ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಯಶಸ್ವಿಯಾಗಿ ನೆರವೇರಿದೆ. ಶುದ್ಧ ಧಾರ್ಮಿಕ ಕಾರ್ಯಕ್ರಮವಾಗಿ ಮುಗಿದುಹೋಗಬೇಕಾಗಿದ್ದ ಆ ಘಟನೆಯನ್ನು ಕರೋನಾ ಆತಂಕದ ನಡುವೆಯೂ ದೇಶದ ಒಂದು ಐತಿಹಾಸಿಕ ಮಹಾ ಘಟನೆಯಂತೆ, ಕಾಲಘಟ್ಟದ ಬದಲಾವಣೆಯ ತಿರುವಿನ ಘಳಿಗೆಯಂತೆ ಬಿಂಬಿಸಿದ್ದು ಬಿಜೆಪಿ ಮತ್ತು ಹಿಂದುತ್ವವಾದಿ ಸಂಘಟನೆಗಳ ಹೆಚ್ಚುಗಾರಿಕೆಯಾದರೆ, ಅದೇ ಹೊತ್ತಿಗೆ ಆಡಳಿತ ಪಕ್ಷದ ಅಂತಹದ್ದೊಂದು ತಂತ್ರಗಾರಿಕೆಗೆ ಹೇಗೆ ಪ್ರತಿತಂತ್ರ ಹೆಣೆಯಬೇಕು ಎಂಬ ಬಗ್ಗೆ ಕನಿಷ್ಟ ತಯಾರಿಯನ್ನೂ ಮಾಡಿಕೊಳ್ಳದೆ ದಿಕ್ಕುತೋಚದೆ ತಡಬಡಾಯಿಸಿದ್ದು ಕಾಂಗ್ರೆಸ್ಸಿನ ವೈಫಲ್ಯ.
ಹೌದು, ರಾಮ ಮಂದಿರ ಭೂಮಿ ಪೂಜೆ ಘಟನೆ ದೇಶದ ಎರಡು ರಾಜಕೀಯ ಶಕ್ತಿಗಳ ನಡುವಿನ ವ್ಯತ್ಯಾಸವನ್ನು, ಅವುಗಳ ಕಾರ್ಯತಂತ್ರಗಳ ಸ್ಪಷ್ಟತೆಯನ್ನು ಮತ್ತು ರಾಜಕೀಯ ಪ್ರಜ್ಞೆಯನ್ನು ಮತ್ತೊಮ್ಮೆ ಸಾಬೀತುಮಾಡಿತು.
ಸುಪ್ರೀಂಕೋರ್ಟಿನ ಆದೇಶ ಪಾಲನೆಯ ನೆಪದಲ್ಲಿ ಆಡಳಿತ ವ್ಯವಸ್ಥೆಯೇ ಮುಂದೆ ನಿಂತು ರಾಮ ಮಂದಿರದ ಭೂಮಿ ಪೂಜೆ ನೆರವೇರಿಸಿದೆ. ಪ್ರಧಾನಿ ಮೋದಿಯವರಂತೂ ಸ್ವತಃ ಅಡಿಗಲ್ಲು ಇಟ್ಟು, ದೇಶದ ಹೊಸ ಭವಿಷ್ಯಕ್ಕೆ ಇದು ಭಾಷ್ಯ ಎಂದಿದ್ದಾರೆ. ರಾಮರಾಜ್ಯಕ್ಕೆ ಇದು ಅಡಿಗಲ್ಲು ಎಂದಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರ ರಾಮ ಮಂದಿರ ಮತ್ತು ರಾಮರಾಜ್ಯದ ಕುರಿತು ಹೊಂದಿರುವ ಪರಿಕಲ್ಪನೆ ಮತ್ತು ಸ್ಪಷ್ಟತೆಯ ಹಿನ್ನೆಲೆಯಲ್ಲಿ ನೋಡಿದರೆ, ಕೇಂದ್ರ ಸರ್ಕಾರದ ವರಸೆಯಲ್ಲಾಗಲೀ ಅಥವಾ ಪ್ರಧಾನಿ ಮೋದಿಯವರ ಮಾತಿನಲ್ಲಾಗಲೀ ಅಚ್ಚರಿಯಾಗುವಂತಹದ್ದೇನೂ ಇಲ್ಲ. ಅದು ಅವರಿಂದ ನಿರೀಕ್ಷಿತವೇ. ರಾಮ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ವಿಷಯವನ್ನೇ ಇಟ್ಟುಕೊಂಡು ದೇಶದ ರಾಜಕೀಯ ಚಿತ್ರಣ ಬದಲಿಸಿದ, ದೇಶದ ಜನಸಮುದಾಯವನ್ನು ಧರ್ಮದ ಗೆರೆ ಕೊರೆದು ವಿಂಗಡಿಸಿದ, ರಾಮನೆಂಬ ಎಲ್ಲರ ಪಾಲಿನ ಆದರ್ಶ ದೈವ, ಆರಾಧ್ಯ ದೈವವನ್ನು ಒಂದು ಧರ್ಮದ ವಿರುದ್ಧದ ಪೌರುಷದ ಸಂಕೇತವಾಗಿ, ಒಂದು ಕೋಮಿನ ವಿರುದ್ಧದ ದ್ವೇಷದ ರೂಪಕವಾಗಿ ಬದಲಾಯಿಸಿ ಅಂತಹ ದ್ವೇಷ ಮತ್ತು ಹಿಂಸೆಯ ನೆಲೆಯ ಮೇಲೆಯೇ ಚುನಾವಣೆಯ ಫಲಿತಾಂಶ ನಿರ್ಧಾರವಾಗುವಂತೆ ಮಾಡಿದ ಒಂದು ಪಕ್ಷದಿಂದ ಇದಕ್ಕಿಂತ ಹೊರತಾದ್ದನ್ನು ನಿರೀಕ್ಷಿಸಲಾಗದು ಕೂಡ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಆದರೆ, ಈ ವಿಷಯದಲ್ಲಿ ಕಾಂಗ್ರೆಸ್ ಪ್ರತಿಕ್ರಿಯಿಸಿದ ರೀತಿ ಮಾತ್ರ ದೇಶದಾದ್ಯಂತ ಒಂದು ರೀತಿಯ ಅಚ್ಚರಿಗೆ, ಒಂದಿಷ್ಟು ಹತಾಶೆಗೆ ಮತ್ತು ಹೆಚ್ಚು ಮರುಕಕ್ಕೆ ಎಡೆ ಮಾಡಿದೆ. ಅದಲ್ಲಕ್ಕಿಂತ ಹೆಚ್ಚಾಗಿ ಇಂತಹದ್ದೊಂದು ಘಟನೆ ಮತ್ತು ಅದರ ಹಿಂದಿನ ಬಿಜೆಪಿ ಮತ್ತು ಸಂಘಪರಿವಾರದ ರಾಜಕೀಯ ತಂತ್ರಗಾರಿಕೆಯ ವಿಷಯದಲ್ಲಿ ಪ್ರತಿಪಕ್ಷವಾಗಿ ಕಾಂಗ್ರೆಸ್ ವಹಿಸಿದ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನ ಆ ಪಕ್ಷದ ಬಗ್ಗೆ ಜನಸಾಮಾನ್ಯರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿವೆ. ರಾಮ ಜನ್ಮಭೂಮಿ ತಂತ್ರಗಾರಿಕೆಗೆ ಪ್ರತಿ ತಂತ್ರ ಹೆಣೆಯುವುದಿರಲಿ, ಕಾಂಗ್ರೆಸ್ ಕನಿಷ್ಟ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಕೂಡ ಸಾಂಘಿಕವಾಗಿ ಸ್ಪಷ್ಟತೆ ಹೊಂದಿರಲಿಲ್ಲ ಎಂಬುದಕ್ಕೆ ಆ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬುಧವಾರ ದೇಶಾದ್ಯಂತ ನಿದ್ರಾವಸ್ಥೆಯಲ್ಲಿ ತಡಬರಿಸಿದಂತೆ ವರ್ತಿಸಿದ್ದೇ ನಿದರ್ಶನ.
