ಸಿ & ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರನ್ನು ಮಾತ್ರ ನೇಮಕ ಮಾಡಿಕೊಳ್ಳಲು ಮತ್ತು ಎ ಮತ್ತು ಬಿ ವಿಭಾಗ ಮತ್ತು ಕೌಶಲ್ಯ ಆಧಾರಿತ ಹುದ್ದೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವಂತೆ ಕೈಗಾರಿಕಾ ಸಂಸ್ಥೆಗಳಿಗೆ ಶೀಘ್ರದಲ್ಲೇ ನಿರ್ದೇಶನ ನೀಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಧುಸ್ವಾಮಿ, ಸರ್ಕಾರವು ನೀಡುವ ಪ್ರಯೋಜನಗಳು ಮತ್ತು ರಿಯಾಯಿತಿಗಳನ್ನು ಪಡೆದುಕೊಂಡಿದೆಯೇ ಇಲ್ಲವೇ ಎಂದು ಲೆಕ್ಕಿಸದೆಯೇ ಈ ಆದೇಶವು ಎಲ್ಲಾ ಕೈಗಾರಿಕೆಗಳು ಮತ್ತು ಕಂಪನಿಗಳಿಗೆ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಕರ್ನಾಟಕ ಆಂಧ್ರಪ್ರದೇಶದ ಮಾದರಿಯನ್ನು ಅನುಸರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸಿ & ಡಿ ವರ್ಗದ ಉದ್ಯೋಗವು ಮೆಕ್ಯಾನಿಕ್ಸ್, ಗುಮಾಸ್ತರು, ಅಕೌಂಟೆಂಟ್ಗಳು, ಮೇಲ್ವಿಚಾರಕರು, ಪಿಯೋನ್ಗಳು, ಸಹಾಯಕರು ಮತ್ತು ಇತರ ಕಚೇರಿ ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಎ & ಬಿ ವಿಭಾಗವು ನಿರ್ವಹಣಾ ಮಟ್ಟದ ಸ್ಥಾನಗಳನ್ನು ಒಳಗೊಂಡಿದೆ.
ಬುಧವಾರ ಪರಿಷತ್ತಿನಲ್ಲಿ ಈ ವಿಷಯವನ್ನು ಎತ್ತಿದ ಜೆಡಿಎಸ್ ನ ಎಂಎಲ್ಸಿ ಬಸವರಾಜ್ ಹೊರಟ್ಟಿ, ಖಾಸಗಿ ವಲಯವು ಕನ್ನಡಿಗರನ್ನು ನೇಮಕ ಮಾಡುವುದು ಕಡ್ಡಾಯಗೊಳಿಸುವ ಬಗ್ಗೆ ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ಸರ್ಕಾರವನ್ನು ಕೋರಿದ ಅವರು, ಉದ್ಯೋಗಗಳಲ್ಲಿ ಸ್ಥಳೀಯ ಯುವಕರಿಗೆ ಆದ್ಯತೆ ಒದಗಿಸಲು ಅನೇಕ ರಾಜ್ಯಗಳು ಹೊಸ ಕಾನೂನುಗಳು ಸೇರಿದಂತೆ ವಿಶೇಷ ಪ್ರಯತ್ನಗಳನ್ನು ಮಾಡುತ್ತಿವೆ, ಆದರೆ ಕರ್ನಾಟಕವು ಈ ವಿಷಯದಲ್ಲಿ ಏಕೆ ಹಿಂದುಳಿದಿದೆ ಎಂದು ಪ್ರಶ್ನೆ ಮಾಡಿದ್ದರು.
