ಇತ್ತೀಚೆಗೆ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು ನಿರೀಕ್ಷೆಯಂತೆಯೇ ಬಿಹಾರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಯೂ ಗೆಲುವು ಸಾಧಿಸಿ ಪ್ರಬಲ ಸರ್ಕಾರವೂ ರಚಿಸಿದೆ. ಈ ಬೆನ್ನಲ್ಲೀಗ ಬಿಜೆಪಿ ದಕ್ಷಿಣ ಭಾರತದಲ್ಲಿ ಪಕ್ಷದ ಬಲವರ್ಧನೆಗೆ ಮುಂದಾಗಿದೆ. ಹಾಗಾಗಿಯೇ ಮುಂದಿನ ವರ್ಷದ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೆಬೇಕು ಎಂದು ಬಿಜೆಪಿ ಶಪಥ ಮಾಡಿದೆ. ಈ ಮೂಲಕ ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಬೇಕು ಎಂದು ಬಿಜೆಪಿ ಚಾಣಕ್ಯ ಅಮಿತ್ ಶಾ ಸಿದ್ದತೆ ನಡೆಸಿಕೊಳ್ಳುತ್ತಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆಯೇ ಮಾಡಿದೆ. ಹಾಗಾಗಿ ಈ ಬಾರಿ ತಮಿಳುನಾಡು ವಿಧಾನಸಭಾ ಚುನಾವಣೆ ಗೆದ್ದು ಕಮಲ ಅರಳಿಸುವ ಕನಸು ಬಿಜೆಪಿಯದ್ದು. ಇದರ ಭಾಗವಾಗಿಯೇ ಇತ್ತೀಚೆಗೆ ಬಿಹಾರ ಚುನಾವಣೆ ಮುಗಿಸಿರುವ ಅಮಿತ್ ಶಾ, ಮುಂದಿನ ತಿಂಗಳಿಂದ ದಕ್ಷಿಣ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ತಮಿಳುನಾಡಿನಲ್ಲೇ ಒಂದಷ್ಟು ದಿನ ವಾಸ್ತವ್ಯ ಹೂಡುವ ಮೂಲಕ ಇಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಅರಿಯಲಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಜೆಪಿ ಈಗಾಗಲೇ ದೇಶದ 22 ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದು, ಸಂಘಟನಾತ್ಮಕವಾಗಿ ಪ್ರಬಲವಾಗಿದೆ. ಆದರೆ, ಕರ್ನಾಟಕ ಹೊರತುಪಡಿಸಿ ದಕ್ಷಿಣ ಭಾರತದ ಯಾವ ರಾಜ್ಯದಲ್ಲೂ ಬೂತ್ ಮಟ್ಟದಲ್ಲಿ ಸಂಘಟನೆ ಕಟ್ಟಲು ಬಿಜೆಪಿ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಿಜೆಪಿ ದೇಶದ ಹಲವು ರಾಜ್ಯಗಳಲ್ಲಿ ಅನುಸರಿಸಿದ ಮಾದರಿಯನ್ನಲ್ಲದೇ ಬದಲಿಗೆ ಬೇರೆಯದ್ದೇ ರೀತಿಯ ಮಾಡೆಲ್ ಅನ್ನು ತಮಿಳುನಾಡಿನಲ್ಲಿ ಅಳವಡಿಸಲಿದೆ. ಸದ್ಯ ಕಮಲ ಪಡೆಯ ಕಾರ್ಯಕರ್ತರನ್ನು ರಾಜ್ಯದ ಪ್ರತೀ ಮತದಾರನ ಕುಟುಂಬಕ್ಕೆ ಭೇಟಿ ನೀಡಿ ಬಿಜೆಪಿ ಬಗ್ಗೆ ಹೇಳುವ ರೀತಿಯಲ್ಲಿ ತಂತ್ರಗಳನ್ನು ರೂಪಿಸಿದ್ದಾರೆ.
ಹಿಂದುತ್ವ ಬದಲಿಗೆ, ಅಭಿವೃದ್ದಿ ಅಸ್ತ್ರ: ಬಿಜೆಪಿ ಹಿಂದುತ್ವದ ಬದಲಿಗೆ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುತ್ತಾ ಜನರನ್ನು ಪಕ್ಷದತ್ತ ಸೆಳೆಯಲು ಪ್ಲಾನ್ ಮಾಡಿದ್ದಾರೆ. ಕೇಂದ್ರ ಸರಕಾರ ದಕ್ಷಿಣ ಭಾರತಕ್ಕೆ ನೀಡಿರುವ ಅನುದಾನದ ಬಗ್ಗೆಯೂ ಜನರಿಗೆ ಅರಿವು ಮೂಡಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ ಎನ್ನಲಾಗಿದೆ. ಉದ್ಯೋಗ, ದಲಿತರಿಗೆ ಭೂಮಿ, ಹಿಂದುಳಿದ ವರ್ಗ ಹಾಗೂ ಯುವಕರು ಸೇರಿ ಹಲವು ವರ್ಗಗಳ ಜನತೆಗೆ ಹೇಗೆ ಆಡಳಿತರೂಢ ಪಕ್ಷಗಳು ದ್ರೋಹ ಬಗೆದಿದ್ದಾರೆ ಎಂಬುದನ್ನುಅರಿವು ಮೂಡಿಸಲಿದ್ಧಾರೆ ಎನ್ನಲಾಗಿದೆ. ಜೊತೆಗೆ ರಾಜ್ಯಗಳಲ್ಲಿನ ಸ್ಥಳೀಯ ಸಮಸ್ಯೆಗಳ ಕುರಿತು ಚರ್ಚೆ ಮಾಡಿ ಉತ್ತಮ ಪ್ರಣಾಳಿಕೆಯನ್ನು ಬಿಡುಗಡೆ ಬಗ್ಗೆಯೂ ಪಕ್ಷ ಚಿಂತಿಸಿದೆ. ಜನರನ್ನು ತಲುಪುವ ಮೂಲಕ ಅಧಿಕಾರ ಇಲ್ಲದ ರಾಜ್ಯಗಳ ಕಡೆ ಬಿಜೆಪಿಯ ಕೇಂದ್ರ ನಾಯಕರು ಹೆಚ್ಚು ಗಮನ ನೀಡಬೇಕೆಂದು ಹೈಕಮಾಂಡ್ ಸೂಚಿಸಿದ್ದಾರೆ ಎನ್ನಲಾಗಿದೆ.
ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ರಾಜ್ಯಾಧಿಕಾರ:
2008ರಲ್ಲಿ ಹದಿಮೂರನೇ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಕರ್ನಾಟಕದಲ್ಲಿ ಗೆದ್ದು, ಅಂದಿನ ಸಮ್ಮಿಶ್ರ ಸರ್ಕಾರದ ಕರಾಳ ಅಧ್ಯಾಯಕ್ಕೆ ಮಂಗಳ ಹಾಡಿದ್ದರು. ಸಮ್ಮಿಶ್ರ ಸರ್ಕಾರದ ಅತಂತ್ರತೆ, ಕುಂಠಿತಗೊಂಡ ರಾಜ್ಯದ ಅಭಿವೃದ್ಧಿಯಿಂದ ಕಂಗೆಟ್ಟಿದ್ದ ಮತದಾರರು ಬಿಜೆಪಿಯನ್ನು ಗೆಲ್ಲಿಸಿಕೊಟ್ಟಿದ್ದರು. ರಾಜ್ಯಾದ್ಯಂತ ಹಣ, ಹೆಂಡದ ಹೊಳೆ ಹರಿಯಿತು. ಅಭ್ಯರ್ಥಿಗಳ ಕೈಬಾಯಿಯನ್ನು ಕಟ್ಟಿಹಾಕಲಾಗದೆ ಚುನಾವಣಾ ಆಯೋಗ ಅಭದ್ರತೆಯ ನಡುವೆ ಚುನಾವಣೆಯನ್ನು ನಡೆಸಿಕೊಟ್ಟಿತ್ತು.
ಬಿಜೆಪಿ ದುರಾಡಳಿತ: ಮುಖ್ಯಮಂತ್ರಿ ಅಭ್ಯರ್ಥಿಯೆಂದೇ ಬಿಂಬಿತವಾದ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ 224 ವಿಧಾನಸಭಾ ಕ್ಷೇತ್ರಗಳಲ್ಲಿ 110 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತ್ತು. ಭಾರತೀಯ ಜನತಾ ಪಕ್ಷ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿತ್ತು. ಬಳಿಕ ಯಡಿಯೂರಪ್ಪ ಅವಧಿಯಲ್ಲಿಯೂ ಜನ ಬಿಜೆಪಿಯ ದುರಾಡಳಿತದಿಂದ ಬೇಸರಗೊಂಡರು. ರೆಡ್ಡಿಗಳ ದರ್ಬಾರು, ಬಿಎಸ್ವೈ ಭ್ರಷ್ಟ, ರೆಸಾರ್ಟ್ ರಾಜಕಾರಣದಿಂದ ಬೇಸತ್ತು ಹೋದರು.
