ಮೈಸೂರು ಜಿಲ್ಲೆಯ ಹಿರಿಯ ರಾಜಕಾರಣಿ ಎಂದೇ ಗುರುತಿಸಿಕೊಂಡಿದ್ದ ಅಡಗೂರು ವಿಶ್ವನಾಥ್ ಅವರದು ಒಂದು ರೀತಿಯ ಅತಂತ್ರ ರಾಜಕೀಯ ಆಗಿದೆ. ಅಷೇ ಅಲ್ಲ ಮುಂದಿನ ರಾಜಕೀಯ ಭವಿಷ್ಯವೂ ಮಸುಕಾಗಿದೆ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ಇವರದೇ ಆಗಿತ್ತು. ಕಿಂಗ್ ಮೇಕರ್ ರೀತಿ ಹೀರೋ ಆಗಿದ್ದ ವಿಶ್ವನಾಥ್ ಅವರು ಬಿಜೆಪಿ ಹೈಕಮಾಂಡ್ ಬೇಡ ಅಂದರೂ ಕೇಳದೆ ಹುಣಸೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತರು. ಇದೇ ಇವರು ಮಾಡಿಕೊಂಡಿದ್ದ ದೊಡ್ಡ ಯಡವಟ್ಟಾಗಿತ್ತು. ಬಹುಶಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಾಮಬಲದಿಂದ ವಿಧಾನ ಸಭೆಗೆ ಆಯ್ಕೆ ಆಗಿಬಿಡುತ್ತೇನೆ ಎಂಬ ಆಸೆ ಅವರದಾಗಿತ್ತು.ಆದರೆ ಮತದಾರ ಅವಕಾಶವನ್ನೇ ನೀಡಲಿಲ್ಲ.
ಇದಕ್ಕೂ ಮೊದಲು ಬಿಜೆಪಿ ಹೈಕಮಾಂಡ್ ಎಲ್ಲರಿಗೂ ಸೂಕ್ತ ಸ್ಥಾನ ಮಾನ ನೀಡುವುದಾಗಿಯೂ ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ನಲ್ಲಿ ಸ್ಥಾನ ಕೊಡುವುದಾಗಿಯೂ ಭರವಸೆ ನೀಡಿತ್ತು. ಆದರೆ ಹಠಕ್ಕೆ ಬಿದ್ದವರಂತೆ ವರ್ತಿಸಿದ ವಿಶ್ವನಾಥ್ ಬಿಜೆಪಿ ಹೈಕಮಾಂಡ್ ಮೇಲೆ ಇನ್ನಿಲ್ಲದ ಒತ್ತಡ ಹಾಕಿ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿ ಆಗಿದ್ದರು. ಕೊಡಗು-ಮೈಸೂರು ಸಂಸದರೂ ಆಗಿದ್ದ ಇವರು ಎಲ್ಲರನ್ನೂ ಬಹಳ ವಿಶ್ವಾಸದಿಂದಲೇ ಮಾತಾಡಿಸುತಿದ್ದರು. ಅಂತೆಲ್ಲಾ ತಮ್ಮ ಬಳಿ ಬಂದವರನ್ನೆಲ್ಲಾ ವಿಚಾರಿಸುತ್ತಾ ತಾವು ಭರವಸೆ ನೀಡಿದಂತೆ ಕೆಲಸಗಳನ್ನು ಮಾಡಿಕೊಡುತ್ತಿದ್ದ ಆ ಹಿರಿತಲೆಯ ವ್ಯಕ್ತಿ ಈಗ ನಂಗೊಂದು ಶಾಸಕ ಸ್ಥಾನ ದಯಪಾಲಿಸಿ ಎಂದು ಬಿಜೆಪಿ ಮುಖಂಡರ ಬಳಿ ಅಲವತ್ತುಕೊಳ್ಳುತ್ತಿರುವುದು ನೋಡಿದರೆ ನಿಜಕ್ಕೂ ಮರುಕ ಆಗುತ್ತದೆ.
