ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರ ಸೇವೆಯನ್ನು ಖಾಯಂಗೊಳಿಸುವ ಪ್ರಕ್ರಿಯೆ ರಾಜ್ಯದಲ್ಲಿ ಆರಂಭವಾಗಲಿದೆ. ಈ ತಿಂಗಳ ಅಂತ್ಯದೊಳಗಾಗಿ ಸುಮಾರು 507 ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಖಾಯಂ ಆಗಲಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಆದರೋಗ್ಯ ಸಚಿವ ಬಿ ಶ್ರೀರಾಮುಲು ನಾಳೆಯಿಂದಲೇ ಖಾಯಂ ಮಾಡುವ ಪ್ರಕ್ರಿಯೆಯನ್ನು ಆರಂಭಿಸುವುದಾಗಿ ಹೇಳಿಕೆ ನೀಡಿದ್ದಾರೆ. 2017ರಿಂದ ಗುತ್ತಿ ವೈದ್ಯರನ್ನು ಖಾಯಂ ಮಾಡುವ ಪ್ರಕ್ರಿಯೆ ನಡೆದಿರಲಿಲ್ಲ. ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ತಮ್ಮನ್ನು ಖಾಯಂ ವೈದ್ಯರನ್ನಾಗಿ ನೇಮಕಾತಿಗೊಳಿಸಬೇಕು ಎಂದು ಆಗ್ರಹಿಸಿ ವೈದ್ಯರ ತಂಡವು ಸಿಎಂ ಭೇಟಿಗೆ ಕುಮಾರ ಕೃಪಾ ಬಳಿ ಎದುರು ನೆರೆದಿತ್ತು. ಸಿಎಂ ಭೇಟಿ ಮಾಡದೇ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದ ವೈದ್ಯರ ತಂಡವನ್ನು ಸಮಾಧಾನಪಡಿಸಿದ ರಾಮುಲು ಅವರು ಅವರ ನೇಮಕಾತಿಯನ್ನು ಖಾಯಂಗೊಳಿಸುವ ಭರವಸೆ ನೀಡಿದ್ದಾರೆ.
ರಾಮುಲು ಹಾಗೂ ಗುತ್ತಿಗೆ ವೈದ್ಯರ ನಡುವೆ ನಡೆದ ಸಂಧಾನವು ಈಗ ಯಶಸ್ವಿಯಾಗಿದ್ದು, ಪ್ರತಿಭಟನೆಯನ್ನು ಕೈಬಿಡಲಾಗಿದೆ. ಹಂತಹಂತವಾಗಿ ಎಲ್ಲರನ್ನೂ ಖಾಯಂಗೊಳಿಸುವ ಭರವಸೆಯನ್ನು ಆರೋಗ್ಯ ಸಚಿವರು ನೀಡಿದ್ದಾರೆ.
“ಕೋವಿಡ್ ಸಂಕಷ್ಟದಲ್ಲಿ ನಮ್ಮ ಜೊತೆ ಗುತ್ತಿಗೆ ವೈದ್ಯರು ಕೈ ಜೋಡಿಸಿದ್ದಾರೆ. ಅವರೊಂದಿಗೆ ಸಿಎಂ ಹಾಗೂ ನಾವು ಇದ್ದೇವೆ. ನಾವು ಕೊಟ್ಟ ಭರವಸೆಯಲ್ಲಿ ಎಳ್ಳಷ್ಟೂ ಬದಲಾವಣೆ ತರುವುದಿಲ್ಲ. ಒಂದು ತಿಂಗಳಿನ ಒಳಗಡೆ ಖಾಯಂ ನೇಮಕಾತಿ ಮಾಡುವ ಕುರಿತು ಕ್ರಮ ಕೈಗೊಳ್ಳುತ್ತೇವೆ,” ಎಂದು ಶ್ರೀರಾಮುಲು ಹೇಳಿದಾರೆ.