ಕಳೆದ ವರ್ಷದ ಆಗಸ್ಟ್ 5 ರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರ ರಾಜ್ಯಕ್ಕೆ ಸಂವಿಧಾನದ 370 ನೇ ವಿಧಿ ಅನ್ವಯ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ ದೇಶದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆ ಮಾಡಿಕೊಂಡಿತು. ಅಲ್ಲದೆ ಜಮ್ಮು ಕಾಶ್ಮೀರವನ್ನು ಮೂರು ಭಾಗಗಳನ್ನಾಗಿ ವಿಂಗಡಿಸಿ ಜಮ್ಮು, ಲಢಾಕ್ ಮತ್ತು ಕಾಶ್ಮೀರ ಎಂಬ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸಲಾಯಿತು. ಇದರಲ್ಲಿ ಜಮ್ಮುವಿಗೆ 10 ಜಿಲ್ಲೆಗಳೂ, ಕಾಶ್ಮೀರಕ್ಕೆ 10 ಜಿಲ್ಲೆಗಳೂ ಮತ್ತು ಲಢಾಕ್ ಗೆ 2 ಜಿಲ್ಲೆಗಳೂ ಸೇರಿವೆ. ಈ ರೀತಿ ವಿಂಗಡಿಸಿ ನಾಗರಿಕರಿಗೆ ಮತ್ತು ಆಡಳಿತದ ದೃಷ್ಟಿಯಿಂದ ಅನುಕೂಲ ಮಾಡಿಕೊಡುವುದು ಉದ್ದೇಶವೆಂದು ಸರ್ಕಾರ ಹೇಳಿತ್ತು. ಆದರೆ ಈಗ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಗಮನಿಸಿದರೆ ಸರ್ಕಾರ ತಾನು ಹೇಳಿಕೊಂಡಿರುವ ಉದ್ದೇಶದಿಂದ ದೂರ ಸರಿದಂತೆ ಕಂಡು ಬರುತ್ತಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೀಗ ಎರಡು ವರ್ಷಗಳಿಗೂ ಹೆಚ್ಚು ಕಾಲ ಕೇಂದ್ರದ ಆಡಳಿತದಲ್ಲಿದ್ದ ಜಮ್ಮು ಮತ್ತು ಕಾಶ್ಮೀರದಲ್ಲಿ ನೇರವಾಗಿ ಚುನಾಯಿತ ಜಿಲ್ಲಾ ಅಭಿವೃದ್ಧಿ ಮಂಡಳಿಗಳನ್ನು (ಡಿಡಿಸಿ) ಸ್ಥಾಪಿಸಲು ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು ಮುಂದಾಗಿದ್ದು ಈ ಕ್ರಮವು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಒಂದು ರೀತಿಯ ಮಿನಿ-ಅಸೆಂಬ್ಲಿ ಚುನಾವಣೆಯಾಗಲಿರುವ ಮತ್ತು ಇಡೀ ಗ್ರಾಮೀಣ ಜನಸಂಖ್ಯೆಯನ್ನು ಒಳಗೊಂಡಿರುವ ಈ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರವು ಆಡಳಿತದ ತಳಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಸಶಕ್ತಗೊಳಿಸುವ ಕ್ರಮವಾಗಿ ಮತ್ತು ಸಾಂವಿಧಾನಿಕ ಅಗತ್ಯವೆಂದು ಪ್ರತಿಪಾದಿಸುತ್ತಿದೆ. ಆದರೆ ಈ ಹೊಸ ಪ್ರಯೋಗವು ಜಮ್ಮು ಮತ್ತು ಕಾಶ್ಮೀರ ಜನರ ದನಿಯನ್ನು ಮತ್ತಷ್ಟು ದುರ್ಬಲಗೊಳಿಸುತ್ತದೆ ಮತ್ತು ವಿಘಟಿಸುತ್ತದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರ ಪಂಚಾಯತಿ ರಾಜ್ ಕಾಯ್ದೆ 1989 ಗೆ ತಿದ್ದುಪಡಿಗಳನ್ನು ತಂದು ಕೇಂದ್ರ ಗೃಹ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡನೆಯ ನಾಲ್ಕನೇ ಆದೇಶ 2020 ಅನ್ನು ಅನಾವರಣಗೊಳಿಸಿತು. ಇದರಲ್ಲಿ ಜಿಲ್ಲಾ ಯೋಜನೆ ಮತ್ತು ಅಭಿವೃದ್ಧಿ ಮಂಡಳಿಗಳು (ಡಿಪಿಡಿಬಿಗಳು) ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ಗಳ (ಬಿಡಿಸಿ) ಅಧ್ಯಕ್ಷರು, ಸಂಸತ್ತಿನ ಸದಸ್ಯರು, ರಾಜ್ಯ ಶಾಸಕಾಂಗದ ಸದಸ್ಯರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರನ್ನು ಒಳಗೊಂಡಿವೆ.
