ಜ್ಯೋತಿರಾದಿತ್ಯ ಸಿಂಧಿಯಾ.. ವಿಶ್ವಕ್ಕೆ ವ್ಯಾಪಿಸಿದ್ದ ಕರೋನಾ ಎಂಬ ಮಹಾಮಾರಿ ಭಾರತಕ್ಕೆ ವಕ್ಕರಿಸುವ ಮುನ್ನ ಇಡೀ ರಾಷ್ಟ್ರಾದ್ಯಂತ ರಾಜಕೀಯ ಪಡಸಾಲೆಗಳಲ್ಲಿ ಮತ್ತೆ ಮತ್ತೆ ಮಾರ್ದನಿಸಿದ ಹೆಸರು ಜ್ಯೋತಿರಾದಿತ್ಯ ಸಿಂಧಿಯಾ. ಭಾಗಶಃ ಕಾಂಗ್ರೆಸ್ ಪಕ್ಷಕ್ಕೆ ಆಪರೇಷನ್ ಕಮಲ ಎಂಬ ಹೊಸ ರಾಜಕೀಯ ತಂತ್ರದ ಮೂಲಕ ಭಾರೀ ಪೆಟ್ಟುಕೊಟ್ಟವರ ಪೈಕಿ ಬಿ.ಎಸ್. ಯಡಿಯೂರಪ್ಪ ಮೊದಲ ಸ್ಥಾನದಲ್ಲಿ ನಿಂತಿದ್ದರೆ, ಈ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಎರಡನೇ ಸ್ಥಾನವಿದೆ.
ಮಧ್ಯಪ್ರದೇಶದಲ್ಲಿ ಬಹುದಿನಗಳಿಂದ ಅಧಿಕಾರದ ಕನಸು ಕಂಡಿದ್ದ ಕಾಂಗ್ರೆಸ್ ಕಳೆದು ಚುನಾವಣೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ಬಹುಮತದಿಂದ ಸೋಲಿಸಿ ನೂತನ ಸರ್ಕಾರವನ್ನು ರಚನೆ ಮಾಡಿತ್ತು. ಕಾಂಗ್ರೆಸ್ ನ ಹಿರಿಯ ನಾಯಕ ಕಮಲ್ ನಾಥ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಕಮಲ್ ನಾಥ್ ಅವರನ್ನು ಮೂಲೆಗುಂಪು ಮಾಡಿ ಕೈ ಸರ್ಕಾರವನ್ನೇ ಬೀಳಿಸಿದ್ದ ಖ್ಯಾತಿ ಈ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಇದೆ.
ಆಗಿನ್ನು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಆಪರೇಷನ್ ಕಮಲದಿಂದ ಕಳೆದುಕೊಂಡಿದ್ದ ಕಾಂಗ್ರೆಸ್ ಹೈಕಮಾಂಡ್ ಗೆ ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ನೀಡಿದ್ದು ಮಾಸ್ಟರ್ ಸ್ಟ್ರೋಕ್ ಎಂದು ಬಣ್ಣಿಸಲಾಗಿತ್ತು. ಈತನ ರಾಜಕೀಯ ತಂತ್ರಕ್ಕೆ ಸ್ವತಃ ರಾಹುಲ್ ಗಾಂಧಿ ತಂಢ ಹೊಡೆದಿದ್ದರು. ಆದರೆ, ಕಾಂಗ್ರೆಸ್ಗೆ ಬೆನ್ನು ತೋರಿಸಿ ಅಧಿಕಾರದ ಆಸೆಗೆ ಬಿದ್ದ ಈತ ಮತ್ತೆ ಕಾಂಗ್ರೆಸ್ ಕಡೆಗೆ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಪರಿಣಾಮ ಮಧ್ಯಪ್ರದೇಶದ ಬಿಜೆಪಿಯಲ್ಲಿ ಇದೀಗ ಕೋಲಾಹಲ ಸೃಷ್ಟಿಯಾಗಿದೆ.
