ಕರೋನಾ ವೈರಸ್ ಸೋಂಕಿನ ಭೀತಿಯ ನಡುವೆ ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಚರ್ಚೆ ಮುನ್ನಲೆಗೆ ಬಂದಿದೆ. ಕಾರಸಗೋಡು ಜಿಲ್ಲೆಯಲ್ಲಿ ಕರೋನಾ ಪ್ರಕರಣಗಳು ಹೆಚ್ಚಿವೆ ಎಂಬ ಕಾರಣಕ್ಕಾಗಿ ಕೇರಳ – ಕರ್ನಾಟಕ ನಡುವಣ ಹೆದ್ದಾರಿ ಮತ್ತು ರಸ್ತೆಗಳನ್ನು ಮುಚ್ಚಲಾಗಿದೆ. ಅದರಲ್ಲೂ ಮಂಗಳೂರು – ಕಾಸರಗೋಡು ನಡುವನ ರಾಷ್ಟ್ರೀಯ ಹೆದ್ದಾರಿ ಮುಚ್ಚುಗಡೆ ಮಾಡಿರುವುದು ಹೆಚ್ಚಿನ ಮಹತ್ವ ಪಡೆದುಕೊಂಡಿದ್ದು, ಸುಪ್ರೀಂ ಕೋರ್ಟಿನ ಮೆಟ್ಟಲೇರಿದೆ.
ಕಾಸರಗೋಡು ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳು ನಿಜಕ್ಕೂ ಇಲ್ಲವೇ ಎಂಬ ಪ್ರಶ್ನೆಗಳು ಮೂಡಿವೆ. ಕೇರಳ ಮಾದರಿ ಅಭಿವೃದ್ಧಿ ಎನ್ನುವವರು ವೈದ್ಯಕೀಯ ಸೌಲಭ್ಯಕ್ಕಾಗಿ ಮಂಗಳೂರನ್ನು ಯಾಕೆ ಅವಲಂಬಿಸಿದೆ ಎಂದು ಸೋಶಿಯಲ್ ಮಿಡಿಯಾಗಳಲ್ಲಿ ಬಿಸಿ ಚರ್ಚೆ ಆರಂಭವಾಗಿದೆ. ಸರ್ವತೋಮುಖ ಅಭಿವೃದ್ದಿಯನ್ನು ಪರಿಗಣಿಸಿದರೆ ಕೇರಳದ ತುತ್ತ ತುದಿಯಲ್ಲಿ ಇರುವ ಕಾಸರಗೋಡು ಜಿಲ್ಲೆ ಸಹಜವಾಗಿ ಹಿಂದುಳಿದಿದೆ. ಕೇರಳ ಸರಕಾರ 1,200 ಕೋಟಿ ರೂಪಾಯಿ ಅನುದಾನ ಕಾಸರಗೋಡು ಪ್ಯಾಕೇಜ್ ಅನುಷ್ಠಾನ ಮಾಡುತ್ತಿರುವುದು ಇದಕ್ಕೆ ಉದಾಹರಣೆ.
ಹಾಗಾದರೆ, ಕಾಸರಗೋಡಿನಲ್ಲಿ ವೈದ್ಯಕೀಯ ಸೌಲಭ್ಯಗಳು ಇಲ್ಲವೇ ಅಂದರೆ ಪ್ರಾಥಮಿಕ ಹಂತದಲ್ಲಿ ಸರಕಾರಿ ಮತ್ತು ಸಹಕಾರಿ ಆಸ್ಪತ್ರೆಗಳು ಉತ್ತಮ ಸೇವೆ ನೀಡುತ್ತಿವೆ. ಆದರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಬೇಕಾದಾಗ ಮಂಗಳೂರು ಅಥವ ಕಣ್ಣೂರು ಜಿಲ್ಲೆಯ ಪೆರಿಯ ಸರಕಾರಿ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ.