Also Read: ಕಾಶ್ಮೀರ ಕಣಿವೆ: ರಾಜಾಡಳಿತದಿಂದ… ಕೇಂದ್ರಾಡಳಿತದವರೆಗೆ
ಹೊಸ ಕಾರ್ಯವಿಧಾನದಡಿಯಲ್ಲಿ, ಪ್ರತಿ ಜಿಲ್ಲೆಯನ್ನು ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಆಯಾ ಜಿಲ್ಲಾಧಿಕಾರಿಗಳು 14 ಪ್ರಾದೇಶಿಕ ಕ್ಷೇತ್ರಗಳಾಗಿ ವಿಂಗಡಿಸಲಾಗುವುದು, ನಂತರ ಅವರು ಈ ಮಂಡಳಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ತಿದ್ದುಪಡಿಗಳ ಪ್ರಕಾರ, ಪ್ರಸ್ತುತ ಜಾರಿಯಲ್ಲಿರುವ ಯಾವುದೇ ಕಾನೂನಿನಡಿಯಲ್ಲಿ ರಚಿಸಲಾದ ಪುರಸಭೆ ಅಥವಾ ಪುರಸಭೆಯ ನಿಗಮದಲ್ಲಿ ಸೇರ್ಪಡೆಗೊಂಡಿರುವ ಜಿಲ್ಲೆಯ ಭಾಗಗಳನ್ನು ಹೊರತುಪಡಿಸಿ, ಡಿಡಿಸಿ ಇಡೀ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿರುತ್ತದೆ. ಇದರಲ್ಲಿ 70% ಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ಗ್ರಾಮೀಣ ಮತದಾರರು ಡಿಡಿಸಿ ಚುನಾವಣೆಯ ಸಮಯದಲ್ಲಿ ಮತದಾನದ ಹಕ್ಕನ್ನು ಹೊಂದಿರುತ್ತಾರೆ.

ಜಮ್ಮು ಕಾಶ್ಮೀರದ ಮುಖ್ಯ ಚುನಾವಣಾ ಅಧಿಕಾರಿ 2018 ರ ಅಕ್ಟೋಬರ್ನಲ್ಲಿ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಹಿಂದಿನ ರಾಜ್ಯವು ಪಂಚಾಯತ್ಗಳಿಗೆ 5.81 ಮಿಲಿಯನ್ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ (ಯುಎಲ್ಬಿ) 1.69 ಮಿಲಿಯನ್ ಮತದಾರರನ್ನು ಹೊಂದಿತ್ತು. ಸಂವಿಧಾನದ 370 ನೇ ವಿಧಿಯನ್ನು ರದ್ದು ಪಡಿಸಿದ ನಂತರ ರಾಜಕೀಯ ಚಟುವಟಿಕೆಗಳು ಸಂಪೂರ್ಣ ಸ್ಥಗಿತವಾಗಿದ್ದು ಈ ಸಮಯದಲ್ಲಿ ಡಿಡಿಸಿಗಳನ್ನು ಸ್ಥಾಪಿಸಲು ಕೇಂದ್ರ ಮುಂದಾಗಿದೆ. 