ಸಿಂಧಿಯಾ ಚಿತ್ತ..ಎತ್ತ?
ಅಸಲಿಗೆ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜಸ್ಥಾನದ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್ ಅವರನ್ನು ಕಾಂಗ್ರೆಸ್ ಪಕ್ಷದ ಎರಡು ಪ್ರಮುಖ ಯುವ ಆಧಾರಸ್ತಂಭಗಳು ಎನ್ನಲಾಗಿತ್ತು. ರಾಹುಲ್ ಗಾಂಧಿ ಸಹ ಇವರನ್ನು ಸಾಕಷ್ಟು ಮೆಚ್ಚಿಕೊಂಡಿದ್ದರು. ಈ ಎರಡೂ ರಾಜ್ಯಗಳಲ್ಲಿ ಶೀಘ್ರದಲ್ಲಿ ಇವರು ಮುಖ್ಯಮಂತ್ರಿ ಸ್ಥಾನಕ್ಕೆ ಏರಲಿದ್ದಾರೆ ಎನ್ನಲಾಗಿತ್ತು. ಅದಕ್ಕೆ ತಕ್ಕಂತೆ ಇಬ್ಬರೂ ಸಹ ಶ್ರಮ ವಹಸಿ ಎರಡೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕೂರಿಸುವಲ್ಲಿ ಯಶಸ್ವಿಯಾಗಿದ್ದರು.
ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ನಾಯಕರುಗಳ ವಿರುದ್ಧ ಬಿಸಿ ಕೆಂಡವನ್ನು ಉಗುಳಿದ್ದ ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ಮೊನಚಿನ ಮಾತಿನ ಮೂಲಕವೇ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಫಲಿತಾಂಶದ ನಂತರ ಈತ ಸಿಎಂ ಸ್ಥಾನದ ಮೇಲೆ ಆಸೆಪಟ್ಟಿದ್ದು ಅದಕ್ಕೆಂದು ಕಮಲ್ ನಾಥ್ ಜೊತೆಗೆ ತಿಕ್ಕಾಟ ಶುರು ಮಾಡಿದ್ದು ಸುಳ್ಳಲ್ಲ.
ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಸಿಎಂ ಆಗುವ ಆಸೆ ಇತ್ತು. ಆದರೆ, ರಾಜ್ಯದಲ್ಲಿ ಹಿರಿಯ ನಾಯಕರು ಇದ್ದ ಕಾರಣ ಅವರಿಗೆ ಸಿಎಂ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿರಲಿಲ್ಲ. ಇದೇ ಕಾರಣಕ್ಕೆ ಆಡಳಿತ ವಿಚಾರದಲ್ಲಿ ಹಾಗೂ ತಮ್ಮವರಿಗೆ ಸಚಿವ ಸ್ಥಾನ ಬೇಕು ಎಂಬ ವಿಚಾರದಲ್ಲಿ ಪ್ರತಿನಿತ್ಯ ತಿಕ್ಕಾಟ ನಡೆದೇ ಇತ್ತು. ಕೊನೆಗೂ ಸಿಂಧಿಯಾ ಕಾಂಗ್ರೆಸ್ ತೊರೆದು ತನ್ನ ಬೆಂಬಲಿಗ ಶಾಸಕರ ಜೊತೆಗೆ ಬಿಜೆಪಿ ಸೇರ್ಪಡೆಯಾಗಿದ್ದರು.