ಕಾಸರಗೋಡು ಮತ್ತು ಮಂಗಳೂರು ನಡುವಣ ಸಾಹಿತ್ಯ, ಸಾಮಾಜಿಕ, ಸಾಂಸ್ಕೃತಿಕ, ಐತಿಹಾಸಿಕ, ರಾಜಕೀಯ, ವಾಣಿಜ್ಯ ಸಂಬಂಧಗಳಿಗೆ 200 ವರ್ಷಗಳ ಇತಿಹಾಸವಿದೆ. ಕಾಸರಗೋಡು ಮಂಗಳೂರು ಅಥವ ಕೆನರ ಜಿಲ್ಲೆಯ ಒಂದು ಭಾಗವಾಗಿತ್ತು. ಕೆನರ ಜಿಲ್ಲೆ ಅಂದಿನ ಮದ್ರಾಸ್ ಪ್ರಾಂತ್ಯದಲ್ಲಿ ಇತ್ತು. ಇಂದಿನ ಕಾಸರಗೋಡು ಜಿಲ್ಲೆಯ ಕೋರ್ಟ್ ವ್ಯವಹಾರಗಳಿಗೆ ಕೂಡ ಮಂಗಳೂರು ಕೇಂದ್ರ ಆಗಿತ್ತು. ನಿರಂಜನರ ಚಿರಸ್ಮರಣೆ ಕಾದಂಬರಿಗೆ ವಸ್ತುವಾಗಿದ್ದ ಕಯ್ಯೂರು ಕಮ್ಯೂನಿಷ್ಟ ಕ್ರಾಂತಿಯ ಹೋರಾಟಗಾರರ ವಿಚಾರಣೆ ನಡೆದಿದ್ದು ಇದೇ ಮಂಗಳೂರಿನ ನ್ಯಾಯಾಲಯದಲ್ಲಿ.
ಇಂದು ಆರೋಗ್ಯರಂಗದಲ್ಲಿ ಅದ್ವಿತೀಯ ಸೇವೆ ನೀಡಿರುವ 1848ರಲ್ಲಿ ಸ್ಥಾಪನೆಯಾದ ವೆನ್ ಲಾಕ್ ಆಸ್ಪತ್ರೆಗೆ ಒಂದು ಮುಕ್ಕಾಲು ಶತಮಾನದ ಇತಿಹಾಸ ಇದೆ. ಆಗ ಕರ್ನಾಟಕ, ಕೇರಳ ರಾಜ್ಯಗಳು ಇರಲಿಲ್ಲ, ಭಾರತ ಗಣರಾಜ್ಯವೂ ಆಗಿರಲಿಲ್ಲ. ಇಂದಿನ ಸುಮಾರು ಹನ್ನೊಂದು ಕಂದಾಯ ಜಿಲ್ಲೆಗಳ ರೋಗಿಗಳು ಅಂದಿನಿಂದ ಇಂದಿನವೆರೆಗೆ ವೆನ್ ಲಾಕ್ ಆಸ್ಪತ್ರೆಯನ್ನು ಅವಲಂಬಿಸಿದ್ದರು. ಕೇರಳ ರಾಜ್ಯವಾದ ಅನಂತರ ಕೂಡ ಕೇರಳ, ಕಣ್ಣೂರು ಜಿಲ್ಲೆಗಳ ಬಡವರು ವೆನ್ ಲಾಕ್ ಆಸ್ಪತ್ರೆಗೆ ಬರುತ್ತಾರೆ. ಕಳೆದ ಒಂದೆರಡು ದಶಕಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ವೈದ್ಯಕೀಯ ಕಾಲೇಜುಗಳು ಸ್ಥಾಪನೆ ಆಗಿವೆ. ಮಾತ್ರವಲ್ಲದೆ, ಹತ್ತು ಹನ್ನೆರಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ನರ್ಸಿಂಗ್ ಹೋಮುಗಳು ಮಂಗಳೂರು ನಗರದಲ್ಲಿ ಇವೆ. ಇವೆಲ್ಲ ಖಾಸಗಿ ಆಸ್ಪತ್ರೆಗಳಿಗೆ ಕಾಸರಗೋಡು, ಕಣ್ಣೂರು ಅಲ್ಲದೆ ಉತ್ತರ ಕನ್ನಡ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ರೋಗಿಗಳೇ ಗ್ರಾಹಕರು. ಇವೆಲ್ಲ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೇರಳದವರು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಇನ್ನು ಕಾಸರಗೋಡು ಜಿಲ್ಲೆ ಹಿಂದುಳಿಯಲು ಕೇರಳ ಆಡಳಿತಗಾರರು ಎಷ್ಟು ಕಾರಣರೊ ಅಷ್ಟೇ ಹೊಣೆಯನ್ನು ಎರಡೂ ರಾಜ್ಯಗಳ ಕನ್ನಡ ಹೋರಾಟಗಾರರು ಮತ್ತು ರಾಜಕಾರಣಿಗಳೂ ವಹಿಸಿಕೊಳ್ಳಬೇಕಾಗುತ್ತದೆ. ಇಂದಿನ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಮತ್ತು ಕಾಸರಗೋಡು ವಿಧಾನಸಭಾ ಕ್ಷೇತ್ರಗಳಲ್ಲಿ ಮಲೆಯಾಳೇತರರ ಪ್ರಾಬಲ್ಯ ಇದೆ. ಇವರನ್ನು ಕನ್ನಡಗರು ಎಂದು ಕರೆಯಲಾಗುತ್ತಿದ್ದರೂ ಹೆಚ್ಚಿನವರು ತುಳು, ಕೊಂಕಣಿ, ಮರಾಠಿ, ಬ್ಯಾರಿ ಮತ್ತು ಇಂತಹುದೇ ಭಾಷೆಗಳನ್ನು ಆಡುವವರು. ಒಂದು ಕಾಲದಲ್ಲಿ ಕರ್ನಾಟಕ ಏಕೀಕರಣ ಸಮಿತಿ ಶಾಸಕರನ್ನು ಕೇರಳ ವಿಧಾನಸಭೆಗೆ ಚುನಾಯಿಸಿ ಕಳುಹಿಸಿತ್ತು. ಬೆಳಗಾವಿ ಪ್ರದೇಶಗಳಲ್ಲಿ ಮರಾಠಿ ಶಾಸಕರು ಆಯ್ಕೆ ಆದಂತೆ.