मर्यादा पुरुषोत्तम भगवान राम सर्वोत्तम मानवीय गुणों का स्वरूप हैं। वे हमारे मन की गहराइयों में बसी मानवता की मूल भावना हैं।
राम प्रेम हैं
वे कभी घृणा में प्रकट नहीं हो सकतेराम करुणा हैं
वे कभी क्रूरता में प्रकट नहीं हो सकतेराम न्याय हैं
वे कभी अन्याय में प्रकट नहीं हो सकते।— Rahul Gandhi (@RahulGandhi) August 5, 2020
ಪಕ್ಷದ ತಳಮಟ್ಟದ ಕಾರ್ಯಕರ್ತರಿರಲಿ ಹಿರಿಯ ನಾಯಕರ ನಡುವೆಯೇ ಈ ವಿಷಯದಲ್ಲಿ ಚಿತ್ರವಿಚಿತ್ರ ಪ್ರತಿಕ್ರಿಯೆಗಳು, ಗೊಂದಲದ ಹೇಳಿಕೆಗಳು ಪಕ್ಷದ ತೀರಾ ನಗೆಪಾಟಲಿನ ನಿಲುವನ್ನು ಬಹಿರಂಗಗೊಳಿಸಿದವು. ದಿಗ್ವಿಜಯ ಸಿಂಗ್, ಕಮಲ್ ನಾಥ್, ಮನೀಷ್ ತಿವಾರಿಯಂತಹ ನಾಯಕರು ರಾಮ ಮಂದಿರ ನಿರ್ಮಾಣಕ್ಕೆ ಈ ಹಿಂದೆಯೇ ತಮ್ಮ ಕಾಂಗ್ರೆಸ್ ಸರ್ಕಾರವೇ ಅಡಿಗಲ್ಲು ಹಾಕಿದೆ. ಸ್ವತಃ ದಿವಂಗತ ಪ್ರಧಾನಿ ರಾಜೀವ್ ಗಾಂಧಿಯವರ ಕನಸು ರಾಮ ಮಂದಿರ ನಿರ್ಮಾಣ ಮಾಡುವುದಾಗಿತ್ತು ಎನ್ನುವ ಮೂಲಕ, ಹಿರಿಯ ನಾಯಕರು ಮಂದಿರ ನಿರ್ಮಾಣಕ್ಕೆ ಬೆಂಬಲ ಘೋಷಿಸಿದ್ದೇ ಅಲ್ಲದೆ, ಹನುಮಾನ್ ಚಾಲೀಸ ಪಠಣೆ, ಪೂಜೆ, ರಾಮ ಜಪ, ಮುಂತಾದ ನಡೆಗಳ ಮೂಲಕ ಸಂಘಪರಿವಾರಕ್ಕಿಂತ ತಾವೇನೂ ಕಡಿಮೆ ಅಲ್ಲ ಎಂಬುದನ್ನು ಸಾರಿ ಹೇಳಲು ಹರಸಾಹಸಪಟ್ಟರು. ಅದೇ ಹೊತ್ತಿಗೆ ಶಶಿ ತರೂರು, ಸ್ವತಃ ಉತ್ತರಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಸಲ್ಮಾನ್ ಖುರ್ಷೀದ್ ಮುಂತಾದವರು ಆ ಕಡೆಯೂ ಇಲ್ಲ, ಈ ಕಡೆಯೂ ಇಲ್ಲ ಎಂಬಂತೆ ಅಡ್ಡಗೋಡೆಯ ಮೇಲೆ ದೀಪವಿಟ್ಟರು. ಅತ್ತ ಪ್ರಜಾಪ್ರಭುತ್ವ, ದೇಶದ ಬಹುತ್ವ, ಸಹೋದರತೆ, ಸಹಬಾಳ್ವೆಯ, ಸಾಮರಸ್ಯದ ಬಗ್ಗೆಯೂ ಮಾತನಾಡುತ್ತಾ, ಇತ್ತ ರಾಮ ಮಂದಿರ ಭೂಮಿ ಪೂಜೆಗೆ ಶುಭಾಶಯವನ್ನೂ ಕೋರಿದರು. ಮತ್ತೆ ಕೆಲವರು ಮಂದಿರದ ಜೊತೆ ಮಸೀದಿ ನಿರ್ಮಾಣಕ್ಕೂ ಕೋರ್ಟ್ ಸೂಚಿಸಿದೆ ಎಂಬುದನ್ನು ಮೋದಿ ಮರೆಯಬಾರದು ಎಂದೂ ಹೇಳಿದರು.