ಪರಿಣಾಮ ಕೊರೋನಾ ಕಾರಣಕ್ಕೆ ದೇಶದಾದ್ಯಂತ ಲಾಕ್ಡೌನ್ ಘೋಷಿಸುವ ಮುನ್ನ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರ ಬಿಜೆಪಿ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿದಿತ್ತು. ಶಿವರಾಜ್ ಸಿಂಗ್ ಸಿಎಂ ಆಗುತ್ತಿದ್ದಂತೆ ಲಾಕ್ಡೌನ್ ಘೋಷಿಸಲಾಗಿತ್ತು ಎಂಬುದು ಉಲ್ಲೇಖಾರ್ಹ. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯುವುದಕ್ಕಾಗಿಯೇ ಲಾಕ್ಡೌನ್ ಘೋಷಣೆಯನ್ನು ತಡ ಮಾಡಲಾಗಿತ್ತು ಎಂಬ ವಾದವೂ ಚಾಲ್ತಿಯಲ್ಲಿದೆ.
ಮಿಸ್ ಹೊಡೆದʼ ಆಪರೇಷನ್ ಕಮಲೋತ್ತರ ಲೆಕ್ಕಾಚಾರ
ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದರೂ ಸಹ ಲಾಕ್ಡೌನ್ ಕಾರಣದಿಂದಾಗಿ ಸಂಪೂರ್ಣ ಸಂಪುಟವನ್ನು ರಚನೆ ಮಾಡಲಾಗಿರಲಿಲ್ಲ. ಮೊದಲು ಸಿಎಂ ಆಗಿ ಶಿವರಾಜ್ ಸಿಂಗ್ ಚೌಹಾಣ್ ಪ್ರಮಾಣ ವಚನ ಸ್ವೀಕಾರ ಮಾಡಿದ್ದರೂ ಸಂಪುಟಕ್ಕೆ ಕೇವಲ 6 ಜನರನ್ನು ಮಾತ್ರ ಸಚಿವರಾಗಿ ಆಯ್ಕೆ ಮಾಡಲಾಗಿತ್ತು.
ಆದರೆ, ಸಿಂಧಿಯಾ ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ನವೇ ತನಗೆ ನಿಷ್ಠರಾಗಿರುವ 10 ಜನರಿಗೆ ಸಚಿವ ಸ್ಥಾನ ನೀಡಬೇಕು ಎಂದು ಷರತ್ತು ಹಾಕಿದ್ದರು. ಆದರೆ, ಈ ಷರತ್ತಿಗೆ ಆಗ ತಲೆ ಅಲ್ಲಾಡಿಸಿದ್ದ ಬಿಜೆಪಿ ಈಗ ಕೇವಲ 6 ಜನರಿಗೆ ಮಾತ್ರ ಸಚಿವ ಸ್ಥಾನ ಸಾಧ್ಯ ಎನ್ನುತ್ತಿದೆ. ಅಲ್ಲದೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶಾಸಕರಿಗೆ ಅಲ್ಲಿನ ಸಂಸ್ಕೃತಿಗೆ ಒಗ್ಗಿಕೊಳ್ಳಲು ಸಾಧ್ಯವಾಗುತ್ತಿಲ್ಲವಂತೆ.