ಕಾಸರಗೋಡಿಗೆ ಮೊದಲು ಕೈಕೊಟ್ಟವರು ಕರ್ನಾಟಕದ ರಾಜಕಾರಣಿಗಳು. ಕಾಸರಗೋಡಿನಲ್ಲಿ ಲಿಂಗಾಯಿತ (ವೀರಶೈವ), ಒಕ್ಕಲಿಗ ಮತ್ತು ಕುರುಬ ಸಮುದಾಯದವರು ಇಲ್ಲ ಎನ್ನುವ ಮಹತ್ವದ ರಾಜಕೀಯ ಕಾರಣದಿಂದಾಗಿ ಕಾಸರಗೋಡು ಮದ್ರಾಸ್ ಪ್ರಾಂತ್ಯದಿಂದ ಕೇರಳಕ್ಕೆ ಸೇರ್ಪಡೆಗೊಂಡಿತ್ತು. ಸುಮಾರು ನಾಲ್ಕು ದಶಕಗಳ ಗಡಿ ಹೋರಾಟ ಕೂಡ ಕಾಸರಗೋಡಿನ ಅವಗಣನೆಗೆ ಕಾರಣವಾಯ್ತು. ಇಂತಹ ಸಂದರ್ಭದಲ್ಲೇ ಅಭಿವೃದ್ಧಿಗಾಗಿಯೇ ಅಂದು ಕೇರಳದಲ್ಲಿದ್ದ ಕಮ್ಯೂನಿಷ್ಟ ಸರಕಾರ ಕಾಸರಗೋಡನ್ನು ಜಿಲ್ಲೆಯಾಗಿ ಘೋಷಣೆ ಮಾಡಿತ್ತು. ಜಿಲ್ಲೆ ಮಾಡಿದಾಗ ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು. ಅನಂತರವಾದರು ಕಾಸರಗೋಡು ಅಭಿವೃದ್ಧಿ ಆಗಬೇಕಾಗಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ಆಗಲಿಲ್ಲ. ಅದರಲ್ಲೂ ಶಿಕ್ಷಣ, ಉದ್ಯೋಗ ಮತ್ತು ವೈದ್ಯಕೀಯ ರಂಗದಲ್ಲಿ ಹಿಂದುಳಿಯಿತು.

ಶಿಕ್ಷಣ ಕ್ಷೇತ್ರದಲ್ಲಿ ಹಿಂದುಳಿಯಲು ಕೇರಳ ಸರಕಾರದ ಕಠಿಣ ಶಿಕ್ಷಣ ನೀತಿ ಕಾರಣವಾಗಿದೆ. ಇದರಿಂದಾಗಿ ಬಹುತೇಕ ಪ್ಲಸ್ –ಟು ಅಥವ ಪಿಯು ಕಾಲೇಜಿನಿಂದ ವೈದ್ಯಕೀಯ ಶಿಕ್ಷಣ ತನಕ ಕರ್ನಾಟಕ ರಾಜ್ಯವನ್ನು ಆಶ್ರಯಿಸಬೇಕಾಯಿತು. ಉದ್ಯೋಗಕ್ಕಾಗಿ ಬೆಂಗಳೂರು, ಕೊಲ್ಲಿ ರಾಷ್ಟ್ರಗಳಲ್ಲಿ ಹೋಗುವ ಕಾಸರಗೋಡಿನ ಮಂದಿ, ವಾಣಿಜ್ಯ, ವ್ಯಾಪಾರಕ್ಕಾಗಿ ಮಂಗಳೂರು ಮತ್ತು ಬೆಂಗಳೂರನ್ನು ಆಶ್ರಯಿಸಿದ್ದಾರೆ.