370 ನೇ ವಿಧಿಯನ್ನು ರದುಪಡಿಸಿದ ಕೂಡಲೇ ನಡೆದ ಬಿಡಿಸಿ ಚುನಾವಣೆಗಳು ಯುಟಿಯಲ್ಲಿ ಯಾವುದೇ ರಾಜಕೀಯ ಚಟುವಟಿಕೆಯನ್ನು ಪುನರುಜ್ಜೀವನಗೊಳಿಸಲು ವಿಫಲವಾಗಿವೆ. ಬಿಡಿಸಿ ಚುನಾವಣೆಗೆ ಮುಂಚಿತವಾಗಿ, 2018 ರ ನವೆಂಬರ್-ಡಿಸೆಂಬರ್ನಲ್ಲಿ ಅಂದಿನ ರಾಜ್ಯಪಾಲ ಸತ್ಯ ಪಾಲ್ ಮಲಿಕ್ ಅವರು ಪಂಚಾಯತ್ ಚುನಾವಣೆಗಳನ್ನು ನಡೆಸಿದ್ದರು. ಜನರ ನಿರುತ್ಸಾಹದ ಪ್ರತಿಕ್ರಿಯೆಯಿಂದಾಗಿ ಕಾಶ್ಮೀರದಲ್ಲಿ 60% ಕ್ಕಿಂತ ಹೆಚ್ಚು ಪಂಚ ಮತ್ತು ಸರ್ಪಂಚ್ ಸ್ತಾನಗಳು ಖಾಲಿ ಬಿದ್ದಿವೆ. ಆಗಿನ ಮುಖ್ಯ ಚುನಾವಣಾ ಅಧಿಕಾರಿ ಶೈಲೇಂದ್ರ ಕುಮಾರ್ ಬಹಿರಂಗಪಡಿಸಿದ ಅಂಕಿಅಂಶಗಳ ಪ್ರಕಾರ, 2019 ರ ಸೆಪ್ಟೆಂಬರ್ನಲ್ಲಿ 12,054 (61.5%) ಪಂಚ್ ಮತ್ತು ಸರ್ಪಂಚ್ ಸ್ಥಾನಗಳು (ಚುನಾಯಿತ ಪ್ರತಿನಿಧಿಗಳ ಸಂಖ್ಯೆಯ ದ್ವಿಗುಣ) ಇನ್ನೂ ಕಾಶ್ಮೀರದಲ್ಲಿ ಖಾಲಿಯಾಗಿವೆ.
Also Read: ಜಮ್ಮು ಕಾಶ್ಮೀರದಲ್ಲಿ 15 ಸಾವಿರ ಎಂಜಿನಿಯರ್ ಗಳ ಉದ್ಯೋಗ ಕಸಿದುಕೊಂಡ ಸರ್ಕಾರ
ಡಿಡಿಸಿಗಳ ರಚನೆಯು ಜಮ್ಮು ಕಾಶ್ಮೀರ ಅಸೆಂಬ್ಲಿಯನ್ನು ಮತ್ತಷ್ಟು ಕುಂದಿಸುವ ಗುರಿಯನ್ನು ಹೊಂದಿದೆ ಎಂದು ಹೆಚ್ಚಿನ ರಾಜಕೀಯ ಪಕ್ಷಗಳು ಹೇಳಿದ್ದರೆ ಕೇಂದ್ರ ಸರ್ಕಾರವು ಇದನ್ನು ತಳ್ಳಿ ಹಾಕಿದೆ. ದಕ್ಷಿಣ ಕಾಶ್ಮೀರದ ನ್ಯಾಷನಲ್ ಕಾನ್ಫರೆನ್ಸ್ ಸಂಸದ ನ್ಯಾಯಮೂರ್ತಿ (ನಿವೃತ್ತ) ಹಸ್ನೈನ್ ಮಸೂದಿ ಅವರ ಪ್ರಕಾರ ಈ ಪ್ರಕ್ರಿಯೆಯು ತಳಮಟ್ಟದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಹೆಸರಿನಲಿ ಜಮ್ಮು ಕಾಶ್ಮೀರದಲ್ಲಿ ಅಧಿಕಾರಶಾಹಿ ಆಡಳಿತವನ್ನು ಬಲಪಡಿಸುವ ಮತ್ತು ಸಮರ್ಥಿಸುವ ಗುರಿಯನ್ನು ಹೊಂದಿದೆ. ಅವರು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸಂಸ್ಥೆಗಳನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ, ಇದು ಅಂತಿಮವಾಗಿ ಜಮ್ಮು ಮತ್ತು ಕಾಶ್ಮೀರದ ಜನರನ್ನು ಮತ್ತಷ್ಟು ನಿರುತ್ಸಾಹಗೊಳಿಸುತ್ತದೆ ಎಂದು ಅವರು ಹೇಳಿದರು.