ಕೆಲವೇ ಕೆಲವು ವಷ೯ಗಳ ಹಿಂದೆ ಎಲ್ಲಾ ರಾಜಕೀಯ ಪಕ್ಷಗಳಿಗೆ ಬೇಕಾಗಿದ್ದ ಈ ರಾಜಕೀಯ ಧುರೀಣ ಈಗ ಯಾವ ಪಕ್ಷಕ್ಕೂ ಇಷ್ಟು ಬೇಗ ಬೇಡವಾಗಿಬಿಟ್ಟರೆ ಎಂಬ ಪ್ರಶ್ನೆಯೂ ಮೂಡುತ್ತದೆ. ಮೂರು ಬಾರಿ ಶಾಸಕರಾಗಿ, ಒಂದು ಬಾರಿ ಸಂಸದರಾದವರಿಗೆ ರಾಜಕೀಯದಲ್ಲಿ ಈ ಸ್ಥಿತಿಯೇ? ಯುವರಾಜಕಾರಣಿಗಳಿಗೇ ಪಾಠ ಹೇಳುತ್ತಿದ್ದ ವ್ಯಕ್ತಿತ್ವದ ಮುತ್ಸದಿಯೋವ೯ ರಾಜಕೀಯದ ಪಾಠ ಕಲಿಯುವ ದಿನ ಬಂದೇಬಿಟ್ಟಿತೇ?
ಹೆಚ್ಚೇನು ದಿನ ಬೇಡ.. ಕಳೆದ ವಷ೯ದ ಜುಲೈನಲ್ಲಿ ಕಾಂಗ್ರೆಸ್, ಜೆಡಿಎಸ್ ನ ಅತೖಪ್ತ ಶಾಸಕರನ್ನು ಒಗ್ಗೂಡಿಸಿ, ಎರಡೂ ಪಕ್ಷಗಳ ೧೬ ಶಾಸಕರ ನಡುವೆ ಸಮನ್ವಯ ಸಾಧಿಸಿ ತನ್ನೊಂದಿಗೆ ಅವರನ್ನೂ ಬಿಜೆಪಿಗೆ ಕರೆದೊಯ್ದು ರಾಜ್ಯದಲ್ಲಿ ಬಿಜೆಪಿ ಸಕಾ೯ರ ರಚನೆಯಲ್ಲಿ ಪ್ರಮುಖ ಕಾರಣರಾಗಿದ್ದ ವ್ಯಕ್ತಿ ಈಗ ಬಿಜೆಪಿಯವರಿಗೇ ಬೇಡವಾಗಿಬಿಟ್ಟರೇ? ಎರಡು ತಿಂಗಳ ಹಿಂದಷ್ಟೆ ಶಾಸಕ ಸಾರಾ ಮಹೇಶ್ ಹಾಗೂ ವಿಶ್ವನಾಥ್ ಶರಂಪರ ಜಗಳವಾಡಿಕೊಂಡಿದ್ದರು. ನಿತ್ಯವೂ ಪತ್ರಿಕೆಗಳಲ್ಲಿ ಪರಸ್ಪರ ಟೀಕಿಸಿದ್ದು ಪ್ರಕಟಗೊಳ್ಳುತಿತ್ತು. ನಂತರ ವಿಶ್ವನಾಥ್ ಅವರೇ ಬಿಳಿ ಬಾವುಟ ಎತ್ತಿ ಹಿಡಿದರು.