सरलता, साहस, संयम, त्याग, वचनवद्धता, दीनबंधु राम नाम का सार है। राम सबमें हैं, राम सबके साथ हैं।
भगवान राम और माता सीता के संदेश और उनकी कृपा के साथ रामलला के मंदिर के भूमिपूजन का कार्यक्रम राष्ट्रीय एकता, बंधुत्व और सांस्कृतिक समागम का अवसर बने।
मेरा वक्तव्य pic.twitter.com/ZDT1U6gBnb
— Priyanka Gandhi Vadra (@priyankagandhi) August 4, 2020
ಇನ್ನು ಕಾರ್ಯಕರ್ತರಂತೂ ಉತ್ತರಭಾರತದಾದ್ಯಂತ ಬಿಜೆಪಿ ಮತ್ತು ಸಂಘಪರಿವಾರದ ಮಂದಿಗೆ ಪೈಪೋಟಿ ನೀಡುವಮಟ್ಟಿಗೆ ಬೀದಿಗಿಳಿದು ಕೇಸರಿ ಧ್ವಜನ ಬೀಸಿ ಜೈ ಶ್ರೀರಾಮ್ ಘೋಷಣೆ ಮೊಳಗಿಸಿದರು. ಕರ್ನಾಟಕದಲ್ಲೂ ಬಹುತೇಕ ಕಡೆ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ವೀರಾವೇಷದ ಘೋಷಣೆ, ನೃತ್ಯ, ಪೂಜೆ, ಮೆರವಣಿಗಳ ಮೂಲಕ ರಾಮಭಕ್ತಿ ಪ್ರದರ್ಶಿಸಿದರು. ಇನ್ನು ಇಂಡಿಯನ್ ಯೂನಿಯನ್ ಮುಸ್ಲೀಂ ಲೀಗ್ ನೊಂದಿಗೆ ಮೈತ್ರಿ ಹೊಂದಿರುವ ಕೇರಳದಂತಹ ಕಡೆ ಅದು ಬಹುತೇಕ ಯಾವುದೇ ಪ್ರತಿಕ್ರಿಯೆ ನೀಡದೆ ಮುಗ್ಗುಮ್ಮಾಗಿ ಉಳಿಯಿತು.

ಹೀಗೆ ನಾಯಕರ ಹೇಳಿಕೆ ಮತ್ತು ವರ್ತನೆಗಳು ಒಂದು ಕಡೆಯಾದರೆ, ಮತ್ತೊಂದು ಕಡೆ ಕಾರ್ಯಕರ್ತರ ವಿಚಿತ್ರ ನಡೆಗಳು ಮತ್ತೊಂದು ಕಡೆ. ಕರ್ನಾಟಕದಲ್ಲಂತೂ ಕಾಂಗ್ರೆಸ್ ಈ ವಿಷಯದಲ್ಲಿ ಎಷ್ಟು ಗೊಂದಲಕ್ಕೊಳಗಾಗಿತ್ತು ಎಂದರೆ, ರಾಮಮಂದಿರದ ಭೂಮಿ ಪೂಜೆಯ ಕ್ಷಣದವರೆಗೂ ಅದರ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಈ ಐತಿಹಾಸಿಕ ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಯಾವಾಗ ಪಕ್ಷದ ಉತ್ತರ ಭಾರತದ ಕೆಲವು ನಾಯಕರು ಮತ್ತು ಕೆಲವು ಕಾರ್ಯಕರ್ತರು ರಾಮ ನಾಮ ಪಠಣೆ, ಹನುಮಾನ್ ಚಾಲೀಸ ಪಠಣೆ, ಬೀದಿ ಘೋಷಣೆ ಕೂಗುವ ದೃಶ್ಯಾವಳಿಗಳು ಟಿವಿ ಮೂಲಕ ಪ್ರಸಾರವಾಗತೊಡಗಿದವೋ ಆಗ ದಿಢೀರನೇ ಎಚ್ಚೆತ್ತು ಅವರನ್ನು ಅನುಸರಿಸುವ ಪ್ರಯತ್ನಗಳು ನಡೆದವು. ಅದೂ ಹಿಂದೂ ಮತಗಳು ಹೆಚ್ಚಿರುವ ಕ್ಷೇತ್ರಗಳಲ್ಲಿ ಒಂದು ವರಸೆ, ಮುಸ್ಲಿಂ ಮತಗಳು ಹೆಚ್ಚಿರುವ ಕಡೆ ಮತ್ತೊಂದು ವರಸೆ!