ಮಾಜಿ ಸಚಿವ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ನಾಯಕ ನಯೀಮ್ ಅಖ್ತರ್ ಅವರ ಪ್ರಕಾರ ಡಿಡಿಸಿಗಳ ಸ್ಥಾಪನೆಯ ಹಿಂದಿನ ಉದ್ದೇಶವು ಜಿಲ್ಲಾ ಮಟ್ಟದ ಅಸೆಂಬ್ಲಿಗಳನ್ನು ರಚಿಸುವುದು, ಇದರಿಂದ ರಾಜ್ಯದ ಏಕೀಕೃತ ಧ್ವನಿ ಇಲ್ಲದಂತೆ ಮಾಡುವುದಾಗಿದೆ. ಅಂತಹ ಪ್ರಯೋಗಗಳಿಂದ ಹೊಸ ನಾಯಕತ್ವವನ್ನು ರಚಿಸಲಾಗುವುದಿಲ್ಲ. ನಾಯಕತ್ವವನ್ನು ಆವಿಷ್ಕರಿಸಲು ಅಥವಾ ತಯಾರಿಸಲು ಸಾಧ್ಯವಿಲ್ಲ, ಅದು ಜನರ ಮೇಲೆ ಅವಲಂಬಿತವಾಗಿದೆ. ಈಗ ಪಂಚಾಯಿತಿಗಳಲ್ಲಿ ಚುನಾಯಿತರಾದವರು ಭದ್ರತೆಯ ಹೆಸರಿನಲ್ಲಿ ಹೋಟೆಲ್ ಗಳಲ್ಲಿ ವಾಸಿಸುತ್ತಿದ್ದಾರೆ. ಡಿಡಿಸಿ ಚುನಾವಣೆಯೂ ಇಂತಹ ಭದ್ರತೆ ಹೊಂದುವ ನಾಯಕರನ್ನು ಸಷ್ಟಿಸಲಿದೆ ಎಂದು ಹೇಳಿದರು. ಡಿಡಿಸಿಗಳ ಸ್ಥಾಪನೆಯು 2019 ರ ಆಗಸ್ಟ್ 5 ರಂದು ಪ್ರಾರಂಭವಾದ ಜನರ ಅಶಕ್ತತೆಯ ವ್ಯವಸ್ಥಿತ ಮಾದರಿಯ ಒಂದು ಭಾಗವಾಗಿದೆ ಎಂದು ಅವರು ಹೇಳಿದರು ಅವರು ರಾಜಕೀಯೇತರ ಕ್ರಮಗಳ ಮೂಲಕ ರಾಜಕೀಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. ಇದು ಇಲ್ಲಿ ಕೆಲಸ ಮಾಡುವುದಿಲ್ಲ ಎಂದು ಅವರು ಹೇಳಿದರು.
Also Read: ಭಾರತಕ್ಕೆ ಕಾಶ್ಮೀರ ವಿವಾದ ಯಾವಾಗಲೂ ಜೀವಂತವಾಗಿಯೇ ಇರಬೇಕಾ?
ಆದರೆ ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಈ ಕ್ರಮವನ್ನು ತುಂಬಾ ಪರಿಣಾಮಕಾರಿಯಾಗಿದೆ ಎಂದು ಬಣ್ಣಿಸುತ್ತಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಜಿಲ್ಲಾ ಅಭಿವೃದ್ಧಿ ಮಂಡಳಿಗಳನ್ನು (ಡಿಡಿಸಿ) ಸ್ಥಾಪಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ. ಜಮ್ಮು ಕಾಶ್ಮೀರ ರಾಜ್ಯದ ಪಂಚಾಯತಿ ರಾಜ್ ನಿಯಮಗಳನ್ನು ತಿದ್ದುಪಡಿ ಮಾಡಿ ಕ್ಷೇತ್ರಗಳ ಡಿಲಿಮಿಟೇಶನ್ ಮತ್ತು ಚುನಾವಣೆ ನಡೆಸಿ ಡಿಡಿಸಿಗಳನ್ನು 14 ಕ್ಷೇತ್ರಗಳು/ಜಿಲ್ಲೆಗಳಾಗಿ ವಿಂಗಡಿಸಲಾಗುವುದು ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡನೆ ಕಾಯ್ದೆಯ ಸೆಕ್ಷನ್ 96 ರ ಅಡಿಯಲ್ಲಿ ಕೇಂದ್ರ ಸರ್ಕಾರವು ತನ್ನ ಕಾರ್ಯನಿರ್ವಾಹಕ ಅಧಿಕಾರವನ್ನು ಚಲಾಯಿಸುವ ಮೂಲಕ ಕಾನೂನನ್ನು ತಿದ್ದುಪಡಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ಮಾಡಿರುವ ಬದಲಾವಣೆಯು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಆಗುತ್ತದೆ ಎಂಬುದನ್ನು ಕಾಲವೇ ಹೇಳಬೇಕಿದೆ.