6 ವಷ೯ಗಳ ಹಿಂದಿನವರೆಗೂ ಕೊಡಗಿನಲ್ಲಿ ಎಲ್ಲಾ ರಾಜಕಾರಣಿಗಳಿಗೆ, ರಾಜಕೀಯ ಕಾಯ೯ಕತ೯ರಿಗೆ ಆಪ್ತರಾಗಿದ್ದ ಮೇಧಾವಿ ರಾಜಕಾರಣಿ ಇವರು. ಸಂಸದರಾದ ಮೇಲೆ ಹೊರಜಿಲ್ಲೆಯ ರಾಜಕಾರಣಿಯಾಗಿ ಕೊಡಗಿನಲ್ಲಿ ಇವರಷ್ಟು ಜನರ ಸಂಪಕ೯ ಮಾಡಿದ್ದ ರಾಜಕೀಯ ವ್ಯಕ್ತಿ ಮತ್ತೋವ೯ ಇಲ್ಲ. ಹೊರಜಿಲ್ಲೆಯವರು ಎಂಬ ಭಾವನೆಯೇ ಬಾರದಷ್ಟು ಮಟ್ಟಿಗೆ ಕೊಡಗಿನವರಿಗೆ ವಿಶ್ವನಾಥ್ ಆಪ್ತರಾಗಿದ್ದರು. ಬುದ್ದಿವಂತಿಗೆ, ಚಾಣಕ್ಷತೆ, ತಂತ್ರಗಾರಿಕೆ, ಮಾತುಗಾರಿಕೆ, ಎಲ್ಲರೊಂದಿಗೆ ಬೆರೆಯುವ ಸ್ವಭಾವ, ಕವಿಮನಸ್ಸು, ಮಾನವೀಯತೆಯೊಂದಿಗಿನ ನಿಸ್ಸೀಮ ಗುಣ ಹೀಗೇ ರಾಜಕೀಯ ರಂಗಕ್ಕೆ ಏನೆಲ್ಲಾ ಬೇಕೋ ಅದೆಲ್ಲವೂ ವಿಶ್ವನಾಥ್ ಅವರಲ್ಲಿತ್ತು. ಸಹಜವಾಗಿಯೇ ಅಧಿಕಾರದ ಆಸೆಯೂ ವಯಸ್ಸು ಹೆಚ್ಚಾದಂತೆಲ್ಲಾ ಇವರ ಮನಸ್ಸು ಆಕ್ರಮಿಸಿಕೊಂಡಿತ್ತು. ಆದರೆ ಹಳ್ಳಿ ಹಕ್ಕಿ ಎಂಬ ಕೖತಿ ಬರೆದದ್ದೇ ಬರೆದದ್ದು ವಿಶ್ವನಾಥ್ ಹಕ್ಕಿಯಂತೆ ಚಂಚಲತೆ ಮತ್ತು ಹಾರುವ ಮನಸ್ಸಿನ ಸ್ವಭಾವ ಹೊಂದಿಬಿಟ್ಟರು.
2014 ರ ಲೋಕಸಭಾ ಚುನಾವಣೆಯಲ್ಲಿ ಅದೇ ತಾನೆ ರಾಜಕೀಯಕ್ಕೆ ಕಾಲಿಟ್ಟ ಪ್ರತಾಪ್ ಸಿಂಹ ಎದುರಿಸಲಾರದೇ ಸೋಲುಂಡ ಹಳ್ಳಿ ಹಕ್ಕಿ ರಾಜಕೀಯದಲ್ಲಿ ಬೀಸಿದ್ದ ಮೋದಿ ಅಲೆಯೆದುರು ತರಗಲೆಯಂತೆ ಹಾರಿಹೋದರು. ವಿಶ್ವನಾಥ್ ಸೋಲಿಗೆ ಕೊಡಗಿನ ಕಾಣಿಕೆ ಬಹಳ ದೊಡ್ಡದಿತ್ತು. ನಂತರದ ದಿನಗಳಲ್ಲಿ ಕಾಂಗ್ರೆಸ್ ಮುಖಂಡ, ತಾವೇ ಕಾಂಗ್ರೆಸ್ ಗೆ ಕೈ ಹಿಡಿದುತಂದಿದ್ದ ಸಿದ್ದರಾಮಯ್ಯ ಅವರನ್ನು ಎದುರು ಹಾಕಿಕೊಂಡ ವಿಶ್ವನಾಥ್ ಕಾಂಗ್ರೆಸ್ ನಲ್ಲಿ ದೊಡ್ಡ ಹುದ್ದೆ ಪಡೆಯಲು ತಮಗೆ ಸಿದ್ದರಾಮಯ್ಯ ಅವರೇ ಅಡ್ಡಿಯಾಗಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿ ಕಾಂಗ್ರೆಸ್ ನಿಂದ ಹೊರನಡೆಯಲು ಮುಂದಾದರು. ಇದೇ ಸಂದಭ೯ ವಿಶ್ವನಾಥ್ ಆರೋಗ್ಯವೂ ತೀರಾ ಹದಗೆಟ್ಟು ಕೊಯಮತ್ತೂರಿನಲ್ಲಿ ಅನೇಕ ದಿನಗಳ ಕಾಲ ಚಿಕಿತ್ಸೆಗೊಳಗಾದರು. ರಾಜಕೀಯವಾಗಿ ಸೂಕ್ತ ಅವಕಾಶವಿಲ್ಲದ ನೋವು. ಹತಾಶೆಯೂ ವಿಶ್ವನಾಥ್ ರನ್ನು ಕಾಡತೊಡಗಿತ್ತು.
ವಿಶ್ವನಾಥ್ ಅತಂತ್ರ ಸ್ಥಿತಿಯನ್ನು ಗಮನಿಸುತ್ತಲೇ ಇದ್ದು,ಇದನ್ನೇ ಕಾಯುತ್ತಿದ್ದವರಂತೆ ಜೆಡಿಎಸ್ ನ ದೊಡ್ಡಗೌಡರಾದ ದೇವೇಗೌಡರು ತೆನೆಯನ್ನು ವಿಶ್ವನಾಥ್ ತಲೆಗೇರಿಸಿದ್ದಲ್ಲದೇ ದೇವರಾಜ ಅರಸರ ಕಮ೯ಭೂಮಿಯಾದ ಹುಣಸೂರು ಕ್ಷೇತ್ರದಿಂದ ಟಿಕೇಟ್ ನೀಡಿ ವಿಶ್ವನಾಥ್ ರನ್ನು ಶಾಸಕರಾಗಿ ಗೆಲ್ಲಿಸಿ ರಾಜಕೀಯವಾಗಿ ಮರುಹುಟ್ಟು ನೀಡಿದರು. ಮಾತ್ರವಲ್ಲ, ವಿಶ್ವನಾಥ್ ಅವರನ್ನು ದೇವೇಗೌಡರು ಜೆಡಿಎಸ್ ರಾಜ್ಯಾಧ್ಯಕ್ಷ ಪಟ್ಟಕ್ಕೇರಿಸಿದರು. ರಾಜ್ಯಾಧ್ಯಕ್ಷ ಸ್ಥಾನ ಎಂಬುದು ಬೇರೆ ಪಕ್ಷಗಳಲ್ಲಿ ದೊಡ್ಡ ಹುದ್ದೆಯಾಗಿದ್ದರೂ ಅಪ್ಪ-ಮಗನದ್ದೇ ಪಕ್ಷ ಎಂದು ವಣಿ೯ಸಲ್ಪಡುವ ಜೆಡಿಎಸ್ ನಲ್ಲಿ ಈ ಹುದ್ದೆ ಕೇವಲ ರಬ್ಬರ್ ಸ್ಟಾಂಪ್ ನಂತಾಯಿತು. ವಿಶ್ವನಾಥ್ ಗಮನಕ್ಕೆ ಬಾರದೇ ಹಲವು ನಿಧಾ೯ರಗಳನ್ನು ಕುಮಾರಸ್ವಾಮಿ ತೆಗೆದುಕೊಂಡರು. ಮುಖ್ಯಮಂತ್ರಿಯನ್ನು ಹೊಂದಿದ್ದ ಪಕ್ಷವೊಂದರ ರಾಜ್ಯಾಧ್ಯಕ್ಷರಾದರೂ ವಿಶ್ವನಾಥ್ ಜೆಡಿಎಸ್ ನಲ್ಲಿ ಸಂಭ್ರಮಿಸಿದ್ದಕ್ಕಿಂತ ನೋವುಂಡದ್ದೇ ಜಾಸ್ತಿ.