ಇದೇ ಕಾರಣಕ್ಕೆ ಗ್ವಾಲಿಯರ್ ಕ್ಷೇತ್ರದ ಬ್ರಾಹ್ಮಣ ಸಮುದಾಯದ ನಾಯಕ ಬಾಲೇಂದು ಈಗಾಗಲೇ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಒಂದಡೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂಪುಟ ವಿಸ್ತರಣೆಗೆ ಮೀನಾಮೇಷ ಎಣಿಸುತ್ತಿರುವುದು ಮತ್ತು ಅಧಿಕಾರದ ವಿಚಾರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಮೌನಿಯಾಗಿರುವುದು ಪಕ್ಷಾಂತರಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹೀಗಾಗಿ ಬಿಜೆಪಿಯಿಂದ ಮತ್ತೆ ಕಾಂಗ್ರೆಸ್ ಗೆ ’ಘರ್ ವಾಪಸಿ’ಯಾಗಲಿರುವ ಶಾಸಕರ ಸಂಖ್ಯೆ ಅಧಿಕವಾಗಲಿದೆ ಎನ್ನಲಾಗುತ್ತಿದೆ. ಈ ನಡುವೆ ಸಿಂಧಿಯಾ ಅವರ ಟ್ವಿಟರ್ ಖಾತೆಯಲ್ಲಿ ಆಗಿರುವ ಆ ಒಂದು ಬದಲಾವಣೆ ಅವರೂ ಸಹ ಕಾಂಗ್ರೆಸ್ ಪಕ್ಷಕ್ಕೆ ಮರಳಲಿದ್ದಾರಾ? ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಏನದು ’ಟ್ವೀಟ್ʼಬದಲಾವಣೆ:
ಟ್ವಿಟರ್ ಖಾತೆಯಲ್ಲಿ ಬರೋಬ್ಬರಿ 3 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಜ್ಯೋತಿರಾದಿತ್ಯ ಸಿಂಧಿಯಾ (Youth Icon) ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಇವರು ಬಿಜೆಪಿ ಗೆ ಪಕ್ಷಾಂತರ ಮಾಡುತ್ತಿದ್ದಂತೆ ತಮ್ಮ ಟ್ವಿಟರ್ ಖಾತೆಯಲ್ಲಿ “ಸಾಮಾಜಿಕ ಕಾರ್ಯಕರ್ತ ಮತ್ತು ಕ್ರೀಡಾಸಕ್ತ ಎಂಬುದರ ಜೊತೆಗೆ ಬಿಜೆಪಿ ”ಎಂಬ ಪದವನ್ನೂ ಸೇರಿಸಿಕೊಂಡಿದ್ದರು ಎನ್ನಲಾಗಿದೆ.
ಆದರೆ, ಕಳೆದ ಕೆಲ ದಿನಗಳ ಹಿಂದೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ “ಬಿಜೆಪಿ ಕಾರ್ಯಕರ್ತ” ಎಂಬ ತಮ್ಮ Identity ಯನ್ನು ತೆಗೆದು ಹಾಕಿದ್ದಾರೆ ಎನ್ನಲಾಗುತ್ತಿದೆ. ಇದು ರಾಷ್ಟ್ರೀಯ ಮಟ್ಟದಲ್ಲಿ ಇದೀಗ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಇದರ ಬೆನ್ನಿಗೆ “ಸಿಂಧಿಯಾ ಅವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಇದೇ ಕಾರಣಕ್ಕೆ ಅವರು ಬಿಜೆಪಿ ತ್ಯಜಿಸಿ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ”ಎಂಬ ವ್ಯಾಖ್ಯಾನಗಳು ರೆಕ್ಕೆಪುಕ್ಕ ಬಿಚ್ಚಿಕೊಂಡಿವೆ.
ಮಧ್ಯಪ್ರದೇಶದಲ್ಲಿ ಅಧಿಕಾರ ಹಂಚಿಕೆ ಮತ್ತು ಮಂತ್ರಿ ಸ್ಥಾನದ ಕುರಿತಾಗಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಸಿಂಧಿಯಾ ನಡುವೆ ಈಗಾಗಲೇ ಮುಸುಕಿನ ಗುದ್ದಾಟ ಬಟಾಬಯಲಾಗಿದ್ದು, ಈ ಎಲ್ಲಾ ವ್ಯಾಖ್ಯಾನಗಳಿಗೆ ಪೂರಕ ಆಧಾರವಾಗಿ ಬದಲಾಗಿದೆ. ಆದರೆ, ಈ ನಡುವೆ ಸ್ಪಷ್ಟನೆ ನೀಡಿರುವ ಸಿಂಧಿಯಾ “ನಾನು ಬಿಜೆಪಿ ತೊರೆಯಲಿದ್ದೇನೆ ಎಂಬುದು ಕೇವಲ ಸುಳ್ಳು ವದಂತಿ” ಎಂದು ಹೇಳುವ ಮೂಲಕ ಎಲ್ಲಾ ಊಹಾಪೋಹಗಳಿಗೆ ಖುದ್ದು ತೆರೆ ಎಳೆದಿದ್ದಾರೆ.
