ಅರ್ಥಶಾಸ್ತ್ರ ಕಲಿಯದ ಮತ್ತು ಅರ್ಥಶಾಸ್ತ್ರ ಅರ್ಥಮಾಡಿಕೊಳ್ಳದ ಮತ್ತು ಅರ್ಥಶಾಸ್ತ್ರಜ್ಞರ ಮಾತುಕೇಳದ ವ್ಯಕ್ತಿ ದೇಶದ ಪ್ರಧಾನಿ ಆದರೆ ಏನಾಗುತ್ತದೆ? ದೇಶದ ಅಭಿವೃದ್ಧಿ ಕುಸಿಯುತ್ತದೆ. ಈಗ ಆಗುತ್ತಿರುವುದು ಅದೇ! ಸದ್ಯ ಕರೋನಾ ಸೋಂಕನ್ನು ತಮ್ಮೆಲ್ಲ ವೈಫಲ್ಯಗಳ ‘ಸುರಕ್ಷಾ ಕವಚ’ವನ್ನಾಗಿ ಬಳಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶದ ಆರ್ಥಿಕ ಅಭಿವೃದ್ಧಿಯು ಜಾಗತೀಕರಣೋತ್ತರದ ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಇದು ಕರೋನಾ ಸೋಂಕಿನಿಂದಾಗಿ ಆದ ಅನಾಹುತ ಎಂದು ಹೇಳುವಂತಿಲ್ಲ. ಏಕೆಂದರೆ, ಕೇಂದ್ರ ಸಾಂಖಿಕ ಇಲಾಖೆ ಘೋಷಣೆ ಮಾಡಿರುವ ಕಳೆದ ವಿತ್ತೀಯ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಆರ್ಥಿಕ ಅಭಿವೃದ್ಧಿಯು ಶೇ.3.1ಕ್ಕೆ ಕುಸಿದಿದೆ. ನಾಲ್ಕನೇ ತ್ರೈಮಾಸಿಕದ 91 ದಿನಗಳ ಪೈಕಿ ಆರ್ಥಿಕತೆ ಸ್ಥಗಿತಗೊಂಡ ಅವಧಿಯು ಕೇವಲ ಏಳುದಿನಗಳು ಮಾತ್ರ. ಮಾರ್ಚ್ 24ರಂದು ಮಧ್ಯರಾತ್ರಿ ಲಾಕ್ಡೌನ್ ಘೋಷಿಸಲಾಯಿತು. ಅಂದರೆ, ಮಾರ್ಚ್ 25ರಿಂದ ಆರ್ಥಿಕ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡವು. ಅಲ್ಲಿಯವರೆಗೂ ಆರ್ಥಿಕ ಚಟುವಟಿಕೆಗಳು ಎಂದಿನಂತೆಯೇ ಇದ್ದವು.
ವಾಸ್ತವವಾಗಿ ಕರೋನಾ ಸೋಂಕು ಹರಡುವ ಮುನ್ನವೇ ದೇಶದ ಆರ್ಥಿಕತೆಗೆ ಸೋಂಕು ಹಿಡಿದಿತ್ತು. ಆ ಸೋಂಕಿಗೆ ಆಡಳಿತ ವೈಫಲ್ಯತೆಯ ಹೆಸರನ್ನು ನೀಡಬೇಕೋ? ನಾಯಕತ್ವದ ವೈಫಲ್ಯದ ಹೆಸರನ್ನು ನೀಡಬೇಕೋ? ಗೊತ್ತಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ‘ಒಣ ಪ್ರತಿಷ್ಠೆ’ಗಾಗಿ ದೇಶದ ಆರ್ಥಿಕತೆಯನ್ನು ಬಲಿಕೊಟ್ಟಿದ್ದಾರೆ ಎಂಬುದನ್ನು ‘ಕೇಸರಿ ಅರ್ಥಶಾಸ್ತ್ರಜ್ಞ’ರ ಹೊರತಾಗಿ ಅರ್ಥಶಾಸ್ತ್ರದ ಎಬಿಸಿಡಿ ಗೊತ್ತಿರುವ ಎಲ್ಲರೂ ಒಪ್ಪುತ್ತಾರೆ.