ShriRam is not the property of BJP. He is the ideal man whose image is deeply etched in the hearts&minds of millions. Gandhiji always sang his hymns& died w/”Hei Ram” on his lips. He talked about a RamRajya where all would live in peace&prosperity. Can't let His name be hijacked!
— Shashi Tharoor (@ShashiTharoor) August 5, 2020
आज हनुमान चालीसा पाठ कर देश – प्रदेश की खुशहाली की कामना की ….#श्रीराम_के_हनुमान_करो_कल्याण pic.twitter.com/lL1pvA8tJK
— Office Of Kamal Nath (@OfficeOfKNath) August 4, 2020
ಕೆಲವು ಕಡೆಯಂತೂ ಜಿಲ್ಲಾ ಮಟ್ಟದ ನಾಯಕರುಗಳಿಗೇ ಗೊತ್ತಿಲ್ಲದಂತೆ ಕಾರ್ಯಕರ್ತರು ಪಕ್ಷದ ಧ್ವಜದೊಂದಿಗೆ ಶ್ರೀರಾಮನ ಚಿತ್ರಗಳ ಮೆರವಣಿಗೆ, ಜೈ ಶ್ರೀರಾಮ್ ಘೋಷಣೆಯೊಂದಿಗೆ ಭರ್ಜರಿ ಸಂಭ್ರಮಾಚರಣೆಯನ್ನೂ ನಡೆಸಿದರು. ಕಾರ್ಯಕರ್ತರ ಆ ಸಂಭ್ರಮದ ಬಗ್ಗೆ ಮಾಧ್ಯಮಗಳು ಪ್ರತಿಕ್ರಿಯೆ ಕೇಳಿದಾಗ ನಾಯಕರು ಸ್ವತಃ ಕಕ್ಕಾಬಿಕ್ಕಿಯಾದ ಘಟನೆಗಳು ನಡೆದವು. ಅಂದರೆ; ಅಷ್ಟರ ಮಟ್ಟಿಗೆ ಕಾಂಗ್ರೆಸ್ ಈ ವಿಷಯದಲ್ಲಿ ಸಂಪೂರ್ಣ ದಿಕ್ಕೆಟ್ಟ ಸ್ಥಿತಿಯಲ್ಲಿತ್ತು. ಮೂಲಭೂತವಾಗಿ ಕಾಂಗ್ರೆಸ್ ದಶಕಗಳ ಬಳಿಕವೂ ಬಿಜೆಪಿಯ ರಾಜಕೀಯ ಕಾರ್ಯತಂತ್ರದ ವಿಷಯದಲ್ಲಿ ಸ್ಪಷ್ಟತೆ ಗಳಿಸಿಕೊಳ್ಳಲು ಸಾಧ್ಯವೇ ಆಗಿಲ್ಲ ಎಂಬುದನ್ನು ಈ ರಾಮ ಮಂದಿರ ಭೂಮಿ ಪೂಜೆ ಘಟನೆ ಜಗಜ್ಜಾಹೀರು ಮಾಡಿದೆ.