ಆದರೆ, ರಾಜಕೀಯದಲ್ಲಿ ಶಾಶ್ವತ ಶತ್ರುಗಳೂ ಇಲ್ಲ..ಮಿತ್ರರೂ ಇಲ್ಲ ಎಂಬ ಮಾತು ತುಂಬಾ ಖ್ಯಾತ. ಹೀಗಾಗಿ ಅಧಿಕಾರ ಆಸೆಗಾಗಿ ನಿನ್ನೆ ಕಾಂಗ್ರೆಸ್ ತೊರೆದವರು ಇಂದು ಬಿಜೆಪಿಯನ್ನೂ ತೊರೆಯಲಾರರು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ. ಹೀಗಾಗಿ ಒಂದು ಕಾಲದ ಕಾಂಗ್ರೆಸ್ Fire Brand ಜ್ಯೋತಿರಾದಿತ್ಯ ಸಿಂಧಿಯಾ ಮತ್ತೆ ಕಾಂಗ್ರೆಸ್ ಗೆ ಮರಳಿದರೂ ಅಚ್ಚರಿ ಇಲ್ಲ ಎನ್ನುತ್ತಿವೆ ರಾಷ್ಟ್ರೀಯ ಸುದ್ದಿ ಮೂಲಗಳು.
ಆದರೆ ಇದೇ ಸಮಯಕ್ಕೆ ʼಇಂಡಿಯಾ ಟುಡೇʼ ನಡೆಸಿದ ಫ್ಯಾಕ್ಟ್ ಚೆಕ್ ಪ್ರಕಾರ “ಬಿಜೆಪಿ” ಅನ್ನೋ ಒಕ್ಕಣೆಯನ್ನ ಅವರು ಈ ಹಿಂದೆಯೇ ಹಾಕಿರಲಿಲ್ಲ. ಆದ್ದರಿಂದ ʼRemove’ ಮಾಡುವ ಪ್ರಶ್ನೆಯೇ ಎದುರಾಗಿಲ್ಲ ಅಂತಾ ತಿಳಿಸಿದೆ. ಆದರೆ ಇದನ್ನ ಪ್ರಥಮವಾಗಿ ಪೋಸ್ಟ್ ಮಾಡಿದ್ದ ʼFirst Post’ ಮತ್ತೊಮ್ಮೆ ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಿದ್ದು, ಒಂದು ವೇಳೆ ಹಾಗೆ ಆಗಿರುತ್ತಿದ್ದರೆ, ಸಿಂಧ್ಯಾ ಅಥವಾ ಬಿಜೆಪಿ ಯಾಕೆ ಮೌನವಾಗಿದೆ ಅಂತಾ ಪ್ರಶ್ನಿಸಿದೆ.
ಒಟ್ಟಿನಲ್ಲಿ ಮಧ್ಯ ಪ್ರದೇಶದ ಯೂತ್ ಐಕಾನ್ ಜೋತಿರಾಧಿತ್ಯ ಸಿಂಧ್ಯಾ ಬಿಜೆಪಿ ಸೇರ್ಪಡೆಯಿಂದ ಕೇಸರಿ ಪಕ್ಷದಲ್ಲಿ ಆನೆ ಬಲ ಬಂದಿತ್ತು ಅನ್ನೋದು ನಿಜ. ಆದರೆ ಇದೀಗ ಅವರು ಮತ್ತೆ ʼಕೈʼ ಹಿಡಿಯಲಿದ್ದಾರೆ ಅನ್ನೋ ಜಾಲತಾಣದಲ್ಲಾದ ಬದಲಾವಣೆಯೇ ಬಿಜೆಪಿ ಜಂಘಾಬಲವನ್ನೇ ಕುಸಿಯುವಂತೆ ಮಾಡಿದ್ದು ಮಾತ್ರ ಸುಳ್ಳಲ್ಲ.