ಕಳೆದ ವರ್ಷ ಡಿಸೆಂಬರ್ನಲ್ಲಿ ರಾಜ್ಯ ಸರ್ಕಾರ ಅಧಿಸೂಚನೆಯ ಮೂಲಕ, 1961 ರ ಕರ್ನಾಟಕ ಕೈಗಾರಿಕಾ ಉದ್ಯೋಗ (ಸ್ಥಾಯಿ ಆದೇಶಗಳು) ನಿಯಮಗಳ ಪರಿಷ್ಕೃತ ಮಾನದಂಡಗಳ ಅಡಿಯಲ್ಲಿ, ಕನ್ನಡಿಗರಿಗೆ ಆದ್ಯತೆ ನೀಡುವಂತೆ ಖಾಸಗಿ ವಲಯದ ಕಂಪನಿಗಳಿಗೆ ನಿರ್ದೇಶನ ನೀಡಿತ್ತು. ಹೊಸ ನಿಯಮಗಳು ಕರ್ನಾಟಕದಲ್ಲಿ ಕನಿಷ್ಠ 15 ವರ್ಷಗಳಿಂದ ವಾಸಿಸುತ್ತಿರುವ ಮತ್ತು ಕನ್ನಡವನ್ನು ಓದಲು, ಬರೆಯಲು, ಮಾತನಾಡಲು ಮತ್ತು ಅರ್ಥಮಾಡಿಕೊಳ್ಳಬಲ್ಲ ಜನರು ಖಾಸಗಿ ಸಂಸ್ಥೆಗಳು ಮತ್ತು ಕಾರ್ಖಾನೆಗಳಲ್ಲಿ ಉದ್ಯೋಗಗಳಿಗೆ ಅರ್ಹರಾಗಿದ್ದಾರೆ ಎಂದು ಹೇಳುತ್ತದೆ. ಇದು ಎಲ್ಲಾ ಕೈಗಾರಿಕೆಗಳು ಮತ್ತು ಕಂಪನಿಗಳಿಗೆ ಅನ್ವಯಿಸುತ್ತವೆ.
ಕಂಪನಿಗಳು ಈ ನಿರ್ದೇಶನವನ್ನು ಕಾರ್ಯಗತಗೊಳಿಸಲು ವಿಫಲವಾದರೆ ಮತ್ತು ನಿರುತ್ಸಾಹ ತೋರಿದರೆ ಮಧ್ಯಪ್ರವೇಶಿಸಲು ನಿರ್ದೇಶನ ಪತ್ರದ ಮಾನದಂಡಗಳು ರಾಜ್ಯಕ್ಕೆ ಅಧಿಕಾರ ನೀಡುತ್ತವೆ.
ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ಸೂಚಿಸಲು ಕೇಂದ್ರದ ಮಾಜಿ ಸಚಿವೆಯಾಗಿದ್ದ ಸರೋಜಿನಿ ಮಹಿಶಿ ನೇತೃತ್ವದ 1984ರಲ್ಲಿ ಸಮಿತಿಯನ್ನು ರಚಿಸಿದ ಬಳಿಕ ಕೆಲವು ವಿಭಾಗಗಳಲ್ಲಿನ ಉದ್ಯೋಗಗಳಲ್ಲಿ ಶೇಕಡಾ 100 ರಷ್ಟು ಸ್ಥಳೀಯರಿಗೆ ಮೀಸಲಾತಿ ನೀಡುವ ವಿಷಯ ವಿವಾದಾಸ್ಪದ ವಿಷಯವಾಗಿದೆ. ಸಮಿತಿಯು ತನ್ನ 1986 ರ ವರದಿಯಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿನ ಹೆಚ್ಚಿನ ಉದ್ಯೋಗಗಳು ಕನ್ನಡಿಗರಿಗೆ ಹೋಗಬೇಕೆಂದು ಶಿಫಾರಸು ಮಾಡಿವೆ. ಆದರೆ ಯಾವುದೇ ಸರ್ಕಾರಗಳು ಇದನ್ನು ಕಾರ್ಯಗತಗೊಳಿಸಲಿಲ್ಲ.
ಕೃಪೆ: ಟೈಮ್ಸ್ ಆಫ್ ಇಂಡಿಯಾ