ಹಾಗೆ ನೋಡಿದರೆ; ಕಾಂಗ್ರೆಸ್ಸಿನ ಇಂತಹ ಗೊಂದಲ, ಗಲಿಬಿಲಿಯ ನಡೆಗಳು ಇದೇ ಮೊದಲೇನಲ್ಲ. ಗುಜರಾತ್ ಮತ್ತು ಕರ್ನಾಟಕದ ವಿಧಾನಸಭಾ ಚುನಾವಣೆಗಳಿಂದ ಹಿಡಿದು, ಇತ್ತೀಚಿನ ಮಧ್ಯಪ್ರದೇಶ, ರಾಜಸ್ತಾನದ ಚುನಾವಣೆಗಳವರೆಗೂ ಕಾಂಗ್ರೆಸ್ ಧರ್ಮ ಮತ್ತು ದೇವರ ವಿಷಯದಲ್ಲಿ ಒಂದು ಸ್ಪಷ್ಟತೆಯೇ ಇಲ್ಲದ ಪಕ್ಷವಾಗಿ, ರಾಜಕೀಯ ಸಂಘಟನೆಯಾಗಿ ನಡೆದುಕೊಂಡಿದೆ. ಅದಕ್ಕೆ ಕಾರಣ; ಬಿಜೆಪಿಯ ಕೋಮುವಾದಿ ಅಜೆಂಡಾದ ಧರ್ಮ ರಾಜಕಾರಣದ ಎದುರು, ಉಗ್ರ ಹಿಂದುತ್ವವಾದಿ ಕಾರ್ಯತಂತ್ರದ ಎದುರು, ಹಿಂದೂ ರಾಷ್ಟ್ರವಾದ ಮತ್ತು ಅದರ ಮುಂದುವರಿಕೆಯಾದ ದೇಶಭಕ್ತಿ ರಾಜಕಾರಣದ ವಿಷಯದಲ್ಲಿ ಕಾಂಗ್ರೆಸ್ ಹೊಂದಿರುವ ಅಸ್ಪಷ್ಟತೆ ಮತ್ತು ಗೊಂದಲ. ಮೂಲತಃ ರಾಮ ಜನ್ಮಭೂಮಿ ವಿಷಯದಲ್ಲಿ ಬಿಜೆಪಿ ಮತ್ತು ಹಿಂದಿನ ಜನಸಂಘ ಮತ್ತು ಸಂಘಪರಿವಾರಗಳು ರಾಜಕೀಯ ಪರಿಭಾಷೆ ಕಟ್ಟುವ ಹೊತ್ತಿಗೆ, ಅದನ್ನೊಂದು ರಾಜಕೀಯ ದಾಳವಾಗಿ ಸಜ್ಜುಗೊಳಿಸುವ ಹೊತ್ತಿಗೆ ಕಾಂಗ್ರೆಸ್ ಅದನ್ನು ಕನಿಷ್ಟ ಗಮನಿಸುವ ಮಟ್ಟಿನ ಎಚ್ಚರಿಕೆಯನ್ನೂ ತೋರದೆ, ಸಂಪೂರ್ಣ ನಿರ್ಲಕ್ಷಿಸಿತು. ಕ್ರಮೇಣ ಅದೊಂದು ರಾಜಕೀಯ ಅಜೆಂಡಾವಾಗಿ ಬಿಜೆಪಿಯ ಪ್ರಣಾಳಿಕೆಯಾಗಿ, ರಥಯಾತ್ರೆಯ ಲಾಂಛನವಾಗಿ ಜಾರಿಗೆ ಬಂದರೂ ಕಾಂಗ್ರೆಸ್, ದೇಶದ ಜನರ ನಡುವೆ ಅದು ಪಡೆಯುತ್ತಿರುವ ಮಹತ್ವವನ್ನು ಅರಿಯದೇ ಹೋಯಿತು. ಪ್ರತಿಪಕ್ಷದ ತಂತ್ರಗಾರಿಕೆಯನ್ನು ಅರಿಯುವಲ್ಲೇ ವಿಫಲಾದರೆ, ಅದಕ್ಕೆ ಪ್ರತಿತಂತ್ರ ಹೆಣೆಯುವ ಮಾತೆಲ್ಲಿ?