ಅಪನಗದೀಕರಣದ ಮೂಲಕ 500 ಮತ್ತು 1000 ರುಪಾಯಿ ನೋಟುಗಳನ್ನು ನಿಷೇಧ ಮಾಡಿದಾಗ ಆದ ಆಘಾತದಿಂದ ದೇಶದ ಆರ್ಥಿಕತೆ ಇನ್ನೂ ಚೇತರಿಸಿಳ್ಳಲಾಗಿಲ್ಲ. ಜಿಎಸ್ಟಿಯನ್ನು ತರಾತುರಿಯಲ್ಲಿ ಜಾರಿಗೆ ತಂದು ದೇಶದ ಆರ್ಥಿಕತೆ ಮೇಲಾದ ಗಾಯಕ್ಕೆ ಉಪ್ಪು ಸವರಿದ ಪ್ರಧಾನಿ ನರೇಂದ್ರ ಮೋದಿ, ಆರ್ಥಿಕತೆ ಅಭಿವೃದ್ಧಿಯ ಮೂಲದ್ರವ್ಯ ಉದ್ಯೋಗಸೃಷ್ಟಿ ಎಂಬುದನ್ನು ಮರೆತರು. ‘ಜುಮ್ಲಾ’ (‘ಸತ್ಯ’ದ ಲೇಪಹಚ್ಚಿದ ‘ಸುಳ್ಳು’ಘೋಷಣೆ) ವನ್ನೇ ತಮ್ಮ ಉದ್ಯೋಗ ಮಾಡಿಕೊಂಡರು. ಮೋದಿಯವರನ್ನು ಆರಂಭದಲ್ಲಿ ಅವರ ವಿರೋಧಿಗಳಷ್ಟೇ ‘ಜುಮ್ಲೇಬಾಜ್’ ಎಂದು ಆರೋಪಿಸುತ್ತಿದ್ದರು. ಈಗ ಅದು ಆರೋಪವಲ್ಲ, ಸತ್ಯವಾಗಿಬಿಟ್ಟಿದೆ ಮತ್ತು ಅವರ ವಿರೋಧಿಗಳಷ್ಟೇ ಅಲ್ಲಾ ಎಲ್ಲರೂ ಮೋದಿಯವರನ್ನು ‘ಜುಮ್ಲೇ ಬಾಜ್’ ಎನ್ನುತ್ತಾರೆ. ಅಥವಾ ‘ಜುಮ್ಲೇಬಾಜ್’ ಅಂದರೆ ಅದಕ್ಕೆ ವಿರೋಧವನ್ನೇನೂ ವ್ಯಕ್ತಪಡಿಸುವುದಿಲ್ಲ!
ಪ್ರಧಾನಿ ಮೋದಿ ಅವರಿಗೆ ಇದುವರೆಗೆ ಯಾರೂ ಮಾಡದ್ದನ್ನು ಮಾಡುವ ಉಮೇದು ಇದೆ. ಅಥವಾ ಯಾವುದ್ದನ್ನು ಮಾಡಿದರೆ ಹೆಚ್ಚು ಪ್ರಚಾರ ಸಿಗುತ್ತದೋ ಅದನ್ನೇ ಮಾಡುತ್ತಾರೆ. ಅದಕ್ಕಾಗಿಯೇ ಅವರು ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ನೋಟ್ ಬ್ಯಾನ್ ಮಾಡಿದ್ದು, ಜಿಎಸ್ಟಿ ಜಾರಿ ಮಾಡಿ ಅದಕ್ಕಾಗಿ ಮಧ್ಯರಾತ್ರಿಯಲ್ಲಿ ಸಂಸತ್ತಿನ ಉಭಯ ಸದನಗಳ ಕಲಾಪ ನಡೆಸಿದ್ದು, ಅಷ್ಟೇ ಏಕೆ? ಇತ್ತ ಗಡಿಯಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಬಂದೂಕು ಗುರಿ ಇಡುವ ಹೊತ್ತಿನಲ್ಲಿ ಪಾಕಿಸ್ತಾನಕ್ಕೆ ಹಾರಿ ಆ ದೇಶದ ಪ್ರಧಾನಿಗೆ ಹುಟ್ಟು ಹಬ್ಬದ ಶುಭಾಷಯ ಕೋರಿದ್ದು… ಎಲ್ಲವೂ ಹೊಸತೇ! ಈ ಎಲ್ಲವೂಗಳಿಂದಲೂ ಮೋದಿ ಅವರಿಗೆ ಸಾಕಷ್ಟು ಪ್ರಚಾರ ಸಿಕ್ಕಿದೆ.
