ಬೆಂಗಳೂರಿನ ಕಾರ್ಮಿಕ ಆಯೋಗ ಕಚೇರಿಯ ಮುಂಭಾಗದಲ್ಲಿ ಮೇ22ರಂದು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಸರ್ಕಾರಗಳು ತಮ್ಮ ತುಟ್ಟಿಭತ್ಯೆಯನ್ನು (ಡಿಎ) ತಡೆಗಿಡಿದುರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರು ಸೇರಿದಂತೆ ಹಲವು ಕ್ಷೇತ್ರದ ಕಾರ್ಮಿಕರು ಪ್ರತಿಭಟಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಮಿಕರು ಸೇರಿದ್ದು ರಾಜ್ಯ ಸರ್ಕಾರದ ಹಾಗೂ ಕೇಂದ್ರದಲ್ಲಿರುವ ಮೋದಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಅಲ್ಲದೆ ತಡೆಹಿಡಿದಿರುವ ತುಟ್ಟಿಭತ್ಯೆಯನ್ನು ತಕ್ಷಣವೇ ಬಿಡುಗಡೆಗೊಳಿಸಲು ಒತ್ತಾಯಿಸಿದರು. ಇನ್ನು ಕೆಲಸದ ಅವಧಿಯನ್ನು ಹೆಚ್ಚಿಸಿರುವ ಸರ್ಕಾರದ ನಡೆಯನ್ನು ಖಂಡಿಸಿದರು. ಎಂಟು ತಾಸು ಇದ್ದ ಅವಧಿಯನ್ನು ಸರ್ಕಾರ 12 ತಾಸು ಮಾಡಿದೆ. ಇಷ್ಟಲ್ಲದೆ, ಕಾರ್ಮಿಕ ಕಾನೂನು ಮತ್ತು ಶಾಸನಗಳಲ್ಲಿನ ಎಲ್ಲಾ ಬದಲಾವಣೆಯನ್ನು ಖಂಡಿಸಿದರು. ಕೇಂದ್ರ ಸರ್ಕಾರದ ಖಾಸಗೀಕರಣದ ನಡೆಯನ್ನು ವಿರೋಧಿಸಿದರು. ಇದರ ಜೊತೆಗೆ ಎಲ್ಲಾ ಕಾರ್ಮಿಕರಿಗೂ ಕನಿಷ್ಠ ವೇತನ 25 ಸಾವಿರ ರೂ. ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಅಸಂಘಟಿತ ಕಾರ್ಮಿಕರ ಒಕ್ಕೂಟ ಈ ಪ್ರತಿಭಟೆಯ ನೇತೃತ್ವವಹಿಸಿತ್ತು.
ಈ ವೇಳೆ ಮಾತನಾಡಿದ ಕಾರ್ಮಿಕ ನಾಯಕ ಬಾಲನ್, “ಮೋದಿ ಸರ್ಕಾರವೂ ಸರ್ವಾಧಿಕಾರ ನಡೆಸುತ್ತಿದೆ. ಕಾರ್ಮಿಕರನ್ನು ಕ್ಷುಲ್ಲಕ್ಕವಾಗಿ ನಡೆಸಿಕೊಳ್ಳುತ್ತಿದೆ. ಇಂಥಾ ವಿಷಮ ಪರಿಸ್ಥಿತಿಯಲ್ಲೂ ಉರಿಯುವ ಜ್ವಾಲೆಗೆ ತುಪ್ಪ ಸುರಿಯುವ ತನ್ನ ವಿನಾಶಕಾರಿ ಅಭ್ಯಾಸವನ್ನು ಮುಂದುವರೆಸಿದೆ. ಲಾಕ್ಡೌನ್ ಅವಧಿಯಲ್ಲಿ ರಜೆ ಇಲ್ಲದೆ ಪೌರ ಕಾರ್ಮಿಕರು ಕೆಲಸ ಮಾಡಿದ್ದಾರೆ. ಇದನ್ನ ಮರೆತು ಅವರ ತುಟ್ಟಿಭತ್ಯೆಯನ್ನು ತಡೆಹಿಡಿಯಲಾಗಿದೆ. ಇದು ಅನ್ಯಾಯ. ಆದಷ್ಟು ಬೇಗ ಅವರ ತುಟ್ಟಿಭತ್ಯೆಯನ್ನು ಬಿಡುಗಡೆಮಾಡ ಬೇಕು” ಎಂದರು.







