ಜ್ಯ ರಾಜಧಾನಿಯಲ್ಲಿ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗದೆ ಜನರು ಸಾವನ್ನಪ್ಪುತ್ತಿದ್ದ ಘಟನೆಗಳು ಸಾಕಷ್ಟು ವರದಿಯಾಗಿದೆ. ಆದರೆ ಇಂಥಹ ಪರಿಸ್ಥಿತಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಇಲ್ಲ ಎಂದುಕೊಳ್ಳುತ್ತಿರುವಾಗ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಶವವನ್ನು ಅಂತ್ಯಕ್ರಿಯೆ ಮಾಡಲು ಯಾರೂ ಗ್ರಾಮಸ್ಥರು ಬಾರದಿದ್ದಕ್ಕೆ ತಳ್ಳುವ ಗಾಡಿಯಲ್ಲಿ ತೆಗೆದುಕೊಂಡು ಹೋಗಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ಈ ರೀತಿಯ ಘಟನೆ ಜರುಗಿದ್ದು ಮಾನವ ಸಂಕುಲ ತಲೆತಗ್ಗಿಸವಂತಾಗಿದೆ. ಕರೋನಾ ಭಯದಿಂದ ಊರಿನ ಗ್ರಾಮಸ್ಥರು ವ್ಯಕ್ತಿಯ ಅಂತ್ಯಕ್ರಿಯೆಗೆ ಆಗಮಿಸಿರಲಿಲ್ಲ. ಆದ ಕಾರಣ ಅನಾರೋಗ್ಯದಿಂದ ತೀರಿಕೊಂಡಿದ್ದ ವ್ಯಕ್ತಿಯ ಶವವನ್ನು ತಳ್ಳುವ ಗಾಡಿಯಲ್ಲಿ ಸಾಗಿಸಿದ್ದಾರೆ. ಪತಿಯ ಶವವನ್ನು ತಳ್ಳುವ ಗಾಡಿ ಮೇಲಿಟ್ಟು ತಳ್ಳುತ್ತಾ ಸಾಗುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಗ್ರಾಮಸ್ಥರು ಹಾಗೂ ಸಂಬಂಧಿಕರು ಯಾರೂ ಕೂಡ ಸಹಾಯಕ್ಕೆ ಬಾರದೆ ಇದ್ದಾಗ ಸ್ವತಃ ತಾನೇ ಪತಿಯ ಶವವನ್ನು ಬಟ್ಟೆಯಲ್ಲಿ ಸುತ್ತಿ ಸಾಗಿಸಿದ್ದಾರೆ. ಪರಿಚಯಸ್ಥ ವ್ಯಕ್ತಿಯ ಸಹಾಯದಿಂದ ಪತ್ನಿಯು ಶವ ಸಾಗಿಸಿದ್ದಾಳೆ.
55 ವರ್ಷದ ಸದಾಶಿವ ಹಿರಟ್ಟಿ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲೆದುಕೊಂಡಿದ್ದ ಸದಾಶಿವ, ಗುರುವಾರ ತಡರಾತ್ರಿ ಮನೆಗೆ ಹೋಗಿ ಮಲಗಿದ್ದಾಗ, ನಿದ್ರೆಯಲ್ಲೇ ಅಸುನೀಗಿದ್ದರು ಎನ್ನಲಾಗಿದೆ. ಆದರೆ ರಾಜ್ಯಾದ್ಯಂತ ಕರೋನಾ ಸೋಂಕು ಹೆಚ್ಚಳವಾಗಿರುವ ಕಾರಣಕ ಸಂಬಂಧಿಕರು ಸೇರಿದಂತೆ ಗ್ರಾಮಸ್ಥರೂ ಸಹ ಶವಸಂಸ್ಕಾರಕ್ಕೆ ಬಾರದಿದ್ದ ಕಾರಣಕ್ಕೆ ನಾಲ್ಕು ಜನರು ಸಿಗದಂತಾಗಿತ್ತು. ನಾಲ್ಕು ಜನರು ಬಂದು ಹೆಗಲು ಕೊಡಲಿಲ್ಲ ಎಂದ ಮೇಲೆ ಅನಿವಾರ್ಯವಾಗಿ ತಳ್ಳುವ ಗಾಡಿಯಲ್ಲಿ ಹಾಕಿಕೊಂಡು ಶವ ಸಾಗಾಣೆ ಮಾಡಿದ್ದಾರೆ ಈ ಘಟನೆ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಬೆಂಗಳೂರು ಸೇರಿ ಸಾಕಷ್ಟು ಕಡೆ ಇದೇ ರೀತಿಯ ಘಟನೆ ನಡೆದಿದೆ. ಅದರಲ್ಲೂ ಕರೋನಾ ಸೋಂಕು ಹೆಚ್ಚಳವಾಗಿನ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದ್ದ ಹಾಗೆ ಕರೋನಾ ಸೋಂಕಿತರ ಶವಗಳನ್ನು ಅಮಾನವೀಯವಾಗಿ ಎಸೆದಿದ್ದು ಕಂಡು ಬಂದಿತ್ತು. ಗಣಿನಾಡು