ದೇಶದ ಆರ್ಥಿಕತೆಗೂ ದೇಶದ ಪ್ರಧಾನಿಗೂ ಸಂಬಂಧ ಇದೆ. ದೇಶದ್ದಾಗಲೀ, ವಿಶ್ವದ್ದಾಗಲೀ ಆರ್ಥಿಕತೆ ನಿಂತಿರುವುದು ಉದ್ಯೋಗಸೃಷ್ಟಿಯ ಮೇಲೆ. ಉದ್ಯೋಗ ಇದ್ದರೆ ಜನರು, ಗಳಿಸುತ್ತಾರೆ, ಖರ್ಚು ಮಾಡುತ್ತಾರೆ, ಉಪಭೋಗ ಹೆಚ್ಚುತ್ತದೆ, ಉದ್ಯಮ ಬೆಳೆಯುತ್ತದೆ, ಆ ಮೂಲಕ ಮತ್ತಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ. ದೇಶದ ಬಹುಪಾಲು ಜನರು ಉತ್ತಮ ಮತ್ತು ಸ್ವಾಭಿಮಾನದ ಬದುಕು ಸಾಗಿಸುತ್ತಾರೆ. ಆರ್ಥಿಕತೆಗೆ ಚೇತರಿಕೆ ನೀಡುತ್ತಾರೆ, ಅಂತಿಮವಾಗಿ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಅಥವಾ ಆರ್ಥಿಕ ಅಭಿವೃದ್ಧಿ ತ್ವರಿತವಾಗಿ ಬೆಳವಣಿಗೆಯಾಗುತ್ತದೆ.
ಈಗ ಘೋಷಣೆ ಮಾಡಿರುವ ನಾಲ್ಕನೇ ತ್ರೈಮಾಸಿಕದ ಜಿಡಿಪಿ ಏನನ್ನು ಹೇಳುತ್ತದೆ ಎಂದರೆ- ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಉದ್ಯೋಗ ಸೃಷ್ಟಿಸಿಲ್ಲ, ಜನರು ಖರೀದಿ ಶಕ್ತಿ ಕಳೆದುಕೊಂಡಿದ್ದಾರೆ, ಉಪಭೋಗ ಕುಸಿದಿದೆ, ಉದ್ಯಮಗಳು ನಷ್ಟದ ಹಾದಿಯಲ್ಲಿವೆ, ಹೊಸದಾಗಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ, ಆರ್ಥಿಕತೆ ಚೇತರಿಸಿಕೊಳ್ಳುತ್ತಿಲ್ಲ ಮತ್ತು ಅಂತಿಮವಾಗಿ ಆರ್ಥಿಕ ಅಭಿವೃದ್ಧಿ ಇಳಿಜಾರಿನಲ್ಲಿ ದಾಪುಗಾಲು ಹಾಕುತ್ತಿದೆ.