Also Read: ದ್ರಾವಿಡಿಯನ್ ನಾಡು ಬಿಜೆಪಿ ಪಾಲಿಗೆ ದೇಶದ್ರೋಹಿಗಳ ತಾಣವಾದದ್ದು ಹೇಗೆ?
ಐದು ವರ್ಷದಲ್ಲಿ ಬಿಜೆಪಿ 3 ಮುಖ್ಯಮಂತ್ರಿಗಳನ್ನು ಬದಲಾಯಿಸಿತ್ತು. ಭ್ರಷ್ಟಾಚಾರದ ಆರೋಪದ ಮೇಲೆ ಹಲವು ಮಂತ್ರಿಗಳು ರಾಜಿನಾಮೆ ನೀಡಿದ್ದರು. ರಾಜ್ಯದ ಅರ್ಧಕ್ಕಿಂತಲೂ ಹೆಚ್ಚು ಭಾಗ ಬರಗಾಲದಿಂದ ಪರಿತಪಿಸುತ್ತಿದ್ದರೂ, ಮೇವು ಹಾಗೂ ಕುಡಿಯುವ ನೀರು ಪೂರೈಸುವಲ್ಲಿ ಈ ಸರ್ಕಾರ ವಿಫಲವಾಗಿತ್ತು. ಕೈಗಾರಿಕಾ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಕ್ಷೇತ್ರಕ್ಕೆ ಒತ್ತು ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿತ್ತು. ಇದರ ಫಲವಾಗಿ ಹಲವು ಕೈಗಾರಿಕೋದ್ಯಮಿಗಳು ಬೆಂಗಳೂರನ್ನು ತೊರೆದು ಪುಣೆ ಹಾಗೂ ಹೈದರಾಬಾದ್ನತ್ತ ವಲಸೆ ಹೋಗುತ್ತಿದ್ದರು.
ಕುಡಿಯುವ ನೀರಿಗೂ ಹಾಹಾಕಾರ: ಜನ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ, ಕೆಲವು ಮಾದರಿ ಕೆಲಸಗಳನ್ನು ಮಾಡಿದ್ದರು ಎಂದು ನೆನೆಯಲು ಆರಂಭಿಸಿದರು. ಆದರೆ ಬಿಜೆಪಿಯ ದುರಾಡಳಿತ, ಅಭಿವೃದ್ಧಿಯ ಕಡೆಗಣನೆ ಭ್ರಷ್ಟಾಚಾರದ ವಾರ್ತೆ ಕೇಳಿ ರಾಜಧಾನಿಯ ಜನ ಬೇಸತ್ತಿದ್ದರು. ಜನ ವಿದ್ಯುತ್ ಹಾಗೂ ಕುಡಿಯುವ ನೀರಿಗಾಗಿ ಕೂಡ ಹಾಹಾಕಾರ ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾನೂನು-ಸುವ್ಯವಸ್ಥೆ ಪಾಲನೆ ಸಮಾಧಾನಕರವಾಗಿರಲಿಲ್ಲ. ಕೊನೆಗೂ ಜನ ಕಮಲದ ಆಡಳಿತದಿಂದ ಬೇಸರಗೊಂಡರು.
ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಕೈ ಹಿಡಿದ ಜನ: 2008 ರ ಮುನ್ನಾ ಸತತ 10 ವರ್ಷಗಳ ಕಾಲ ಆಡಳಿತ ನಡೆಸಿದ್ದ ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿಯೂ ಜನ ಭ್ರಷ್ಟಚಾರ ಮತ್ತು ದುರಾಡಳಿತವನ್ನು ಕಂಡಿದ್ದರು. ಹೀಗಾಗಿಯೇ ಜನ ಮತ್ತೆ 2008 ರಲ್ಲಿ ಕಮಲವನ್ನು ಗೆಲ್ಲಿಸಿದ್ದು, ಆದರೆ ಬಿಜೆಪಿ 5 ವರ್ಷಗಳ ಆಡಳಿತ ಬಾರಿ ಕೆಟ್ಟದಾಗಿತ್ತು, ಜನ ಕಂಗೆಟ್ಟಿದ್ದರು. ಮತ್ತೆ ಕಮಲವನ್ನು ತ್ಯಜಿಸಿ ಜನ ಕಾಂಗ್ರೆಸ್ ಪಕ್ಷವನ್ನು ನಿರೀಕ್ಷೆ ಮಟ್ಟಕ್ಕಿಂತ ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿದರು. ಸಿದ್ದರಾಮಯ್ಯ ನೇತೃತ್ವ ಸರ್ಕಾರ ಉತ್ತಮ ಆಡಳಿತ ನಡೆಸಿದ್ದು, ಜನ ಒಪ್ಪಿಕೊಂಡಿದ್ದರು.
2014 ರ ಲೋಕಸಭಾ ಚುನಾವಣೆಯಿಂದ ಬಿಜೆಪಿ ಹವಾ ಶುರು: ಮತ್ತೆ ಬಿಜೆಪಿ 2014 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪ್ರಬಲ ಹಿಂದುತ್ವ ಸಿದ್ದಾಂತದ ಅಜೆಂಡಾದ ಮೇಲೆ ಗೆಲ್ಲುವ ಮೂಲಕ ದೇಶಾದ್ಯಂತ ಕಮಲ ಅರಳಿಸಿತ್ತು. ಒಂದರ ಹಿಂದೆ ಒಂದರಂತೆ 22 ರಾಜ್ಯಗಳ ವಿಧಾನಸಭೆಯಲ್ಲಿಯೂ ಗೆದ್ದು ನಗೆ ಬೀರಿತ್ತು. ನಂತರ ಬಿಜೆಪಿಗೆ ಕಂಟಕವಾಗಿ ಪರಿಣಮಿಸಿದ್ದು, ಗುಜರಾತ್ ಚುನಾವಣೆ. ಯಾವ ರಾಜ್ಯವನ್ನು ಮಾದರಿಯಾಗಿಟ್ಟುಕೊಂಡು ದೇಶ ಗೆದ್ದರೋ, ಅದೇ ರಾಜ್ಯದಲ್ಲಿ ಬಿಜೆಪಿ ಭಾರೀ ಮುಖಭಂಗಕ್ಕೆ ಒಳಗಾಯಿತು. ತುಂಬಾ ಸರಳ ಬಹುಮತದಿಂದ ಗೆದ್ದು, ದೇಶದಲ್ಲಿ ಬಿಜೆಪಿ ಮೇನಿಯಾ ಕಮ್ಮಿಯಾಗಿದೆ ಎಂದು ಧೃಡಪಡಿಸಿತ್ತು.

ದೇಶದೆಲ್ಲೆಡೆ ಕಂಡ ಅಭೂತಪೂರ್ವ ಗೆಲುವಿನಂತೆ ದಕ್ಷಿಣ ಭಾರತದಲ್ಲೂ ಬಿಜೆಪಿ ತನ್ನ ಅಧಿಪತ್ಯ ಸಾಧಿಸಲು ಹೊರಟಿದೆ. ಇನ್ನು ತನ್ನ ನೆಲೆಯನ್ನು ತಮಿಳುನಾಡಿನಲ್ಲಿಯೂ ಬಿಜೆಪಿ ವಿಸ್ತರಿಸಿಕೊಳ್ಳಲು ಸಾಧ್ಯವಾ ಎಂದು ಚರ್ಚೆಗಳು ನಡೆಯುತ್ತಿವೆ. ಆಂಧ್ರ, ತೆಲಾಂಗಣ, ಕೇರಳಕ್ಕಿಂತ ಕಷ್ಟಕರವಾದದು ತಮಿಳುನಾಡನ್ನು ಗೆಲ್ಲವುದು. ಸುಮಾರು ಐದು ದಶಕದಿಂದ ತಮಿಳುನಾಡಿನ ರಾಜಕೀಯ ದ್ರಾವಿಡ ಪಕ್ಷಗಳ ಹಿಡೀತದಲ್ಲಿದ್ದು, ಕಾಂಗ್ರೆಸ್ ನ ಅಸ್ತಿತ್ವವೂ ಅಷ್ಟೇನೂ ಇಲ್ಲ. ಅಲ್ಲಿ ಬಿಜೆಪಿ ಗೆಲ್ಲುವುದು ಹೇಗೆ ಎಂಬ ಸಮಸ್ಯೆ ಎದುರಾಗಿದೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಗೆಲುವು ಸುಲಭವಲ್ಲ: ಬೇರೆಲ್ಲೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅತಿ ದೊಡ್ಡ ನಾಯಕನಾಗಿ ಹೊರ ಹೊಮ್ಮಿದ್ದು ಹಾಗೂ ಪ್ರಮುಖ ವಿರೋಧ ಪಕ್ಷ ಡಿಎಂಕೆ ತನ್ನ ಅಸ್ತಿತ್ವನ್ನು ಹಂತಹಂತವಾಗಿ ಕಳೆದುಕೊಳ್ಳುತ್ತಿರುವುದನ್ನು ಗಮನಿಸಿ, ತಮಿಳುನಾಡಿನಲ್ಲಿಯೂ ಬಿಜೆಪಿ ನೆಲೆಯನ್ನು ವಿಸ್ತರಿಸಿಕೊಳ್ಳುವ ಅವಕಾಶವನ್ನು ಗ್ರಹಿಸಿದ್ದಾರೆ. “ದಕ್ಷಿಣದಲ್ಲಿ ವಿಸ್ತರಿಸಿಕೊಳ್ಳಲು ತಮಿಳುನಾಡು ನಮ್ಮ ಕೇಂದ್ರ ಸ್ಥಾನ. ಆಧುನಿಕ ಆನುವಂಶಿಕ ವಿಜ್ಞಾನ ನಿರೂಪಿಸುವಂತೆ ಈ ಭಾಗದ ಜನ ದೇಶದ ಇತರ ಭಾಗದ ಜನಕ್ಕಿಂತ ವಿಭಿನ್ನರಲ್ಲ, ಆದುದರಿಂದ ದ್ರಾವಿಡ ಪಕ್ಷಗಳ ಸೈದ್ಧಾಂತಿಕ ನಿಲುವೇ ಛಿದ್ರವಾಗುತ್ತದೆ.” ಹೀಗಾಗಿ ತಮಿಳುನಾಡು ಗೆಲ್ಲಲೆಬೇಕು ಎನ್ನುವುದು ಬಿಜೆಪಿ ವಾದ.
ರಾಜಕೀಯ ವಿಶ್ಲೇಷಕರ ಪ್ರಕಾರ ದ್ರಾವಿಡ ಪಕ್ಷಗಳು ದಶಕಗಳವರೆಗೆ ಆಳಿದ್ದರೂ ಇದು ಬಿಜೆಪಿಗೆ ಯಾವುದೇ ರೀತಿಯಲ್ಲಿ ಸಹಕಾರವಾಗುವುದಿಲ್ಲ. ಎನ್ಡಿಎ ಸರ್ಕಾರದ ತಮಿಳುನಾಡಿಗೆ ಅನುದಾನ ನೀಡುವಲ್ಲಿ ವಿಫಲವಾಗಿದ್ದು, ಅಲ್ಲಿನ ಜನ ಹಿಂದಿ ವಿರೋಧಿ ಚಳುವಳಿ ಕಟ್ಟಿದ್ದು, ಬಿಜೆಪಿಯನ್ನು ಒಳಗಡೆ ಬಿಟ್ಟುಕೊಳ್ಳುವುದೆ ಕಷ್ಟ ಎನ್ನುತ್ತಿವೆ ಮುಲಗಳು. ಒಟ್ಟಾರೆ ದೇಶವನ್ನು ಗೆದ್ದರು, ಬಿಜೆಪಿ ದಕ್ಷಿಣ ಭಾರತವನ್ನು ಗೆಲ್ಲದು ಎಂಬ ಗಾದೆ ನಿಜವಾಗಲಿದೆಯೋ, ಅಥವಾ ಬಿಜೆಪಿ ಚಾಣಕ್ಯನ ತಂತ್ರ, ಮೋದಿ ಮೇನಿಯಾ ಎರಡು ಕೂಡ ದಕ್ಷಿಣ ರಾಜ್ಯಗಳನ್ನು ಗೆಲ್ಲಲಿವೆಯಾ ಎಂದು ನೋಡಬೇಕು.