ಲಿಕ್ಕರ್ ದೊರೆ ಆದಿಕೇಶವಲು ಮಗ ಶ್ರೀನಿವಾಸಲು ನಾಯ್ಡು ವಿರುದ್ದ ನ್ಯಾಯಾಲಯಕ್ಕೆ ವಂಚನೆ ಆರೋಪ ಕುರಿತು ಬೆಂಗಳೂರಿನ ಹಲಸೂರ್ ಗೇಟ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮದೇ ಕುಟುಂಬದ ಇನ್ನೊಬ್ಬರ ಹೆಸರಿನಲ್ಲಿ ಇದ್ದ ಕೋಟ್ಯಂತರ ರೂಪಾಯಿ ಬೆಲೆಬಾಳೋ ಆಸ್ತಿಯನ್ನು ನಕಲಿ ವಿಲ್ ಸೃಷ್ಟಿ ಮಾಡಿ ಅದನ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಬೆಂಗಳೂರಿನ ವೈಟ್ ಫೀಲ್ಡ್ ನಿವಾಸಿ ಕೆ ಆರ್ ರೋಹಿತ್ ಎಂಬುವವರು ದೂರು ದಾಖಲಿಸಿದ್ದಾರೆ.
ಶ್ರೀನಿವಾಸಲು ನಾಯ್ಡು ನ್ಯಾಯಾಲಯಕ್ಕೆಸಲ್ಲಿಸಿದ ವಿಲ್ ನಕಲಿ ಎಂಬುದನ್ನ ದೃಢೀಕರಿಸಲು ಟ್ರೂತ್ ಲ್ಯಾಬ್ ರಿಪೋರ್ಟ್ ಅನ್ನು ಕೂಡ ಲಗತ್ತಿಸಲಾಗಿದೆ. ಆ ಟ್ರೂತ್ ಲ್ಯಾಬ್ ರಿಪೋರ್ಟ್ ನಲ್ಲಿ ಶ್ರೀನಿವಾಸಲು ನಾಯ್ಡು ಅವರ ವಿಲ್ ನಕಲಿ ಎಂದು ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೇ ಶ್ರೀನಿವಾಸಲು ನಾಯ್ಡು ವಿರುದ್ಧ ಹೆಚ್.ಎ.ಎಲ್.ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.



ಈಗಾಗಲೇ ಶ್ರೀನಿವಾಸುಲು ನಾಯ್ಡು ಅವರ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದ್ದು, ವೈಟ್ ಪೀಲ್ಡ್ ನ ಮಂಜುಳಾ ಎಂಬುವರು ಕೊಲೆ ಆರೋಪವನ್ನೂ ಮಾಡಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು 29ನೇ ಎಸಿಎಂಎಂ ನ್ಯಾಯಲಯದ ಸೂಚನೆ ನೀಡಿದೆ.

ಶ್ರೀನಿವಾಸ್ ವಿರುದ್ದ 2007 ರಲ್ಲಿ ಚಿತ್ತೂರ್ ಟೌನ್ ಪೋಲೀಸ್ ಠಾಣೆಯಲ್ಲಿ ಬಾಂಬ್ ಬ್ಲಾಸ್ಟ್ ಹಾಗು ಕೊಲೆ ಯತ್ನದ ಕೇಸ್ ವಿಚಾರಣೆ ಹಂತದಲ್ಲಿದೆ.
ಇನ್ನು 2016 ಅಕ್ಟೋಬರ್ ತಿಂಗಳಿನಲ್ಲಿ ಇವರದೇ ಕುಟುಂಬದ ಕಲ್ಪಜ ಹಾಗು ಶ್ರೀನಿವಾಸ್ ಒಡೆತನದ ವೈದೇಹಿ ಕಾಲೇಜ್ ಮೇಲೆ ಐ ಟಿ ರೇಡ್ ಆಗಿ 60 ಕೋಟಿ ಹಣ ಹಾಗು ನೂರಾರು ಕೋಟಿ ಬೆಲೆ ಬಾಳೋ ಅಕ್ರಮ ಆಸ್ತಿ ಪತ್ರಗಳು ದೊರಕಿದ್ದವು. ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ. ರಘುನಾಥ್ ಅವರ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ವೈದೇಹಿ ಕಾಲೇಜು ಒಡೆತನದ ಕಲ್ಪಜಾ ಅವರ ವಿರುದ್ಧವು ಸಾಕ್ಷಿನಾಶದ ಕುರಿತು ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ.
ಆರೋಪಿ ಶ್ರೀನಿವಾಸಲು ನಾಯ್ಡು ಆರ್ಥಿಕವಾಗಿ ಹಾಗು ರಾಜಕೀಯವಾಗಿ ತುಂಬ ಪ್ರಭಾವಶಾಲಿಯಾಗಿದ್ದು ಇಡೀ ಪ್ರಕರಣವನ್ನು ಮುಚ್ಚಿ ಹಾಕೋ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಗುಮಾನಿ ದಟ್ಟವಾಗಿ ಹರಡಿದೆ. ದೂರುದಾರರು ಹೇಳುವ ಪ್ರಕಾರ, ಪ್ರಭಾವಿ ರಾಜಕಾರಣಿಗಳ ಹಾಗೂ ಕೆಲವು ಅಧಿಕಾರಿಗಳ ಬೆಂಬಲದೊಂದಿಗೆ ತಮ್ಮ ವಿರುದ್ದದ ಕೇಸುಗಳ ಸರಿಯಾದ ವಿಚಾರಣೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆ. ಇದರಿಂದಾಗಿ ನಮಗೆ ನ್ಯಾಯ ಸಿಗುವುದೋ ಇಲ್ಲವೋ ಎಂಬ ಗೊಂದಲದಲ್ಲಿದ್ದೇವೆ, ಎಂದು ಹೇಳಿದ್ದಾರೆ.





