ಕೋವಿಡ್ ಭ್ರಷ್ಟಾಚಾರದ ಕುರಿತು ಬಹಿರಂಗವಾಗಿ ಮಾತನಾಡಿದ್ದಕ್ಕಾಗಿ ನೋಟೀಸ್ ಕಳುಹಿಸಿರುವ ಬಿಜೆಪಿ ಪಕ್ಷಕ್ಕೆ ತಿರುಗೇಟು ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಇಂತಹ ನೋಟಿಸ್ಗಳಿಗೆಲ್ಲಾ ನಾವು ಹೆದರುವುದಿಲ್ಲ. ಎಂತಹ ಪರಿಸ್ಥಿತಿ ಬಂದರೂ ಅದನ್ನು ಧೈರ್ಯವಾಗಿ ಎದುರಿಸುತ್ತೇವೆ, ಎಂದು ಹೇಳಿದ್ದಾರೆ.
ನೋಟಿಸ್ ಸ್ವೀಕರಿಸಿದ ನಂತರ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಲೂಟಿ ಮಾಡುವವರನ್ನು ನೋಡಿಕೊಂಡು ಸುಮ್ಮನೆ ಕೂರುವುದಿಲ್ಲ. ಕರೋನಾ ಅವಧಿಯಲ್ಲಿ ಸರ್ಕಾರಕ್ಕೆ ಸಹಕಾರ ಕೊಡಬೇಕು ಎಂದು ಮೂರು ತಿಂಗಳು ಮಾತನಾಡದೇ ಕುಳಿತಿದ್ದೆವು. ಇನ್ನು ಮುಂದೆ ಸುಮ್ಮನಿರಲು ಸಾಧ್ಯವಿಲ್ಲ, ಎಂದು ಹರಿಹಾಯ್ದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇನ್ನು ಸರ್ಕಾರದ ಮೇಲೆ ಮಾಡಿರುವ ಆರೋಪಕ್ಕೆ ಬಿಜೆಪಿ ಪಕ್ಷದಿಂದ ನೋಟಿಸ್ ನೀಡಿರುವ ಕುರಿತು ಗರಂ ಆಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ, ರವಿಕುಮಾರ್ ಅವರಿಂದ ನೋಟಿಸ್ ಬಂದಿದೆ. ನೋಟಿಸ್ ಕೊಡುವುದಾದರೆ ಸರ್ಕಾರದಿಂದ ಕೊಡಬೇಕಿತ್ತು, ಎಂದಿದ್ದಾರೆ.
Also Read: ಸಿದ್ಧರಾಮಯ್ಯ, ಡಿಕೆಶಿ ವಿರುದ್ಧ ಬಿಜೆಪಿ ನೋಟಿಸ್
“ನಾವು ಸಿಎಂ, ಡಿಸಿಎಂ ಡಾ. ಸಿ ಎನ್ ಅಶ್ವತ್ಥನಾರಾಯಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಸುಧಾಕರ್ ವಿರುದ್ದ ನೇರವಾಗಿ ಭ್ರಷ್ಟಾಚಾರದ ಆರೋಪ ಮಾಡಿದ್ದೆವು. ನಾವು ಯಾರ ಮೇಲೆ ಆರೋಪ ಮಾಡಿದ್ದೆವೋ ಅವರು ನೋಟಿಸ್ ಕೊಡಬಹುದಿತ್ತು, ಆದರೆ ಬಿಜೆಪಿ ಪಕ್ಷದಿಂದ ನೋಟೀಸ್ ಬಂದಿದೆ. ನಾವು ಬಿಜೆಪಿ ಪಕ್ಷದ ವಿರುದ್ದ ಆರೋಪ ಮಾಡಿಯೇ ಇಲ್ಲ,” ಎಂದು ಹೇಳಿದ್ದಾರೆ.
ಇನ್ನು ಆರ್ ಅಶೋಕ ಅವರ ಹೇಳಿಕೆಗೆ ಉತ್ತರಿಸಿರುವ ಸಿದ್ದರಾಮಯ್ಯ ಅವರು, ಸರ್ಕಾರವನ್ನು ಪ್ರಶ್ನಿಸಲು ಸಿದ್ದರಾಮಯ್ಯ ಯಾರು ಎಂದು ಸಚಿವ ಆರ್ ಅಶೋಕ ಕೇಳಿದ್ದಾರೆ. ಅವರು, ಸಂವಿಧಾನ ಓದಿಕೊಳ್ಳಲಿ, ಸಿದ್ದರಾಮಯ್ಯ ಮಾತ್ರವಲ್ಲ, ಯಾರು ಬೇಕಾದರೂ ಸರ್ಕಾರದ ಕಾರ್ಯವೈಖರಿಯನ್ನು ಪ್ರಶ್ನೆ ಮಾಡಬಹುದು, ಎಂದು ನುಡಿದಿದ್ದಾರೆ.