಾ ಮುಖಂಡ ಮಸೂದ್ ಅಜರ್ ನ ಸಹೋದರನಾಗಿದ್ದಾನೆ. ಈ ಮಸೂದ್ ಅಜರ್ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಭಯೋತ್ಪಾದಕನೂ ಆಗಿದ್ದಾನೆ. ಅಲ್ಲದೇ ಅಮೆರಿಕಾದ ಭದ್ರತಾ ಸಮಿತಿ ನಿಷೇಧಿಸಿದ ಪಟ್ಟಿಯಲ್ಲಿ ಈತನ ಜೈಶ್-ಇ-ಮೊಹಮ್ಮದ್ ಕೂಡಾ ಸೇರಿದೆ. ಮಸೂದ್ ಅಜರ್ 1991 ರಲ್ಲಿ ಭಾರತ ಸೈನಿಕರ ಕೈಗೆ ಶ್ರೀನಗರದಲ್ಲಿ ಸಿಕ್ಕಿ ಜೈಲು ಪಾಲಾಗಿದ್ದ. ಆದರೆ 1999ರಲ್ಲಿ ವಿಮಾನ ಅಪಹರಿಸಿದ್ದ ಭಯೋತ್ಪಾದಕರು ಭಾರತದ ಮೇಲೆ ಅಜರ್ ಮಸೂದ್ ಬಿಡುಗಡೆಗೆ ಒತ್ತಡವೇರಿ, ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು.
ಆ ನಂತರದ ದಿನಗಳಲ್ಲಿ ಇದೇ ಮಸೂದ್ ಅಜರ್ ಭಾರತದಲ್ಲಿ ನಡೆದ ಪ್ರಮುಖ ದಾಳಿಗಳ ಹಿಂದಿನ ಸಂಚುಕೋರನಾಗಿದ್ದನು. 2001 ರ ಸಂಸತ್ ಭವನ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್ಕೋಟ್ ವಾಯುನೆಲೆ ಮೇಲಿನ ದಾಳಿ, 2019 ರ ಪುಲ್ವಾಮಾ ದಲ್ಲಿ ನಡೆದ ದಾಳಿಗಳೆಲ್ಲದರ ಹಿಂದೆ ಈತನ ಪ್ರಮುಖ ಸಂಚುಕೋರನಾಗಿದ್ದು, ತನ್ನಲ್ಲಿರುವ ಯುವ ಭಯೋತ್ಪಾದಕರ ಕೈಗೆ ಗನ್ನಿತ್ತು ಭಾರತದಲ್ಲಿ ನರಮೇಧ ನಡೆಸಲು ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾನೆ. ಇದೀಗ ಮತ್ತೆ ಅಂತಹದ್ದೇ ದಾಳಿ ಸಂಚು ರೂಪಿಸಿ ವಿಫಲನಾಗಿದ್ದಾನೆ. ಅದರಲ್ಲೂ ಇತ್ತೀಚೆಗೆ ಭಾರತೀಯ ಯೋಧರು ನೀಡಿರುವ ಪ್ರತ್ಯುತ್ತರ ಪಿಓಕೆಯಲ್ಲಿ ಅಡಗಿ ಕೂತ ಭಯೋತ್ಪಾದಕರ ನಿದ್ದೆಗೆಡಿಸಿದೆ.

ಇತ್ತೀಚೆಗೆ ನಡೆದ ಕಾರ್ಯಾಚರಣೆಯ ಸಮಯದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ಗಳಾದ ರಿಯಾಝ್ ನೈಕೋ, ಜುನೈದ್ ಶೆಹ್ರಾಯಿ, ತಾರಿಕ್ ಶೇಖ್ ಮುಂತಾದವರನ್ನ ಎನ್ಕೌಂಟರ್ ಮೂಲಕ ಕೊನೆಗಾಣಿಸಲಾಯಿತು. ಇದರಿಂದ ಕಂಗೆಟ್ಟ ಗಡಿಯಲ್ಲಿರುವ ಭಯೋತ್ಪಾದಕರು ದೊಡ್ಡ ಮಟ್ಟಿನ ಸಂಚು ಹೂಡಿರುವುದು ಸೇನೆಗೂ ಗೊತ್ತು. ಆದ್ದರಿಂದ ಅದನ್ನ ಯಶಸ್ವಿಯಾಗಿಯೇ ಎದುರಿಸಿದ್ದಾರೆ. 45 ಕೆಜಿ ಸ್ಫೋಟಕ ಹೊತ್ತು ನಡೆಸಲು ಉದ್ದೇಶಿಸಿದ್ದ ದಾಳಿಯನ್ನ ಭಾರತೀಯ ಸೇನೆಯನ್ನ ವಿಫಲಗೊಳಿಸಿ ಭಯೋತ್ಪಾದಕರಿಗೆ ಶಾಕ್ ನೀಡಿದೆ. 2019 ರ ಪುಲ್ವಾಮಾ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಪುಲ್ವಾಮಾ ದಾಳಿ ಸಂಬಂಧ ಹಲವು ಮಹತ್ವದ ಮಾಹಿತಿ ಕಲೆ ಹಾಕಿದೆ. ಅದರ ಮಾಹಿತಿ ಅನ್ವಯವೇ ಪುಲ್ವಾಮಾ ದಾಳಿ ಹಿಂದೆ ಆಲ್ವಿ ಈ ಕೃತ್ಯದ ಹಿಂದೆ ಇದ್ದ ಎಂದು ಹೇಳಲಾಗಿದೆ.
ಪುಲ್ವಾಮಾ ದಾಳಿಯಲ್ಲಿ ಬಳಸಲಾಗಿದ್ದ ಅಮೋನಿಯಂ ನೈಟ್ರೇಟ್ ನ್ನು ಸ್ಥಳೀಯವಾಗಿ ಸಂಗ್ರಹಿಸಿದ್ದರೆ, RDX ನ್ನು ಪಾಕಿಸ್ತಾನದಿಂದ ತರಲಾಗಿತ್ತು ಅನ್ನೋದು ಈಗಾಗಲೇ NIA ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ ಇದೀಗ ಮತ್ತೆ ಅದೆ ಮಾದರಿ ದಾಳಿ ನಡೆಸಲು ಮುಂದಾಗಿರೋದು ಆತ ದಕ್ಷಿಣ ಕಾಶ್ಮೀರದಲ್ಲಿ ಅವಿತುಕೊಂಡಿರುವ ಶಂಕೆಯೂ ಎದುರಾಗಿದೆ.
ಅಂತಹದ್ದೇ ಸ್ಫೋಟಕವನ್ನ ಮೇ 28 ರ ವಿಫಲ ದಾಳಿಯಲ್ಲೂ ಬಳಸಲಾಗಿತ್ತು ಅನ್ನೋದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಬಳಸಲಾದ ಕಾರಿನ ಮಾಲಕನನ್ನೂ ಕಾಶ್ಮೀರ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹಿದಾಯತುಲ್ಲಾ ಮಾಲಿಕ್ ಗೆ ಸೇರಿದ ಕಾರು ಇದಾಗಿದ್ದು, ಈತ ಈ ಹಿಂದೆ ಶೋಪಿಯಾನ್ ಭಾಗದಲ್ಲಿದ್ದು ಜೈಶ್-ಇ-ಮೊಹಮ್ಮದ್ ಪರ ಕೆಲಸ ಮಾಡುತ್ತಿದ್ದರೆ, ಇದೀಗ ಹಿಜ್ಬುಲ್ ಮುಜಾಹಿದ್ದೀನ್ ಪರ ಕೆಲಸ ಮಾಡುತ್ತಿರುವುದಾಗಿ ಹಿಜ್ಬುಲ್ ಕಮಾಂಡರ್, ಪುಲ್ವಾಮಾ ದಾಳಿ ಸಂಬಂಧ ಡಿವೈಎಸ್ಪಿ ದೇವೆಂದರ್ ಸಿಂಗ್ ಜೊತೆಗೆ ಬಂಧಿತನಾದ ನವೀದ್ ಬಾಯ್ಬಿಟ್ಟಿದ್ದಾಗಿ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾಗಿ ʼದಿ ಕ್ವಿಂಟ್ʼ ವರದಿ ಮಾಡಿದೆ.
J&K Police identifies Hidayatullah Malik, owner of the explosives-laden car which was intercepted in #Pulwama. He is a resident of Shopian and joined Hizbul Mujahideen last year: Jammu and Kashmir Police pic.twitter.com/gNvAmok9WA
— ANI (@ANI) May 29, 2020
ಒಟ್ಟಿನಲ್ಲಿ ಪಾಕಿಸ್ತಾನ ಹಾಗೂ ಪಿಓಕೆ ಭಾಗದಲ್ಲಿ ಅವಿತುಕೊಂಡಿರುವ ಭಯೋತ್ಪಾದಕರು ಭಾರತದ ಮೇಲೆ ಹಲವು ಬಾರಿ ದಾಳಿ ನಡೆಸಿ ಅಮಾಯಕರ ನರಮೇಧ ನಡೆಸಿದ್ದಾರೆ. ಆದರೆ ಇತ್ತೀಚಿನ ಕೆಲವು ವಾರಗಳಿಂದ ನಿರಂತರವಾಗಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ಹುತಾತ್ಮರಾದರೆ, ಹತ್ತು ಹಲವು ಭಯೋತ್ಪಾದಕ ಮುಖಂಡರನ್ನ ಹತ್ಯೆಗೈಯಲಾಗಿದೆ. ಪಾಕಿಸ್ತಾನದ ಜೊತೆಗಿನ ರಾಜತಾಂತ್ರಿಕ ಸಂಬಂಧಗಳು ಕೈ ಕೊಡುತ್ತಿರುವ ಸಂದರ್ಭದಲ್ಲಿ ಭಾರತಕ್ಕೆ ಇಂತಹ ಕಾರ್ಯಾಚರಣೆಯ ಅಗತ್ಯತೆಯೂ ಬಹಳಷ್ಟಿದೆ ಅನ್ನೋದಕ್ಕೆ ಭಾರತ-ಪಾಕಿಸ್ತಾನ ಗಡಿ ಭಾಗದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯೇ ಸಾಕ್ಷಿಯಾಗಿದೆ.