ಏಷ್ಯಾದ ಅತಿದೊಡ್ಡ ಸ್ಲಂ ಎನ್ನುವ ಖ್ಯಾತಿ ಪಡೆದಿರುವುದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಇರುವ ಧಾರಾವಿ ಕೊಳಚೆ ಪ್ರದೇಶ. ಈ ಪ್ರದೇಶದಲ್ಲಿ ಇರುವ ಜನರೆಲ್ಲರೂ ಸಣ್ಣ ಪ್ರಮಾಣದ ಕೂಲಿ ಕೆಲಸ ಮಾಡಿಕೊಂಡು ಜೀವ ನಡೆಸುವ ಮಂದಿ, ಸಣ್ಣ ಸಣ್ಣ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವ ಜನ. ಆಟೋ ರಿಕ್ಷಾ ಓಡಿಸುವವರು, ಗಾಡಿ ಎಳೆಯುವ ಹಮಾಲಿಗಳು, ಲಂಚ್ ಬಾಕ್ಸ್ ಹೊತ್ತು ಕಟ್ಟಡ ಹತ್ತಿ ಆಫೀಸ್ಗಳಿಗೆ ಊಟ ತಲುಪಿಸುವ ಹುಡುಗರು, ಶ್ರೀಮಂತರ ಮನೆಗಳಲ್ಲಿ ಅಡುಗೆ ಮಾಡುವ ಜನರು ಹೆಚ್ಚಾಗಿ ವಾಸ ಮಾಡುತ್ತಾರೆ. ಕಡಿಮೆ ಬಾಡಿಗೆಗೆ ಮನೆಗಳು ದೊರೆಯುತ್ತವೆ ಎನ್ನುವ ಕಾರಣಕ್ಕೆ ಸಾಕಷ್ಟು ವಲಸೆ ಕಾರ್ಮಿಕರು ವಾಸವಾಗಿರುತ್ತಾರೆ. ಕೇವಲ 2.1 ಘನ ಕಿಲೋ ಮೀಟರ್ವ್ಯಾಪ್ತಿಯಲ್ಲಿ 10 ಲಕ್ಷಕ್ಕೂ ಅಧಿಕ ಜನರು ವಾಸ ಮಾಡುತ್ತಿದ್ದ ಪ್ರದೇಶಕ್ಕೆ ಕರೋನಾ ಸೋಂಕು ಲಗ್ಗೆ ಹಾಕಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣ ಧಾರಾವಿ ಕರೋನಾದಿಂದ ಸರ್ವನಾಶ ಆಗುತ್ತದೆ ಎನ್ನುವಾಗಲೇ ನಿಯಂತ್ರಣಕ್ಕೆ ಬಂದಿದೆ. ಸೋಂಕು. ಈ ಸೋಂಕು ನಿಯಂತ್ರಣಕ್ಕೆ ಬಂದಿದ್ದರ ಬಗ್ಗೆ ಇಡೀ ದೇಶವೇ ಅಚ್ಚರಿಯ ಕಣ್ಣುಗಳಿಂದ ನೋಡುತ್ತಿದೆ.
