ಜೂನ್ 15 ರ ತಡರಾತ್ರಿ ಭಾರತ ಹಾಗೂ ಚೀನಾ ನಡುವೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿರುವ ವಿಚಾರ ಈಗಾಗಲೇ ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಅಲ್ಲದೇ 17 ಮಂದಿ ಗಂಭಿರ ಗಾಯಗೊಂಡಿದ್ದು, ಗಾಯಾಳುಗಳ ಸಂಖ್ಯೆ ಅಧಿಕವಾಗುವ ಬಗ್ಗೆಯೂ ಸೇನೆ ತಿಳಿಸಿದೆ. ಅಂತೆಯೇ 43 ರಿಂದ 45 ರಷ್ಟು ಮಂದಿ ಚೀನಾ ಸೈನಿಕರು ಸಾವು ಇಲ್ಲವೇ ಗಾಯಗೊಂಡಿದ್ದಾಗಿಯೂ ಸೇನೆಯ ಹೇಳಿಕೆ ಆಧರಿಸಿ ANI ವರದಿ ಮಾಡಿತ್ತು. ಆದರೆ ಭಾರತದ ಮಾಧ್ಯಮಗಳಲ್ಲಿ ಒಂದಿಷ್ಟು ವೈರುಧ್ಯದ ಹೇಳಿಕೆಗಳು ಬರುತ್ತಿದ್ದು, ಜನರಲ್ಲಿ ಸಹಜವಾದ ಗೊಂದಲವೂ ಎದುರಾಗಿದೆ.
ಆರಂಭದಲ್ಲಿ ಓರ್ವ ಕರ್ನಲ್ ಸಹಿತ ಮೂರು ಮಂದಿ ಹುತಾತ್ಮರಾಗಿದ್ದಾರೆ ಎನ್ನಲಾಗಿತ್ತಾದರೂ, ನಂತರ ಆ ಸಂಖ್ಯೆ 20ಕ್ಕೇರಿದ್ದು ದೇಶದ ನಿವಾಸಿಗಳಲ್ಲಿ ಆಕ್ರೋಶ ಹೆಚ್ಚುವಂತೆ ಮಾಡಿದೆ. ಆದರೆ ಚೀನಾ ಸೈನಿಕರ ಕಡೆಯಿಂದ ಎಷ್ಟು ಮಂದಿ ಸಾವೀಗೀಡಾಗಿದ್ದಾರೆ ಅನ್ನೋದು ಅಧಿಕೃತವಾಗಿ ದೃಢಪಟ್ಟಿಲ್ಲವಾದರೂ, ಭಾರತದ ಮಾಧ್ಯಮಗಳಲ್ಲಿ 43, 45 ಹೀಗೆ ಅಂಕಿ ಅಂಶಗಳನ್ನ ಮುಂದಿಡಲಾಗುತ್ತಿದೆ. ʼಡಿಡಿ ನ್ಯೂಸ್ʼ ಕೂಡಾ ತನ್ನ ಟ್ವಿಟ್ಟರ್ ನಲ್ಲಿ 43 ಮಂದಿ ಚೀನಿ ಯೋಧರ ಹತ್ಯೆ ಆಗಿರುವುದಾಗಿ ತಿಳಿಸಿದೆ. ಮಾತ್ರವಲ್ಲದೇ ರಾಷ್ಟ್ರೀಯ ಮಾಧ್ಯಮಗಳೂ ಇದನ್ನೇ ಬಿತ್ತರಿಸಿದ್ದವು.
News Line IFE ಟ್ವಿಟ್ಟರ್ ನಿರ್ವಹಿಸುವ ಗೌರವ್ ಆರ್ಯ ಅವರು ಕೂಡಾ ತಮ್ಮ ಟ್ವೀಟ್ ನಲ್ಲಿ 43 ಮಂದಿ ಚೀನಿ ಸೈನಿಕರು ಸತ್ತಿರುವುದಾಗಿ ಉಲ್ಲೇಖಿಸಿದ್ದರು. ಇದೆಲ್ಲವು ಮುಂದುವರೆದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಕರ್ತವ್ಯ ನಿರ್ವಹಿಸುವ, ಪ್ರಮುಖ ಹುದ್ದೆಗಳಲ್ಲಿರುವವರೂ ಕೂಡಾ ತಮ್ಮ ಟ್ವಿಟ್ಟರ್ ನಲ್ಲಿ ಇದನ್ನೇ ಬರೆದುಕೊಂಡಿದ್ದರು.
ಆದರೆ ಪತ್ರಕರ್ತ ರಾಜ್ದೀಪರ್ ಸರ್ದೇಸಾಯಿ ತಮ್ಮ ಟ್ವಿಟ್ಟರ್ ನಲ್ಲಿ, ಗಡಿಯಲ್ಲಿ ನಡೆದ ಸಂಘರ್ಷದಲ್ಲಿ 43 ಮಂದಿ ಮೃತಪಟ್ಟಿದ್ದನ್ನ ಉಲ್ಲೇಖಿಸಿದ್ದಾರೆ. ಆದರೂ, ಚೀನಾ ಕಡೆಯಿಂದ ಇದು ಅಧಿಕೃತವಾಗಿಲ್ಲ ಎಂದು ಬರೆದಿದ್ದಾರೆ. ಹೀಗೆ ಹತ್ತಾರು ಪತ್ರಕರ್ತರೂ ಚೀನಾ ಸೈನಿಕರ ಸಾವಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಬರೆದುಕೊಂಡಿದ್ದಾರೆ. ಭಾರತೀಯ ಸೇನೆ 43 ಮಂದಿಯಷ್ಟು ಚೀನಿ ಸೈನಿಕರು ಗಾಯ ಇಲ್ಲವೇ ಸಾವೀಗೀಡಾಗಿದ್ದಾಗಿ ತಿಳಿಸಿರುವುದು ಗಮನಾರ್ಹ., ಆದರೂ Altnews ಫ್ಯಾಕ್ಟ್ ಚೆಕ್ ಗೆ ಮುಂದಾದಾಗ ಕೆಲವು ವಿಚಾರಗಳನ್ನ ಗಮನಿಸುವಂತಾಗಿದೆ.
ಇನ್ನು ಕರೋನಾ ಅಂಕಿ ಅಂಶ ವಿಚಾರದಲ್ಲಿ ಕಳ್ಳಾಟ ಆಡಿದ್ದ ಚೀನಾ, ಸೈನಿಕರ ಸಾವಿನ ವಿಚಾರದಲ್ಲೂ ಅದನ್ನ ಬಹಿರಂಗ ಮಾಡದೇ ಇರುವ ಸಾಧ್ಯತೆಯೂ ಇದೆ. ಇನ್ನು ಚೀನಾ ಮೂಲದ ಗ್ಲೋಬಲ್ ಟೈಮ್ಸ್ ಮುಖ್ಯಸ್ಥರು ತಮ್ಮ ಟ್ವೀಟ್ ನಲ್ಲಿ, “ಭಾರತದೊಂದಿಗೆ ನಡೆದ ಸಂಘರ್ಷದಲ್ಲಿ ಚೀನಾ ಸೈನಿಕರ ಸಾವು-ನೋವಿನ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ನೀಡಿಲ್ಲ” ಅನ್ನೋದನ್ನ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಆ ನಂತರ ಮಾಡಿರುವ ಟ್ವೀಟ್ ನಲ್ಲಿ “ಭಾರತೀಯ ಯೋಧರು ಸೂಕ್ತ ಸಮಯದಲ್ಲಿ ತುರ್ತು ಚಿಕಿತ್ಸೆ ಲಭಿಸದೇ ಸಾವೀಗೀಡಾಗಿದ್ದು, ಭಾರತ ರಕ್ಷಣೆ ವಿಚಾರದಲ್ಲಿ ನ್ಯೂನ್ಯತೆಯನ್ನ ಅನುಭವಿಸುತ್ತಿದೆ” ಎಂದಿದ್ದಾರೆ. ಇನ್ನೊಂದು ಟ್ವೀಟ್ ನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಉಲ್ಲೇಖಿಸಿ ಅವರ ಟ್ವೀಟ್ ಹೀಗಿದ್ದು, “ಇಂತಹ ವರದಿ (ಭಾರತೀಯ ಸೈನಿಕರ ಸಾವಿನ ಸುದ್ದಿ) ನನ್ನಂತಹ ಚೀನಿ ಪ್ರಜೆಗಳು ಕೇಳಲು ಇಚ್ಛೆ ಪಡಲಾರರು. ಏಕೆಂದರೆ, ಚೀನಾ ಇರಲಿ, ಭಾರತೀಯ ಸೈನಿಕರಿರಲಿ ಅವರೆಲ್ಲರ ಜೀವವೂ ಅಮೂಲ್ಯವಾದುದು. ಭಾರತದ ರಾಜಕೀಯ ಶಕ್ತಿಯು ಯುವ ಸೈನಿಕರನ್ನ ಸಂಘರ್ಷಕ್ಕೆ ತಳ್ಳಿ ಅವರ ಸಾವಿಗೆ ಕಾರಣವಾಗುತ್ತಿದೆ. ಭಾರತ ಗಡಿಯಲ್ಲಿ ಇಂತಹ ಅಪಾಯಕಾರಿ ನಿಲುವುಗಳನ್ನ ತೆಗೆದುಕೊಳ್ಳುವುದನ್ನ ನಿಲ್ಲಿಸಬೇಕು” ಎಂದಿದ್ದಾರೆ.
ಇನ್ನು ರಕ್ಷಣಾ ಇಲಾಖೆ ಸಂಬಂಧಿಸಿದ ಸುದ್ದಿ ಮಾಡುವ ಪತ್ರಕರ್ತ ಶಿವ ಅರೂರ್, “ಚೀನಿ ಸೈನಿಕರ ಸಾವು-ನೋವು ಸಂಬಂಧ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ” ಎಂದಿದ್ದಾರೆ. ಇನ್ನು ʼದಿ ಇಂಡಿಯನ್ ಎಕ್ಸ್ಪ್ರೆಸ್ʼ ಉಪ ಸಂಪಾದಕ ಸುಶಾಂತ್ ಸಿಂಗ್ ಕೂಡಾ ಇಂತಹದ್ದೇ ಟ್ವೀಟ್ ನ್ನ ಪೋಸ್ಟ್ ಮಾಡಿದ್ದಾರೆ.
ಹಾಗಂತ ಚೀನಾ ಅಧಿಕೃತ ಹೇಳಿಕೆ ನೀಡುವ ಸಾಧ್ಯತೆಗಳೂ ಕಡಿಮೆಯೇ.. ಒಂದು ವೇಳೆ 40ಕ್ಕೂ ಅಧಿಕ ಸೈನಿಕರು ಹತ್ಯೆಗೀಡಾಗಿದ್ದರೆ ಅದು ಜಾಗತಿಕ ಮಟ್ಟದಲ್ಲಿ ಚೀನಾಕ್ಕೆ ಮುಖಭಂಗವೇ ಸರಿ. ಒಂದು ವೇಳೆ ಹಾಗೇ ಆಗಿಲ್ಲದೇ ಇರುತ್ತಿದ್ದರೆ ಚೀನಾ ಯಾವ ಕಾರಣಕ್ಕಾಗಿ ಇದುವರೆಗೂ ಬಾಯಿ ಮುಚ್ಚಿ ಕೂತಿದೆ ಅನ್ನೋದು ಕೂಡಾ ಪ್ರಶ್ನೆ ಎಬ್ಬಿಸಿವೆ. ಕರೋನಾ ವಿಚಾರದಲ್ಲಿ ಅಂಕಿ ಅಂಶ ಮುಚ್ಚಿಟ್ಟ ಚೀನಾ, ಗಡಿಯಲ್ಲಿ ನಡೆದ ಸಂಘರ್ಷದಲ್ಲಾದ ಸಾವು-ನೋವಿನ ಬಗ್ಗೆ ಮಾಹಿತಿ ನೀಡುವುದು ಹೌದೇ..?