ಬಳ್ಳಾರಿಯಲ್ಲಿ ಒಂದೇ ಗುಂಡಿಗೆ ನಾಲ್ಕು ಶವಗಳನ್ನು ಎಸೆಯಲಾಗಿತ್ತು. ಇದು ರಾಜ್ಯಾದ್ಯಂತ ಸಾಕಷ್ಟು ಆಕ್ರೋಶ ಹುಟ್ಟುಹಾಕಿತ್ತು. ಆ ಬಳಿಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಈ ರೀತಿಯ ಘಟನೆ ಮತ್ತೆ ನಡೆಯಬಾರದು ಎಂದು ಕಟ್ಟಪ್ಪಣೆ ವಿಧಿಸಿದ್ದರು. ಆ ಬಳಿಕ ಹಾವೇರಿ ಜಿಲ್ಲೆ ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಕರೋನಾ ಸೋಂಕಿತ ವ್ಯಕ್ತಿಯ ಶವ ಬಿಟ್ಟು ಹೋಗಲಾಗಿತ್ತು. ಅದೇ ರೀತಿ ಬೆಂಗಳೂರಿನಲ್ಲಿ ಸಾಕಷ್ಟು ಶವಗಳನ್ನು ಕುಟುಂಬಸ್ಥರು ಸ್ವೀಕರಿಸದೆ ಇದ್ದಾಗ ಅಂತ್ಯಕ್ರಿಯೆ ಮಾಡಲು ಒಂದು ತಂಡವನ್ನೇ ರಚಿಸಲು ಸರ್ಕಾರ ನಿರ್ಧಾರ ಮಾಡಿತ್ತು
ಆದರೆ, ಇದು ಕರೋನಾ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಯಲ್ಲ. ಕರೋನಾ ಸೋಂಕಿನಿಂದ ಸಾವನ್ನಪ್ಪಿದ್ದಾನೋ ಅಥವಾ 55 ವರ್ಷದ ಸದಾಶಿವ ಹಿರಟ್ಟಿ ಬೇರೆ ಯಾವ ಕಾರಣದಿಂದ ಸಾವನ್ನಪ್ಪಿದ್ದಾನೆ ಎನ್ನುವುದನ್ನು ಕೂಡ ಆರೋಗ್ಯ ಇಲಾಖೆ ಗೊತ್ತು ಮಾಡಿಕೊಳ್ಳುವ ಮನಸ್ಸು ಮಾಡಿಲ್ಲ. ಸರ್ಕಾರಿ ಆಸ್ಪತ್ರೆ ಎದುರು ಚಪ್ಪಲಿ ಹೊಲೆಯುವ ಕೆಲಸ ಮಾಡುತ್ತಿದ್ದ ಎಂದ ಮೇಲೆ ಸಾಕಷ್ಟು ಜನರು ಸುತ್ತಾಡುವ ಪ್ರದೇಶವಾಗಿದೆ. ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ. ಕರೋನಾ ಸೋಂಕು ಬಂದಿರುವುದಿಲ್ಲ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಸೋಂಕು ಬಂದಿದ್ದರೂ ಬಂದಿರಬಹುದು. ಆದರೆ ಅಧಿಕಾರಿಗಳ ನಿರ್ಲ್ಯಕ್ಷ್ಯದಿಂದ ಸಂಸ್ಕಾರ ಮಾಡಿಯಾಗಿದೆ.
ಭಾರತ ದೇಶದಲ್ಲಿ ಈ ರೀತಿಯ ಹಲವಾರು ಘಟನೆಗಳು ನಡೆದಿವೆ. ಚಿಕಿತ್ಸೆಗಾಗಿ ಸೈಕಲ್ನಲ್ಲಿ ತಳ್ಳಿಕೊಂಡು ಕಿಲೋ ಮೀಟರ್ ದೂರು ಕ್ರಮಿಸಿರಬಹುದು. ಹೆಂಡತಿಯ ಶವವನ್ನು ಮನೆಗೆ ಕೊಂಡೊಯ್ಯಲು ಆಂಬ್ಯುಲೆನ್ಸ್ ಕೊಡಲಿಲ್ಲ ಎನ್ನುವ ಕಾರಣಕ್ಕೆ ತನ್ನ ಹೆಂಡತಿ ಶವವನ್ನು ಹತ್ತಾರು ಕಿಲೋ ಮೀಟರ್ ಹೆಗಲ ಮೇಲೆ ಹೊತ್ತು ಸಾಗಿರುವ ಘಟನೆ ಇನ್ನೂ ಕೂಡ ಹಸಿರಾಗಿದೆ. ಅದೆಷ್ಟೋ ಕಡೆ ಹಾಸ್ಪಿಟಲ್ನಲ್ಲಿ ಬೆಡ್ ಸಿಗದೆ ನರಳಾಡಿದ ಘಟನೆಗಳಿವೆ. ಆದರೆ ಕರುನಾಡಲ್ಲಿ ಈ ರೀತಿಯ ಘಟನೆಗಳು ಇಲ್ಲೀವರೆಗೂ ಜರುಗಿರಲಿಲ್ಲ. ಆದರೆ ಕರೋನಾ ಸೋಂಕಿನ ದರ್ಬಾರಿನ ನಡುವೆ ಹೆಣವನ್ನು ಸಂಸ್ಕಾರ ಮಾಡದ ಸ್ಥಿತಿಗೆ ಮಾನವ ಜನಾಂಗ ಬಂದು ನಿಂತಿದೆ. ಇದೀಗ ಇಡೀ ಮನುಜಕುಲ ತಲೆತಗ್ಗಿಸುವಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