ವಿಶ್ವನಾಥ್ ಜೆಡಿಎಸ್ ನಾಯಕರ ವಿರುದ್ದ ಗುಟುರು ಹಾಕತೊಡಗಿದರು. ತಾವೇ ಕರೆತಂದು ರಾಜಕೀಯ ಪುನಜ೯ನ್ಮ ನೀಡಿದ್ದ ವಿಶ್ವನಾಥ್ ತಮ್ಮ ವಿರುದ್ದವೇ ನೀಡುತ್ತಿದ್ದ ಹೇಳಿಕೆಗಳು ದೇವೇಗೌಡರಿಗೆ ಸಹ್ಯವಾಗಲಿಲ್ಲ. ಹೀಗಾಗಿ ವಿಶ್ವನಾಥ್ ತೆನೆ ಹೊತ್ತಮಹಿಳೆಯ ಪಕ್ಷದಲ್ಲಿ ಕಸಕ್ಕಿಂತ ಕಡೆಯಾಗಿ ಕಾಣಲ್ಪಟ್ಟರು.ರಾಜಕೀಯದ ೪೯ ವಷ೯ಗಳ ಕಾಲ ಯಾರನ್ನೂ ಪ್ರಬಲವಾಗಿ ದ್ವೇಷಿಸುತ್ತಾ, ಟೀಕಿಸುತ್ತಾ ಬಂದಿದ್ದರೋ ಅದೇ ಬಿಜೆಪಿಗೆ ವಿಶ್ವನಾಥ್ ಕಾಲಿಡುವ ಪ್ರಸಂಗವೂ ಬಂತು. ವಿಶ್ವನಾಥ್ ಸದಾ ಕೋಮುವಾದಿ ಪಕ್ಷ ಎಂದು ಟೀಕಿಸುತ್ತಿದ್ದ, ಚೆಡ್ಡಿಗಳು ಎಂದು ಲೇವಡಿ ಮಾಡುತ್ತಿದ್ದ ಬಿಜೆಪಿಗೆ ಹೋಗುತ್ತಾರೆ ಎಂಬುದನ್ನೇ ಯಾರೂ ನಂಬಲಾಗದ ದಿನಗಳಲ್ಲಿ ಅಡಗೂರಿನ ಹಾಡುಹಕ್ಕಿ ತಾವರೆ ಹಿಡಿದು ನಿಂತುಬಿಟ್ಟಿತು.ರಾಜಕೀಯ ಸಿದ್ದಾಂತಗಳನ್ನೇ ಮಾರಿಕೊಂಡರು, ಇವರೇನಾ ಮೇಧಾವಿ ವಿಶ್ವನಾಥ್ ಎಂದೆಲ್ಲಾ ಟೀಕೆಗಳ ನಡುವೇ ವಿಶ್ವನಾಥ್ ಅವರ ಜತೆಗಿರುತ್ತಿದ್ದ ಬುದ್ದಿಜೀವಿಗಳ ಬಳಗವೇ ಅವರಿಂದ ಮಾರು ದೂರ ಸರಿಯಿತು.
ಇದೀಗ ಸಾರಾ ಮಹೇಶ್ ಕೂಡ ವಿಶ್ವನಾಥ್ ಅವರನ್ನು ಲೇವಡಿ ಮಾಡಿದ್ದು ಮುಂದಿನ ತಾಲ್ಲೂಕು, ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಲಿ ಎಂದು ತಿವಿದಿದ್ದಾರೆ. ಹಳ್ಳಿ ಹಕ್ಕಿ ಗೂಡು ಹುಡುಕಾಡುತ್ತಿದೆ.