ಗೋಧ್ರಾ ಮತ್ತು ಗುಜರಾತ್ ಹಿಂಸೆಯ ಬಳಿಕ ಕೂಡ ಕಾಂಗ್ರೆಸ್ ಜನರ ಮನಸ್ಸಿನಲ್ಲಿ ಹಿಂದುತ್ವ ಪಡೆದಿರುವ ಸ್ಥಾನವೇನು? ಬಿಜೆಪಿ ಎಷ್ಟು ಪರಿಣಾಮಕಾರಿಯಾಗಿ ಕೋಮುವಾದವನ್ನು ಮತದಾರನ ಎದೆಗೆ ನಾಟಿಸಿದೆ ಎಂಬುದನ್ನು ಅರಿಯುವ ಬದಲು, ಕೋಮುವಾದ ವರ್ಸಸ್ ಜಾತ್ಯತೀತ ರಾಜಕಾರಣ ಎಂಬ ನೆಲೆಯಲ್ಲಿ ರಾಜಕೀಯ ಪರಿಭಾಷೆ ಕಟ್ಟಲು ಯತ್ನಿಸಿತು. ಆದರೆ, ಭೀಕರ ಹಿಂಸೆಯ ನೆಲದಲ್ಲೇ ಕಾಂಗ್ರೆಸ್ಸಿನ ಆ ಪರಿಭಾಷೆ ಮಣ್ಣುಮುಕ್ಕಿತು. ಸತತ ಸೋಲಿನ ಬಳಿಕವೂ ಕಾಂಗ್ರೆಸ್ ಬಿಜೆಪಿಯ ಧರ್ಮಕಾರಣದ ಅಸ್ತ್ರದ ಎದುರು ತನ್ನ ಪ್ರತ್ಯಾಸ್ತ್ರಗಳು ಹೇಗೆ ನೆಲಕಚ್ಚುತ್ತಿವೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲೇ ಇಲ್ಲ. ತಳಮಟ್ಟದ ಜನರ ಭಾವನೆಗಳೇನು ಮತ್ತು ಅವುಗಳನ್ನು ದೇಶದ ನೈಜ ಪ್ರಜಾಸತ್ತೆ, ಸಂವಿಧಾನದ ಆಶಯಕ್ಕೆ ಪೂರಕವಾಗಿ ಹೇಗೆ ಪರಿವರ್ತಿಸಬೇಕು ಎಂಬ ಬಗ್ಗೆ ಚಿಂತನೆಯನ್ನೇ ಮಾಡಲಿಲ್ಲ. ಈಗಿನಂತೆಯೇ ಚುನಾವಣೆಗೊಂದು, ಬಡಾವಣೆಗೊಂದು ನೀತಿ ಪಾಲಿಸಲಾಯಿತು.
ಸೈದ್ಧಾಂತಿಕ ಸ್ಪಷ್ಟತೆ ಮತ್ತು ಪ್ರತಿ ಕಾರ್ಯತಂತ್ರದ ಗೈರಿನ ದಶಕಗಳ ಇತಿಹಾಸ ಈಗ ಕಾಂಗ್ರೆಸ್ಸನ್ನು ಹೀಗೆ ನಿದ್ರೆಯಲ್ಲಿ ಎದ್ದವರು ದಡಬಡಾಯಿಸಿ ಹಲುಬುವಂತಹ ಪ್ರತಿಕ್ರಿಯೆಯ ಮಟ್ಟಕ್ಕೆ ತಂದು ನಿಲ್ಲಿಸಿದೆ. ಆ ಅರ್ಥದಲ್ಲಿ ‘ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಲು ಇದು ಸಕಾಲ’ ಎಂದು ಕಳೆದ ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಚುನಾವಣಾ ಅಂಕಿಅಂಶ ತಜ್ಞ ಮತ್ತು ಸ್ವರಾಜ್ ಅಭಿಯಾನ್ ನೇತಾರ ಯೋಗೀಂದ್ರ ಯಾದವ್ ಹೇಳಿದ್ದ ಮಾತುಗಳು ಈಗ ಮತ್ತೆ ಚರ್ಚೆಗೆ ಗ್ರಾಸವಾಗಿವೆ. ವಯೋವೃದ್ಧರ ಅರಳುಮರಳು, ಅಸ್ಪಷ್ಟತೆ, ಗೊಂದಲ- ಗಲಿಬಿಲಿಗಳಿಂದ ಕಾಂಗ್ರೆಸ್ ಹೊರಬರುವುದೆ?