ಮುಂಬೈ ಮಹಾನಗರಿಯಲ್ಲಿ ಕರೋನಾ ಕ್ಲಸ್ಟರ್ ಆಗಿದ್ದ ಧಾರಾವಿ ಕೊಳಚೆ ಪ್ರದೇಶದಲ್ಲಿ ಇದೀಗ ಸಂಪೂರ್ಣ ಹಿಡಿತಕ್ಕೆ ಬಂದಿದೆ. ಸಾಗರೋಪಾದಿಯಲ್ಲಿ ಹರಡುತ್ತಿದ್ದ ಕೊಳಚೆ ಪ್ರದೇಶವನ್ನು ಅಲ್ಲಿ ಸರ್ಕಾರ ತುಂಬಾ ವ್ಯವಸ್ಥಿತವಾಗಿ ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗಿದೆ. ಧಾರಾವಿ ಸ್ಲಂ ಪ್ರದೇಶದಲ್ಲೇ ಫೀವರ್ ಕ್ಲೀನಿಕ್ ಸ್ಥಾಪನೆ ಮಾಡಿದ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು, ಮನೆ ತಪ್ಪದೆ ಕೋವಿಡ್ ಟೆಸ್ಟ್ ಮಾಡಿದ್ದಾರೆ. 47,500 ಮನೆಗಳಿಗೆ ಎಡತಾಕಿರುವ ಆರೋಗ್ಯ ಸಿಬ್ಬಂದಿಗಳು, 7,00,000 ಜನರನ್ನು ತಪಾಸಣೆ ಮಾಡಿದ್ದಾರೆ. ಯಾರಿಗೆಲ್ಲಾ ಕರೋನಾ ಸೋಂಕು ಪಾಸಿಟಿವ್ ಬರುತ್ತದೆಯೋ ಅಂತವರನ್ನು ಶಾಲೆ, ಕ್ರೀಡಾಂಗಣ ಸೇರಿದಂತೆ ಸರ್ಕಾರ ನಿಗದಿ ಮಾಡಿದ್ದ ಕೋವಿಡ್ ಸೆಂಟರ್ಗೆ ವರ್ಗಾವಣೆ ಮಾಡಲಾಗಿದೆ. ಇದೀಗ ಕರೋನಾ ವೈರಸ್ ಸಂಪೂರ್ಣವಾಗಿ ಹಿಡಿತಕ್ಕೆ ಬಂದಿದೆ. ಮೇ ಅಂತ್ಯದ ವೇಳೆಗೆ ಹಿಡಿತಕ್ಕೆ ಬಂದ ಸೋಂಕು, ಸಮುದಾಯಕ್ಕೆ ವ್ಯಾಪಿಸಲು ಸಾಧ್ಯವಾಗದೆ ಸೋತಿದೆ.
ಧಾರಾವಿ ಸ್ಲಂನಲ್ಲಿ ಸೋಂಕು ನಿಯಂತ್ರಣಕ್ಕೆ ಬಂದಿದ್ದು ಅರ್ಧಕ್ಕೂ ಹೆಚ್ಚು ಜನರು ಸೋಂಕಿನಿಂದ ಗುಣಮುಖ ಆಗಿದ್ದಾರೆ. ಈ ತಿಂಗಳಲ್ಲಿ ಸಾವಿನ ಸಂಖ್ಯೆಯೂ ಇಳಿಮುಖ ಆಗಿರುವುದು ಅಲ್ಲಿನ ಆರೋಗ್ಯ ಅಧಿಕಾರಿಗಳ ನೆಮ್ಮದಿಗೆ ಕಾರಣವಾಗಿದೆ. ಧಾರಾವಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಾಸ ಮಾಡುವುದಕ್ಕೆ ಸಾಧ್ಯವೇ ಇರಲಿಲ್ಲ. ಅದೇ ಕಾರಣಕ್ಕಾಗಿ ನಾವು ಸ್ಕ್ರೀನಿಂಗ್ ಹಾಗೂ ಟೆಸ್ಟಿಂಗ್ ಹೆಚ್ಚಳ ಮಾಡಿದೆವು. ಸೋಂಕಿನ ಸಂಖ್ಯೆ ಏರಿಕೆ ಆಗುತ್ತಿತ್ತು. ಆದರೂ ನಾವು ಯಾವುದಕ್ಕೂ ಜಗ್ಗದೆ ಪರೀಕ್ಷೆ ಮುಂದುವರಿಸಿದೆವು ಎನ್ನುತ್ತಾರೆ ಮುಂಬೈ ಮಹಾನಗರ ಪಾಲಿಕೆ ಅಸಿಸ್ಟೆಂಟ್ ಕಮಿಷನರ್ ಕಿರಣ್ ದಿಗಾವ್ಕರ್. ಧಾರಾವಿ ಕೋವಿಡ್ ಉಸ್ತುವಾರಿಯಾಗಿದ್ದ ಕಿರಣ್ ದಿಗಾವ್ಕರ್, ನಾವು ಕರೋನಾ ತನ್ನ ಅಟ್ಟಹಾಸ ಮೆರೆಯುವ ಮೊದಲೇ ಸೋಂಕಿತರನ್ನು ಗುರುತಿಸಿ ಚಿಕಿತ್ಸೆ ನೀಡುವುದಕ್ಕೆ ಶುರು ಮಾಡಿದೆವು. ಆದರೆ ಮುಂಬೈ ಹೊರಭಾಗದ ಜನರು ಆಸ್ಪತ್ರೆಗೆ ದಾಖಲಾಗುವ ಸಮಯಕ್ಕೆ ಪರಿಸ್ಥಿತಿ ಕೈ ಮೀರಿ ಹೋಗುತ್ತಿತ್ತು ಎಂದಿದ್ದಾರೆ.
ದೇಶದಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದಾಗ ಕರೋನಾ ಸೋಂಕು ತಪಾಸಣೆಗೆ ಅನುಕೂಲ ಆಗಿತ್ತು. ಆ ಬಳಿಕ ಐಸೋಲೇಷನ್ ವಾರ್ಡ್ನಲ್ಲಿ ಸೋಂಕಿತರಿಗೆ ದಿನದ 24 ಗಂಟೆಗಳ ಕಾಲ ವೈದ್ಯರ ಸೇವೆ ಲಭ್ಯವಿರುವಂತೆ ನೋಡಿಕೊಳ್ಳಲಾಯ್ತು. ಲಾಕ್ಡೌನ್ನಿಂದ ದೇಶದಲ್ಲಿ ಲಕ್ಷಾಂತರ ಜನರು ಕೆಲಸ ಕಳೆದುಕೊಂಡರು, ಅದರಿಂದಲೇ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದಿದ್ದಾರೆ. ಜೊತೆಗೆ ಜನರೇ ಸ್ವತಃ ಕ್ವಾರಂಟೈನ್ಗೆ ಒಳಗಾಗಿದ್ದೂ ಕೂಡ ಸೋಂಕು ನಿಯಂತ್ರಣ ಮಾಡುವುದಕ್ಕೆ ಸಹಕಾರಿ ಆಯಿತು ಎನ್ನುತ್ತಿದ್ದಾರೆ. ಆದರೆ ಇಷ್ಟಕ್ಕೆ ಮೈ ಮರೆಯುವಂತಿಲ್ಲ. ಮುಂಬೈ ನಗರ ಸೇರಿದಂತೆ ಮಹಾರಾಷ್ಟ್ರ ಹಾಗೂ ಇಡೀ ದೇಶದಲ್ಲಿ ಸೋಂಕು ಮುಕ್ತವಾಗುವ ತನಕ ವಿರಮಿಸುವುದಿಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ದೇಶದ ಇತರೆ ನಗರಗಳಿಗೂ ಮುಂಬೈ ಧಾರಾವಿಯಲ್ಲಿ ತೆಗೆದುಕೊಂಡು ನಿರ್ಣಯಗಳು ಇಡೀ ದೇಶಕ್ಕೆ ಮಾದರಿ ಎನ್ನುತ್ತಿದ್ದಾರೆ ಆರೋಗ್ಯ ತಜ್ಞ ಟಿ. ಸುಂದರ ರಾಮನ್.
![](https://pratidhvani.in/wp-content/uploads/2021/02/Stay_Home_2-191.jpg)
ವಿಶ್ವ ಆರೋಗ್ಯ ಸಂಸ್ಥೆಯಿಂದಲೇ ಅಚ್ಚರಿ..!
ಮುಂಬೈ ಎಂಬಾ ಮಾಯಾನಗರಿಯಲ್ಲಿ ಧಾರಾವಿ ಎಂದು ಹೇಳಿದರೆ ಅಬ್ಬಾ ಎನ್ನುವ ಜನರೇ ಹೆಚ್ಚು. ತುಂಬಾ ಕಿರಿದಾದ ಕೊಠಡಿಗಳು, ಸಣ್ಣ ಸಣ್ಣ ಗಲ್ಲಿಗಳೇ ರಸ್ತೆಗಳು, ಬೈಕ್ ಸಂಚಾರಕ್ಕೆ ಮಾತ್ರವೇ ಮಾಡಿಸಿರುವ ರಸ್ತೆಗಳು, ರಸ್ತೆಯೊಳಗೆ ಹರಿಯುವ ಕೊಳಚೆ ನೀರು, ಸ್ವಚ್ಛತೆಯನ್ನೇ ಮರೆತಿರುವ ನಿವಾಸಿಗಳು. ಇಷ್ಟೆಲ್ಲಾ ಸೌಕರ್ಯ ಇರುವ ಧಾರಾವಿಗೆ ಕರೋನಾ ವೈರಸ್ ದಾಂಗುಡಿ ಇಟ್ಟಿತ್ತು. ಬಾಂಬೆ ಮುನ್ಸಿಪಲ್ ಕಾರ್ಪೊರೇಷನ್ ತೆಗೆದುಕೊಂಡ ದಿಟ್ಟ ಕ್ರಮಗಳು ಕೇವಲ ಮೂರು ತಿಂಗಳಲ್ಲಿ ನಿಯಂತ್ರಣ ಮಾಡಲು ಸಾಧ್ಯವಾಗಿದೆ. ಕೇವಲ 4T ಅಸ್ತ್ರ ಪ್ರಯೋಗ ಮಾಡಿಕೊಂಡು ಜಯಶಾಲಿಯಾಗಿ ನಿಂತಿದೆ. ಧಾರಾವಿ ಕಥೆ ಮಗಿಯಿತು ಎಂದುಕೊಳ್ಳುತ್ತಿದ್ದ ಜನರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಿದ್ದಾರೆ. ಸ್ವತಃ ವಿಶ್ವ ಆರೋಗ್ಯ ಸಂಸ್ಥೆ ಧಾರಾವಿಯಲ್ಲಿ ಕರೋನಾ ಸೋಂಕು ನಿಯಂತ್ರಿಸಿದ ರೀತಿಗೆ ಅಚ್ಚರಿ ವ್ಯಕ್ತಪಡಿಸಿದೆ. ಸೋಂಕು ಹೆಚ್ಚಳವಾಗುತ್ತಲೇ ಸಾಗಿದರೂ ಬೆದರಿ ಬೆಂಡಾಗದ ಮಹಾರಾಷ್ಟ್ರ ಸರ್ಕಾರ, ಮೌನವಾಗಿಯೇ ಕರೋನಾ ವಿಚಾರದಲ್ಲಿ ಮಹತ್ವದ ಹೆಜ್ಜೆಗಳನ್ನು ಹಾಕುತ್ತಿದೆ. ಕರ್ನಾಟಕ ಸೇರಿದಂತೆ ಇಡೀ ದೇಶದ ಹಲವು ರಾಜ್ಯಗಳು ಧಾರಾವಿ ಸೂತ್ರ 4T ಕಡೆಗೆ ಕಣ್ಣು ಹಾಯಿಸಿದ್ದಾರೆ.
ಸರ್ಕಾರ ತೆಗೆದುಕೊಂಡ ಮೊದಲ ಕ್ರಮ ಎಂದರೆ Tracing, ನಂತರ Tracking, ಆ ಬಳಿಕ Testing ಅಂತಿಮವಾಗಿ Treating ಮಾಡುವ ಮೂಲಕ ಕರೋನಾ ಮೇಲೆ ಸವಾರಿ ಮಾಡಿ ಕಟ್ಟಿ ಹಾಕಿದೆ. ಇದೇ ಸೂತ್ರ ಅಳವಡಿಸಿಕೊಳ್ಳಲು ಬೇರೆ ರಾಜ್ಯಗಳು ಮುಂದಾಗುತ್ತಿವೆ. ಶುಕ್ರವಾರ ಮಾತನಾಡಿದ ವಿಶ್ವ ಆರೋಗ್ಯ ಸಂಸ್ಥೆ ನಿರ್ದೇಶಕ ಟೆಡ್ರೋಸ್ ಅಧಾನಮ್ ಗೆಬ್ರೆಯಾಸಸ್ ವಿಶ್ವದ ಹಲವು ದೇಶಗಳಲ್ಲಿ ಕರೋನಾ ಸೋಂಕು ನಿಯಂತ್ರಣಕ್ಕೆ ಸಿಕ್ಕಿದೆ. ಇಟಲಿ, ಸ್ಪೇನ್, ಸೌಥ್ ಕೊರಿಯಾ, ಜೊತೆಗೆ ಭಾರತದ ಧಾರಾವಿ ಮಾದರಿ ಎಂದಿದ್ದಾರೆ. 200 ಜನರು ಸಾವನ್ನಪ್ಪಿದ್ದಾರೆ ಎನ್ನುವುದನ್ನು ಬಿಟ್ಟರೆ, ಏಷ್ಯಾದ ನಂಬರ್ ಒನ್ ಸ್ಲಂ ಧಾರಾವಿ ಕರೋನಾ ಹೋರಾಟದಲ್ಲಿ ಜಯಗಳಿಸಿದೆ.