ಆರ್ಥಿಕತೆ ಕುಸಿತಕ್ಕೂ ಪ್ರಧಾನಿ ಮೋದಿ ಅವರ ‘ಒಣಪ್ರತಿಷ್ಠೆ’ ಕುಸಿತಕ್ಕೂ ಏನು ಸಂಬಂಧ? ಸಂಬಂಧ ಇದೆ. ನರೇಂದ್ರ ಮೋದಿ ತಾವು ಪ್ರಧಾನಿ ಆಗುವ ಮುನ್ನವೇ ಹೊರದೇಶಗಳಲ್ಲಿ ಶ್ರೀಮಂತರು ಇಟ್ಟಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಖಾತೆಗೂ 15 ಲಕ್ಷ ರುಪಾಯಿ ಹಾಕುವುದಾಗಿ ಘೋಷಿಸಿದ್ದರು. ಪ್ರತಿವರ್ಷವೂ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ದೇಶದ ತೆರಿಗೆ ಸಂಗ್ರಹವನ್ನು ವಾರ್ಷಿಕ ಶೇಕಡ 10ರಷ್ಟು ಹೆಚ್ಚಿಸುವುದಾಗಿ, ದೇಶದ ಅಭಿವೃದ್ಧಿಯನ್ನು ಎರಡಂಕಿಗೆ ಏರಿಸುವುದಾಗಿ ಘೋಷಿಸಿದ್ದರು ಈ ನಾಲ್ಕು ಘೋಷಣೆಗಳು ಅಂತಿಮವಾಗಿ ‘ಜುಮ್ಲಾ’ಗಳೆಂದು ಸಾಬೀತಾದವು.
ಈ ನಾಲ್ಕುಘೋಷಣೆಗಳನ್ನು ಜಾರಿಗೊಳಿಸುವುದು ಸದ್ಯಕ್ಕೆ ಸಾಧ್ಯವಾಗುವುದಿಲ್ಲ ಎಂಬ ಸತ್ಯವನ್ನು ಅರಿತ ಪ್ರಧಾನಿ ಮೋದಿ ಹೊಸದೊಂದು ಘೋಷಣೆ ಮಾಡಿದರು. ಅದು- ‘5 ಟ್ರಿಲಿಯನ್ ಡಾಲರ್ ಆರ್ಥಿಕತೆ’! ಮೋದಿ ಹೊಸ ಘೋಷಣೆ ಮಾಡಿದ ಮೇಲೆ ದೇಶದ ಆರ್ಥಿಕತೆ ಕುಸಿಯುತ್ತಲೇ ಇದೆ. ಹೀಗಾಗಿ ‘ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ’ ಕೂಡಾ ಮೋದಿ ಅವರ ‘ಜುಮ್ಲಾ’ಗಳ ಪಟ್ಟಿಗೆ ಸೇರಿ ಹೋಗಿದೆ. ವಾಸ್ತವವಾಗಿ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸಲು ನಮ್ಮದೇಶವು ಪ್ರತಿ ವರ್ಷ ಶೇ.10ರ ಅಭಿವೃದ್ಧಿಯನ್ನು ಕನಿಷ್ಠ ಏಳುವರ್ಷಗಳ ಕಾಲ ಸಾಧಿಸಬೇಕು. ಮೋದಿ ಆಡಳಿತದ ಅವಧಿಯಲ್ಲಿ ಜಿಡಿಪಿ ಸತತ ಕುಸಿತದ ಹಾದಿಯಲ್ಲೇ ಸಾಗುತ್ತಿದೆ. ಹೀಗಾಗಿ, ಎರಡಂಕಿ ಆರ್ಥಿಕ ಅಭಿವೃದ್ಧಿಯಾಗಲೀ, ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲೀ- ಈ ಹೊತ್ತಿಗೆ ಮತ್ತು ಮೋದಿ ಅವರ ಮುಂದಿನ ಆಡಳಿತದ ಅವಧಿಯ ಹೊತ್ತಿಗೂ ಕೇವಲ ‘ಮರೀಚಿಕೆ’ ಮಾತ್ರ!
ಇದನ್ನು ಅರ್ಥ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ, ಐದು ಟ್ರಿಲಿಯನ್ ಡಾಲರ್, ಎರಡಂಕಿ ಆರ್ಥಿಕ ಅಭಿವೃದ್ಧಿ ಇತ್ಯಾದಿಗಳೆಲ್ಲವನ್ನು ಬಿಟ್ಟಿದ್ದಾರೆ. ಈಗ ‘ಆತ್ಮನಿರ್ಭರ ಭಾರತ’ದ ಘೋಷಣೆ ಮಾಡಿದ್ದಾರೆ. ಮೋದಿಯವರ ಹೊಸ ಘೋಷಣೆ ಬಹುತೇಕ ಜನರಿಗೆ ಅರ್ಥವಾಗಿಲ್ಲ. ಅದು ಅರ್ಥಶಾಸ್ತ್ರವಂತೂ ಅಲ್ಲವಾದ್ದರಿಂದ ಅರ್ಥಶಾಸ್ತ್ರಜ್ಞರಿಗೂ ಅರ್ಥವಾಗಿಲ್ಲ. ಆದರೆ, ಕೇಸರಿ ಅರ್ಥಶಾಸ್ತ್ರಜ್ಞರು, ಆಡಳಿತಾರೂಢ ಪಕ್ಷಸ್ನೇಹಿ ಮಾಧ್ಯಮಗಳಿಗೆ ಹಾಗೂ ಮೋದಿಯವರ ಅಭಿಮಾನಿಗಳಿಗೆ ‘ಆತ್ಮನಿರ್ಭರ’ ಅಭಿಯಾನ ಅರ್ಥವಾದಂತಿದೆ!
ದೇಶದ ಆರ್ಥಿಕ ಅಭಿವೃದ್ಧಿ ಕುಸಿಯುವುದಕ್ಕೂ, ಮೋದಿ ಅವರ ‘ಒಣಪ್ರತಿಷ್ಠೆ’ ಕುಸಿಯುವುದಕ್ಕೂ ಇರುವ ಸಂಬಂಧವೆಂದರೆ, ಮೋದಿ ಆರಂಭದಲ್ಲಿ ಘೋಷಿಸಿದ- ಎಲ್ಲರ ಖಾತೆಗೆ 15 ಲಕ್ಷ ರುಪಾಯಿ, 2 ಕೋಟಿ ಉದ್ಯೋಗ, ಶೇ.10ರಷ್ಟು ತೆರಿಗೆ ಸಂಗ್ರಹ, ಎರಡಂಕಿ ಆರ್ಥಿಕಾಭಿವೃದ್ಧಿ ಎಲ್ಲವೂ ಮೋದಿ ಅವರ ಪ್ರತಿಷ್ಠೆಯ ಸಂಕೇತವಾಗಿದ್ದವು. ಅವರ ಪ್ರತಿಷ್ಠೆಯ ಸಂಕೇತವಾಗಿದ್ದ ಎಲ್ಲಾ ಘೋಷಣೆಗಳೂ ವಿಫಲವಾಗಿವೆ. ಹೀಗಾಗಿ ಮೋದಿ ಅವರ ಪ್ರತಿಷ್ಠೆಯ ಘೋಷಣೆಗಳೆಲ್ಲ ‘ಒಣಪ್ರತಿಷ್ಠೆ’ ಘೋಷಣೆಗಳಾಗಿಬಿಟ್ಟಿವೆ. ಅವುಗಳ ವೈಫಲ್ಯವೆಂದರೆ ಒಣಪ್ರತಿಷ್ಠೆಯು ಕುಸಿದಂತೆಯೇ ಅಲ್ಲವೇ? ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ದೇಶದ ಜಿಡಿಪಿ ಅಷ್ಟೇ ಕುಸಿದಿಲ್ಲ, ಪ್ರಧಾನಿ ನರೇಂದ್ರಮೋದಿ ಅವರ ‘ಒಣಪ್ರತಿಷ್ಠೆ’ಯೂ ಕುಸಿದಿದೆ.

ಅದೃಷ್ಟವಾಶಾತ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್ನೂ ನಾಲ್ಕು ವರ್ಷಗಳ ಅವಕಾಶ ಇದೆ. ತಾವು ಮಾಡಿದ್ದ ತಪ್ಪನ್ನು ತಪ್ಪು ಎಂಬುದನ್ನು ಒಪ್ಪಿಕೊಳ್ಳಲು, ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಮತ್ತು ಮುಂದೆ ಅಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಲು ಹಾಗೂ ‘ಜುಮ್ಲಾ’ ಬಿಟ್ಟು ನಿಜವಾದ ಅಭಿವೃದ್ಧಿ ಸಾಧಿಸಲು ಇನ್ನೂ 1,460 ದಿನಗಳು (35040 ಗಂಟೆಗಳು) ಉಳಿದಿವೆ. ದೇಶದ ಜಿಡಿಪಿ ಶಾಶ್ವತವಾಗಿ ಶೇ.3ರಷ್ಟು ಕುಸಿಯಲು ಕಾರಣವಾದ ಅಪನಗದೀಕರಣ (ನೋಟು ನಿಷೇಧ) ಘೋಷಣೆ ಮಾಡಲು ಪ್ರಧಾನಿ ನರೇಂದ್ರ ಒಂದು ಗಂಟೆಯನ್ನು ತೆಗೆದುಕೊಳ್ಳಲಿಲ್ಲ, ದೇಶದ ಲಕ್ಷಾಂತರ ಜನ ವಲಸೆ ಕಾರ್ಮಿಕರು ಜೀವಂತ ನಕರ ಅನಭವಿಸಲು ಕಾರಣವಾದ ಲಾಕ್ಡೌನ್ ಜಾರಿಯನ್ನು ಘೋಷಿಸಲು ತೆಗೆದುಕೊಂಡಿದ್ದು ಕೇವಲ ನಾಲ್ಕು ಗಂಟೆಗಳಷ್ಟೇ! ಹೀಗಾಗಿ ದಿನಗಳ ಮತ್ತು ಗಂಟೆಗಳ ಲೆಕ್ಕ ಜನಸಾಮಾನ್ಯರ ಪಾಲಿಗೆ ಅತ್ಯಮೂಲ್ಯ.
“ಆರು ವರ್ಷ ಆಡಳಿತ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಪಕ್ವವಾಗಿದ್ದಾರೆ. ಮಾಗಿದ್ದಾರೆ, ಹಿಂದೆ ಅನುಭವ ಇಲ್ಲದೇ ಮಾಡಿದ ಅಚಾತುರ್ಯಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಬರುವ ನಾಲ್ಕು ವರ್ಷಗಳಲ್ಲಿ ಈ ಆರು ವರ್ಷಗಳಲ್ಲಾಗಿರುವ ತಪ್ಪುಗಳನ್ನೆಲ್ಲ ಸರಿಪಡಿಸಿ, ಒಪ್ಪುಗಳನ್ನೆಲ್ಲಾ ಮುಂದುವರೆಸುತ್ತಾರೆ. ಒಣಪ್ರತಿಷ್ಠೆಗಾಗಿ ಅವರು ಯಾವ ದುಸ್ಸಾಹಸವನ್ನೂ ಮಾಡುವುದಿಲ್ಲ ಮತ್ತು ಜನರು ಸಂಕಷ್ಟಕ್ಕೆ ಈಡಾಗುವ ಯಾವ ನಿರ್ಧಾರವನ್ನೂ ಅವರು ತೆಗೆದುಕೊಳ್ಳುವುದಿಲ್ಲಾ”- ಅಂತ ಅಂದುಕೊಳ್ಳುವುದರ ಹೊರತಾಗಿ ಈ ಹೊತ್ತಿನಲ್ಲಿ ದೇಶದ ಜನರಿಗೆ ಬೇರೆ ಆಯ್ಕೆಯೇ ಇಲ್ಲಾ!!