ಮಂಗಳೂರಿನ ಮೂರನೇ ಒಂದಂಶ ವಾಣಿಜ್ಯ ಸಂಕೀರ್ಣ, ರಿಯಲ್ ಎಸ್ಟೇಟ್ ಮತ್ತು ವೈದ್ಯಕೀಯ ರಂಗದಲ್ಲಿ ಕಾಸರಗೋಡಿನವರ ಬಂಡವಾಳ ಇದೆ. ಕಾಸರಗೋಡಿಗೆ ಮಂಗಳೂರು ಪ್ರಮುಖ್ಯ ವಾಣಿಜ್ಯ ಕೇಂದ್ರವಾಗಿದೆ. ಮಂಗಳೂರು ಮತ್ತು ಕಾಸರಗೋಡು ಮಧ್ಯೆ ತಲಾ ಎರಡು ನಿಮಿಷಕ್ಕೊಂದು ಕರ್ನಾಟಕ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಓಡಾಟವಿದೆಯೆಂದರೆ ಜನ ಓಡಾಟ ಎಷ್ಟಿದೆಯೆಂದು ಊಹಿಸಬಹುದು. ಇದರೊಂದಿಗೆ ಕೇರಳದಿಂದ ಹಲವು ರೈಲುಗಳು ಮಂಗಳೂರು ಮೂಲಕ ಸಂಚರಿಸುತ್ತವೆ.
ಮಂಗಳೂರಿನಲ್ಲಿ ಸೃಷ್ಟಿಯಾಗಿರುವ ಮಾಲ್ ಕಾಸರಗೋಡಲ್ಲಿ ಸಿಗುವುದಿಲ್ಲ. ಮಂಗಳೂರಲ್ಲಿ ಒಂದೇ ಒಂದು ಫೈವ್ ಸ್ಟಾರ್ ಹೊಟೇಲ್ ಇಲ್ಲದಿದ್ದರೂ, ಕಾಸರಗೋಡಲ್ಲಿ ಎರಡು ಫೈವ್ ಸ್ಟಾರ್ ಹೊಟೇಲಿದೆ. ಇದಕ್ಕೆ ಕಾರಣ ಪ್ರವಾಸೋದ್ಯಮ. ಕಾಸರಗೋಡಿಗೆ ಆಗಮಿಸುವ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಿದೆ.
ಇನ್ನು ಕಾಸರಗೋಡಿನ ಅಭಿವೃದ್ಧಿಯತ್ತ ಗಮನ ಹರಿಸುವುದಾದರೆ 2013ರಲ್ಲೇ ಪೆರ್ಲ ಸಮೀಪ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಯೋಜನೆ ಇತ್ತು. ಆದರೆ, ಕಾಲೇಜು ಕಟ್ಟಡ ನಿರ್ಮಾಣ ಚುರುಕುಗೊಂಡದ್ದು, ಈಗಿನ ಎಡರಂಗ ಅಧಿಕಾರಕ್ಕೆ ಬಂದ ಅನಂತರ. ಯೋಜನೆ ಪ್ರಕಾರ ಈ ವರ್ಷದ ಅಂತ್ಯದ ವೇಳೆಗೆ ಸರಕಾರಿ ವೈದ್ಯಕೀಯ ಆಸ್ಪತ್ರೆ ಆರಂಭವಾಗಬೇಕಾಗಿದೆ. ಆದರೆ, ಈಗ ನಿರ್ಮಾಣ ಆಗಿರುವ ಒಂದು ಕಟ್ಟಡದಲ್ಲಿ ಕೋವಿಡ್ 19 ಐಸೋಲೇಶನ್ ಆಸ್ಪತ್ರೆ ಮಾಡಲಾಗಿದೆ. ಕಾಸರಗೋಡಿನಲ್ಲಿ ಸೆಂಟ್ರಲ್ ವಿಶ್ವವಿದ್ಯಾಲಯ ಕೂಡ ಆರಂಭವಾಗಿದೆ.
ಕಾಸರಗೋಡು ಮೆಡಿಕಲ್ ಕಾಲೇಜು, ಕಾಸರಗೋಡು ಪ್ಯಾಕೇಜ್, ಪೆರ್ಲದಿಂದ ಆರಂಭವಾಗಬೇಕಾಗಿದ್ದ ಹಿಲ್ ಹೈವೇ, ತಲಪಾಡಿ- ಕಾಸರಗೋಡು ನಡುವಣ ನಾಲ್ಕು ಪಥಗಳ ಹೆದ್ದಾರಿ, ಕಾಂಞಗಾಂಡ್- ಬದಿಯಡ್ಕ-ವಿಟ್ಲ- ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಇತ್ಯಾದಿ ವಿಳಂಬ ಆಗಲು ಕಾಸರಗೋಡಿನ ರಾಜಕೀಯ ಮುಖಂಡರ ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಕಾರಣವಾಗಿದೆ.