ರಾಯಚೂರು ಜಿಲ್ಲೆಯಲ್ಲಿ ಕ್ವಾರಂಟೈನ್ನಲ್ಲಿರಿಸಲಾಗಿರುವ ವಲಸೆ ಕಾರ್ಮಿಕರಿಗೆ ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ. ಹೀಗಾಗಿ ಬೋಳಮನದೊಡ್ಡಿ ರಸ್ತೆಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿ ಸಂಪರ್ಕ ತಡೆಯಲ್ಲಿರಿಸಲಾಗಿದ್ದ ಕಾರ್ಮಿಕರು ಅಗತ್ಯ ವಸ್ತುಗಳನ್ನು ಖರೀದಿಸಲು ಹೊರಗಡೆಗ ಅಂಗಡಿಗಳಿಗೆ ತೆರಳಿದ್ದಾರೆ. ಕ್ರಾಂಟೈನ್ನಲ್ಲಿರುವ ಕಾರ್ಮಿಕರು ಏಕಾಏಕಿ ರಸ್ತೆಗಳಲ್ಲಿ ಸಂಚರಿಸುವುದನ್ನು ಕಂಡ ಸ್ಥಳೀಯ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
ಮಹಾರಾಷ್ಟ್ರದ ಪೂನಾದಿಂದ ಬಂದ ವಲಸೆ ಕಾರ್ಮಿಕರನ್ನು ಜಿಲ್ಲೆಯ ಲಿಂಗಸಗೂರಿನ ದೇವರಭುಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂಪರ್ಕ ತಡೆಯಲ್ಲಿರಿಸಲಾಗಿತ್ತು. ಆದರೆ ಆಹಾರ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಎದುರಿಸಿದ ಕಾರ್ಮಿಕರು ಶಾಲೆಯಿಂಧ ಹೊರಕ್ಕೆ ಬಂದು ಅಂಗಡಿಗಳಿಗೆ ತೆರಳಿದ್ದಾರೆ.
ಲಾಕ್ಡೌನ್ ಹಿನ್ನಲೆಯಲ್ಲಿ ಅನ್ಯ ರಾಜ್ಯದಲ್ಲಿ ಬಾಕಿಯಾಗಿದ್ದವರನ್ನು ಮರಳಿ ಕರೆತರಲು ಕರ್ನಾಟಕ ರಾಜ್ಯ ಸರ್ಕಾರ ಕೆಲವು ದಿನಗಳ ಹಿಂದೆ ಅನುಮತಿ ನೀಡಿತ್ತು. ಹೀಗೆ ಕರೆತಂದ ಕಾರ್ಮಿಕರನ್ನು ರಾಜ್ಯದ ವಿವಿಧ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು.
ಬಡಾವಣೆಯ ಜನರಲ್ಲಿ ಅತಂಕ ಹೆಚ್ಚಾಗಿ, ಅಧಿಕಾರಿಗಳಿಗೆ ದೂರು ನೀಡಿದರೂ ತಕ್ಷಣ ಕಾರ್ಯ ಪ್ರವೃತ್ತಗೊಳ್ಳಲಿಲ್ಲವೆಂಬ ಆರೋಪವಿದೆ. ಬಳಿಕ ಗ್ರಾಮಸ್ಥರ ಆಕ್ರೋಶ ಹೆಚ್ಚಾದ ಬಳಿಕ ಲಿಂಗಸೂರು ಪರಾಂಪುರ ಮೂಲದ ಕಾರ್ಮಿಕರಿಗೆ ಆಹಾರವನ್ನು ನೀಡಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿದ್ದವರಲ್ಲಿ 13 ಮಕ್ಕಳು ಸೇರಿ ಒಟ್ಟು 23 ಮಂದಿಯನ್ನು ಕ್ವಾರಂಟೈನ್ನಲ್ಲಿರಿಸಲಾಗಿತ್ತು.






